ಡಾವೋಸ್ ನಲ್ಲಿ ಭಾರತದ ಮೋಡಿ: ಒಂದಷ್ಟು ಮಾಹಿತಿ
ಡಾವೊಸ್(ಸ್ವಿಟ್ಜರ್ಲೆಂಡ್), ಜನವರಿ 23: ವಿಶ್ವದ ಇತರೆ ದೇಶಗಳಿಗೆ ಬಂಡವಾಳ ಹೂಡಲು ಭಾರತ ಸದಾ ವೇದಿಕೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸ್ವಿಟ್ಜರ್ಲೆಂಡ್ ನ ಡಾವೋಸ್ ನಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ವರ್ಲ್ಡ್ ಎಕನಾಮಿಕ್ ಫೋರಂ ಗೆ ನಿನ್ನೆ(ಜ.22) ಅಧಿಕೃತ ಚಾಲನೆ ದೊರೆತಿದ್ದು, ಈ ಸಭೆಯಲ್ಲಿ ಮೋದಿ ಮಾತನಾಡುತ್ತಿದ್ದರು.
ವಿಶ್ವ ಎಕನಾಮಿಕ್ ಫೋರಂ ನಲ್ಲಿ ಭಾಗವಹಿಸುವ ಮೂಲಕ, ಈ ವೇದಿಕೆಯಲ್ಲಿ ಕಾಣಿಸಿಕೊಂಡ ಪ್ರಥಮ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.
ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತಿನ 10 ಮುಖ್ಯಾಂಶಗಳು
ವಿಶ್ವದ ಪ್ರಮುಖ ಕಂಪನಿಗಳ ಸಿಇಒಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ದುಂಡುಮೇಜಿನ ಸಭೆಯಲ್ಲಿ ಭಾರತದ ಶೀಘ್ರ ಆರ್ಥಿಕ ಪ್ರಗತಿಯ ಕುರಿತು ಮೋದಿ ವಿವರಿಸಿದರು. ಭಾರತದಲ್ಲಿ ಬಂಡವಾಳ ಹೂಡುವ ವಿದೇಶಿ ಕಂಪೆನಿಗಳಿಗೆ ಅವಕಾಶ ನೀಡಲು ಸಿದ್ಧ ಎಂದು ಸಹ ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಸಭೆಗೂ ಮುನ್ನ ಸ್ವಿಸ್ ಅಧ್ಯಕ್ಷ ಅಲೈನ್ ಬೆರ್ಸೆಟ್ ರೊಂದಿಗೆ ದ್ವಿಪಕ್ಷೀಯ ಸಂಬಂಧದ ಕುರಿತು ಚರ್ಚೆ ನಡೆಸಿದ ಮೋದಿ, ಉಭಯ ದೇಶಗಳ ಸಂಬಂಧ ಸುಧಾರಿಸುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.
ಡಾವೋಸ್ ನ ಸಭೆಯ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.
ಕಪ್ಪು ಹಣ ನಿಯಂತ್ರಣದ ಚರ್ಚೆ
ಕಪ್ಪು ಹಣ ನಿಯಂತ್ರಣದ ಕುರಿತು ಗಂಭೀರವಾಗಿ ಚಿಮತಿಸುತ್ತಿರುವ ಭಾರತೀಯ ಸರ್ಕಾರ ಸ್ವಿಸ್ ಸರ್ಕಾರದೊಂದಿಗೆ ಈ ಕುರಿತೂ ಚರ್ಚೆ ನಡೆಸಿದೆ. ಅಲ್ಲದೆ ತೆರಿಗೆ ಮಾಹಿತಿಯನ್ನು ನೀಡುವಂತೆಯೂ ಸ್ವಿಸ್ ಸರ್ಕಾರದ ಬಳಿ ಮನವಿ ಮಾಡಿಕೊಳ್ಳಲಾಗಿದೆ.
