ಭಾರತ-ಚೀನಾ ಗಡಿ ಉದ್ವಿಗ್ನತೆ ಹಿಂದಿನ ರೋಚಕ ಇತಿಹಾಸ!
ನವದೆಹಲಿ, ಜೂನ್.17: ಇಡೀ ಜಗತ್ತಿಗೆ ಜಗತ್ತು ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದೆ. ವಿಶ್ವದ ದೈತ್ಯ ರಾಷ್ಟ್ರಗಳೆಲ್ಲ ಕೊರೊನಾ ವೈರಸ್ ವಿಚಾರದಲ್ಲಿ ಚೀನಾದತ್ತ ಬೊಟ್ಟು ಮಾಡಿ ತೋರಿಸುತ್ತಿವೆ. ಕೊವಿಡ್-19 ಸೋಂಕಿನ ತವರು ರಾಷ್ಟ್ರವಾಗಿರುವ ಚೀನಾ ಮಾತ್ರ ಏನೂ ನಡೆದೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಗಡಿ ವಿವಾದದ ಮೇಲೆ ಲಕ್ಷ್ಯ ನೆಟ್ಟಿದೆ.
Recommended Video
ಲಡಾಖ್ ಪೂರ್ವ ಗಡಿಯಲ್ಲಿ ಇರುವ ಗಾಲ್ವಾನ್ ನದಿ ಕಣಿವೆ ಮೇಲೆ ಕಣ್ಣಿಟ್ಟಿರುವ ಚೀನಾ ರಾಷ್ಟ್ರವು ಭಾರತದ ವಿರುದ್ಧ ಕಾಲ್ಕೆರೆದು ನಿಂತಿದೆ. ಇದೇ ಕಾರಣಕ್ಕೆ ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳು ಮುಖಾಮುಖಿಯಾಗಿ ಘರ್ಷಣೆ ನಡೆದಿದೆ. ಈ ವೇಳೆ 20 ಭಾರತೀಯ ಯೋಧರು ಪ್ರಾಣ ಬಿಟ್ಟಿದ್ದು, ಇದಕ್ಕೆ ಪ್ರತಿಯಾಗಿ ನಡೆಸಿದ ದಾಳಿಯಲ್ಲಿ 43 ಮಂದಿ ಚೀನಾ ಯೋಧರನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದು ಬಂದಿದೆ.
ಭಾರತ-ಚೀನಾ ಕಮಾಂಡರ್ಸ್ ಸಭೆ ಬಗ್ಗೆ ಸೇನಾ ವಕ್ತಾರರು ಹೇಳಿದ್ದೇನು?
1962ರ ಭಾರತ-ಚೀನಾ ಯುದ್ಧದ ನಂತರದಲ್ಲಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. 58 ವರ್ಷಗಳ ಹಿಂದೆ ಭಾರತದ ಪೂರ್ವ ಮತ್ತು ಉತ್ತರದ ಗಡಿಯಲ್ಲಿ ಚೀನಾ ಹೇಗೆ ದಾಳಿಗೆ ಮುಂದಾಗಿತ್ತು. ಎರಡು ರಾಷ್ಟ್ರಗಳ ನಡುವಿನ ಗಡಿ ವಿವಾದದ ಹಿಂದಿನ ಇತಿಹಾಸ ಏನು. ಈಗ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುವುದಕ್ಕೆ ಕಾರಣವಾಗಿರುವ ಗಾಲ್ವಾನ್ ಕಣಿವೆ ಇರುವುದು ಎಲ್ಲಿ. ಈ ಪ್ರದೇಶ ವಿವಾದಕ್ಕೆ ಕಾರಣವಾಗಿರುವುದು ಏಕೆ. ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಈ ವರದಿಯಲ್ಲಿದೆ.
ಗಡಿಯಲ್ಲಿ ಕಾದಾಟಕ್ಕೆ ಕಾರಣವಾಗಿದ್ದೇ ಇದೊಂದು ರಸ್ತೆ!
ಭಾರತ ಮತ್ತು ಚೀನಾ ನಡುವೆ ಪರಿಸ್ಥಿತಿ ಉದ್ವಿಗ್ನಗೊಳ್ಳುವುದಕ್ಕೆ ಇದೊಂದು ರಸ್ತೆ ನಿರ್ಮಾಣವೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಕ್ಲಿನ್ ಜಿಯಾಂಗ್ ಮತ್ತು ಟಿಬೆನ್ ನಡುವೆ ಜಿ-219 ಹೆದ್ದಾರಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಭಾರತದ ಗಡಿ ಪ್ರದೇಶದಲ್ಲಿ ಇರುವ ಅಕ್ಸಾಯ್ ಚಿನ್ ನಲ್ಲಿ ರಸ್ತೆ ಕಾಮಗಾರಿಗೆ ಚೀನಾ ವಿರೋಧ ವ್ಯಕ್ತಪಡಿಸುತ್ತಿದೆ. ಚೀನಾದ ಅನುಮತಿ ಪಡೆದುಕೊಳ್ಳದೇ ಗಡಿಯಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಭಾರತವು ಚೀನಾಗೆ ಸೇರಿದ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದೆ ಎಂದು ಡ್ರ್ಯಾಗನ್ ರಾಷ್ಟ್ರವು ದೂಷಿಸುತ್ತಿದೆ.
