ಮ್ಯಾನ್ಮಾರ್ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ, ಯಾಕೆ?
ಸೇನಾ ಕ್ಷಿಪ್ರ ಕ್ರಾಂತಿ ಮ್ಯಾನ್ಮಾರ್ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಇದು ಜಗತ್ತಿನ ಗಮನ ಸೆಳೆದಿದೆ. ಅದರಲ್ಲೂ ಭಾರತ ಹಾಗೂ ಅಮೆರಿಕದಂತಹ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಮ್ಯಾನ್ಮಾರ್ ಸ್ಥಿತಿ ಬಗ್ಗೆ ಸೂಕ್ಷ್ಮ ದೃಷ್ಟಿ ನೆಟ್ಟಿವೆ. ಮ್ಯಾನ್ಮಾರ್ ಬಿಕ್ಕಟ್ಟಿನ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್ ಗಂಭೀರ ಚರ್ಚೆ ನಡೆಸಿದ್ದಾರೆ. ಏಕೆಂದರೆ ಈ ಮೊದಲು ಭಾರತ ಮ್ಯಾನ್ಮಾರ್ನಲ್ಲಿ ಹಲವು ಹೂಡಿಕೆಗಳನ್ನು ಮಾಡಿದೆ.
ಅಮೆರಿಕ ಕೂಡ ಇದೇ ರೀತಿ ಸಾಕಷ್ಟು ಪ್ರಮಾಣದ ಬಂಡವಾಳ ಹೂಡಿದೆ. ಆದರೆ ದಿಢೀರ್ ಎದುರಾಗಿರುವ ಬಿಕ್ಕಟ್ಟು ಅಮೆರಿಕ ಹಾಗೂ ಭಾರತವನ್ನ ಚಿಂತೆಗೀಡು ಮಾಡಿದೆ. ಏಕೆಂದರೆ ಮ್ಯಾನ್ಮಾರ್ ಪಕ್ಕದಲ್ಲೇ ಇರುವ ಚೀನಾ, ಮ್ಯಾನ್ಮಾರ್ ಸೇನಾ ಕ್ರಾಂತಿಯಲ್ಲಿ ಪರೋಕ್ಷ ಪ್ರಭಾವ ಬೀರಿರುವ ಅನುಮಾನ ಕಾಡುತ್ತಿದೆ. ಈಗಾಗಲೇ ಏಷ್ಯಾದ ಬಹುಪಾಲು ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಿರುವ ಚೀನಾ, ಮ್ಯಾನ್ಮಾರ್ನ ಮೇಲೂ ಹಿಡಿತ ಸಾಧಿಸಬಹುದು ಎಂಬ ಅನುಮಾನ ಅಮೆರಿಕ ಹಾಗೂ ಭಾರತವನ್ನು ಕಾಡುತ್ತಿದೆ. ಹೀಗಾಗಿಯೇ ಮ್ಯಾನ್ಮಾರ್ ಪರಿಸ್ಥಿತಿ ಕುರಿತು ಗಂಭೀರ ಚರ್ಚೆಗಳು ಸಾಗಿವೆ.
ದಿಢೀರ್ ಸೇನಾ ಕ್ರಾಂತಿ, ಸೂಕಿ ಅರೆಸ್ಟ್, ಚೀನಿ ಗ್ಯಾಂಗ್ ಕೈವಾಡ..?
ಅಮೆರಿಕದಿಂದ ಸೇನಾ ಕಾರ್ಯಾಚರಣೆ..?
ಮಾತುಕತೆ ವೇಳೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್ ಮ್ಯಾನ್ಮಾರ್ನಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸೇನೆ ಈಗಾಗಲೇ ಮ್ಯಾನ್ಮಾರ್ನ ಸಂಪೂರ್ಣವಾಗಿ ವಶಕ್ಕೆ ಪಡೆದಿದ್ದು, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆಯಾಗುವ ಭೀತಿ ಎದುರಾಗಿದೆ. ಈಗಾಗಲೇ ಮ್ಯಾನ್ಮಾರ್ನಲ್ಲಿ ಸಂವಹನ ಸಾಧನಗಳನ್ನೆಲ್ಲಾ ಬಂದ್ ಮಾಡಲಾಗಿದೆ. ಸೇನೆ ನಿರ್ಧಾರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊರೊನಾ ಬಳಿಕ ಆರ್ಥಿಕ ಸಂಕಷ್ಟದಲ್ಲಿದ್ದ ಮ್ಯಾನ್ಮಾರ್ನ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದು ಅಮೆರಿಕದ ಕಣ್ಣು ಕೆಂಪಗಾಗಿಸಿದ್ದು, ಮುಂದಿನ ದಿನಗಳಲ್ಲಿ ಸೇನಾ ಕಾರ್ಯಾಚರಣೆ ನಡೆಸಿದರೂ ಅಚ್ಚರಿ ಪಡಬೇಕಿಲ್ಲ.
ಇಂಟರ್ನೆಟ್ ಇಲ್ಲದೆ ಪರದಾಟ..!
