ಭಾರತ-ಚೀನಾ ಕಮಾಂಡರ್ 12ನೇ ಸಭೆ: ಗೋಗ್ರಾ ಮತ್ತು ಹಾಟ್ ಸ್ಪ್ರಿಂಗ್ಸ್ ಬಗ್ಗೆ ಒಪ್ಪಂದವಿಲ್ಲ
ನವದೆಹಲಿ, ಆಗಸ್ಟ್ 3: ಭಾರತ ಮತ್ತು ಚೀನಾ ನಡುವೆ ಶನಿವಾರ ನಡೆದ 12ನೇ ಕಾರ್ಪ್ ಕಮಾಂಡರ್ ಸಭೆಯು ರಚನಾತ್ಮವಾಗಿದೆ. ಅದಾಗ್ಯೂ, ಪೂರ್ವ ಲಡಾಖ್ನ ಗೋಗ್ರಾ ಮತ್ತು ಹಾಟ್ ಸ್ಪ್ರಿಂಗ್ಸ್ನಿಂದ ಸೇನೆ ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಯಾವುದೇ ಒಪ್ಪಂದಗಳನ್ನು ಮಾಡಿಕೊಂಡಿಲ್ಲ.
ಉಭಯ ರಾಷ್ಟ್ರಗಳ ಸೇನಾ ಕಮಾಂಡರ್ ಸಭೆ ನಂತರದ ಸೋಮವಾರ ಜಂಟಿ ಸುದ್ದಿಗೋಷ್ಠಿ ನಡೆಸಲಾಯಿತು. "ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಪಶ್ಚಿಮ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಸೇನೆ ನಿಷ್ಕ್ರಿಯಗೊಳಿಸುವ ನಿಟ್ಟಿನಲ್ಲಿ ಉಭಯ ಸೇನಾ ಪಡೆಗಳು ಪರಸ್ಪರ ವಿಷಯ ವಿನಿಮಯ ಮಾಡಿಕೊಂಡಿವೆ," ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಲಾಗಿದೆ. ಈ ಸುತ್ತಿನ ಮಾತುಕತೆಯಲ್ಲಿ ಉಭಯ ಸೇನಾಪಡೆಗಳು ಪರಸ್ಪರ ಹೊಂದಾಣಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ರಚನಾತ್ಮಕ ಅಂಶಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದೆ.
ಚೀನಾಗೆ ಹೆದರಿತಾ ಬಲಿಷ್ಠ ಬ್ರಿಟನ್ ಸೇನೆ? ಬೀಜಿಂಗ್ ಆವಾಜ್ ಹೆಂಗಿತ್ತು?
ಉಭಯ ಸೇನೆಗಳ ನಡುವೆ ನಡೆದ ಮಾತುಕತೆ ರಚನಾತ್ಮಕವಾಗಿವೆ ಎಂದು ಉಲ್ಲೇಖಿಸಿದ ರಕ್ಷಣಾ ಅಧಿಕಾರಿಯೊಬ್ಬರು, "ಸೇನೆ ನಿಷ್ಕ್ರಿಯಗೊಳಿಸುವುದು ಹಾಗೂ ಹಿಂಪಡಿಯುವುದಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಆದರೆ ಇನ್ನು ಕೆಲವು ಸಮಸ್ಯೆಗಳು ಹಾಗಿಯೇ ಉಳಿದುಕೊಂಡಿವೆ. ಈ ಹಿಂದೆ ಪ್ಯಾಂಗೊಂಗ್ ತ್ಸೊದ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಸೇನೆಯನ್ನು ಫೆಬ್ರವರಿ ತಿಂಗಳಿನಲ್ಲಿ ವಾಪಸ್ ಕರೆಸಿಕೊಂಡ ನಂತರವೇ ಎರಡನೇ ಹಂತದ ಒಪ್ಪಂದ ಮಾಡಿಕೊಳ್ಳಲಾಯಿತು," ಎಂದಿದ್ದಾರೆ. 12ನೇ ಸುತ್ತಿನ ಕಾರ್ಪ್ ಕಮಾಂಡರ್ ಹಂತದ ಸಭೆಯ ಬೆನ್ನಲ್ಲೇ ಹಿರಿಯ ಅಧಿಕಾರಿಗಳ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.