1962ರಲ್ಲೇ ಗಡಿಪ್ರದೇಶವನ್ನು ಕಬಳಿಸಿದ್ದ ಚೀನಾ?
ಲಡಾಖ್ ಗಡಿಯಲ್ಲಿ ಕಾಲ್ಕೆರೆದು ನಿಂತಿರುವ ಚೀನಾದ ಈ ವರ್ತನೆ ಇದೇ ಮೊದಲೇನಲ್ಲ. 58 ವರ್ಷಗಳ ಹಿಂದೆ ಭಾರತ-ಚೀನಾ ಯುದ್ಧದ ಸಂದರ್ಭದಲ್ಲೂ ಡ್ರ್ಯಾಗನ್ ರಾಷ್ಟ್ರ ಇದೇ ರೀತಿ ವಿವಾದ ಹುಟ್ಟುಹಾಕಿತ್ತು. ಈ ಹಿಂದೆ 1959ರಲ್ಲಿನ ಗಡಿ ವಿಸ್ತೀರ್ಣಕ್ಕಿಂತ ಹೆಚ್ಚು ಭೂಪ್ರದೇಶವು ತಮಗೆ ಸೇರಿದೆ ಎಂದು ಚೀನಾ ವಾದಿಸಿತ್ತು. 1962ರ ಯುದ್ಧಕ್ಕೂ ಒಂದು ತಿಂಗಳು ಮೊದಲೇ ಲಡಾಖ್ ಪೂರ್ವದಲ್ಲಿನ ಪ್ರದೇಶವು ತನಗೆ ಸೇರಿದ್ದು ಎಂದು ಚೀನಾ ಹೇಳಿಕೊಂಡಿತ್ತು. ಚೀನಾದ ಗಡಿಪ್ರದೇಶದ ಅಳತೆಯು 1959ರಲ್ಲಿ ತೋರಿಸಿದ ವಿಸ್ತೀರ್ಣಕ್ಕಿಂತ ಹೆಚ್ಚಾಗಿತ್ತು. 1962ರ ನವೆಂಬರ್ ನಲ್ಲಿ ಭಾರತ-ಚೀನಾ ನಡುವಿನ ಯುದ್ಧ ಅಂತ್ಯವಾಗಿದ್ದು, ಆಗ ಚೀನಾ ಮತ್ತೊಂದು ರೀತಿ ಅಳತೆಯ ಗಡಿಚಿತ್ರಣವನ್ನು ಪ್ರದರ್ಶಿಸಿತು. ಅದರಲ್ಲಿ ಯುದ್ಧಕ್ಕೂ ಮೊದಲು ತೋರಿಸಿದ ಗಡಿಪ್ರದೇಶಕ್ಕಿಂತ ಹೆಚ್ಚು ಭಾಗವು ಚೀನಾಗೆ ಸೇರುತ್ತದೆ ಎಂದು ಹಕ್ಕು ಮಂಡಿಸಿತ್ತು.
ಚೀನಾ-ಭಾರತ ಕಮಾಂಡರ್ಸ್ ಸಭೆಯಿಂದ ನೆಲೆಸುತ್ತಾ 'ಶಾಂತಿ'?
ಚೀನಾದ ವರ್ತನೆ ಹಿಂದಿರುವ ಅಸಲಿ ಕಾರಣವೇನು ಗೊತ್ತಾ?
ಲಡಾಖ್ ಗಡಿಯಲ್ಲಿನ ಪ್ರದೇಶಗಳ ಮೇಲೆ ತಾನು ಹಕ್ಕು ಹೊಂದಿರುವುದಾಗಿ ಚೀನಾ ಮೊಂಡತನ ಪ್ರದರ್ಶಿಸುತ್ತಿರುವುದಕ್ಕೆ ಕಾರಣವಿದೆ. ಪ್ರಸಿದ್ಧ ಪರ್ವತ ಶ್ರೇಣಿಗಳಿಂದ ಭಾರತವನ್ನು ಸಾಧ್ಯವಾದಷ್ಟು ದೂರವಿಡುವುದಕ್ಕೆ ಚೀನಾ ಸಂಚು ಹೂಡಿದೆ. ಈ ಹಿನ್ನೆಲೆಯಲ್ಲೇ ಕ್ಲಿನ್ ಜಿಯಾಂಗ್ ಮತ್ತು ಟಿಬೆನ್ ನಡುವೆ ಜಿ-219 ಹೆದ್ದಾರಿ ಕಾಮಗಾರಿಗೆ ಚೀನಾ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದೆ. ಪರ್ವತ ಶ್ರೇಣಿಗಳನ್ನು ದಾಟಬೇಕಿದ್ದಲ್ಲಿ ಭಾರತವು ಚೀನಾದಿಂದ ಅನುಮತಿಯನ್ನು ಪಡೆದುಕೊಳ್ಳಬೇಕು.
