ಲಡಾಖ್ ಗಡಿಯಲ್ಲಿ ಸೆರೆಸಿಕ್ಕ ಚೀನಾ ಯೋಧ; ಮುಂದೇನು ಗತಿ, ಇಲ್ಲಿದೆ ಮಾಹಿತಿ!
ನವದೆಹಲಿ, ಅಕ್ಟೋಬರ್.19: ಭಾರತ ಚೀನಾ ಗಡಿಯಲ್ಲಿ ಮೊದಲೇ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆ ಪೂರ್ವ ಲಡಾಖ್ ಪ್ರದೇಶವನ್ನು ಪ್ರವೇಶಿಸಿದ ಪೀಪಲ್ಸ್ ಲಿಬರೇಷನ್ ಆರ್ಮಿಯ ಯೋಧನನ್ನು ಸೆರೆ ಹಿಡಿಯಲಾಗಿದೆ.
ಅಂತಾರಾಷ್ಟ್ರೀಯ ಗಡಿ ರೇಖೆಗೆ ಹೊಂದಿಕೊಂಡಿರುವ ಲಡಾಖ್ ಪೂರ್ವ ಗಡಿಯ ಡೆಮ್ಚೊಕ್ ಸೆಕ್ಟರ್ ನಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಬಂಧಿತನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸೇರಿದ ಯೋಧ ವಾಂಗ್-ಯಾ-ಲಾಂಗ್ ಎಂದು ಗುರುತಿಸಲಾಗಿದೆ.
Breaking: ಲಡಾಖ್ನಲ್ಲಿ ಚೀನಾ ಸೈನಿಕನ ಬಂಧನ
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಯೋಧನು ಕಠಿಣ ಹವಾಮಾನದ ಪರಿಸ್ಥಿತಿಯಲ್ಲಿ ಅಸ್ವಸ್ಥಗೊಂಡಿದ್ದು, ಅಗತ್ಯವಾದ ವೈದ್ಯಕೀಯ ನೆರವು ನೀಡಲಾಗಿದೆ. ಇದರ ಜೊತೆಗೆ ಆಮ್ಲಜನಕ, ಬೆಚ್ಚಗಿನ ಬಟ್ಟೆಯ ಜೊತೆಗೆ ಆಹಾರವನ್ನು ನೀಡಲಾಗಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.
ಪಿಎಲ್ಎ ಯೋಧ ನಾಪತ್ತೆ ಬಗ್ಗೆ ಭಾರತಕ್ಕೆ ಮನವಿ
ಲಡಾಖ್ ಪೂರ್ವ ಗಡಿಯ ಡೆಮ್ಚೊಕ್ ಸೆಕ್ಟರ್ ನಲ್ಲಿ ಪತ್ತೆಯಾದ ಯೋಧನ ಬಗ್ಗೆ ಚೀನಾ ಕೂಡಾ ಹೇಳಿಕೊಂಡಿದೆ. ತಮ್ಮ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸೇರಿದ ಒಬ್ಬ ಯೋಧನು ನಾಪತ್ತೆಯಾಗಿದ್ದಾರೆ ಎಂದು ಭಾರತಕ್ಕೂ ಸಂದೇಶವನ್ನು ರವಾನಿಸಿದೆ. ಚೀನಾ ಸರ್ಕಾರದಿಂದ ಕೂಡಾ ಈ ಕುರಿತು ಮನವಿ ಬಂದಿದೆ ಎಂದು ಭಾರತೀಯ ಮೂಲಗಳು ತಿಳಿಸಿದೆ.
