ಕರ್ತಾರ್ ಪುರ ಕಾರಿಡಾರ್ ಒಪ್ಪಂದಕ್ಕೆ ಭಾರತ-ಪಾಕ್ ಸಹಿ: ಏನೆಲ್ಲಾ ಉಪಯೋಗ?
ಲಾಹೋರ್, ಅಕ್ಟೋಬರ್ 25: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಸಿಖ್ಖರ ಪವಿತ್ರ ಸ್ಥಳ ದರ್ಬಾರ್ ಸಾಹಿಬ್ಗೆ ವೀಸಾ ರಹಿತ ಪ್ರಯಾಣ ಕಲ್ಪಿಸುವ ಐತಿಹಾಸಿಕ ಕರ್ತಾರ್ಪುರ ಕಾರಿಡಾರ್ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಗುರುವಾರ ಸಹಿ ಹಾಕಿದೆ.
ಪಂಜಾಬ್ನ ದೇರಾ ಬಾಬಾ ನಾಯಕ್ ದೇಗುಲದಿಂದ ಪಾಕಿಸ್ತಾನದ ನರ್ವಾಲ್ ಜಿಲ್ಲೆಯ ದರ್ಬಾರ್ ಸಾಹಿಬ್ವರೆಗೆ ಸಂಪರ್ಕ ಕಲ್ಪಿಸುವ ಕಾರಿಡಾರ್ ಇದಾಗಿದ್ದು, ಎರಡೂ ದೇಶಗಳ ಒಪ್ಪಂದದಿಂದಾಗಿ ಸಿಖ್ ಯಾತ್ರಾರ್ಥಿಗಳ ಬಹುದಿನಗಳ ಕನಸು ನನಸಾದಂತಾಗಿದೆ.
ಕರ್ತಾರ್ಪುರ ಯಾತ್ರಿಕರ ಮೇಲೆ ದುಬಾರಿ ಶುಲ್ಕ, ಪಾಕ್ ವಿರುದ್ಧ ಆಕ್ರೋಶ
ಗಡಿಯಲ್ಲಿ ನಡೆದ ಈ ಒಪ್ಪಂದದಲ್ಲಿ ಭಾರತದ ಪರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಎಸ್ಸಿಎಲ್ ದಾಸ್ ಹಾಗೂ ಪಾಕ್ ಪರ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ನವೆಂಬರ್ 12ಕ್ಕೆ ಗುರು ನಾನಕ್ 550ನೇ ಜಯಂತಿಗೆ ಮುಂಚಿತವಾಗಿ ಅಂದರೆ ನ.9ರಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾರಿಡಾರ್ ಉದ್ಘಾಟಿಸಲಿದ್ದಾರೆ. ಒಪ್ಪಂದದ ಬಳಿಕ ಆನ್ಲೈನ್ ನೋಂದಣಿ ಕೂಡ ಆರಂಭವಾಗಿದ್ದು, ನಿತ್ಯ 5 ಸಾವಿರ ಮಂದಿ ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿದೆ.
ಭಾರತದ ವಿರೋಧವಿದ್ದಾಗಲೂ ಪ್ರತಿ ಯಾತ್ರಾರ್ಥಿಗಳಿಗೆ 1,500 ರೂ ಶುಲ್ಕ ಪ್ರಸ್ತಾಪ ಹಿಂಪಡೆಯಲು ಪಾಕಿಸ್ತಾನ ನಿರಾಕರಿಸಿದ್ದು, ಭೇಟಿ ನೀಡುವ ಪ್ರತಿಯೊಬ್ಬರೂ ಶುಲ್ಕ ಪಾವತಿಸಬೇಕಿದೆ.
ಯಾತ್ರಾರ್ಥಿಗಳು ಬೆಳಗ್ಗೆ ಬಂದು ಸಂಜೆ ವೇಳೆ ಮರಳಬೇಕು ಎಂದು ಒಪ್ಪಂದದಲ್ಲಿ ತಿಳಿಸಲಾಗಿದೆ. ಅಲ್ಲದೆ 11 ಸಾವಿರಕ್ಕಿಂತ ಹೆಚ್ಚಿನ ಹಣ ಏಳು ಕೆಜಿಗಿಂತ ಹೆಚ್ಚಿನ ಬ್ಯಾಗ್ , ಪ್ಲಾಸ್ಟಿಕ್ ಹಾಗೂ ಪರಿಸರಕ್ಕೆ ಹಾನಿಯಾಗುವಂತಹ ವಸ್ತುಗಳನ್ನು ತರುವಂತಿಲ್ಲ ಎಂದು ತಿಳಿಸಿದೆ.