ಎತ್ತರದ ಶಿಖರಗಳ ಮೇಲೆ ಭಾರತವು ಪ್ರಾಬಲ್ಯ ಸಾಧಿಸದಂತೆ ನೋಡಿಕೊಳ್ಳುವುದು ಚೀನೀಯರ ಪ್ರಮುಖ ಉದ್ದೇಶವೂ ಆಗಿದೆ. ಅಂತಾರಾಷ್ಟ್ರೀಯ ಗಡಿ ರೇಖೆಗೆ ಸಂಬಂಧಿಸಿದಂತೆ ಪಶ್ಚಿಮದಲ್ಲಿ ಅತಿಹೆಚ್ಚು ಪರ್ವತ ಶ್ರೇಣಿಗಳಿವೆ. ಈ ಮಾರ್ಗದಲ್ಲಿ ಗಡಿ ನಿಯಂತ್ರಣ ರೇಖೆಗಿಂತ ಜಿ-219 ಹೆದ್ದಾರಿ ನಡುವೆ ಸಾಕಷ್ಟು ಆಳವಿರುತ್ತದೆ ಎನ್ನುವುದು ಚೀನಾದ ವಾದವಾಗಿದೆ.
ಗಾಲ್ವಾನ್ ಕಣಿವೆ ಮೇಲೆ ಚೀನಾದ ಕಣ್ಣೇಕೆ?
ಭಾರತ-ಚೀನಾ ಗಡಿಯಲ್ಲಿರುವ ಗಾಲ್ವಾನ್ ಮೇಲೆ ಚೀನಾ ಕಣ್ಣಿಟ್ಟಿರುವುದಕ್ಕೂ ಕಾರಣವಿದೆ. ಚೀನಾ ಪ್ರಾಬಲ್ಯ ಹೊಂದಿರುವ ಶಿಯೊಕ್ ನದಿ ಮಾರ್ಗದ ಪಕ್ಕದಲ್ಲೇ ಗಾಲ್ವಾನ್ ನದಿ ಕಣಿವೆ ಹಾದು ಹೋಗುತ್ತದೆ. ಈ ಪ್ರದೇಶದ ಮೇಲೆ ಚೀನಾ ಸಂಪೂರ್ಣ ಹಿಡಿತ ಸಾಧಿಸುವ ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ದರೆ ಭಾರತವು ಗಾಲ್ವಾನ್ ನದಿ ಕಣಿವೆ ಸಹಾಯದಿಂದ ಅಕ್ಸಾಯ್ ಚಿನ್ ಪ್ರಸ್ಥಭೂಮಿಯಲ್ಲಿ ಹಿಡಿತ ಸಾಧಿಸುವ ಭೀತಿ ಚೀನಾವನ್ನು ಕಾಡುತ್ತಿದೆ.
ಇತ್ತೀಚಿಗಷ್ಟೇ ಭಾರತ-ಚೀನಾ ಗಡಿಯಲ್ಲಿ ರಸ್ತೆ ಕಾಮಗಾರಿ
ಭಾರತ-ಚೀನಾ ಗಡಿಯಲ್ಲಿನ ಪಶ್ಚಿಮ ಭಾಗವು ಅತಿಹೆಚ್ಚು ಪರ್ವತ ಶ್ರೇಣಿಗಳನ್ನು ಹೊಂದಿದೆ. ಶಿಯಾಕ್ ನದಿಯ ಪಕ್ಕದಲ್ಲೇ ಈ ಪ್ರದೇಶವು ಹಾದು ಹೋಗುತ್ತದೆ. ಇತ್ತೀಚಿಗಷ್ಟೇ ಶಿಯಾಕ್ ನದಿಗೆ ಹೊಂದಿಕೊಳ್ಳುವಂತೆ ಇರುವ ಪ್ರದೇಶದಲ್ಲಿ ದರ್ಬಾಕ್-ಶಿಯಾಕ್ ಗ್ರಾಮ ಮತ್ತು ದೌಲತ್ ಬೇಗ್ ಒಲ್ದಿ ರಸ್ತೆಯನ್ನು ನಿರ್ಮಿಸಲಾಗಿತ್ತು. ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಗೆ ಹತ್ತಿರದಲ್ಲಿರುವ ಈ ರಸ್ತೆಯೇ ಉಭಯ ರಾಷ್ಟ್ರಗಳ ನಡುವಿನ ಸಂವಹನಕ್ಕೆ ಪ್ರಮುಖ ಮಾರ್ಗವಾಗಿದೆ.
ಭಾರತ-ಚೀನಾ 'ಗಡಿರೇಖೆ' ಗೊಂದಲದ ಹಿಂದಿನ ಅಸಲಿ ಸತ್ಯ!
