700 ಬಲಿಪಡೆದ ಮೆಕ್ಕಾ ಕಾಲ್ತುಳಿತ ದುರಂತದ ಚಿತ್ರಗಳು
ಮೆಕ್ಕಾ (ಸೌದಿ ಅರೇಬಿಯಾ), ಸೆಪ್ಟೆಂಬರ್ 25 : ಮೆಕ್ಕಾದ ಮಿನಾ ಬಳಿ ಹಜ್ ಯಾತ್ರೆಯಲ್ಲಿ ಗುರುವಾರ ಉಂಟಾದ ಕಾಲ್ತುಳಿತದಲ್ಲಿ ಇದುವರೆಗೂ ನಾಲ್ವರು ಭಾರತೀಯರು ಸೇರಿದಂತೆ 717 ಜನರು ಮೃತಪಟ್ಟಿದ್ದಾರೆ. ಸುಮಾರು 863 ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಮೃತಪಟ್ಟವರ ಗುರುತುಗಳು ಪತ್ತೆಯಾಗಿಲ್ಲ.
ಮೆಕ್ಕಾದಿಂದ ಸುಮಾರು 5 ಕಿ.ಮೀ ದೂರದಲ್ಲಿ ಜಮಾರತ್ಗೆ ಸಂಪರ್ಕ ಕಲ್ಪಿಸುವ ಎರಡು ರಸ್ತೆಗಳು ಕೂಡುವ ಜಾಗದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಸೌದಿ ಅರೇಬಿಯಾದ ಮಾಧ್ಯಮಗಳು ವರದಿ ಮಾಡಿದೆ. ಪರ್ಯಾಯ ಮಾರ್ಗಗಳ ಮೂಲಕ ಸಿಲುಕಿಕೊಂಡಿರುವ ಯಾತ್ರಿಕರನ್ನು ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಲಾಗುತ್ತಿದೆ.[ಮೆಕ್ಕಾದಲ್ಲಿ ಕಾಲ್ತುಳಿತ ನೂರಾರು ಬಲಿ]
ಜಮಾರತ್ ಎಂಬಲ್ಲಿ ಸೈತಾನನನ್ನು ಸಂಕೇತಿಸುವ ಕಲ್ಲಿನ ಗೋಡೆಗಳಿಗೆ ಯಾತ್ರಿಕರು ಕಲ್ಲೆಸೆಯುತ್ತಿದ್ದಾಗ ಕಾಲ್ತುಳಿತ ಉಂಟಾಗಿದೆ. ಜಮಾರತ್ ಸೇತುವೆ ಪ್ರವೇಶದ್ವಾರದ ಬಳಿ ಏಕಾಏಕಿ ಜನರು ಮುಗಿಬಿದ್ದ ಕಾರಣ ಈ ದುರಂತ ನಡೆದಿದೆ. ಘಟನೆಯಲ್ಲಿ ಇದುವರೆಗೂ 717 ಜನರು ಮೃತಪಟ್ಟಿದ್ದು, 863 ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ. [ಮೆಕ್ಕಾ ಕ್ರೇನ್ ದುರಂತದ ಚಿತ್ರಗಳು]
ಕಾಲ್ತುಳಿತ ಸಂಭವಿಸಿದ ಸ್ಥಳದಲ್ಲಿ ಹಲವಾರು ವೈದ್ಯಕೀಯ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಸುಮಾರು 200 ಆಂಬ್ಯುಲೆನ್ಸ್ಗಳು 4,000 ಮಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಪ್ರದೇಶದಲ್ಲಿ 1990ರಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 1,426 ಮಂದಿ ಬಲಿಯಾಗಿದ್ದರು. [ಪಿಟಿಐ ಚಿತ್ರಗಳು]
ಎಲ್ಲಿ ನಡೆಯಿತು ಕಾಲ್ತುಳಿತ?
ಮೆಕ್ಕಾದಿಂದ ಸುಮಾರು 5 ಕಿ.ಮೀ ದೂರದಲ್ಲಿ ಜಮಾರತ್ಗೆ ಸಂಪರ್ಕ ಕಲ್ಪಿಸುವ ಎರಡು ರಸ್ತೆಗಳು ಕೂಡುವ ಜಾಗದಲ್ಲಿ ಗುರುವಾರ ಸಂಭವಿಸಿದ ಕಾಲ್ತುಳಿತದಲ್ಲಿ ಇದುವರೆಗೂ 717 ಜನರು ಮೃತಪಟ್ಟಿದ್ದಾರೆ. 863 ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಭಾರತೀಯರು.
