ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಟರ್ಕಿಗೆ ಬೆವರಿಳಿಸಿದ ಭಾರತ
ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಿಸಿದ ಟರ್ಕಿಗೆ ಭಾರತ ಬೆವರಿಳಿಸಿದೆ. ವಿಶ್ವಸಂಸ್ಥೆ 75ನೇ ಸಾಮಾನ್ಯ ಸಭೆ (UNGA)ಯಲ್ಲಿ ಭಾರತದ ಕೇಂದ್ರಾಡಳಿತ ಪ್ರದೇಶ ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಪಾಕ್ ಬೆನ್ನಿಗೆ ನಿಂತಿದ್ದರು.
ಕಾಶ್ಮೀರದ ಜನರ ಆಕಾಂಕ್ಷೆಗೆ ಅನುಗುಣವಾಗಿ ವಿಶ್ವಸಂಸ್ಥೆ ಚೌಕಟ್ಟಿನೊಳಗಿನ ಸಮಸ್ಯೆ ಪರಿಹರಿಸುವುದರ ಪರವಾಗಿ ನಾವಿರುತ್ತೇವೆ ಎಂದಿದ್ದರು ಎರ್ಡೋಗನ್. ಈ ಹೇಳಿಕೆ ಬೆನ್ನಲ್ಲೆ ಟರ್ಕಿ ಅಧ್ಯಕ್ಷರ ನಡೆ ಟೀಕಿಸಿ ಟ್ವೀಟ್ ಮಾಡಿರುವ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರೂಮೂರ್ತಿ, ಟರ್ಕಿ ಇತರ ರಾಷ್ಟ್ರಗಳ ಸಾರ್ವಭೌಮತ್ವ ಗೌರವಿಸುವುದನ್ನು ಕಲಿಯಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ ಟರ್ಕಿ ಅಧ್ಯಕ್ಷರು ಭಾಷಣದಲ್ಲಿ ಕಾಶ್ಮೀರದ ವಿಚಾರ ಪ್ರಸ್ತಾಪ ಮಾಡಿದ್ದನ್ನು ಗಮನಿಸಿದ್ದೇವೆ. ಎರ್ಡೋಗನ್ ಭಾಷಣದಲ್ಲಿ ಪ್ರಸ್ತಾಪಿಸಿದ ಅಂಶಗಳು ಭಾರತದ ಆಂತರಿಕ ವಿಷಯದಲ್ಲಿ ಮಾಡಿರುವ ಹಸ್ತಕ್ಷೇಪವಾಗಿದೆ. ಇಂತಹ ನಡೆಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂದು ಟಿ.ಎಸ್. ತಿರೂಮೂರ್ತಿ ತೀಕ್ಷ್ಣವಾದ ಪ್ರತ್ಯುತ್ತರ ರವಾನಿಸಿದ್ದಾರೆ. ತನ್ನ ಗಡಿಯಲ್ಲೇ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಟರ್ಕಿ, ಭಾರತದ ವಿರುದ್ಧ ತನ್ನ ಕುತಂತ್ರ ನಡೆ ಮುಂದುವರಿಸಿದೆ.
ಪಾಕ್ ಮತ್ತು ಟರ್ಕಿ v/s ಭಾರತ..!
ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಭಾರತದ ಕಣ್ಣು ಕೆಂಪಾಗುವಂತಹ ಹೇಳಿಕೆ ನೀಡಿದ್ದರು. ಕಾಶ್ಮೀರದಲ್ಲಿ ಮೊದಲ ಮಹಾಯುದ್ಧದ ಬಳಿಕ ಉಂಟಾಗಿದ್ದ ಸ್ಥಿತಿ ಉದ್ಭವಿಸಿದೆ. ಒಟ್ಟೊಮನ್ ಚಕ್ರಾಧಿಪತ್ಯದ ವಿರುದ್ಧ ಟರ್ಕಿ ಹೋರಾಟಗಾರರು ನಡೆಸಿದ ಯುದ್ಧದಲ್ಲಿ ಟರ್ಕಿ ಜನರು ಅನುಭವಿಸಿದ ನೋವಿಗೂ ಕಾಶ್ಮೀರದ ಜನತೆ ಅನುಭವಿಸುತ್ತಿರುವ ನೋವಿಗೂ ವ್ಯತ್ಯಾಸವಿಲ್ಲ. ಎಂದು ಕಾಶ್ಮೀರದ ವಿಚಾರದಲ್ಲಿ ಪಾಕ್ಗೆ ಬೆಂಬಲ ನೀಡಿದ್ದರು. ಈ ಹೇಳಿಕೆ ಬಳಿಕ ಟರ್ಕಿ ಭಾರತದ ವಿರುದ್ಧ ತನ್ನ ನಡೆ ಮುಂದುವರಿಸಿದೆ. ಭಾರತ ಕೂಡ ಟರ್ಕಿಗೆ ಸರಿಯಾಗೇ ತಿರುಗೇಟು ನೀಡುತ್ತಾ ಬಂದಿದೆ.
