ಆರ್ಸಿಇಪಿ ಒಪ್ಪಂದಕ್ಕೆ ಸಹಿ ಹಾಕದ ಭಾರತ: ರೈತರು, ಉದ್ಯಮಿಗಳು ನಿರಾಳ
ಬ್ಯಾಂಕಾಕ್, ನವೆಂಬರ್ 4: ದೇಶದಾದ್ಯಂತ ತೀವ್ರ ಆತಂಕ, ಗೊಂದಲಕ್ಕೆ ಕಾರಣವಾಗಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ (ಆರ್ಸಿಇಪಿ) ಸಹಿ ಹಾಕಲು ಭಾರತ ಸೋಮವಾರ ನಿರಾಕರಿಸಿದೆ. ಇದು ದೇಶದ ರೈತರು, ಉದ್ಯಮಿಗಳು ಹಾಗೂ ವ್ಯಾಪಾರ ವಲಯಕ್ಕೆ ನೆಮ್ಮದಿ ನೀಡಿದೆ.
ತನ್ನ ಪ್ರಮುಖ ಕಳವಳಗಳ ಬಗ್ಗೆ ಚರ್ಚೆಯಾಗದೆ ಪರಿಹಾರೋಪಾಯಗಳನ್ನು ಸೂಚಿಸುವ ಪ್ರಯತ್ನಗಳು ನಡೆಯದೆ ಇರುವುದರಿಂದ ಆರ್ಸಿಇಪಿ ಒಪ್ಪಂದದೊಂದಿಗೆ ಸೇರಿಕೊಳ್ಳದೆ ಇರಲು ಭಾರತ ನಿರ್ಧರಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಆರ್ಸಿಇಪಿ ಒಪ್ಪಂದದಿಂದ ಚೀನಾದ ಸರಕುಗಳು ಭಾರತದೊಳಗೆ ಪ್ರವಹಿಸುವ ಆತಂಕ ವ್ಯಕ್ತವಾಗಿತ್ತು. ಜತೆಗೆ ಸುಂಕವಿಲ್ಲದೆ ಸರಕುಗಳು ದೇಶದ ಮಾರುಕಟ್ಟೆಗೆ ಪ್ರವೇಶಿಸುವ ಒಪ್ಪಂದ ಇದಾಗಿರುವುದರಿಂದ ಅಡಿಕೆ ಮುಂತಾದ ಬೆಳೆಗಾರರು ಕಳವಳಗೊಂಡಿದ್ದರು.
RCEP ಗೆ ಮುಂಚಿನ GATT ಎಂಬ ಪೆಡಂಭೂತ, GATT ನ ತಮ್ಮ RCEP
ಸಮ್ಮೇಳನದಲ್ಲಿ ಭಾರತ ವ್ಯಾಪಾರದ ಕುಸಿತದ ಕುರಿತು ಕಳವಳ ವ್ಯಕ್ತಪಡಿಸಿತು. ಜತೆಗೆ ಭಾರತದ ಸೇವೆಗಳು ಹಾಗೂ ಹೂಡಿಕೆಗೆ ಇತರೆ ಸದಸ್ಯ ದೇಶಗಳು ಕೂಡ ಮಾರುಕಟ್ಟೆಯನ್ನು ತೆರೆಯುವ ಅಗತ್ಯವನ್ನು ಮುಂದಿಟ್ಟಿತು.
ದೃಢವಾಗಿ ಪ್ರತಿಪಾದಿಸಿದ ಮೋದಿ
ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿ ನಡೆದ ಆಸಿಯಾನ್ ಸಮ್ಮೇಳನದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಭಾರತದ ನಿಲುವನ್ನು ದೃಢವಾಗಿ ಪ್ರತಿಪಾದಿಸಿದರು. ಭಾರತದ ಪ್ರಮುಖ ಕಳವಳಗಳ ಕುರಿತು ವ್ಯಾಪಾರ ಒಪ್ಪಂದದಲ್ಲಿ ಗಮನ ಹರಿಸಿಲ್ಲ. ಹೀಗಾಗಿ ತನ್ನ ಮೂಲ ಹಿತಾಸಕ್ತಿಯಲ್ಲಿ ಯಾವುದೇ ರಾಜಿಯಾಗಲು ಸಾಧ್ಯವಿಲ್ಲ. ಆರ್ಸಿಇಪಿ ಒಪ್ಪಂದವು ತನ್ನ ಮೂಲ ಉದ್ದೇಶವನ್ನು ಪ್ರತಿಫಲಿಸುತ್ತಿಲ್ಲ. ಒಪ್ಪಂದದಿಂದ ಹೊರ ಬಂದ ಫಲಿತಾಂಶವು ನ್ಯಾಯಸಮ್ಮತ ಹಾಗೂ ಸಮತೋಲಿತವಾಗಿಲ್ಲ ಎಂದು ಭಾರತ ಅಭಿಪ್ರಾಯ ಪಟ್ಟಿತು.