ಭಾರತ ಆಯೋಜಿಸಿದ ಅದ್ಧೂರಿ ರಿಸೆಪ್ಷನ್
ವಿಶ್ವ ಎಕನಾಮಿಕ್ ಫೋರಂ ನ ಕೇಂದ್ರದಲ್ಲಿ ಭಾರತ ಆಯೋಜಿಸಿದ್ದ ಅದ್ಧೂರಿ ರಿಸೆಪ್ಷನ್ ನಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಸುಮಾರು 1500 ಕ್ಕೂ ಹೆಚ್ಚು ಗಣ್ಯರು ಈ ಭೋಜನ ಕೂಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಓಲೈಕೆಗಾಗಿ ಬಜೆಟ್ ಇರಲ್ಲ, ಆರ್ಥಿಕ ಇಲಾಖೇಲಿ ತಲೆ ಹಾಕಲ್ಲ : ಮೋದಿ
ಭಾರತೀಯ ಸಂಸ್ಕೃತಿ, ಅಭಿರುಚಿಯ ಪ್ರದರ್ಶನ
ಈ ರಿಸೆಪ್ಷನ್ ನಲ್ಲಿ ಭಾರತೀಯ ಶ್ರೀಮಂತ ಸಂಸ್ಕೃತಿ ಮತ್ತು ಅಭಿರುಚಿಯನ್ನು ಪರಿಚಯಿಸುವ ಕೆಲಸ ನಡೆಯುತ್ತದೆ. ಸಮೋಸಾ, ಕಚೋರಿ ಸೇರಿದಂತೆ ಬಾಯಿನೀರೂರಿಸುವ ಭಾರತೀಯ ರುಚಿಕಟ್ಟಾದ ತಿನಿಸುಗಳ ಪರಿಚಯ ಮಾಡಲಾಗುತ್ತದೆ. ಭಾರತೀಯ ಚಹ ಮತ್ತು ಪಕೋಡಗಳಿಗೆ ಇಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇರುವುದರಿಂದ ಅವುಗಳಿಗೆ ಹೆಚ್ಚು ಪ್ರಚಾರ ನೀಡುವ ಕೆಲಸವೂ ನಡೆಯುತ್ತಿದೆ. ಅಲ್ಲದೆ ಯೋಗ ತರಬೇತಿಯೂ ಈ ಸಂದರ್ಭದಲ್ಲಿ ನಡೆಯಲಿದೆ.
40 ಅಗ್ರ ಕಂಪನಿಗಳು
ಈ ಸಭೆಯಲ್ಲಿ 18 ದೇಶಗಳ 40 ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಭಾಗವಹಿಸಿವೆ. ಏರ್ ಬಸ್ ಸಿಇಒ ಡರ್ಕ್ ಹೋಕ್, ಹಿಟಾಚಿ ಚೇರ್ ಮನ್ ಹಿರೊಕಿ ನಕಾಶಿನಿ, WEF ಸಂಸ್ಥಾಪಕ ಪ್ರೊಫೆಸರ್ ಕ್ಲಾಸ್ ಶ್ವಾಬ್ ಸೇರಿದತೆ 20 ಭಾರತೀಯ ಸಿಇಒಗಳು ಇದರಲ್ಲಿ ಭಾಗವಹಿಸಿದ್ದಾರೆ.
ಭಾರತೀಯ ಕಂಪನಿಗಳು
ಭಾರತದಿಂದ ರೈಲ್ವೇ ಸಚಿವ ಪಿಯೂಶ್ ಗೋಯಲ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ, ಟಾಟಾ ಛೇರ್ ಮನ್ ಎನ್. ಚಂದ್ರಶೇಖರನ್, ಅದಾನಿ ಗ್ರೂಪ್ ನ ಗೌತಮ್ ಅದಾನಿ, ವಿಪ್ರೋದ ಅಜಿಮ್ ಪ್ರೇಮ್ಜಿ, ಬಜಾಜ್ ಗ್ರೂಪ್ ಪ್ರೊಮೋಟರ್ ರಾಹುಲ್ ಬಜಾಜ್, ಐಸಿಐಸಿಐ ಬ್ಯಾಂಕ್ ನ ಚಂದಾ ಕೊಚ್ಚಾರ್, ಕೊಟಾಕ್ ಮಹಿಂದ್ರಾ ಬ್ಯಾಂಕ್ ನ ಉದಯ್ ಕೊಟಾಕ್, ಸ್ಪೈಸ್ ಜೆಟ್ ನ ಅಜಯ್ ಸಿಂಗ್ ಜೊತೆಗೆ ಬಾಲಿವುಡ್ ಸ್ಟಾರ್ ಶಾರುಕ್ ಖಾನ್ ಮತ್ತು ಕರಣ್ ಜೋಹರ್ ಭಾಗವಹಿಸಿದ್ದಾರೆ.