ಪಾಕ್ 'ಕಾಲ್ಪನಿಕ ನಕ್ಷೆ' ವಿರೋಧಿಸಿ ಎಸ್ ಸಿಓ ಸಭೆ ತೊರೆದ ಭಾರತ
ನವದೆಹಲಿ, ಸಪ್ಟೆಂಬರ್.15: ಕಾಶ್ಮೀರವನ್ನು ಒಳಗೊಂಡಿರುವ "ಕಾಲ್ಪನಿಕ ನಕ್ಷೆ"ಯನ್ನು ಪ್ರದರ್ಶಿಸಿದ ಪಾಕಿಸ್ತಾನದ ಪ್ರತಿನಿಧಿಯ ನಡೆಯನ್ನು ವಿರೋಧಿಸಿ ಶಾಂಘೈ ಸಹಕಾರಿ ಸಂಘ(SCO)ದ ಸಭೆಯಿಂದ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಹೊರ ನಡೆದಿದ್ದಾರೆ.
ರಷ್ಯಾದ ಮಾಸ್ಕೋದಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿಯೊಬ್ಬರು ಕಾಶ್ಮೀರವನ್ನೂ ಒಳಗೊಂಡ "ಕಾಲ್ಪನಿಕ ನಕ್ಷೆ"ಯನ್ನು ಪ್ರದರ್ಶಿಸಿದರು. ಇದರಿಂದ ಕೆರಳಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಭೆಯಿಂದಲೇ ಎದ್ದು ಹೊರ ಬಂದಿದ್ದಾರೆ.
ಕಾಶ್ಮೀರ ಇಲ್ಲದ ಭಾರತ ಭೂಪಟ ಹಂಚಿದ ಕೇರಳದ ಶಾಸಕಿ
"ಪಾಕಿಸ್ತಾನದ ನಡೆಯು ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯ ನಿಯಮಗಳನ್ನು ಉಲ್ಲಂಘಿಸಿದಂತಿದೆ. ಅತಿಥೇಯರೊಂದಿಗಿನ ಸಮಾಲೋಚನೆ ಬೆನ್ನಲ್ಲೇ ಭಾರತದ ಪ್ರತಿನಿಧಿಗಳು ಪ್ರತಿಭಟನೆಯನ್ನು ವ್ಯಕ್ತಪಡಿಸಿ ಹೊರ ಬಂದಿದ್ದಾರೆ" ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಸಭೆ ದಿಕ್ಕು ತಪ್ಪಿಸುವ ಕೆಲಸ ಮಾಡಿದ ಪಾಕ್
"ಈ ಮೊದಲೇ ನಿರೀಕ್ಷಿಸಿದಂತೆ ಪಾಕಿಸ್ತಾನದ ತನ್ನ ವಕ್ರಬುದ್ಧಿಯನ್ನು ಪ್ರದರ್ಶಿಸಿದೆ. ರಾಷ್ಟ್ರೀಯ ಭದ್ರಾತ ಸಲಹೆಗಾರರ ಸಭೆಯ ದಿಕ್ಕು ತಪ್ಪಿಸುವ ಕೆಲಸವನ್ನು ಪಾಕಿಸ್ತಾನ ಮಾಡಿದೆ. ವಿವಾದಿತ ನಕ್ಷೆಯನ್ನು ಸಭೆಯಲ್ಲಿ ಪ್ರದರ್ಶಿಸಿರುವುದು ಸೂಕ್ತ ನಡೆಯಲ್ಲ" ಎಂದು ಅನುರಾಗ್ ಶ್ರೀವಾಸ್ತವ್ ದೂಷಿಸಿದ್ದಾರೆ.
ಎಸ್ ಸಿಓ ಸಭೆ ನಿಯಮ ಉಲ್ಲಂಘಿಸಿದ ಪಾಕಿಸ್ತಾನ
"ಶಾಂಘೈ ಸಹಕಾರಿ ಸಂಘದ ಸಭೆಯಲ್ಲಿ ಪಾಕಿಸ್ತಾನವು ನಡೆಯು ಸಭೆಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಎಸ್ ಜಿಓ ಸದಸ್ಯ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗಳನ್ನು ಕಾಪಾಡುವ ಮತ್ತು ಪರಸ್ಪರ ಗೌರವಿಸುವ ಮಾನದಂಡಗಳಿಗೆ ವಿರುದ್ಧವಾಗಿದೆ" ಎಂದು ಭಾರತೀಯ ಸರ್ಕಾರ ಆಕ್ಷೇಪಿಸಿದೆ. ಭಾರತದ ಆಕ್ಷೇಪದ ಹಿನ್ನೆಲೆಯಲ್ಲಿ ನಕ್ಷೆಯನ್ನು ಬಳಸದಂತೆ ಪಾಕಿಸ್ತಾನದ ಮನವೊಲಿಸಲು ರಷ್ಯಾದ ಬಹಳ ಪ್ರಯತ್ನಿಸಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.
