ಜಲ ಸಮರ: ಪಾಕಿಸಾನ ವಿರುದ್ಧ ಭಾರತಕ್ಕೆ ಜಯ
ನವದೆಹಲಿ, ಆಗಸ್ಟ್ 03: ಜಮ್ಮು ಮತ್ತು ಕಾಶ್ಮೀರದ ಕಿಶನ್ಗಂಗಾ ಮತ್ತು ರಾಟ್ಲೆಯಲ್ಲಿ ಜಲ ವಿದ್ಯುತ್ ಘಟಕಗಳನ್ನು ನಿರ್ಮಿಸಲು ಮುಂದಾಗಿರುವ ಭಾರತದ ಬೆನ್ನಿಗೆ ವಿಶ್ವಬ್ಯಾಂಕ್ ನಿಂತಿದೆ.
ಝೇಲಂ ಮತ್ತು ಚೆನಬ್ ನದಿ ವ್ಯಾಪ್ತಿಯ ಕಿಶನ್ ಗಂಗಾ ಹಾಗೂ ರಾಟ್ಲೆಯಲ್ಲಿ ಯೋಜನೆಗೆ ಅನುಮತಿ ಸಿಕ್ಕಿದೆ. ಯೋಜನೆಯನ್ನು ವಿರೋಧಿಸುತ್ತಾ ಬಂದಿದ್ದ ಪಾಕಿಸ್ತಾನಕ್ಕೆ ಈ ಆದೇಶದಿಂದ ತೀವ್ರ ಮುಖಭಂಗವಾಗಿದೆ.
ಕಿಶನ್ಗಂಗಾದಲ್ಲಿ 330 ಮೆಗಾವಾಟ್ ಮತ್ತು ರಾಟ್ಲೆಯಲ್ಲಿ 850 ಮೆಗಾವಾಟ್ ಸಾಮರ್ಥ್ಯದ ಜಲ ವಿದ್ಯುತ್ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಿರುವ ಭಾರತಕ್ಕೆ ಷರತ್ತುಬದ್ಧ ಅನುಮತಿಯನ್ನು ವಿಶ್ವಬ್ಯಾಂಕ್ ನೀಡಿದೆ.
ಈ ಯೋಜನೆಯ ವಿನ್ಯಾಸದ ಬಗ್ಗೆ ಆತಂಕ ವ್ಯಕ್ತಪಡಿಸಿ, ಸಂಬಂಧ ಮಧ್ಯಸ್ಥಿಕೆ ನ್ಯಾಯಾಲಯ ಸ್ಥಾಪಿಸುವಂತೆ ಒತ್ತಾಯಿಸಿತ್ತು. ಭಾರತ ಸಹ ಈ ವಿಷಯದ ಬಗ್ಗೆ ಪರಿಶೀಲಿಸಲು ತಟಸ್ಥ ರಾಷ್ಟ್ರಗಳ ತಜ್ಞರನ್ನು ನೇಮಿಸುವಂತೆ ಆಗ್ರಹಿಸಿತ್ತು.
ಸಿಂಧೂ ಜಲ ಒಪ್ಪಂದ(1960ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಲಾಯಿತು) ಅನ್ವಯ ಈ ಎರಡು ನದಿಗಳನ್ನು 'ಪಶ್ಚಿಮದ ನದಿಗಳು' ಎಂದು ಪರಿಗಣಿಸಲಾಗಿದೆ. ಹೀಗಾಗಿ ಈ ನದಿಗಳ ನೀರನ್ನು ಪಾಕಿಸ್ತಾನ ಸಹ ಯಾವುದೇ ಷರತ್ತುಗಳು ಇಲ್ಲದೆ ಬಳಸಬಹುದು. ಆದ್ದರಿಂದ ಎರಡು ಜಲ ವಿದ್ಯುತ್ ಘಟಕಗಳನ್ನು ನಿರ್ಮಿಸಲು ಭಾರತಕ್ಕೆ ಅನುಮೋದನೆ ನೀಡಲಾಗಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.(ಪಿಟಿಐ)