ಭಾರತ-ಚೀನಾ ಕಮಾಂಡರ್ಸ್ ಸಭೆ ಬಗ್ಗೆ ಸೇನಾ ವಕ್ತಾರರು ಹೇಳಿದ್ದೇನು?
ನವದೆಹಲಿ, ಜೂನ್.06: ಭಾರತ-ಚೀನಾ ನಡುವಿನ ಲಡಾಖ್ ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಹಿರಿಯ ಕಮಾಂಡಜರ್ಸ್ ನಡೆಸಿದ ರಾಜತಾಂತ್ರಿಕ ಮಾತುಕತೆಯ ಬಗ್ಗೆ ಯಾವುದೇ ರೀತಿ ಸುದ್ದಿಗೋಷ್ಠಿ ನಡೆಸುವುದಿಲ್ಲ. ಮಾಧ್ಯಮಗಳಿಗೆ ಮಾಹಿತಿಯನ್ನು ನೀಡುದಿಲ್ಲ ಎಂದು ಭಾರತೀಯ ಸೇನಾ ವಕ್ತಾರರು ತಿಳಿಸಿದ್ದಾರೆ.
ಭಾರತ ಮತ್ತು ಚೀನಾದ ಹಿರಿಯ ಅಧಿಕಾರಿಗಳು ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಸ್ಥಾಪಿತ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಯತ್ನಿಸುತ್ತಿದ್ದಾರೆ.
ಚೀನಾ-ಭಾರತ ಕಮಾಂಡರ್ಸ್ ಸಭೆಯಿಂದ ನೆಲೆಸುತ್ತಾ 'ಶಾಂತಿ'?
ಎರಡು ರಾಷ್ಟ್ರಗಳ ನಡುವೆ ಈಗಿರುವ ಪರಿಸ್ಥಿತಿಯಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ತುರ್ತು ಅಗತ್ಯವಾಗಿದೆ. ಇಂಥ ಸಂದರ್ಭದಲ್ಲಿ ಸಾರ್ವಜನಿಕವಾಗಿ ಯಾವುದೇ ರೀತಿ ಮಾಹಿತಿ ನೀಡಲು ಸಾಧ್ಯವಿಲ್ಲ. ಮಾಧ್ಯಮಗಳು ಕೂಡಾ ಊಹಾಪೋಹಗಳಿಂದ ಅಂತರ ಕಾಯ್ದುಕೊಳ್ಳುವಂತೆ ಭಾರತೀಯ ಸೇನಾ ವಕ್ತಾರರು ತಿಳಿಸಿದ್ದಾರೆ.
ಚೀನಾ-ಭಾರತ ಕಮಾಂಡರ್ಸ್ ಮೀಟಿಂಗ್
ಕಳೆದ 28 ದಿನಗಳಿಂದ ಲಡಾಖ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಚೀನಾದ ದಕ್ಷಿಣ ಕ್ಸಿನ್ ಜಿಯಾಂಗ್ ಜಿಲ್ಲೆಯ ಕಮಾಂಡರ್ ಆಗಿರುವ ಮೇಜರ್ ಜನರಲ್ ಲಿಯು ಲಿನ್ ಅವರು ಭಾರತದ ಕಾರ್ಪ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನೇತೃತ್ವದ ನಿಯೋಗದ ನಡುವೆ ಶಾಂತಿ ಮಾತುಕತೆ ನಡೆಯಿತು. ಪೂರ್ವ ಲಡಾಖ್ ನ ಚುಶುಲ್ ಸೆಕ್ಟರ್ ನಲ್ಲಿರುವ ಮಾರ್ಡೋ ಪ್ರದೇಶದ ಗಡಿ ಸುರಕ್ಷತಾ ಚರ್ಚೆಯ ಕೇಂದ್ರದಲ್ಲಿ ಉಭಯ ರಾಷ್ಟ್ರಗಳ ಮಿಲಿಟರಿ ಕಮಾಂಡರ್ಸ್ ಶಾಂತಿ ಮಾತುಕತೆ ನಡೆಸಿದರು.
ಲೋಕಲ್ ಕಮಾಂಡರ್ಸ್ ಶಾಂತಿ ಮಾತುಕತೆ ವಿಫಲ
ಭಾರತ-ಚೀನಾ ಗಡಿ ಪ್ರದೇಶದಲ್ಲಿನ ಸ್ಥಳೀಯ ಕಮಾಂಡರ್ ಗಳು ನಡೆಸಿದ ಶಾಂತಿ ಮಾತುಕತೆಯು ಫಲಿಸಲಿಲ್ಲ. ಲಡಾಖ್ ಗಡಿ ಸಮಸ್ಯೆಯು ಮತ್ತಷ್ಟು ಉದ್ವಿಗ್ನತೆಯನ್ನು ಪಡೆದುಕೊಂಡಿತು. ಈ ಹಿನ್ನೆಲೆ ಶನಿವಾರ ನಡೆದ ಹಿರಿಯ ಅಧಿಕಾರಿಗಳ ಮಟ್ಟದ ಸಭೆಯು ಮೇಲೆ ಎರಡು ರಾಷ್ಟ್ರಗಳ ಚಿತ್ತ ನೆಟ್ಟಿದೆ.
