ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣ ಖಂಡಿಸುವ ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ
ನವದೆಹಲಿ, ಫೆಬ್ರವರಿ 26: ಉಕ್ರೇನ್ ವಿರುದ್ಧ ರಷ್ಯಾದ 'ಆಕ್ರಮಣ' ಮತ್ತು ಸೇನಾ ಕಾರ್ಯಚರಣೆಯನ್ನು ಖಂಡಿಸುವ ಮತ್ತು ಉಕ್ರೇನ್ ದೇಶದಿಂದ ರಷ್ಯಾದ ಪಡೆಗಳನ್ನು ತಕ್ಷಣ, ಸಂಪೂರ್ಣ ಮತ್ತು ಬೇಷರತ್ತಾಗಿ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ಅಮೆರಿಕ ಪ್ರಾಯೋಜಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಿಂದ ಭಾರತ ದೂರ ಉಳಿದಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್ ಸೆಕ್ಯುರಿಟಿ ಕೌನ್ಸಿಲ್) ಶುಕ್ರವಾರ ಅಮೆರಿಕ ಮತ್ತು ಅಲ್ಬೇನಿಯಾ ಪ್ರಾಯೋಜಿಸಿದ ಕರಡು ನಿರ್ಣಯದ ಮೇಲೆ ಮತ ಚಲಾಯಿಸಲಾಯಿತು. ಪೋಲೆಂಡ್, ಇಟಲಿ, ಜರ್ಮನಿ, ಎಸ್ಟೋನಿಯಾ, ಲಕ್ಸೆಂಬರ್ಗ್ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹಲವಾರು ರಾಷ್ಟ್ರಗಳು ಈ ನಿರ್ಣಯವನ್ನು ಬೆಂಬಲಿಸಿವೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ 15 ಸದಸ್ಯರಲ್ಲಿ 11 ಸದಸ್ಯರು ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವನ್ನು ಖಂಡಿಸುವ ನಿರ್ಣಯದ ಪರವಾಗಿ ಮತ ಚಲಾಯಿಸಿದರೆ ಭಾರತ ಸೇರಿದಂತೆ ಮೂರು ದೇಶಗಳು ಗೈರು ಹಾಜರಾಗಿದ್ದವು.
"ಉಕ್ರೇನ್ನಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಭಾರತವು ಆಳವಾಗಿ ವಿಚಲಿತವಾಗಿದೆ. ಹಿಂಸಾಚಾರ ಮತ್ತು ಹಗೆತನವನ್ನು ತಕ್ಷಣವೇ ನಿಲ್ಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ಮಾನವ ಜೀವಗಳ ಬೆಲೆಯಲ್ಲಿ ಯಾವುದೇ ಪರಿಹಾರವನ್ನು ಎಂದಿಗೂ ತಲುಪಲಾಗುವುದಿಲ್ಲ," ಎಂದು ವಿಶ್ವಸಂಸ್ಥೆ ರಾಯಭಾರಿ ಕಚೇರಿಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಹೇಳಿದರು.
"ರಾಜತಾಂತ್ರಿಕತೆಯ ಹಾದಿಯನ್ನು ಕೈಬಿಟ್ಟಿರುವುದು ವಿಷಾದದ ಸಂಗತಿಯಾಗಿದೆ. ನಾವು ಅದಕ್ಕೆ ಮರಳಬೇಕು. ಈ ಎಲ್ಲಾ ಕಾರಣಗಳಿಗಾಗಿ ಭಾರತವು ಈ ನಿರ್ಣಯದಿಂದ ದೂರವಿರಲು ನಿರ್ಧರಿಸಿದೆ," ಎಂದು ಟಿ.ಎಸ್. ತಿರುಮೂರ್ತಿ ತಿಳಿಸಿದರು.
ಭದ್ರತಾ ಮಂಡಳಿಯ ಖಾಯಂ ಸದಸ್ಯ ಅಮೆರಿಕ, ರಷ್ಯಾ ಅಕ್ರಮಣವನ್ನು ನಿರ್ಬಂಧಿಸುವ ತನ್ನ ವೀಟೋ ಅಧಿಕಾರವನ್ನು ಬಳಸಿತು. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಣಯವು ಉಕ್ರೇನ್ ವಿರುದ್ಧದ ಆಕ್ರಮಣ ಮತ್ತು ಕ್ರಮಗಳಿಗಾಗಿ ಜಾಗತಿಕ ವೇದಿಕೆಯಲ್ಲಿ ರಷ್ಯಾದ ಪ್ರತ್ಯೇಕತೆಯನ್ನು ತೋರಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದರು.
ಇನ್ನು ಭಾರತವು ರಷ್ಯಾದೊಂದಿಗೆ ಬಲವಾದ ರಕ್ಷಣಾ ಸಂಬಂಧವನ್ನು ಹೊಂದಿದ್ದು, ಈ ನಿರ್ಣಯದ ಮೇಲೆ ಭಾರತವು ಹೇಗೆ ಮತ ಚಲಾಯಿಸುತ್ತದೆ ಎಂಬುದರ ಮೇಲೆ ಎಲ್ಲಾ ದೇಶಗಳ ಕಣ್ಣಿದ್ದವು. ಆದರೆ ಭಾರತ ಮತ ಚಲಾವಣೆಯಿಂದ ದೂರವುಳಿದು ನಿರ್ಲಿಪ್ತ ನೀತಿಯನ್ನು ಎತ್ತಿ ಹಿಡಿದಿದೆ.