ಅಮೀರ್ ಖಾನ್ ವಿರುದ್ಧ ಆಕ್ರೋಶ
ಇಷ್ಟೆಲ್ಲಾ ನಡೆದಿರುವಾಗಲೇ ಕಳೆದ ತಿಂಗಳು ಬಾಲಿವುಡ್ ನಟ ಅಮೀರ್ ಖಾನ್ ಟರ್ಕಿಯ ಅಧ್ಯಕ್ಷರ ಪತ್ನಿಯನ್ನು ಭೇಟಿ ಮಾಡಿದ್ದರು. ಟರ್ಕಿಯ ಪ್ರಥಮ ಮಹಿಳೆ ಎಮೈನ್ ಎರ್ಡೋಗನ್ರನ್ನು ಅಮೀರ್ ಭೇಟಿ ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಅಮೀರ್ ಖಾನ್ ವಿರುದ್ಧ ಕಿಚ್ಚು ಹೊತ್ತಿಸಿತ್ತು. ಭಾರತದಲ್ಲಿ ಬಾಲಿವುಡ್ ನಟನ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಮೀರ್ ಖಾನ್ ತಮ್ಮ ‘ಲಾಲ್ ಸಿಂಗ್ ಛಡ್ಡಾ' ಚಿತ್ರದ ಚಿತ್ರೀಕರಣಕ್ಕಾಗಿ ಟರ್ಕಿಗೆ ತೆರಳಿದ್ದಾಗ ಎಮೈನ್ರನ್ನು ಭೇಟಿ ಮಾಡಿದ್ದರು.
ಉಗ್ರರಿಗೆ ನೆರವು ನೀಡುತ್ತಿದೆ ಟರ್ಕಿ
ಭಾರತದ ವಿರುದ್ಧ ದಾಳಿ ನಡೆಸಲು, ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕಿಸ್ತಾನದ ಜೊತೆ ಕೈಜೋಡಿಸಿರುವ ಟರ್ಕಿ ಉಗ್ರರಿಗೆ ಸಹಾಯ ಮಾಡುತ್ತಿದೆ. ಈ ಹಿಂದೆ ಭಾರತದಲ್ಲಿ ಸೆರೆಸಿಕ್ಕ ಹಲವು ಉಗ್ರರು ಟರ್ಕಿಯಿಂದ ನೆರವು ಸಿಗುತ್ತಿರುವ ಗುಟ್ಟು ಬಯಲಿಗೆಳೆದಿದ್ದರು. ISIS ಸೇರಿದಂತೆ ಜಗತ್ತಿನ ಖತರ್ನಾಕ್ ಉಗ್ರರಿಗೆ ಟರ್ಕಿ ಮೊದಲಿನಿಂದಲೂ ನೆರವು ನೀಡುತ್ತಾ ಬಂದಿದೆ. ಈ ಮೂಲಕ ಇಸ್ಲಾಂ ಮೂಲಭೂತ ವಾದದ ಪರ ಟರ್ಕಿ ನಿಂತಿದ್ದು, ಭಾರತದಲ್ಲಿ ದಾಳಿಗಳನ್ನ ರೂಪಿಸುವ ಉಗ್ರಕ್ರಿಮಿಗಳಿಗೆ ಬೆಂಬಲವಾಗಿ ನಿಂತಿದೆ. ಇದು ವಿಶ್ವ ಸಮುದಾಯದ ಕೆಂಗಣ್ಣಿಗೂ ಗುರಿಯಾಗಿದ್ದುಂಟು.
ಸಿರಿಯಾ ಜೊತೆ ದಿನನಿತ್ಯ ಕಿತ್ತಾಟ
ಊರಿಗೆ ನೀತಿ ಪಾಠ ಹೇಳುವ ಟರ್ಕಿ ತನ್ನ ಗಡಿಯಲ್ಲೇ ನೂರಾರು ಸಮಸ್ಯೆಗಳನ್ನ ಎದರಿಸುತ್ತಿದೆ. ಉಗ್ರರ ತವರು ಸಿರಿಯಾ ಜೊತೆ ದಿನಬೆಳಗಾದರೂ ಗಡಿ ಕಿರಿಕ್ ಇದ್ದೇ ಇರುತ್ತದೆ. ಹೀಗೆ ತನ್ನ ನೆರೆ ರಾಷ್ಟ್ರಗಳ ಜೊತೆಯಲ್ಲೇ ಟರ್ಕಿ ಉತ್ತಮ ಸಂಬಂಧ ಬೆಳೆಸಿಕೊಂಡಿಲ್ಲ. ಹೀಗಿರುವಾಗ, ಭಾರತಕ್ಕೆ ಬುದ್ಧಿ ಹೇಳುವ ಸಾಹಸ ಮಾಡುತ್ತಿದೆ. ಪಾಕಿಸ್ತಾನದ ಪಕ್ಕಾ ಫ್ರೆಂಡ್ ಟರ್ಕಿ, ಆರ್ಟಿಕಲ್ 370ನ್ನು ರದ್ದುಗೊಳಿಸಿದ ತಕ್ಷಣ ಕೆರಳಿತ್ತು. ಅಲ್ಲದೆ ನಿರಂತರವಾಗಿ ಪಾಕಿಸ್ತಾನದ ಹೇಳಿಕೆಗಳಿಗೆ, ನಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆನ್ನಿಗೆ ನಿಂತಿದೆ.