ಅಫ್ಘಾನಿಸ್ತಾನದಿಂದ 50ಕ್ಕೂ ಅಧಿಕ ಭಾರತದ ಪ್ರತಿನಿಧಿಗಳು ಹಿಂದಕ್ಕೆ
ನವ ದೆಹಲಿ/ಕಾಬೂಲ್, ಜುಲೈ 11: ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಉಪಟಳ ಹೆಚ್ಚಾಗುತ್ತಿದ್ದು, ಅನೇಕ ಪ್ರದೇಶಗಳನ್ನು ಉಗ್ರರು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿದ್ದ ಭಾರತದ ಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ.
ಕಂದಾಹಾರದ ಕಚೇರಿಯಲ್ಲಿದ್ದ 50ಕ್ಕೂ ಅಧಿಕ ರಾಯಭಾರ ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳು ವಿಶೇಷ ವಿಮಾನ ಮೂಲಕ ದೆಹಲಿಗೆ ತೆರಳಿದ್ದಾರೆ. ಪಶ್ಚಿಮ ಆಫ್ಘಾನಿಸ್ತಾನದಲ್ಲಿ ಉಗ್ರರ ದಾಳಿ ಹೆಚ್ಚಾಗಿದ್ದು, ಸರ್ಕಾರದ ಹಿಡಿತ ಕೈತಪ್ಪಿದ್ದು, ಅಪಾಯದ ಹಂತ ದಾಟಿದ್ದರಿಂದ ಅನೇಕ ದೇಶಗಳ ಪ್ರತಿನಿಧಿಗಳು ತಮ್ಮ ದೇಶಕ್ಕೆ ಮರಳುತ್ತಿದ್ದಾರೆ.
ಉಗ್ರರಿಗೆ ಹೆದರಿ ಓಡಿ ಹೋಯ್ತಾ ಅಮೆರಿಕ? ರಕ್ಕಸ ತಾಲಿಬಾನ್ ಗ್ಯಾಂಗ್ಗೆ ಮತ್ತಷ್ಟು ಬಲ!
ಭಾರತದಿಂದ ವಿಶೇಷ ವಿಮಾನವೊಂದನ್ನು ಶನಿವಾರವೇ ಕಂದಹಾರ್ ಕಡೆಗೆ ಕಳಿಸಲಾಗಿತ್ತು. ಇಂಡೋ ಟಿಬೇಟಿಯನ್ ಗಡಿ ಭದ್ರತಾ ಪಡೆ ಸಿಬ್ಬಂದಿ ಸೇರಿದಂತೆ ಎಲ್ಲಾ ಸಿಬ್ಬಂದಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ.
ಕಂದಹಾರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಆದರೆ, ಸ್ಥಳೀಯ ಸಿಬ್ಬಂದಿ ನೆರವಿನಿಂದ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.
ಆದರೆ, ಕಾಬೂಲ್ನಲ್ಲಿರುವ ಕಚೇರಿ ಬಂದ್ ಮಾಡುವ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಯಾವುದೇ ಪ್ರಕಟಣೆ ಬಂದಿಲ್ಲ. ಆದರೆ, ಪರಿಸ್ಥಿತಿ ನೋಡಿಕೊಂಡು ಕ್ರಮ ಜರುಗಿಸುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಅಫ್ಘಾನಿಸ್ತಾನದ ಹಲವಾರು ಜಿಲ್ಲೆಗಳು ವಶಕ್ಕೆ ಪಡೆದ ತಾಲಿಬಾನ್
ಕಳೆದ ಕೆಲವಾರಗಳಿಂದ ಅಫ್ಘಾನಿಸ್ತಾನದಲ್ಲಿ ಉಗ್ರರ ದಾಳಿ ಹೆಚ್ಚಾಗಿದ್ದು, ಸರ್ಕಾರದ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ. ಆಗಸ್ಟ್ ತಿಂಗಳ ಅಂತ್ಯಕ್ಕೆ ಅಫ್ಘಾನಿಸ್ತಾನದಲ್ಲಿರುವ ಯುಎಸ್ ಸೇನೆ ಕೂಡಾ ತನ್ನ ದೇಶಕ್ಕೆ ಮರಳುತ್ತಿದೆ. ಎರಡು ದಶಕಗಳ ಮಿಲಿಟರಿ ನೆಲೆಯನ್ನು ಅಂತ್ಯಗೊಳಿಸುವಂತೆ ಅಧ್ಯಕ್ಷ ಜೋ ಬೈಡನ್ ಆದೇಶಿಸಿದ್ದಾರೆ.
ಈ ನಡುವೆ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಪ್ರವಾಸಿಗರು, ಉದ್ಯೋಗಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ವಿದೇಶಾಂಗ ಸಚಿವಾಲಯ ಸೂಚಿಸಿದೆ. ಅಫ್ಘಾನಿಸ್ತಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಭಾರತ 3 ಬಿಲಿಯನ್ ಯುಎಸ್ ಡಾಲರ್ ಗೂ ಅಧಿಕ ನೆರವು ನೀಡಿದೆ.
ಅಮೆರಿಕ ಸಂಪೂರ್ಣ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದು, ಸದ್ಯದ ಸ್ಥಿತಿಯಲ್ಲಿ ಇಡೀ ಅಫ್ಘಾನಿಸ್ತಾನ ಬೂದಿ ಮುಚ್ಚಿದ ಕೆಂಡವಾಗಿದೆ. ಒಂದು ಕಡೆ ತಾಲಿಬಾನ್ ಉಗ್ರರು ಮತ್ತೊಂದು ಕಡೆ ನಾಗರಿಕರು ದಂಗೆ ಏಳಬಹುದು ಎಂಬ ಆಂತರಿಕ ವರದಿ. ಇದೆಲ್ಲದರ ಮಧ್ಯೆ ಅಫ್ಘಾನಿಸ್ತಾನ ಅಧ್ಯಕ್ಷ ಘನಿ ನಡುಗಿ ಹೋಗಿದ್ದಾರೆ. ಹೆಂಗಪ್ಪ ನಮ್ಮ ಪರಿಸ್ಥಿತಿ ಎನ್ನುತ್ತಿದೆ ಅಲ್ಲಿನ ಸರ್ಕಾರ. ಆದ್ರೆ ಇದೇ ಹೊತ್ತಲ್ಲೇ ಅಮೆರಿಕ ನಾಯಕರಿಗೆ ಬಿಸಿ ಮುಟ್ಟಿಸಿರುವ ಘನಿ, ನಮ್ಮ ಸಂಕಷ್ಟದಲ್ಲಿ ಭಾರತ ಸಹಾಯ ಮಾಡಿದೆ. ಈಗಿನ ಸ್ಥಿತಿಯಲ್ಲಿ ಆಂತರಿಕ ಭದ್ರತೆ ಕಾಪಾಡಲು ಭಾರತವೂ ಸೇರಿದಂತೆ ಚೀನಾ, ರಷ್ಯಾ, ಇರಾನ್ ಸಹಾಯ ಬೇಕಿದೆ ಎಂದಿದ್ದಾರೆ. ಈ ಮೂಲಕ ಭಾರತ ನಮ್ಮ ಗೆಳೆಯ ಎಂಬ ವಿಚಾರವನ್ನ ಮತ್ತೊಮ್ಮೆ ಮನದಟ್ಟು ಮಾಡಿದೆ. ಅಮೆರಿಕದ ಶತ್ರು ರಾಷ್ಟ್ರಗಳನ್ನೂ ಹೊಗಳಿದ್ದಾರೆ ಘನಿ.