ಆರ್ಸಿಇಪಿ ರೈತ ವಿರೋಧಿ; ಹೋರಾಟಕ್ಕೆ ಸಿದ್ದರಾಮಯ್ಯ ಕರೆ
ಮೂಲ ಒಪ್ಪಂದ ಬಿಂಬಿಸುತ್ತಿಲ್ಲ
ಆರ್ಸಿಇಪಿ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಆರ್ಥಿಕತೆ ಮತ್ತು ವ್ಯಾಪಾರ ಸನ್ನಿವೇಶಗಳು ಸೇರಿದಂತೆ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿದರು. 'ಆರ್ಸಿಇಪಿ ಒಪ್ಪಂದದ ಪ್ರಸ್ತುತದ ಸ್ವರೂಪವು ಆರ್ಸಿಇಪಿಯ ಮೂಲ ಉದ್ದೇಶ ಮತ್ತು ಒಪ್ಪಿತವಾಗಿದ್ದ ಮಾರ್ಗದರ್ಶಿ ಸೂತ್ರಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತಿಲ್ಲ. ಇಂತಹ ನಿರ್ಧಾರಗಳಲ್ಲಿ ಭಾರತದ ರೈತರು, ವ್ಯಾಪಾರಿಗಳು, ವೃತ್ತಿಪರರು ಮತ್ತು ಉದ್ಯಮಿಗಳ ಭವಿಷ್ಯ ನಿರ್ಧಾರವಾಗುತ್ತದೆ' ಎಂದು ಹೇಳಿದರು.
ಪರಿಹಾರಕ್ಕೆ ಪ್ರಯತ್ನಿಸಲಿ
'ಒಪ್ಪಂದದ ಕುರಿತಂತೆ ಭಾರತವು ಅನೇಕ ಪ್ರಮುಖ ಸಮಸ್ಯೆಗಳನ್ನು ಹೊಂದಿವೆ. ಅವುಗಳು ಪರಿಹಾರ ಕಾಣದೆ ಉಳಿದಿವೆ. ಈ ಬಗೆಹರಿಯದ ಸಮಸ್ಯೆಗಳನ್ನು ಪರಸ್ಪರ ತೃಪ್ತಿದಾಯಕ ಮಾರ್ಗಗಳ ಮೂಲಕ ಪರಿಹರಿಸಲು ಎಲ್ಲ ಆರ್ಸಿಇಪಿ ಸಹಭಾಗಿತ್ವದ ದೇಶಗಳು ಒಂದಾಗಿ ಕೆಲಸ ಮಾಡಲಿವೆ. ಭಾರತದ ಅಂತಿಮ ನಿರ್ಧಾರವು ಈ ಸಮಸ್ಯೆಗಳ ತೃಪ್ತಿದಾಯಕ ನಿರ್ಣಯಗಳ ಮೇಲೆ ಅವಲಂಬಿತವಾಗಿರುತ್ತದೆ' ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ರಾಜ್ಯದ ಹಾಲು ಉತ್ಪಾದಕರ ಪಾಲಿನ ಮರಣ ಶಾಸನ ಆರ್ ಸಿ ಇ ಪಿ: ಡಿಕೆ ಸುರೇಶ್
ಒಪ್ಪಂದಕ್ಕೆ ವಿರೋಧ ಏಕೆ?
ಆರ್ಸಿಇಪಿ ಅಡಿಯಲ್ಲಿ ಚೀನಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನ ಶೇ 74ರಷ್ಟು ಸರಕುಗಳು ಹಾಗೂ ಜಪಾನ್, ದಕ್ಷಿಣ ಆಫ್ರಿಕಾ ಮತ್ತು ಆಸಿಯಾನ್ನ ಒಟ್ಟು 15 ದೇಶಗಳ ಶೇ 90ರಷ್ಟು ಸರಕುಗಳ ಮೇಲಿನ ಸುಂಕವನ್ನು ಭಾರತ ತೆಗೆದುಹಾಕಬೇಕಾಗುತ್ತದೆ. ಇದರಿಂದ ವಿದೇಶಿ ವಸ್ತುಗಳು ಯಥೇಚ್ಛವಾಗಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ತೀರಾ ಅಗ್ಗದ ಹಾಗೂ ಗುಣಮಟ್ಟದವಿಲ್ಲದ ಚೀನಾದ ಸರಕುಗಳು ಮಾರುಕಟ್ಟೆಯನ್ನು ತುಂಬಿಕೊಳ್ಳುತ್ತವೆ. ಅದಕ್ಕಿಂತ ಮುಖ್ಯವಾಗಿ ಭಾರತವು ಇಂತಹ ಸರಕುಗಳ ವಿಲೇವಾರಿ ಘಟಕವಾಗಿ ಬದಲಾಗುತ್ತದೆ. ಜತೆಗೆ ಇಲ್ಲಿನ ರೈತರು, ಉದ್ಯಮಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದಾರೆ. ಹೀಗಾಗಿ ಈ ಒಪ್ಪಂದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.