ಹಿರಿಯ ಕಮಾಂಡರ್ಸ್ ಸಭೆಯ ಮಹತ್ವವೇನು?
ಕಳೆದ 28 ದಿನಗಳಿಂದ ಭಾರತ-ಚೀನಾದ ಪೂರ್ವದಲ್ಲಿರುವ ಲಡಾಖ್ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಗಡಿ ತಿಕ್ಕಾಟದ ನಡುವೆ ಶನಿವಾರ ನಡೆದ ಮಿಲಿಟರಿ ಅಧಿಕಾರಿಗಳ ಮಟ್ಟದ ಸಭೆಯ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಉತ್ತರ ನೀಡಿದ್ದರು. ಗಡಿಗೆ ಸಂಬಂಧಿಸಿದಂತೆ ನಾವು ಪೂರ್ಣ ಪ್ರಮಾಣದ ಕಾರ್ಯ ವಿಧಾನಗಳನ್ನು ಹೊಂದಿದ್ದೇವೆ. ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ನಾವು ಸಂವಹನ ನಡೆಸುತ್ತೇವೆ ಎಂದು ತಿಳಿಸಿದ್ದರು. ಈ ಹಿನ್ನೆಲೆ ಎರಡು ರಾಷ್ಟ್ರಗಳು ಲಡಾಖ್ ಪ್ರದೇಶಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ನಿಲುವನ್ನು ಪ್ರದರ್ಶಿಸಲಿವೆ ಎಂಬುದು ಸಾಕಷ್ಟು ಕುತೂಹಲ ಕೆರೆಳಿಸಿತ್ತು.
ಲಡಾಖ್ ಗಡಿ ವಿವಾದಕ್ಕೆ ಕಾರಣವಾಗಿರುವುದು ಏನು?
ಭಾರತ ಮತ್ತು ಚೀನಾ ಗಡಿಯ ಪಂಗೊಂಗ್ ಸೋ, ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ 2,500 ಯೋಧರು ಶಸ್ತ್ರಸಜ್ಜಿತರಾಗಿ ನಿಂತಿದ್ದಾರೆ. ಪಂಗೊಂಗ್ ಸೋ ಸುತ್ತಮುತ್ತಲು 180 ಕಿ.ಮೀ ವ್ಯಾಪ್ತಿಯಲ್ಲಿ ರಕ್ಷಣಾ ಮೂಲಸೌಕರ್ಯಗಳ ಕಾಮಗಾರಿ ಚಟುವಟಿಕೆ ನಡೆಸುತ್ತಿರುವುದು ಉಪಗ್ರಹ ಸೆರೆ ಹಿಡಿದ ಫೋಟೋಗಳಲ್ಲಿ ಸಾಬೀತಾಗಿದೆ. ಇದಕ್ಕೂ ಮೊದಲು ದರ್ಬಕ್-ಶಯೊಕ್ ನಿಂದ ದೌಲತ್ ಬೆಗ್ ಒಲ್ಡಿಯೆಗೆ ಗಲ್ವಾನ್ ವ್ಯಾಲಿಯಲ್ಲಿ ರಸ್ತೆ ನಿರ್ಮಿಸುವುದಕ್ಕೆ ಭಾರತವು ಮುಂದಾಗಿತ್ತು. ಪಂಗೊಂಗ್ ಸೋ ತುದಿಯಲ್ಲಿರುವ ಪ್ರದೇಶದಲ್ಲಿ ರಸ್ತೆ ಕಾಮಗಾರಿಗೆ ಚೀನಾ ವಿರೋಧಿಸಿತ್ತು. ಪಂಗೊಂಗ್ ಸೋ ಪ್ರದೇಶ ತೀರಾ ಮಹತ್ವವಾಗಿದ್ದು ಎಂದು ಭಾರತ ಕೂಡಾ ಪರಿಗಣಿಸಿತ್ತು. ಆದರೆ ಚೀನಾ ವಿರೋಧದ ಹಿನ್ನೆಲೆ ಗಡಿಯಲ್ಲಿ ಯಾವುದೇ ರೀತಿ ಸೇನೆ ನಿಯೋಜಿಸದಿರಲು ಭಾರತವು ತೀರ್ಮಾನಿಸಿತು.