ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ನಗೆಪಾಟಲಿಗೀಡುಮಾಡಿದ ಭಾರತ
ವಿಶ್ವಸಂಸ್ಥೆ, ಸೆಪ್ಟೆಂಬರ್ 26: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾಷಣದ ವೇಳೆ ಭಾರತದ ಪ್ರತಿನಿಧಿ ಸಭೆಯಿಂದ ಹೊರನಡೆದ ಘಟನೆ ನಡೆದಿದೆ. ಸಾಮಾನ್ಯಸಭೆಯ 75ನೇ ಅಧಿವೇಶನದಲ್ಲಿ ಇಮ್ರಾನ್ ಖಾನ್ ಮಾತನಾಡಿದರು.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯದ ಜತೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಮ್ರಾನ್ ಖಾನ್ ವೈಯಕ್ತಿಕ ವಾಗ್ದಾಳಿ ನಡೆಸಿದರು. ಇದರಿಂದ ಅಸಮಾಧಾನಗೊಂಡ ಭಾರತದ ರಾಯಭಾರಿ ಮಿಜಿತೋ ವಿನಿತೋ ಎದ್ದು ನಿಂತು ಹೊರನಡೆದರು.
ದ್ವೇಷ ಹಾಗೂ ಹಿಂಸಾಚಾರ ಬಿತ್ತುವವರನ್ನು ನಿರ್ಬಂಧಿಸಬೇಕು ಎಂದು ಪಾಕಿಸ್ತಾನದ ನಾಯಕ ಹೇಳಿದ್ದಾರೆ. ಆದರೆ ಅವರು ಮಾತನಾಡುತ್ತಿರುವಾಗ ನಮಗೆ ಅಚ್ಚರಿಯಾಯ್ತು. ಅವರು ಅವರ ಬಗ್ಗೆಯೇ ಹೇಳಿಕೊಳ್ಳುತ್ತಿದ್ದಾರೆಯೇ? ಎಂದು ವಿನಿತೋ ವ್ಯಂಗ್ಯವಾಡಿದ್ದಾರೆ.
'ತನ್ನ ಬಗ್ಗೆ ಏನನ್ನೂ ತೋರಿಸಿಕೊಳ್ಳಲು ಇಲ್ಲದವರು, ಮಾತನಾಡಲು ಯಾವ ಸಾಧನೆಯನ್ನೂ ಮಾಡಿಲ್ಲದವರು ಜತೆಗೆ ಜಗತ್ತಿನ ಸೂಕ್ತವಾದ ಸಲಹೆಗಳನ್ನು ನೋಡುವ ತಾಕತ್ತೂ ಇಲ್ಲದವರೊಬ್ಬರ ವರಾತವನ್ನು ಈ ಸಭಾಂಗಳ ಆಲಿಸಿದೆ. ಅದರ ಬದಲು ಆ ವ್ಯಕ್ತಿ ಈ ಸಭೆಯಲ್ಲಿ ಸುಳ್ಳು ಮಾಹಿತಿ, ಹುಚ್ಚಾಟಗಳನ್ನು ಪ್ರದರ್ಶಿಸಿದ್ದಾರೆ' ಎಂದು ಹರಿಹಾಯ್ದಿದ್ದಾರೆ. ಮುಂದೆ ಓದಿ.
ಆಕ್ರಮಿತ ಪ್ರದೇಶ ಬಿಟ್ಟು ನಡೆಯಿರಿ
'ಇದೇ ಪಾಕಿಸ್ತಾನ ಉಗ್ರರಿಗೆ ಪಿಂಚಣಿ ಮತ್ತು ಅನುದಾನಗಳನ್ನು ನೀಡುತ್ತಿದೆ. ಒಸಾಮಾ ಬಿನ್ ಲಾಡೆನ್ ಒಬ್ಬ ಹುತಾತ್ಮ ಎಂದು ಕರೆದಿದ್ದು ಇದೇ ನಾಯಕ. ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಎಲ್ಲ ಪ್ರದೇಶಗಳನ್ನೂ ಬಿಟ್ಟು ಹಿಂದೆ ಸರಿಯುವಂತೆ ಪಾಕಿಸ್ತಾನಕ್ಕೆ ಆಗ್ರಹಿಸುತ್ತೇವೆ' ಎಂದಿದ್ದಾರೆ.
ಇಮ್ರಾನ್ ಖಾನ್ ಸ್ವತಃ ಒಪ್ಪಿಕೊಂಡಿದ್ದರು
ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನದ ವಿರುದ್ಧ ಆರೋಪಿಸಿದ ವಿನಿತೋ, 'ಇದೇ ನಾಯಕ, 2019ರಲ್ಲಿ ಅಮೆರಿಕದಲ್ಲಿ ಮಾತನಾಡುವಾಗ ಭಾರತದ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಹಾಗೂ ಅಫ್ಘಾನಿಸ್ಥಾನದಲ್ಲಿ ಕೃತ್ಯಗಳನ್ನು ನಡೆಸುತ್ತಿರುವ ಪಾಕಿಸ್ತಾನದಿಂದಲೇ ತರಬೇತಿ ಪಡೆದ ಇನ್ನೂ 30,000-40,000 ಉಗ್ರರು ತನ್ನ ದೇಶದಲ್ಲಿ ಇದ್ದಾರೆ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು' ಎಂದು ಇಮ್ರಾನ್ ಖಾನ್ ಅವರಿಗೆ ಮುಖಭಂಗ ಮಾಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ-ಕಾಶ್ಮೀರ ವಿಷಯ ಪ್ರಸ್ತಾಪ: ಪಾಕ್ಗೆ ಭಾರತ ಛೀಮಾರಿ
ಅಲ್ಪಸಂಖ್ಯಾತರ ನಿರ್ನಾಮ
'ಇದೇ ದೇಶ ಹಿಂದೂಗಳು, ಕ್ರೈಸ್ತರು, ಸಿಖ್ಖರು ಮತ್ತು ಇತರೆ ಅಲ್ಪಸಂಖ್ಯಾತರನ್ನು ತಮ್ಮ ದಬ್ಬಾಳಿಕೆಯ ಕಾನೂನುಗಳು ಮತ್ತು ಬಲವಂತದ ಧಾರ್ಮಿಕ ಮತಾಂತರಗಳ ಮೂಲಕ ವ್ಯವಸ್ಥಿತವಾಗಿ ಅಳಿಸಿಹಾಕುತ್ತಿದೆ' ಎಂದು ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Recommended Video
ಇಂದು ಮೋದಿ ಭಾಷಣ
ವಿಶ್ವಸಂಸ್ಥೆಯನ್ನು ಉದ್ದೇಶಿಸಿ ಇಂದು ಸಂಜೆ 6.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಪರಿಣಾಮಕಾರಿ ಪ್ರತಿಕ್ರಿಯೆ ನೀಡುವಂತೆ ಹಾಗೂ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಎಲ್ಲರನ್ನೂ ಒಳಗೊಳ್ಳುವ ಮತ್ತು ಜವಾಬ್ದಾರಿಯುತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರೆ ನೀಡುವ ಸಾಧ್ಯತೆ ಇದೆ.