ಸೇನಾ ಶಿಬಿರ ಸ್ಥಾಪಿಸುತ್ತಿರುವುದು ಮೊದಲೇನಲ್ಲ
ಗಾಲ್ವಾನ್ ನದಿ ಕಣಿವೆಯು ಭಾರತ ಮತ್ತು ಚೀನಾದ ಲಡಾಖ್ ಗಡಿ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಇದೇ ಪ್ರದೇಶದಲ್ಲಿ ಭಾರತೀಯ ಧ್ವಜವನ್ನು ಚೀನಿಯರಿಗೆ ತೋರಿಸುವುದು ಮತ್ತು ಪ್ರದೇಶದ ಮಾಲೀಕತ್ವವನ್ನು ಘೋಷಿಸುವ ಹೆಸರಿನಲ್ಲಿ, ಸೇನಾ ಶಿಬಿರಗಳನ್ನು ಸ್ಥಾಪಿಸಲಾಯಿತು. ಗಾಲ್ವಾನ್ ಗಡಿ ಪ್ರದೇಶದಲ್ಲಿ ಸೇನಾ ಶಿಬಿರಗಳನ್ನು ಸ್ಥಾಪಿಸುವುದು ವಿಭಿನ್ನವಾಗಿ ಏನೂ ಇರಲಿಲ್ಲ. 1962ರ ಮಧ್ಯದಲ್ಲಿ ಸಂಜುಂಗ್ಲಿಂಗ್ ನಲ್ಲಿ ಚೀನಾ ಸೇನೆಗೆ ಪ್ರತಿರೋಧವೊಡ್ಡವ ದೃಷ್ಟಿಯಿಂದ ಚಾಂಗ್-ಚೆನ್ಮೋ ನದಿ ಕಣಿವೆಯ ಬಳಿ 1/8 ಗೊರ್ಖಾ ರೈಫಲ್ಸ್ ಸೇನಾ ಶಿಬಿರವನ್ನು ಸ್ಥಾಪಿಸಲಾಗಿತ್ತು. ಈ ಕೇಂದ್ರವು ಗಾಲ್ವಾನ್ ನದಿ ಕಣಿವೆಯ ಸಮೀಪದಲ್ಲೇ ಇದೆ. ಗಾಲ್ವಾನ್ ಮತ್ತು ಶಿಯಾಕ್ ನದಿಗಳ ಸಂಗಮ ಕೇಂದ್ರದಿಂದ 70 ಕಿಲೋ ಮೀಟರ್ ದೂರದಲ್ಲಿ ಉಭಯ ಸೇನಾ ಶಿಬಿರದ ಕೇಂದ್ರವಿತ್ತು.
ಭಾರತೀಯ ಶಿಬಿರಗಳನ್ನು ಸುತ್ತುವರಿದಿದೆ ಚೀನಾ
ಪ್ರಾರಂಭದಿಂದಲೂ ಭಾರತ-ಚೀನಾ ಗಡಿಯಲ್ಲಿ ಇರುವ ಭಾರತೀಯ ಶಿಬಿರಗಳನ್ನು ಎಲ್ಲಾ ಕಡೆಗಳಿಂದಲೂ ಚೀನಾ ಸೇನೆ ಸುತ್ತುವರಿದಿತ್ತು. ಈ ಹಿನ್ನೆಲೆ ಎಂಐ-4 ಹೆಲಿಕಾಪ್ಟರ್ ಗಳ ಮೂಲಕ ಸೇನಾ ಶಿಬಿರಗಳನ್ನು ನಿರ್ವಹಣೆ ಮಾಡಲಾಗುತ್ತಿತ್ತು. 1962 ಅಕ್ಟೋಬರ್.20ರ ದಾಳಿಗೂ ಕೆಲವು ದಿನಗಳ ಮೊದಲು ಮೇಜರ್ ಎಚ್.ಎಸ್.ಹಸಬ್ನಿಸ್ ನೇತೃತ್ವದ ಆಲ್ಫಾ ಕಂಪನಿಯ 5 ಜಾಟ್ ಪಡೆಯನ್ನು 1/8 ಗೋರ್ಖಾ ರೈಫಲ್ಸ್ ಸ್ಥಾನವನ್ನು ಬದಲಾಯಿಸಲಾಯಿತು.
ಚೀನಾ-ಭಾರತ ನಡುವೆ ನಡೆಯುತ್ತಾ ಯುದ್ಧ: ಇಲ್ಲಿದೆ ಅಸಲಿ ಕಾರಣ!
1962ರಲ್ಲಿ ಭಾರತೀಯ ಸೇನಾ ಶಿಬಿರಗಳ ಮೇಲೆ ದಾಳಿ
ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಸೇನೆ 1962 ಅಕ್ಟೋಬರ್.20ರ ಮುಂಜಾನೆ ನಡೆಸಿದ ದಾಳಿಯಲ್ಲಿ ಭಾರತೀಯ ಸೇನಾ ಶಿಬಿರಗಳನ್ನು ಹೊಡೆದುರುಳಿಸಲಾಯಿತು. ಅದಾಗಿಯೂ ಮುಂದಿನ 24 ಗಂಟೆಗಳ ಕಾಲ ಭಾರತೀಯ ಸೇನೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಭಾರತೀಯ ಸೇನೆಯು ಆಶಾದಾಯವಾಗಿದ್ದರೂ, ಶಸ್ತ್ರಾಸ್ತ್ರಗಳ ಅಭಾವ ಸೇನೆಗೆ ಹಿನ್ನಡೆಯನ್ನು ಉಂಟು ಮಾಡಿತು. ಗಲ್ವಾನ್ ನದಿ ಕಣಿವೆಯಲ್ಲಿನ ವಿವಿಧ ಸೇನಾ ಶಿಬಿರಗಳಲ್ಲಿದ್ದ 68 ಯೋಧರ ಪೈಕಿ 34ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು. ಶಿಯಾಕ್-ಗಾಲ್ವಾನ್ ನದಿ ಸಂಗಮದ ಪ್ರದೇಶದಲ್ಲಿ ಚೀನಾ ತನ್ನ ಪ್ರಬಲ ಹಿಡಿತವನ್ನು ಸಾಧಿಸಿತು. ಅಂದು ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಸೇನೆಯ ಮೇಜರ್ ಎಚ್.ಎಸ್.ಹಸಬ್ನಿಸ್ ರನ್ನು ಚೀನಾ ಸೇನೆಯು ಬಂಧಿಸಿತು. 1962ರ ಯುದ್ಧದ ನಂತರ, ಈ ವಲಯದಲ್ಲಿ ಹೆಚ್ಚೇನೂ ಸಂಭವಿಸಲಿಲ್ಲ ಮತ್ತು ಇಲ್ಲಿಯವರೆಗೆ ಅದು ಸುಪ್ತವಾಗಿದೆ.