ಸೇನಾ ಕ್ರಾಂತಿಯ ವಿರುದ್ಧ ಮ್ಯಾನ್ಮಾರ್ನಲ್ಲಿ ಹೋರಾಟ ತೀವ್ರಗೊಳ್ಳುತ್ತಿದ್ದು, ದೇಶದ ಇತರ ಭಾಗಗಳಿಗೆ ತೀವ್ರ ಸ್ವರೂಪದಲ್ಲಿ ಹರಡುತ್ತಿದೆ. ಆದರೆ ಇದನ್ನು ತಡೆಯಲು ಮ್ಯಾನ್ಮಾರ್ ಮಿಲಿಟರಿ ತನ್ನ ಬಲವನ್ನು ಬಳಸುತ್ತಿದೆ. ಈಗಾಗಲೇ ಮ್ಯಾನ್ಮಾರ್ನಲ್ಲಿ ಇಂಟರ್ನೆಟ್ ಕಡಿತವಾಗಿದ್ದು, ಜನರನ್ನು ಅತ್ತಿಂದ ಇತ್ತ ಕದಡಲು ಬಿಡುತ್ತಿಲ್ಲ. ಈ ನಡುವೆ ಜನ ಬೀದಿಗಿಳಿದು ಮಿಲಿಟರಿ ಆಡಳಿತದ ವಿರುದ್ಧ ಹೋರಾಟ ತೀವ್ರಗೊಳಸಿದ್ದಾರೆ. ಹೀಗೆ ಮ್ಯಾನ್ಮಾರ್ ಬೂದಿ ಮುಚ್ಚಿದ ಕೆಂಡವಾಗಿದ್ದು, ಹಿಂಸಾಚಾರ ಸ್ಫೋಟಗೊಳ್ಳುವ ಆತಂಕವೂ ಎದುರಾಗಿದೆ. ಆದರೆ ಹೊರ ಜಗತ್ತಿಗೆ ಮ್ಯಾನ್ಮಾರ್ನಲ್ಲಿ ಏನಾಗುತ್ತಿದೆ ಎಂಬ ಸತ್ಯ ಸರಿಯಾಗಿ ತಿಳಿಯದಂತೆ ಮಾಡಿದೆ ಅಲ್ಲಿನ ಮಿಲಿಟರಿ.
ಬೀದಿಗೆ ಬಿತ್ತು ಬ್ಯಾಂಕಿಂಗ್ ವಲಯ
ಮ್ಯಾನ್ಮಾರ್ ಏಷ್ಯಾದ ಪ್ರಬಲ ಆರ್ಥಿಕ ಶಕ್ತಿಗಳಲ್ಲೊಂದು. ಅಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಜನರು ಕೂಡ ಆಧುನಿಕ ಜಗತ್ತಿಗೆ ಒಗ್ಗಿಕೊಂಡಿದ್ದಾರೆ. ಆದರೆ ಮಿಲಿಟರಿ ದಿಢೀರ್ ಇಂಟರ್ನೆಟ್ ಬಂದ್ ಮಾಡಿದ್ದು, ಶಾಕ್ ಮೇಲೆ ಶಾಕ್ ಕೊಟ್ಟಿದೆ. ಆನ್ಲೈನ್ ಪೇಮೆಂಟ್ ಮಾಡಲು ಸಾಧ್ಯವಾಗುತ್ತಿಲ್ಲ. ಹೋಗಲಿ ಹಣ ಬಿಡಿಸುವ ಅಂತಾ ಎಟಿಎಂ ಕಡೆ ಹೋದರೆ ಅಲ್ಲೂ ನಿರಾಸೆ. ಬ್ಯಾಂಕಿಂಗ್ ವಲಯ ಇದರಿಂದ ಕಂಗಲಾಗಿದ್ದು, ಕೊರೊನಾ ಸಂಕಷ್ಟದ ನಡುವೆ ಸೇನಾ ಕ್ರಾಂತಿ ಮತ್ತೊಂದು ಸಮಸ್ಯೆ ತಂದೊಡ್ಡಿದೆ. ಆದರೆ ಮ್ಯಾನ್ಮಾರ್ ಸೇನಾಧಿಕಾರಿಗಳು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುತ್ತಿದ್ದಾರೆ.
ಮಿಲಿಟರಿ ಆಡಳಿತ ಶುರು..!
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್ಗೆ ತೆಗೆದುಕೊಂಡಿದೆ ಸೇನೆ. ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ.
‘ಡ್ರ್ಯಾಗನ್ ಚೀನಿ’ ಗ್ಯಾಂಗ್ ಕೈವಾಡ..?
ಇಂತಹದ್ದೊಂದು ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಚೀನಾ ಜೊತೆಗೆ ಮ್ಯಾನ್ಮಾರ್ ಸುಮಾರು 2 ಸಾವಿರ ಕಿಲೋ ಮೀಟರ್ಗೂ ಹೆಚ್ಚು ವಿಸ್ತಿರ್ಣದ ಗಡಿ ಹಂಚಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಚೀನಾ ತನ್ನ ಅಕ್ಕಪಕ್ಕದ ದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಕುತಂತ್ರ ಬುದ್ಧಿ ಬಳಸುತ್ತಿದೆ. ನೇಪಾಳದಲ್ಲೂ ಹೀಗೆ ಮಾಡಿದೆ ಚೀನಾ. ಇದೀಗ ಮ್ಯಾನ್ಮಾರ್ ಸೇನಾ ಕ್ರಾಂತಿಗೂ ಚೀನಾ ಬೆಂಬಲ ಇರಬಹುದು ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಮ್ಯಾನ್ಮಾರ್ ಪ್ರಜಾಪ್ರಭುತ್ವ ತತ್ವ ಅಳವಡಿಸಿಕೊಂಡಿರುವ ದೇಶ. ಆದರೆ ಮಾವೋವಾದಿ ಕಮ್ಯೂನಿಸ್ಟ್ ಸಿದ್ಧಾಂತದ ಚೀನಾಗೆ ಇದು ಬಿಲ್ಕುಲ್ ಇಷ್ಟವಿಲ್ಲ.
ಚುನಾವಣೆಯಲ್ಲಿ ಅಕ್ರಮ ನಡೆದಿತ್ತಾ..?
ಮ್ಯಾನ್ಮಾರ್ನಲ್ಲಿ 2020ರ ನವೆಂಬರ್ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.