ಚೀನಾ ಯೋಧನಿಗೆ ಸೇರಿದ ದಾಖಲೆಗಳ ಮುಟ್ಟುಗೋಲು
ಚೀನಾದ ಸೈನಿಕ ಎಂದು ಸಾಕ್ಷೀಕರಿಸುವ ವಾಂಗ್-ಯಾ-ಲಾಂಗ್ ಗೆ ಸೇರಿದೆ ಎನ್ನಲಾದ ಗುರುತಿನ ಚೀಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಇನ್ನೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು, ಬಂಧಿತ ಯೋಧನು 'ಯಾಕ್' ಅನ್ನು ಹುಡುಕಿಕೊಂಡು ಬಂದಿದ್ದಾನೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಔಪಚಾರಿಕ ನಿಯಮಗಳ ಪ್ರಕಾರ ಚೀನಾಗೆ ಯೋಧ ವಾಪಸ್
ಭಾರತ ಮತ್ತು ಚೀನಾದ ನಡುವಿನ ಔಪಚಾರಿಕ ನಿಯಮಗಳ ಪ್ರಕಾರ, ಸೆರೆಸಿಕ್ಕ ಚೀನಾ ಯೋಧನನ್ನು ವಾಪಸ್ ಕಳುಹಿಸಿ ಕೊಡಲಾಗುತ್ತದೆ ಎಂದು ತಿಳಿದು ಬಂದಿದೆ. ಶಿಷ್ಟಾಚಾರ ಮತ್ತು ಔಪಚಾರಿಕ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಚುಶುಲ್ ಹಾಗೂ ಮಾಲ್ಡೋ ಮೀಟಿಂಗ್ ಪಾಯಿಂಟ್ ನಲ್ಲಿ ಯೋಧನನ್ನು ಚೀನಾಗೆ ಒಪ್ಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.
"ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿ ಒಳಿತಲ್ಲ"
ಚೀನಾ ಯೋಧನ ಬಂಧನಕ್ಕೆ ಸಂಬಂಧಿಸಿದಂತೆ ಗ್ಲೋಬಲ್ ಟೈಮ್ಸ್ ಸಂಪಾದಕ ಹೂ ಕ್ಸಿಜಿನ್ ಸಲಹೆಯನ್ನು ನೀಡಿದ್ದಾರೆ. ಸಾಮಾನ್ಯವಾಗಿ ಚೀನೀ ಸೈನಿಕನೊಬ್ಬ ಭಾರತದ ಗಡಿಯಲ್ಲಿ ಸಿಕ್ಕಿಬಿದ್ದರೆ ಆತ ಹಿಂತಿರುಗಿ ಬರುವುದೇ ಅನುಮಾನ. ಆದರೆ ಭಾರತವು ಸಕಾರಾತ್ಮಕ ಮನೋಭಾವವನ್ನು ಹೊಂದಿದೆ. ಚೀನಾದ ಸೈನಿಕನು ಸ್ವದೇಶಕ್ಕೆ ವಾಪಸ್ ಕಳುಹಿಸುತ್ತಾರೆ. ಏಕೆಂದರೆ ಗಡಿಯಲ್ಲಿ ಹೊಸದಾಗಿ ಉದ್ವಿಗ್ನತೆ ಸೃಷ್ಟಿಸುವುದು ಒಳಿತಲ್ಲ ಎಂದು ತಿಳಿಸಿದ್ದಾರೆ.
ಲಡಾಖ್ ಗಡಿ ಉದ್ವಿಗ್ನತೆ ತಗ್ಗಿಸಲು ಕಮಾಂಡರ್ ಸಭೆ
ಭಾರತ-ಚೀನಾ ಸೇನಾ ಕಮಾಂಡರ್ ಹಂತದ 8ನೇ ಸುತ್ತಿನ ಸಭೆಯು ಇದೇ ವಾರ ನಡೆಯಲಿದೆ ಎಂದು ತಿಳಿದು ಬಂದಿದೆ. ಲಡಾಖ್ ಪೂರ್ವ ಗಡಿಯಲ್ಲಿ ಉದ್ವಿಗ್ನತೆಯನ್ನು ತಗ್ಗಿಸುವ ಮತ್ತು ಸೇನಾ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಈ ವಾರದಲ್ಲೇ 8ನೇ ಸುತ್ತಿನ ಸಭೆ ನಡೆಯಲಿದ್ದು, ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಅಕ್ಟೋಬರ್.12ರಂದು ಉಭಯ ರಾಷ್ಟ್ರಗಳ ಸೇನಾ ಕಮಾಂಡರ್ ಹಂತದ 7ನೇ ಸುತ್ತಿನ ಸಭೆ ನಡೆಸಲಾಗಿತ್ತು. ಈ ವೇಳೆ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಸೇನಾ ಮಾತುಕತೆಯು ರಚನಾತ್ಮಕ ಮತ್ತು ಸಕಾರಾತ್ಮಕವಾಗಿದೆ ಎಂದು ಹೇಳಲಾಗಿತ್ತು.