ಸಾವಿನ ನದಿ ಎಂದು ಕರೆಸಿಕೊಂಡ ಶಿಯಾಕ್!
ಪ್ರಸ್ತುತ ಚೀನಾದ ಕ್ಸಿನ್ ಜಿಯಾಂಗ್ ವ್ಯಾಪ್ತಿಯಲ್ಲಿರುವ ಲೆಹ್ ಮತ್ತು ಯಾರ್ಕಂದ್ ಹಾಗೂ ಕಶ್ಗರ್ ಪ್ರದೇಶದಲ್ಲಿ ಸಂಚರಿಸುವುದಕ್ಕೆ ಚಲಿಸುವ ಮನೆ(ಕಾರವಾನ್ಸ್)ಯನ್ನು ಬಳಸಿಕೊಳ್ಳಲಾಗುತ್ತಿತ್ತು. ಚಳಿಗಾಲದಲ್ಲಿ ಶಿಯಾಕ್ ನದಿಯು ಸಂಪೂರ್ಣ ಹೆಪ್ಪುಗಟ್ಟುತ್ತಿತ್ತು. ಈ ವೇಳೆಯಲ್ಲಿ ಲೆಹ್ ನಿಂದ ಲಡಾಖ್ ನ ಚಾಂಗ್ ಲೆ ಮಾರ್ಗವಾಗಿ ತೆರಳಿ ದರ್ಬುಕ್ ಪ್ರದೇಶವನ್ನು ತಲುಪಲಾಗುತ್ತಿತ್ತು. ನಂತರ ಶಿಯಾಕ್ ಗ್ರಾಮ ಮತ್ತು ಅಲ್ಲಿಂದ ಶಿಯಾಕ್ ನದಿಯ ಜೋಡಣೆಯೊಂದಿಗೆ ಮುರ್ಗೊ ತಲುಪಿತು. ತದನಂತರದಲ್ಲಿ ಅಲ್ಲಿಂದ ಡೆಪ್ಸಾಂಗ್ ಬಯಲು, ದೌಲತ್ ಬೆಗ್ ಒಲ್ದಿ ಮತ್ತು ಕರಕೋರಮ್ ಗೆ ತಲುಪಲಾಗುತ್ತಿತ್ತು.
ಸಾವಿನ ದಾರಿಯಾದ ಶಿಯಾಕ್ ಮಾರ್ಗ
ಚಳಿಗಾಲದಲ್ಲಿ ಶಿಯಾಕ್ ನದಿಯು ಸಂಪೂರ್ಣ ಹೆಪ್ಪುಗಟ್ಟುತ್ತಿದ್ದು, ಬೇಸಿಗೆ ಕಾಲ ಬರುತ್ತಿದ್ದಂತೆ ನದಿಯಾಗಿ ಪರಿವರ್ತನೆಯಾಗುತ್ತದೆ. ಈ ವೇಳೆಯಲ್ಲಿ ಶಿಯಾಕ್ ನದಿಯಲ್ಲಿ ನೀರಿನ ಪ್ರಮಾಣ ಹಾಗೂ ವೇಗವು ಹೆಚ್ಚಾಗುತ್ತದೆ. ಇದರಿಂದ ನದಿಯು ಹೆಪ್ಪುಗಟ್ಟಿದ ಸಂದರ್ಭದಲ್ಲಿ ಸಂಚಾರ ಆರಂಭಿಸಿದ ಜನರು ಹಾಗೂ ಪ್ರಾಣಿಗಳು ಶಿಯಾಕ್ ನದಿಯಲ್ಲಿನ ಮಂಜುಗಡ್ಡೆಯಲ್ಲ ಕರಗಿ ನೀರಾಗುತ್ತದ್ದಂತೆ ನೀರಿನ ಪ್ರವಾಹಕ್ಕೆ ಸಿಲುಕಿ ಮನುಷ್ಯರು ಹಾಗೂ ಪ್ರಾಣಿಗಳು ಸಹ ಪ್ರಾಣ ಬಿಡುತ್ತವೆ. ಈ ಹಿನ್ನೆಲೆ ಶಿಯಾಕ್ ನದಿಯನ್ನು ಸಾವಿನ ಮಾರ್ಗ ಅಥವಾ ಸಾವಿನ ನದಿ ಎಂದು ಕರೆಯಲಾಗುತ್ತದೆ.
