ಗಡಿ ಉದ್ವಿಗ್ನತೆ: ಆತಂಕ ಹುಟ್ಟಿಸಿದ ಚೀನಾ ಆಧ್ಯಕ್ಷರ ಮಾತು ಹಾಗೂ ಪ್ರಧಾನಿ ಮೋದಿ ಸಭೆ
ಬೀಜಿಂಗ್, ಮೇ 27: ಕೊರೊನಾವೈರಸ್ ಭೀತಿಯ ನಡುವೆಯೇ ಚೀನಾ ಭಾರತದ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದೆ. ಭಾರತ ಚೀನಾ ಗಡಿ ಪ್ರದೇಶವಿರುವ ಲಡಾಕ್ ಸೆಕ್ಟರ್ನಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
Recommended Video
ಇದರ ನಡುವೆಯೇ ಚೀನಾ ಅಧ್ಯಕ್ಷ ಆಡಿರುವ ಮಾತು ವಿಶ್ವ ಮಟ್ಟದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸಭೆಯಲ್ಲಿ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ''ಚೀನಾದ ಸಾರ್ವಭೌಮತ್ವವನ್ನು ಕಾಪಾಡಲು ಯಾವುದೇ ದಾಳಿಯನ್ನು ಹಿಮ್ಮೆಟ್ಟಿಸಲು ಚೀನಾ ಸೇನೆ ಸನ್ನದ್ದವಾಗಿರಬೇಕು'' ಎಂದು ಕರೆ ನೀಡಿದ್ದಾರೆ.
ಭಾರತದೊಂದಿಗೆ ಯುದ್ಧ ನಡೆಸಲು ಸನ್ನದ್ಧವಾದ ಚೀನಾ
ಕೊರೊನಾವೈರಸ್ ಪೀಡುಗಿಗೆ ಕಾರಣವಾಗಿರುವ ಚೀನಾದ ಮೇಲೆ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಮುನಿಸಿಕೊಂಡಿವೆ. ಈಗ ಚೀನಾ ಅಧ್ಯಕ್ಷ ಆಡಿರುವ ಮಾತು ಯಾವುದೇ ಕ್ಷಣದಲ್ಲಿ ಏನಾದರೂ ಆಗಬಹುದು ಎಂಬುದನ್ನು ತೋರಿಸುತ್ತಿದೆ.
ಚೀನಾ ಸೇನೆ ಸಶಕ್ತವಾಗಿದೆ
ಅಮೆರಿಕದ ಮುನಿಸು, ತೈವಾನ್ ಗಡಿಯೊಂದಿಗಿನ ತಂಟೆ ಹಾಗೂ ಭಾರತದ ಗಡಿ ಬಳಿ ನಡೆದಿರುವ ಉದ್ವಿಗ್ನ ವಾತಾವರಣದ ಭಾಗವಾಗಿಯೇ ಕ್ಷಿ ಜಿನ್ ಪಿಂಗ್ ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ ಯಾವ ದೇಶದ ಹೆಸರನ್ನೂ ಪ್ರಸ್ತಾಪಿಸಿದ ಅವರು, ಗಡಿಗಳಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮ ಸೇನೆ ಸಶಕ್ತವಾಗಿದೆ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಆಕ್ರಮಣಕಾರಿ ನೀತಿ ಅನುಸರಿಸಲಿದೆ
ಗಡಿಯಲ್ಲಿ ದಿನದಿಂದ ದಿನಕ್ಕೆ ಸೈನ್ಯ ಬಲವರ್ಧನೆ ಮಾಡಿಕೊಳ್ಳುತ್ತಿವೆ ಎರಡೂ ದೇಶಗಳು. ಇದು ಚೀನಾ ಭಾರತದೊಂದಿಗೆ ಬೃಹತ್ ಮಿಲಿಟರಿ ಕಾರ್ಯಾಚರಣೆ ನಡೆಸಲು ಸಿದ್ಧತೆ ಎಂದೇ ಹೇಳಲಾಗುತ್ತಿದೆ. ಕ್ಸಿ ಜಿನ್ಪಿಂಗ್ ಪೀಪಲ್ಸ್ ಲಿಬರೇಶನ್ ಆರ್ಮಿ ಸಭೆಯಲ್ಲಿ ಅವರ ಹೇಳಿರುವ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದ್ದು, ಭಾರತದೊಂದಿಗೆ ಗಡಿಯಲ್ಲಿ ವಿನಾಕಾರಣ ತಗಾದೆ ತೆಗೆದಿರುವ ಚೀನಾ ಮತ್ತಷ್ಟು ಆಕ್ರಮಣಕಾರಿ ನೀತಿ ಅನುಸರಿಸಲಿದೆ ಎಂಬ ಅನುಮಾನ ಮೂಡಿದೆ.
ಪ್ರಧಾನಿ ಮೋದಿ ಮಹತ್ವದ ಸಭೆ
ಚೀನಾ ಗಡಿಯಲ್ಲಿ ಚೀನಾ ಸೇನೆ ಉಪಟಳ ನಡೆಸುತ್ತಿರುವ ಕುರಿತು ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಸಿಡಿಎಸ್ ಬಿಪಿನ್ ರಾವತ್ , ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರು ಗಡಿ ಉದ್ವಿಗ್ನತೆಯ ಕುರಿತು ಚರ್ಚೆ ನಡೆಸಿದ್ದಾರೆ.
ಚೀನಾ ವಾಯುನೆಲೆ ವಿಸ್ತರಣೆ
ಚೀನಾ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಸೈನಿಕರ ಜಮಾವಣೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಭಾರತ ತಾನೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಸಿಬ್ಬಂದಿಯನ್ನು ಜಮಾವಣೆ ಮಾಡುತ್ತಿದೆ. ಅತ್ತ ಚೀನಾ ಏನೂ ನಡೆದಿಲ್ಲ ಎಂಬಂತೆ ಪ್ರತಿಪಾದಿಸುತ್ತಿದೆ. ಆದರೆ, ಕೆಲ ಉಪಗ್ರಹ ಚಿತ್ರಗಳು ಬಯಲಾಗಿದ್ದು, ಚೀನಾ ಗಡಿ ಪ್ರದೇಶದಲ್ಲಿನ ತನ್ನ ವಾಯುನೆಲೆಯನ್ನು ವಿಸ್ತರಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಈ ವಾಯುನೆಲೆಯಲ್ಲಿ ಯುದ್ಧ ವಿಮಾನಗಳನ್ನು ಜಮಾವಣೆ ಮಾಡಿರುವುದು ಕಂಡು ಬಂದಿದೆ.