9 ಗಂಟೆಗಳವರೆಗೂ ನಡೆದ ಸಭೆ:
ಚೀನಾದ ಗಡಿರೇಖೆಗೆ ಹೊಂದಿಕೊಂಡಂತೆ ಮಾಲ್ಡೋ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 10.30ಕ್ಕೆ ಭಾರತ ಮತ್ತು ಚೀನಾದ ಹಿರಿಯ ಕಮಾಂಡರ್ ಹಂತದ ಸಭೆ ಶುರುವಾಗಿದ್ದು, ಸುಮಾರು 9 ಗಂಟೆಗಳವರೆಗೂ ಚರ್ಚೆ ನಡೆಸಲಾಯಿತು. ಈ ವೇಳೆ ಹಿರಿಯ ಅಧಿಕಾರಿಗಳು ಪೂರ್ವ ಲಡಾಖ್ ಭಾಗದ ವಿವಾದಿತ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಹೈಟ್ಸ್ ಪ್ರದೇಶಗಳಲ್ಲಿ ಸೇನಾ ನಿಷ್ಕ್ರಿಯಗೊಳಿಸುವ ಬಗ್ಗೆ ಚರ್ಚೆ ನಡೆಸಿದರು.
ಉಭಯ ರಾಷ್ಟ್ರಗಳು ಪರಸ್ಪರ ಭದ್ರತಾ ಕಾಳಜಿಯಿಂದಾಗಿ ಎರಡೂ ಕಡೆಗಳ ಸೇನೆಗಳು ಸರಿಸಮನಾಗಿ ವಾಪಸ್ ತೆಗೆದುಕೊಳ್ಳುವ ಬಗ್ಗೆ ಭಾರತೀಯ ಸೇನೆ ಉಲ್ಲೇಖಿಸಿದೆ. ಗಡಿ ಪ್ರದೇಶದ ಎತ್ತರದ ಸ್ಥಳಗಳಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಭಾರತ ಸಿದ್ಧವಿದೆ, ಆದರೆ ಚೀನಾ ಕೂಡ ಅಷ್ಟೇ ಸಂಖ್ಯೆಯ ಸೇನೆಯನ್ನು ಅಲ್ಲಿಂದ ವಾಪಸ್ ತೆಗೆದುಕೊಳ್ಳಬೇಕು ಎಂದು ಭಾರತೀಯ ಸೇನೆಯು ಷರತ್ತು ವಿಧಿಸಿತ್ತು.
ಮಿಲಿಟರಿ ಸಭೆ ಸೇರುವ ಬಗ್ಗೆ ಚೀನಾ ಪ್ರಸ್ತಾಪ:
ಕಳೆದ ಜುಲೈ 22ರಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮತ್ತು ಭಾರತೀಯ ವಿದೇಶಾಂಗ ವ್ಯವಹಾರ ಸಚಿವ ಜೈಶಂಕರ್ ಸಭೆ ನಡೆಸಿದ್ದರು. ಈ ವೇಳೆ ಉಭಯ ರಾಷ್ಟ್ರಗಳ ನಡುವೆ ಸಾಧ್ಯವಾದಷ್ಟು ಬೇಗನೇ ಕಮಾಂಡರ್ ಹಂತದ ಸಭೆಯನ್ನು ಕರೆಯಬೇಕೆಂದು ಚೀನಾದ ವಕ್ತಾರರು ಪ್ರಸ್ತಾಪಿಸಿದ್ದರು. ಎರಡು ರಾಷ್ಟ್ರಗಳು ಪರಸ್ಪರ ಒಪ್ಪಿಕೊಳ್ಳುವಿಕೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕುರಿತು ಉಲ್ಲೇಖಿಸಿದ್ದರು.
ಗಲ್ವಾನ್ ಗಡಿಯಲ್ಲಿ ಸೇನೆ ನಿಷ್ಕ್ರಿಯ:
ಕಳೆದ ಜುಲೈ ತಿಂಗಳಿನಲ್ಲಿ ಗಲ್ವಾನ್ ಗಡಿ ಪ್ರದೇಶದ ಪೆಟ್ರೋಲಿಂಗ್ ಪಾಯಿಂಟ್ 14ರಿಂದ ಸೇನೆಗಳನ್ನು ಹಿಂಪಡೆಯಲಾಗಿತ್ತು. ತದನಂತರದಲ್ಲಿ ಪೆಟ್ರೋಲಿಂಗ್ ಪಾಯಿಂಟ್ 14 ಮತ್ತು 17ರ ಗೋಗ್ರಾ ಹೈಟ್ಸ್ ಮತ್ತು ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಸೇನೆ ನಿಷ್ಕ್ರಿಯಗೊಳಿಸುವ ಬಗ್ಗೆ ಚರ್ಚಿಸಲಾಗುತ್ತಿದೆ. ಆದರೆ ಆಗಸ್ಟ್ ತಿಂಗಳ ಹೊತ್ತಿಗೆ ದಕ್ಷಿಣದ ಬ್ಯಾಂಕ್ ಆಫ್ ಪ್ಯಾಂಗೊಂಗ್ ತ್ಸೊದಲ್ಲಿ ಸೇನೆಯು ಆಕ್ರಮಣಕಾರಿ ನಿಲುವು ಪ್ರದರ್ಶಿಸಿತ್ತು.