ಭಾರತೀಯರ ಉಪಸ್ಥಿತಿಗೆ ಅಕ್ಸಾಯ್ ಪ್ರಸ್ಥಭೂಮಿ ಉಪಸ್ಥಿತಿ
ಭಾರತೀಯ ನಿಯಂತ್ರಣದಲ್ಲಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶದ ಈಶಾನ್ಯ ಮೂಲೆಯನ್ನು ಉಪ-ವಲಯದ ಉತ್ತರ (ಎಸ್ಎಸ್ಎನ್) ಅಥವಾ ಸರಳವಾಗಿ ಡಿಬಿಒ(ದೌಲತ್ ಬೇಗ್ ಓಲ್ದಿ) ವಲಯ ಎಂದು ಕರೆಯಲಾಗುತ್ತದೆ. ಡಿಬಿಒ ವಲಯವು ಅಕ್ಸಾಯ್ ಚಿನ್ ಪ್ರಸ್ಥಭೂಮಿಯಲ್ಲಿ ಭಾರತೀಯ ಉಪಸ್ಥಿತಿಯನ್ನು ಪ್ರತಿನಿಧಿಸುತ್ತದೆ, ಇಲ್ಲದಿದ್ದರೆ ಈ ಪ್ರದೇಶವನ್ನೂ ಕೂಡಾ ಚೀನಿಯರು ನಿಯಂತ್ರಿಸುತ್ತಾರೆ. ಈ ಪ್ರದೇಶವನ್ನು ತಲುಪಲು ರಸ್ತೆ ಮಾರ್ಗದ ಕೊರತೆಯಿದ್ದು, ಪ್ರಾಥಮಿಕವಾಗಿ ವಿಮಾನ ಹಾಗೂ ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಲಾಗುತ್ತಿದೆ.
ದಶಕದ ಹಿಂದೆ ಚೀನಾ-ಭಾರತ ಗಡಿಯಲ್ಲಿ ರಸ್ತೆ ನಿರ್ಮಾಣ
ಚೀನಾ ಮತ್ತು ಭಾರತದ ನಡುವೆ ಗಡಿ ರಸ್ತೆ ಸಂಸ್ಥೆ(BRO)ಯು ದಶಕದ ಹಿಂದೆ ದೌಲತ್ ಬೇಗ್ ಓಲ್ದಿಯಿಂದ ದರಬುಕ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿತ್ತು. ಶಿಯಾಕ್ ನದಿ ಪ್ರದೇಶದಲ್ಲಿ ಈ ರಸ್ತೆ ನಿರ್ಮಾಣ ಕಾಮಗಾರಿ ಯೋಜನೆಯನ್ನು ಗಡಿ ರಸ್ತೆ ಸಂಸ್ಥೆಯೇ ಹಾಕಿಕೊಂಡಿತ್ತು. ಆದರೆ ದಶಕ ಕಳೆದರೂ ಯೋಜನೆಯು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಏಕೆಂದರೆ ಶಿಯಾಕ್ ನದಿಯ ಪಶ್ಚಿಮ ದಂಡೆಯ ಉದ್ದಕ್ಕೂ ಬೇಸಿಗೆಯಲ್ಲಿ ಹಿಮನದಿಗಳು ಕರಗಿದಾಗ ನದಿಯಲ್ಲಿ ನೀರಿನ ಹರಿವು ಮತ್ತು ಪ್ರಮಾಣವು ಹೆಚ್ಚಾಗುತ್ತದೆ. ಈ ವೇಳೆ ಹಲವು ಪ್ರದೇಶಗಳು ಮುಳುಗಿ ಹೋಗುತ್ತವೆ.
ಗಡಿ ರಸ್ತೆ ಸಂಸ್ಥೆಯಿಂದ ಯೋಜನೆಯೇ ಬದಲು
ಇನ್ನು, ಕೆಲವು ವರ್ಷಗಳ ಹಿಂದೆ ಗಡಿ ರಸ್ತೆ ಸಂಸ್ಥೆ(BRO)ಯು ತನ್ನ ತಂತ್ರಗಳನ್ನೇ ಬದಲಾಯಿಸಿತು. ನದಿಯ ಪಶ್ಚಿಮ ದಂಡೆಯಲ್ಲಿರುವ ದುರ್ಬಲವಾದ ಪರ್ವತ ಗೋಡೆಗಳನ್ನು ಸ್ಫೋಟಿಸುವುದು. ನಂತರ ಆ ಗೋಡೆಗಳಿರುವ ಪ್ರದೇಶದ ಉದ್ದಕ್ಕೂ ರಸ್ತೆಯನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಯಿತು. ಈ ರಸ್ತೆ ಕಾರ್ಯರೂಪಕ್ಕೆ ಬರುತ್ತಿದ್ದಂತೆ ಭಾರತೀಯ ಸೇನೆ ಹಾಗೂ ಶಸ್ತ್ರಾಸ್ತ್ರಗಳನ್ನು ದೌಲತ್ ಬೇಗ್ ಒಲ್ದಿ ವಲಯಕ್ಕೆ ಸ್ಥಳಾಂತರಿಸಲಿಲ್ಲ. ಏಕೆಂದರೆ ಅದಕ್ಕೂ ಮೊದಲು ಭಾರತೀಯ ಸೇನೆಯು ವಾಯು ಮಾರ್ಗ ಸಂಚಾರವನ್ನು ಅವಲಂಬಿಸಿತ್ತು.