ಕಾಲ್ತುಳಿತ ಇದೇ ಮೊದಲಲ್ಲ
ಮೆಕ್ಕಾದಲ್ಲಿ ಕಾಲ್ತುಳಿತ ಇದೇ ಮೊದಲಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಡೆದ ಭಾರೀ ದುರಂತವಿದು. 1990ರಲ್ಲಿ ಸಂಭವಿಸಿದ ದುರಂತದಲ್ಲಿ 1,426 ಜನರು ಮೃತಪಟ್ಟಿದ್ದರು. ಸೌದಿ ಅರೇಬಿಯಾ ಸರ್ಕಾರ ಕೋಟ್ಯಂತರ ಡಾಲರ್ ಖರ್ಚು ಮಾಡಿ ಕಾಲ್ತುಳಿತ ತಪ್ಪಿಸಲು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ.
ನಾಲ್ವರು ಭಾರತೀಯರು ಸಾವು
ಕಾಲ್ತುಳಿತದಲ್ಲಿ ಕೇರಳದ ವ್ಯಕ್ತಿಯೊಬ್ಬರು ಹಾಗೂ ತೆಲಂಗಾಣದ ಮಹಿಳೆ ಸೇರಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ ಕೇರಳದ ಇಬ್ಬರು ಮಹಿಳೆಯರು ಸೇರಿದ್ದಾರೆ. ಈ ವರ್ಷ 1.5 ಲಕ್ಷಕ್ಕೂ ಹೆಚ್ಚಿನ ಭಾರತೀಯರು ಸೇರಿದಂತೆ 20ಲಕ್ಷಕ್ಕೂ ಹೆಚ್ಚು ಮಂದಿ ಹಜ್ ಯಾತ್ರೆ ಕೈಗೊಂಡಿದ್ದಾರೆ.
ಸಹಾಯವಾಣಿ ಆರಂಭ
ಭಾರತದ ರಾಯಭಾರ ಕಚೇರಿ ನಿರಂತರವಾಗಿ ಪರಿಸ್ಥಿತಿಯ ಅವಲೋಕನ ನಡೆಸುತ್ತಿದೆ. ಸಹಾಯವಾಣಿಯನ್ನು ಆರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆಗಳು 00966125458000, 00966125496000. ಯಾತ್ರಿಕರ ನೆರವಿಗೆ ಉಚಿತ ಕರೆ ಸಂಖ್ಯೆ 8002477786.
ತನಿಖೆಗೆ ಆದೇಶ ನೀಡಿದ ಸರ್ಕಾರ
ಸೌದಿ ಅರೇಬಿಯಾ ಸರ್ಕಾರ ಕಾಲ್ತುಳಿತ ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ. ಹಜ್ ಕಮಿಟಿಯ ಅಧ್ಯಕ್ಷರೂ ಆಗಿರುವ ಸೌದಿ ಅರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ನಯೆಫ್ ಅವರು ತನಿಖೆಗೆ ಆದೇಶಿಸಿದ್ದು, ಹಿರಿಯ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದಾರೆ.
ಈ ಬಾರಿಯ 2ನೇ ದುರಂತ
ಮೆಕ್ಕಾದಲ್ಲಿ ಈ ಬಾರಿ ನಡೆಯುತ್ತಿರುವ 2ನೇ ದುರಂತವಿದು. ಸೆ.11ರಂದು ಸಂಭವಿಸಿದ ಕ್ರೇನ್ ದುರಂತದಲ್ಲಿ 107 ಜನರು ಮೃತಪಟ್ಟು, 200 ಜನರು ಗಾಯಗೊಂಡಿದ್ದರು. ಮೆಕ್ಕಾದ ಮುಖ್ಯ ಮಸೀದಿ ಮಸ್ಜಿದ್ ಅಲ್ ಹರಾಮ್ ಪಕ್ಕದಲ್ಲಿ ನಿರ್ಮಾಣ ಕಾಮಗಾರಿಗೆ ಅಳವಡಿಸಲಾಗಿದ್ದ ಕ್ರೇನ್ ಕುಸಿದು ಬಿದ್ದು ಈ ದುರಂತ ನಡೆದಿತ್ತು.