ಪಾಕ್ ವಿರುದ್ಧ ಗುಡುಗಿದ ಎಸ್ ಸಿಓ ಕಾರ್ಯದರ್ಶಿ
"ಶಾಂಘೈ ಸಹಕಾರಿ ಸಂಘದ ಸಭೆಯಲ್ಲಿ ಪಾಕಿಸ್ತಾನ ತೋರಿದ ನಡೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಕ್ಕೆ ಮತ್ತು ಬೆಂಬಲಿಸುವುದಕ್ಕೆ ಸಾಧ್ಯವಿಲ್ಲ" ಎಂದು ರಷ್ಯಾ ಫೆಡರೇಷನ್ ನ ರಾಷ್ಟ್ರೀಯ ರಕ್ಷಣಾ ಸಮಿತಿ ಕಾರ್ಯದರ್ಶಿ ನಿಕೋಲೈ ಪತ್ರುಶೇವ್ ತಿಳಿಸಿದ್ದಾರೆ. ಅಲ್ಲದೇ ಪಾಕಿಸ್ತಾನದ "ಪ್ರಚೋದನಾತ್ಮಕ ನಡೆ"ಯಿಂದ ಎಸ್ ಸಿಓ ಸಭೆಯಲ್ಲಿನ ಭಾರತದ ಪಾಲ್ಗೊಳ್ಳುವಿಕೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ತಾನದ ಪಾಲಿಗೆ ಇದೊಂದು ಐತಿಹಾಸಿಕ ದಿನ
ಪಾಕಿಸ್ತಾನದ ಹೊಸ ನಕ್ಷೆಯಲ್ಲಿ ಜಮ್ಮು-ಕಾಶ್ಮೀರ, ಲಡಾಖ್ ಮತ್ತು ಗುಜರಾತ್ ನ ಜುನಾಘರ್ ಕೂಡಾ ಪಾಕಿಸ್ತಾನಕ್ಕೆ ಸೇರಿದ್ದು ಎನ್ನುವಂತೆ ಚಿತ್ರಿಸಲಾಗಿತ್ತು. ಈ ಹಿಂದೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಆಗಸ್ಟ್.04 ದೇಶದ ಪಾಲಿಗೆ ಐತಿಹಾಸಿಕ ದಿನ ಎಂದಿದ್ದರು. ಅಲ್ಲದೇ ಹೊಸ ನಕ್ಷೆ ಪಾಕಿಸ್ತಾನಿ ಪ್ರಜೆಗಳ ಮಹತ್ವಾಕಾಂಕ್ಷೆ ಪ್ರತಿನಿಧಿಸುತ್ತದೆ ಎಂದು ಹೇಳಿದ್ದರು. ಆಗಸ್ಟ್.04ರಂದು ಪ್ರಧಾನಮಂತ್ರಿ ಇಮ್ರಾನ್ ಖಾನ್ ಬಿಡುಗಡೆಗೊಳಿಸಿರುವ ರಾಜಕೀಯ ಪ್ರೇರಿತ ಹೊಸ ನಕ್ಷೆಯನ್ನೇ ಪಾಕಿಸ್ತಾನದ ಶಾಲೆಗಳಲ್ಲಿನ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸಲಾಗುತ್ತದೆ ಎಂದು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ತಿಳಿಸಿದ್ದರು. ಇದಕ್ಕೂ ಮೊದಲು ಪಾಕಿಸ್ತಾನ ಸರ್ಕಾರ ಆಗಸ್ಟ್.5ರಂದು ಅನುಸರಿಸಬೇಕಾದ ನಿರ್ದೇಶನಗಳನ್ನು ಹೊರಡಿಸಿತ್ತು. ಆಗಸ್ಟ್ 5 ಅನ್ನು ಈಗ ಯೂಮ್-ಇ-ಇಸ್ತೇಸಲ್ ಮತ್ತು ಘಸ್ಬಾನಾ ಕಬ್ಜಾ ಎಂದು ಕರೆಯಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿತ್ತು.
Recommended Video
ಭಾರತ ಆಕ್ರಮಿಕ ಜಮ್ಮು ಕಾಶ್ಮೀರ ಎಂದು ಉಲ್ಲೇಖ
ಪಾಕಿಸ್ತಾನದಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಬಳಸಬೇಕಾದ ಪದಗಳ ಬಗ್ಗೆಯೂ ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ. IIOJK (Indian llegally Occupied Jammu And Kashmir), ಅಥವಾ IOJK (Indian Occupied Jammu And Kashmir) ಅಥವಾ IOK (Indian Occupied Kashmir) ಎಂದು ಬಳಸುವಂತೆ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ಅದರ ಕನ್ನಡದ ಅರ್ಥವು ಹೀಗೆ ಇರುತ್ತದೆ.
IIOJK - ಭಾರತೀಯ ಅಕ್ರಮವಾಗಿ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ
IOJK - ಭಾರತೀಯ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ
IOK - ಭಾರತೀಯ ಆಕ್ರಮಿತ ಕಾಶ್ಮೀರ