4 ವರ್ಷದ ಹಿಂದೆ ಗಾಲ್ವಾನ್ ಗಡಿಯಲ್ಲಿ ಚೀನಾ ರಸ್ತೆ ಕಾಮಗಾರಿ
ಇತಿಹಾಸವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ 2016ರಲ್ಲೇ ಗಾಲ್ವಾನ್ ಕಣಿವೆಯ ಮಧ್ಯಭಾಗದ ಕೇಂದ್ರದಲ್ಲಿ ಚೀನಾ ರಸ್ತೆಯ ಕಾಮಗಾರಿ ನಡೆಸಿರುವುದು ಉಪಗ್ರಹಗಳಲ್ಲಿ ಕ್ಲಿಕ್ಕಿಸಿದ ಚಿತ್ರಗಳಲ್ಲಿ ಸೆರೆಯಾಗಿದೆ. ಈ ರಸ್ತೆಯನ್ನೇ ಗಡಿ ನಿಯಂತ್ರಣ ರೇಖೆಯ ಸಮೀಪದವರೆಗೂ ವಿಸ್ತರಿಸಲು ಚೀನಾ ಯೋಜನೆ ರೂಪಿಸಿಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ನದಿ ಮತ್ತು ಕಣಿವೆ ಪ್ರದೇಶದಲ್ಲಿ ಚೀನಾ ಸೇನಾ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಗಡಿ ನಿಯಂತ್ರಣ ರೇಖೆಯಿಂದ 48 ಕಿಲೋ ಮೀಟರ್ ದೂರದಲ್ಲಿರುವ ಹೆವೈತನ್ ಪ್ರದೇಶದಲ್ಲಿ ಚೀನಾ ತನ್ನ ಸೇನಾ ಪಡೆಯನ್ನು ನಿಯೋಜಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ, ಈ ವಲಯದಲ್ಲಿ ನಿಲುವನ್ನು ಸೃಷ್ಟಿಸಲು ಚೀನಾದ ಪಡೆಗಳು ತುಲನಾತ್ಮಕವಾಗಿ ಕಡಿಮೆ ಸಂಖ್ಯೆಯಲ್ಲಿ ಹಿಂಭಾಗದ ನೆಲೆಗಳಿಂದ ಬಂದವು ಎಂದು ಸುರಕ್ಷಿತವಾಗಿ ತೀರ್ಮಾನಿಸಬಹುದು.
ಗಾಲ್ವಾನ್ ಗಡಿಯಲ್ಲಿ ಎರಡು ಸೇನೆಗಳ ಸಂಘರ್ಷ
ಭಾರತ-ಚೀನಾ ಸೇನೆಗಳ ನಡುವೆ ಮೊದಲು ಸಂಘರ್ಷಕ್ಕೆ ಮೇ ತಿಂಗಳ ಮೊದಲ ವಾರದಲ್ಲಿ ಉಭಯ ಸೇನೆಗಳು ಮುಖಾಮುಖಿಯಾಗಿದ್ದೇ ಕಾರಣ ಎಂದು ಹೇಳಲಾಗುತ್ತಿದೆ. ಗಾಲ್ವಾನ್ ನದಿಯ ಗಡಿಯುದ್ದಕ್ಕೂ ಚೀನಾ ಸೇನೆಯು ಸಂಚರಿಸುತ್ತಿದ್ದು, ಒಂದು ವೇಳೆ ಗಡಿ ನಿಯಂತ್ರಣ ರೇಖೆಯನ್ನು ದಾಟಬಹುದು. ಒಂದು ಹಂತದಲ್ಲಿ ಭಾರತದ ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಂತಿರುವ ಪೆಟ್ರೋಲ್ ಪಾಯಿಂಟ್ 14 (ಪಿಪಿ 14) ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಉಭಯ ಸೇನೆಗಳು ಮುಖಾಮುಖಿಯಾದವು. ತದನಂತರ ಚೀನಾದ ಸೇನೆಯು ತಮ್ಮ ಗಡಿ ನಿಯಂತ್ರಣ ರೇಖೆಯ ಕಡೆಗೆ ಹಿಂತಿರುಗಿದೆ ಎಂದು ಭಾವಿಸಲಾಗಿದೆ.
ಭಾರತ-ಚೀನಾ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲೇ ಎರಡು ರಾಷ್ಟ್ರದ ಸೇನೆಗಳು ಶಿಬಿರಗಳನ್ನು ಸ್ಥಾಪಿಸಿರುವ ಬಗ್ಗೆ ಉಪಗ್ರಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಭಾರತೀಯ ಗಡಿರೇಖೆಯಲ್ಲಿ ಚೀನಾ ಸೇನೆಯು ಇಳಿದಿರುವ ಬಗ್ಗೆ ಯಾವುದೇ ಅಧಿಕೃತ ಸಾಕ್ಷ್ಯಗಳಾಗಲಿ, ಫೋಟೋಗಳಾಗಿ ಸಿಕ್ಕಿಲ್ಲ.