ಭಾರತ ಚೀನಾ ಯೋಧರ ನಡುವೆ ಸಂಘರ್ಷ
2020ರ ಜೂನ್.06ರಂದು ಲಡಾಖ್ ಗಡಿಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ಶಾಂತಿಸಭೆ ನಡೆಸಲಾಗಿತ್ತು. ಈ ಸಭೆಯು ವಿಫಲವಾದ ಬೆನ್ನಲ್ಲೇ 2020ರ ಜೂನ್ 15 ಮತ್ತು 16ರ ರಾತ್ರಿ ಲಡಾಖ್ ಪೂರ್ವ ಗಡಿ ಪ್ರದೇಶದ ಗಾಲ್ವಾನ್ ಕಣಿವೆಯ ಬಳಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆಯಿತು. ರೌಡಿಗಳಂತೆ ವರ್ತಿಸಿದ ಚೀನಾ ಯೋಧರು ಮಾರಕಾಸ್ತ್ರಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದು, 70 ಯೋಧರು ಗಾಯಗೊಂಡಿದ್ದರು.
ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾದ ವಿರುದ್ಧ ಭಾರತೀಯ ಯೋಧರು ಪ್ರತೀಕಾರ ತೀರಿಸಿಕೊಂಡರು. ಭಾರತ ನಡೆಸಿದ ಪ್ರತಿದಾಳಿಯಲ್ಲಿ ಚೀನಾದ 40ಕ್ಕೂ ಹೆಚ್ಚು ಯೋಧರು ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಚೀನಾ ಮಾತ್ರ ಸೈನಿಕರ ಸಾವು-ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ವಾದಿಸಿತು.
ಲಡಾಖ್ ಗಡಿ ವಿವಾದಕ್ಕೆ ಕಾರಣವಾಗಿರುವುದು ಏನು?
ಭಾರತ ಮತ್ತು ಚೀನಾ ಗಡಿಯ ಪ್ಯಾಂಗಾಂಗ್ ತ್ಸೋ, ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ ಈ ಹಿಂದೆ 2,500 ಯೋಧರು ಶಸ್ತ್ರಸಜ್ಜಿತರಾಗಿ ನಿಂತಿದ್ದರು. ಪ್ಯಾಂಗಾಂಗ್ ತ್ಸೋ ಸುತ್ತಮುತ್ತಲು 180 ಕಿ.ಮೀ ವ್ಯಾಪ್ತಿಯಲ್ಲಿ ರಕ್ಷಣಾ ಮೂಲಸೌಕರ್ಯಗಳ ಕಾಮಗಾರಿ ಚಟುವಟಿಕೆ ನಡೆಸುತ್ತಿರುವುದು ಉಪಗ್ರಹ ಸೆರೆ ಹಿಡಿದ ಫೋಟೋಗಳಲ್ಲಿ ಸಾಬೀತಾಗಿತ್ತು. ಇದಕ್ಕೂ ಮೊದಲು ದರ್ಬಕ್-ಶಯೊಕ್ ನಿಂದ ದೌಲತ್ ಬೆಗ್ ಒಲ್ಡಿಯೆಗೆ ಗಾಲ್ವಾನ್ ವ್ಯಾಲಿಯಲ್ಲಿ ರಸ್ತೆ ನಿರ್ಮಿಸುವುದಕ್ಕೆ ಭಾರತವು ಮುಂದಾಗಿತ್ತು. ಪ್ಯಾಂಗಾಂಗ್ ತ್ಸೋ ತುದಿಯಲ್ಲಿರುವ ಪ್ರದೇಶದಲ್ಲಿ ರಸ್ತೆ ಕಾಮಗಾರಿಗೆ ಚೀನಾ ವಿರೋಧಿಸಿತ್ತು. ಪ್ಯಾಂಗಾಂಗ್ ತ್ಸೋ ಪ್ರದೇಶ ತೀರಾ ಮಹತ್ವವಾಗಿದೆ ಎಂದು ಭಾರತ ಕೂಡಾ ಪರಿಗಣಿಸಿತ್ತು. ಆದರೆ ಚೀನಾ ವಿರೋಧದ ಹಿನ್ನೆಲೆ ಗಡಿಯಲ್ಲಿ ಯಾವುದೇ ರೀತಿ ಸೇನೆ ನಿಯೋಜಿಸದಿರಲು ಭಾರತವು ತೀರ್ಮಾನಿಸಿತು.