ಚೀನಾ ಎದೆಯಲ್ಲಿ ನಡುಕ ಹುಟ್ಟಿಸುತ್ತೆ ಭಾರತದ 'ಇದೊಂದು' ನಿರ್ಧಾರ!
ನವದೆಹಲಿ, ಜೂನ್.21: ಭಾರತ-ಚೀನಾ ಗಡಿಭಾಗದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ನದಿ ಕಣಿವೆಯಲ್ಲಿ ಕಾಲ್ಕೆರೆದು ನಿಂತಿರುವ ಚೀನಾ ಎದೆಯಲ್ಲಿ ಭಾರತದ ಇದೊಂದು ನಿರ್ಧಾರವು ನಡುಕ ಹುಟ್ಟಿಸುತ್ತಿದೆ.
Recommended Video
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಈ ವೇಳೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಭೂಸೇನಾ ಮುಖ್ಯಸ್ಥ ನರವಣೆ, ನೌಕಾಸೇನೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್, ಹಾಗೂ ವಾಯುಸೇನೆ ಮುಖ್ಯಸ್ಥ ಆರ್ ಕೆಎಸ್ ಭಂಡೌರಿಯಾ ಹಾಜರಿದ್ದರು.
ಭಾರತದೊಂದಿಗೆ ಬಡಿದಾಟ: ಚೀನಾ ಬಣ್ಣ ಬಯಲು ಮಾಡುತ್ತೆ ಈ ವರದಿ!
ಭಾರತದ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಮಹತ್ವದ ಸಂದೇಶವನ್ನು ರವಾನಿಸಲಾಗಿದೆ. ಚೀನಾಗೆ ತಕ್ಕ ಪಾಠ ಕಲಿಸುವುದಕ್ಕೆ ಭಾರತೀಯ ಸೇನಾಪಡೆ ಮತ್ತು ಮುಖ್ಯಸ್ಥರಿಗೆ ಸಂಪೂರ್ಣ ಪರಮಾಧಿಕಾರವನ್ನು ನೀಡಲಾಗಿದೆ.
ಚೀನಾ ಮತ್ತು ಭಾರತ ಗಡಿಯುದ್ದಕ್ಕೂ ಕಟ್ಟೆಚ್ಚರ
ಭಾರತ ಹಾಗೂ ಚೀನಾ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಡ್ರ್ಯಾಗನ್ ರಾಷ್ಟ್ರವು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ಈ ಹಿನ್ನೆಲೆ ಉಭಯ ರಾಷ್ಟ್ರಗಳ 3,500 ಕಿಲೋ ಮೀಟರ್ ಉದ್ದದ ಗಡಿಯುದ್ದಕ್ಕೂ ಭಾರತೀಯ ಸೇನೆಯು ತೀವ್ರ ಕಟ್ಟೆಚ್ಚರ ವಹಿಸಿದೆ. ಚೀನಾ ಪ್ರತಿಯೊಂದು ಚಟುವಟಿಕೆಗಳ ಮೇಲೆ ತೀವ್ರ ಲಕ್ಷ್ಯ ವಹಿಸಲಾಗಿದೆ. ಒಂದು ವೇಳೆ ಕಾಲ್ಕೆರೆದು ನಿಂತರೆ ತಕ್ಕ ಪಾಠ ಕಲಿಸುವುದಕ್ಕೆ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ.
ಭೂಗಡಿ, ನೌಕಾಗಡಿಯಲ್ಲಿ ವಾಯುಗಡಿ ಸೇನೆ ಕಟ್ಟೆಚ್ಚರ
ಲಡಾಖ್ ಪೂರ್ವದ ಗಾಲ್ವಾನ್ ನದಿ ಕಣಿವೆ ವಿಚಾರಕ್ಕೆ ಲಖಾಡ್ ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಉಭಯ ಸೇನೆಗಳ ಸಂಘರ್ಷವೂ ನಡೆದು ಹೋಗಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ವಾಯುಸೇನೆ, ನೌಕಾಸೇನೆಗಳಿಗೆ ಮುನ್ಸೂಚನೆ ನೀಡಲಾಗಿದೆ. ಗಡಿಯಲ್ಲಿ ಚೀನಾ ಸೇನಾಪಡೆಯ ಜೊತೆಗೆ ಎಚ್ಚರಿಕೆಯಿಂದ ವ್ಯವಹರಿಸುವಂತೆ ಸಂದೇಶ ರವಾನಿಸಲಾಗಿದೆ. ವಾಯುಸೇನೆಯು ಗಡಿಯಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಚೀನಾದ ಹೆಲಿಕಾಪ್ಟರ್ ಮತ್ತು ಯುದ್ಧವಿಮಾನಗಳ ಮೇಲೊಂದು ಕಣ್ಣಿಟ್ಟಿದೆ.
ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ
ಕಳೆದ ಮೇ.5ರಂದು ಮೊದಲ ಬಾರಿಗೆ ಭಾರತ-ಚೀನಾ ಸೇನೆಗಳು ಲಡಾಖ್ ಗಡಿ ಪ್ರದೇಶದಲ್ಲಿ ಮುಖಾಮುಖಿಯಾಗಿದ್ದವು. ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿದ್ದರು. ಇದೊಂದು ಘಟನೆಯಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಲಡಾಖ್ ಗಡಿಯು ಬೂದಿ ಮುಚ್ಚಿದ ಕೆಂಡದಂತೆ ಆಗಿದೆ.
ಯೋಧರ ಸಾವಿನ ಬಗ್ಗೆ ಮಾಹಿತಿ ನೀಡದ ಚೀನಾ
ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತು. ಆದರೆ ಚೀನಾ ಸೇನೆಯಾಗಲಿ ಅಥವಾ ಸರ್ಕಾರವಾಗಲಿ ಯಾವುದೇ ಮಾಹಿತಿ ನೀಡಲಿಲ್ಲ. ತಮ್ಮ ಸೈನಿಕರ ಸಾವು-ನೋವಿನ ಕುರಿತು ಯಾವುದೇ ಗುಟ್ಟು ಬಿಟ್ಟುಕೊಡಲಿಲ್ಲ. ಒಂದು ಮೂಲದ ಪ್ರಕಾರ ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಕನಿಷ್ಠ 35 ಸೈನಿಕರು ಹತರಾಗಿದ್ದಾರೆ ಎಂದು ತಿಳಿದು ಬಂದಿದೆ.