ಶಿಯಾಕ್ ನದಿ ಪಕ್ಕದಲ್ಲೇ ಹೊಸ ರಸ್ತೆ ನಿರ್ಮಾಣ
ಭಾರತ-ಚೀನಾ ಗಡಿ ನಿಯಂತ್ರಣ ರೇಖೆಗೆ ತೀರಾ ಸಮೀಪದಲ್ಲಿ ಶಿಯಾಕ್ ನದಿ ಹರಿದು ಹೋಗುತ್ತದೆ. ಇದೇ ಪ್ರದೇಶದಲ್ಲಿ ದರ್ಬಾಕ್-ಶಿಯಾಕ್ ಗ್ರಾಮ ಮತ್ತು ದೌಲತ್ ಬೇಗ್ ಒಲ್ದಿ ರಸ್ತೆ ನಿರ್ಮಿಸಲಾಗಿದ್ದು, ಶಿಯಾಕ್ ಮತ್ತು ಗಲ್ವಾನ್ ನದಿ ಸಂಗಮ ಕೇಂದ್ರವು ಗಡಿ ನಿಯಂತ್ರಣ ರೇಖೆಯಿಂದ ಕೇವಲ 8 ಕಿಲೋ ಮೀಟರ್ ದೂರದಲ್ಲಿದೆ. ಹೀಗಾಗಿ ಈ ಪ್ರದೇಶವು ತೀರಾ ಸೂಕ್ಷ್ಮ ಎಂದು ಗುರುತಿಸಲಾಗಿದೆ. ದರ್ಬಾಕ್-ಶಿಯಾಕ್ ಗ್ರಾಮ ಮತ್ತು ದೌಲತ್ ಬೇಗ್ ಒಲ್ದಿ ರಸ್ತೆಯು ಪೆಟ್ರೋಲ್ ಪಾಯಿಂಟ್-14ವರೆಗೂ ವಿಸ್ತರಣೆಯಾಗಲಿದ್ದು, ಭಾರತೀಯ ಸೇನಾ ಕಾರ್ಯಕ್ಕೆ ಚೀನಾ ಆಕ್ರಮಣಕಾರಿಯಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ಏಕೆಂದರೆ ಮುಂದೊಂದು ದಿನ ಈ ಮಾರ್ಗದಿಂದ ಭಾರತ ಸಾಮರ್ಥ್ಯವು ಸುಧಾರಣೆಯಾಗಲಿದೆ.
ಭಾರತೀಯ ಸರ್ಕಾರವು ಸಂಪೂರ್ಣ ಲಡಾಖ್ ಗಡಿ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವ ಉದ್ದೇಶದಿಂದ ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಆದಷ್ಟು ವೇಗದಲ್ಲಿ ಈ ಕಾರ್ಯವನ್ನು ಭಾರತವು ಪೂರ್ಣಗೊಳಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದೆ.
ಭಾರತ-ಚೀನಾ ನಡುವೆ ರಸ್ತೆ ನಿರ್ಮಾಣವೊಂದೇ ಸಮಸ್ಯೆ?
ದರ್ಬಾಕ್-ಶಿಯಾಕ್(DS) ಗ್ರಾಮ ಮತ್ತು ದೌಲತ್ ಬೇಗ್ ಒಲ್ದಿ(DBO) ರಸ್ತೆ ನಿರ್ಮಿಸುತ್ತಿರುವ ಪ್ರದೇಶ ಗಡಿ ನಿಯಂತ್ರಣ ರೇಖೆಗೆ ಸಮೀಪದಲ್ಲೇ ಇರುವುದರಿಂದ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಇಂಥ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಚೀನಾ ವಿರೋಧ ವ್ಯಕ್ತಪಡಿಸುತ್ತೆ ಎಂದು ಆರಂಭದಿಂದಲೂ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ಚೀನಾ ಇದೀಗ ಕ್ಯಾತೆ ತೆಗೆದಿದೆ. ಆದರೆ ಭಾರತೀಯ ಗಡಿರೇಖೆಯೊಳಗೆ ಚೀನಾ ಪ್ರವೇಶಿಸಿದೆ ಎಂದು ಖಡಾಖಂಡಿತವಾಗಿ ಹೇಳುವುದಕ್ಕೆ ಯಾವುದೇ ರೀತಿಯ ಸಾಕ್ಷ್ಯ ಪುರಾವೆಗಳಿಲ್ಲ. ಗಾಲ್ವಾನ್ ನದಿ ಪ್ರದೇಶದಲ್ಲಿ ಸಂಘರ್ಷ ನಡೆದಿರುವುದು ನಿಜವಾದರೂ ಕೂಡಾ ಶಾಂತಿಸ್ಥಾಪನೆಗೆ ಎರಡು ರಾಷ್ಟ್ರಗಳು ಮನಸು ಮಾಡಬೇಕಿದೆ. ಈ ಹಂತದಲ್ಲಿ ರಾಜತಾಂತ್ರಿಕ ಮಾತುಕತೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿದೆ.