ಉಗ್ರರ ದಾಳಿಗೆ ಊರುಗಳೇ ಉಡೀಸ್, ಇಸ್ರೇಲ್ ಪಡೆಗಳಿಂದಲೂ ಅಟ್ಯಾಕ್..!
ಇಸ್ರೇಲ್ ಧಗಧಗಿಸುತ್ತಿದ್ದು, ಹಿಂಸಾಚಾರಕ್ಕೆ ಈವರೆಗೂ 70ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಇನ್ನು ಹಿಂಸೆ ಭುಗಿಲೆದ್ದ ಬಳಿಕ ಹಲವು ದೇಶಗಳು ಘಟನೆ ಖಂಡಿಸಿವೆ. ಇದೀಗ ಭಾರತ ಕೂಡ ಹಿಂಸಾಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದೆ. ಜೆರುಸಲೇಂನ 'ಟೆಂಪಲ್ ಮೌಂಟ್' ಬಳಿ ನಡೆದ ಹಿಂಸಾಚಾರವನ್ನು ಖಂಡಿಸಿದೆ. ಹಿಂಸೆ ಬಿಟ್ಟು ಶಾಂತಿಯಿಂದ ವರ್ತಿಸಲು ಭಾರತ ಸಲಹೆ ನೀಡಿದೆ.
ಶೇಕ್ ಜರಾ ಸುತ್ತಲೂ ನೆಲೆಸಿರುವವರನ್ನು ಬಲವಂತವಾಗಿ ಹೊರದಬ್ಬುತ್ತಿರುವ ಕೃತ್ಯಕ್ಕೂ ಭಾರತ ಬೇಸರ ವ್ಯಕ್ತಪಡಿಸಿದೆ. ಎರಡೂ ಬಣಗಳು ಯಥಾಸ್ಥಿತಿ ಕಾಪಾಡಬೇಕಿದೆ ಎಂದು ಭಾರತ ಸಲಹೆ ನೀಡಿದೆ. ಪ್ಯಾಲೆಸ್ತೇನ್-ಇಸ್ರೇಲ್ ಮಧ್ಯೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಅತ್ತ ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದರೆ, ಇತ್ತ ಇಸ್ರೇಲ್ ಕೂಡ ಪ್ಯಾಲೆಸ್ತೇನ್ ಮೇಲೆ ಅಟ್ಯಾಕ್ ಮಾಡುತ್ತಿದೆ.
ಆದರೆ ಇಬ್ಬರ ಜಗಳದಲ್ಲಿ ಅಮಾಯಕರ ರಕ್ತಪಾತ ನಡೆಯುತ್ತಿದೆ. ಸಾವಿರಾರು ಜನರು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಎಲ್ಲೆಂದರಲ್ಲಿ ರಾಕೆಟ್ಗಳು ಹಾರಿ ಬರುತ್ತಿದ್ದು, ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಗಡಿ ಭಾಗದ ಜನ ಜೀವ ಕೈಲಿಡಿದು ಬದುಕುತ್ತಿದ್ದಾರೆ.
3ನೇ ಮಹಾಯುದ್ಧಕ್ಕೆ ನಾಂದಿ..?
ಜಗತ್ತು ಕೊರೊನಾ ಕಿಚ್ಚಿನಲ್ಲಿ ಬೇಯುತ್ತಿದ್ದರೆ ಮಧ್ಯಪ್ರಾಚ್ಯ ಕೋಮು ಘರ್ಷಣೆಯಲ್ಲಿ ತೊಡಗಿದೆ. ಮತ್ತೊಂದೆಡೆ ಇಸ್ರೇಲ್-ಪ್ಯಾಲೆಸ್ತೇನ್ ನಡುವೆ ದಾಳಿ-ಪ್ರತಿದಾಳಿ ನಡೆಯುತ್ತಿರುವುದನ್ನು ನೋಡಿದರೆ 3ನೇ ಮಹಾಯುದ್ಧದ ಭೀತಿ ಆವರಿಸುತ್ತಿದೆ. ಏಕೆಂದರೆ ಇಸ್ರೇಲ್ ಪರವಾಗಿ ಯುರೋಪ್ ಹಾಗೂ ಅಮೆರಿಕ ನಿಂತರೆ, ಪ್ಯಾಲೆಸ್ತೇನ್ನ ಪರವಾಗಿ ಇಸ್ರೇಲ್ ಶತ್ರುಗಳು ಹಾಗೂ ಅಮೆರಿಕ ಶತ್ರು ರಾಷ್ಟ್ರಗಳು ನಿಲ್ಲುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಸ್ರೇಲ್-ಪ್ಯಾಲೆಸ್ತೇನ್ ಕಿತ್ತಾಟ 3ನೇ ಮಹಾಯುದ್ಧದ ಆತಂಕವನ್ನು ತಂದೊಡ್ಡಿದೆ. ಪರಸ್ಪರ ರಾಕೆಟ್ ದಾಳಿಗೆ ಎರಡೂ ದೇಶಗಳು ಮುಂದಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಭಾರತ ಮೂಲದ ಮಹಿಳೆ ಸಾವು
ಹಮಾಸ್ ಉಗ್ರರು ನಡೆಸಿರುವ ದಾಳಿಯಲ್ಲಿ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದ ಭಾರತದ ಕೇರಳ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕೇರಳದ ಇಡುಕ್ಕಿಯ ಸೌಮ್ಯ ಸಂತೋಷ್ ದಕ್ಷಿಣ ಇಸ್ರೇಲ್ನ ಕರಾವಳಿ ಭಾಗ ಅಶ್ಕೆಲೋನ್ನಲ್ಲಿ ವೃದ್ಧರೊಬ್ಬರಿಗೆ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ ಹಮಾಸ್ ನಡೆಸಿದ ದಾಳಿಯಿಂದ ಸೌಮ್ಯ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಉಗ್ರರ ಗ್ಯಾಂಗ್ ಸೋಮವಾರದಿಂದಲೇ ಇಸ್ರೇಲ್ ಮೇಲೆ ರಾಕೆಟ್ ದಾಳಿ ಆರಂಭಿಸಿತ್ತು. ನಿನ್ನೆಯಿಂದ ದಾಳಿಯನ್ನ ಇನ್ನಷ್ಟು ಭೀಕರಗೊಳಿಸಿದೆ. ಹಲವು ದಶಕಗಳ ಕಾಲ ಹಮಾಸ್ ಹಾಗೂ ಇಸ್ರೇಲ್ ನಡುವೆ ಘೋರ ಕಾಳಗ ನಡೆಯುತ್ತಾ ಬಂದಿದೆ.
ಗಲಾಟೆ ಶುರುವಾಗಿದ್ದು ಹೇಗೆ..?
1967 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಭೂಪ್ರದೇಶವನ್ನು ವಶಪಡಿಸಿಕೊಂಡ ನೆನಪಿಗೆ ಮೆರವಣಿಗೆ ಆಯೋಜಿಸಲಾಗಿತ್ತು. ವಿಜಯದ ದಿನವನ್ನ ನೆನಪಿಸಿಕೊಳ್ಳುವ ಸಲುವಾಗಿ ಯಹೂದಿಗಳು ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದರು. ಆದರೆ ಮೆರವಣಿಗೆ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎನ್ನಲಾಗುತ್ತಿದೆ. ಹೀಗೆ ಹಿಂಸೆ ಭುಗಿಲೇಳುತ್ತಲೇ ಇಸ್ರೇಲಿ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಇಸ್ರೇಲಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದೇ ತಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಘರ್ಷಣೆ ಸಂಭವಿಸಿ ನೂರಾರು ಜನರು ಗಾಯಗೊಂಡಿದ್ದರೆ, 24 ಮಂದಿ ಜೀವ ಕಳೆದುಕೊಂಡಿದ್ದಾರೆ.
ಕಾಯುತ್ತಿದ್ದಾರೆ ಇಸ್ರೇಲ್ ಶತ್ರುಗಳು
ಇಸ್ರೇಲ್ ಪುಟಾಣಿ ದೇಶವಾದರೂ ಅರಬ್ ಒಕ್ಕೂಟದ ಹತ್ತಾರು ದೇಶಗಳನ್ನ ಎದುರು ಹಾಕಿಕೊಂಡಿದೆ. ಅಲ್ಲಿ ತನ್ನ ನೆಲೆ ಖಚಿತ ಪಡಿಸಿಕೊಳ್ಳಲು ಇಸ್ರೇಲ್ಗೆ ಇದು ಅನಿವಾರ್ಯವೂ ಆಗಿದೆ. ಆದರೆ ಇದೀಗ ದೇಶದೊಳಗೆ ಘರ್ಷಣೆ ಆರಂಭವಾಗಿದೆ. ತನ್ನ ವೈರಿ ಪ್ಯಾಲೆಸ್ತೇನ್ ಬಗ್ಗುಬಡಿಯಲು ಇಸ್ರೇಲ್ ಪಡೆಗಳು ಬಲಪ್ರಯೋಗವನ್ನು ಮುಂದುವರಿಸಿದ್ದಾರೆ. ಇದು ಸಹಜವಾಗಿಯೆ ಇಸ್ರೇಲ್ ವಿರೋಧಿ ರಾಷ್ಟ್ರಗಳಿಗೆ ಪ್ರಚೋದನೆ ನೀಡಿದಂತಾಗಿದೆ. ಇಸ್ರೇಲ್ನಲ್ಲಿ ಈಗಾಗಲೇ ಪ್ರಧಾನಿಯ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಈ ನಡುವೆ ಕೋಮು ಗಲಭೆಗಳೂ ಆರಂಭವಾಗಿದ್ದು ದ್ವೇಷ ಭಾವನೆಯನ್ನು ಕೆರಳುವಂತೆ ಮಾಡಿದೆ.
ಶಾಂತಿ ನೆಲೆಸುವುದೇ ಇಲ್ವಾ..?
ಇಸ್ರೇಲ್ ಹಾಗೂ ಗಾಜಾಪಟ್ಟಿ ಕಥೆ ಸಿರಿಯಾಗಿಂತ ಭಯಾನಕವಾಗಿದೆ. ಒಂದುಕಡೆ ಹಮಾಸ್ ಉಗ್ರರು ಅದು ನಮ್ಮ ನೆಲ ಅಂತಾ ಇಸ್ರೇಲ್ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ತಮ್ಮ ದೇಶದ ಭೂಭಾಗ ಉಳಿಸಿಕೊಳ್ಳಲು ಇಸ್ರೇಲ್ ಬಂಡುಕೋರರ ಮೇಲೆ ದಾಳಿ ನಡೆಸುತ್ತಲೇ ಬಂದಿದೆ. ಇವರಿಬ್ಬರ ಕಿತ್ತಾಟದಿಂದ ಸಾಮಾನ್ಯ ಜನರು ಬೀದಿಪಾಲಾಗಿದ್ದಾರೆ. ಗಾಜಾಪಟ್ಟಿಯಲ್ಲಿ ಲಕ್ಷಾಂತರ ಮಂದಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹಾಗೇ ಲೆಕ್ಕವಿಲ್ಲದಷ್ಟು ಯುವಕರೂ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ಹೋರಾಡುವಾಗ ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗಿದ್ದಿದೆ. ವಿಶ್ವಸಂಸ್ಥೆ ಕೂಡ ಹಲವು ದಶಕಗಳಿಂದ ಇಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಪಟ್ಟರೂ ವರ್ಕೌಟ್ ಆಗುತ್ತಿಲ್ಲ.