ಚಿತ್ರಗಳಲ್ಲಿ ನೀರಿನಿಂದ ಆವೃತ ಜಪಾನ್, ಪ್ರವಾಹಕ್ಕೆ 40 ಮಂದಿ ಬಲಿ
ಟೋಕಿಯೋ, ಜುಲೈ 7: ಕುಮಾಮೊಟೊ, ಕಗೊಶಿಮಾ ಸೇರಿದಂತೆ ದಕ್ಷಿಣ ಜಪಾನ್ ನಲ್ಲಿ ಕಳೆದ ಮುರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಜಲ ಪ್ರಳಯ ರೂಪ ಪಡೆದುಕೊಂಡಿದೆ. ಪ್ರವಾಹಕ್ಕೆ ಸಿಲುಕಿ 40ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
Recommended Video
ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹ ಭೀತಿ ಎದುರಾಗಿದ್ದು, ಮಣ್ಣು ಕುಸಿತದಿಂದ ಕುಮಮೊಟೊ ಪ್ರಾಂತ್ಯದಲ್ಲಿ18 ಮಂದಿ ಮೃತರಾಗಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ, ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಹೆಲಿಕಾಪ್ಟರ್ ಮತ್ತು ದೋಣಿಗಳ ಮೂಲಕ ರಕ್ಷಿಸಲಾಗುತ್ತಿದೆ.
ಭಾರತದ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ ಜಪಾನ್
ಸುಮಾರು 40,000ಕ್ಕೂ ಹೆಚ್ಚು ರಕ್ಷಣಾ ಪಡೆ, ಕರಾವಳಿ ಕಾವಲು ಪಡೆ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಜಪಾನ್ ಹವಾಮಾನ ಇಲಾಖೆಯು ಕಳೆದ ಶನಿವಾರದಂದು ಭಾರಿ ಪ್ರವಾಹದ ಮುನ್ಸೂಚನೆ ನೀಡಿತ್ತು. ಕ್ಯುಶು ದ್ವೀಪದಲ್ಲಿ ಭಾರಿ ನಷ್ಟ ಉಂಟಾಗಿದೆ. ಒಟ್ಟಾರೆ, 2,70,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗಿದೆ.
ಕುಮಾ ನದಿ ಪ್ರದೇಶ ಸಂಪೂರ್ಣ ಜವಾವೃತವಾಗಿದ್ದು, 50ಕ್ಕೂ ಅಧಿಕ ಮಂದಿಯನ್ನು ಭಾನುವಾರದ ರಕ್ಷಿಸಲಾಗಿತ್ತು. ಆದರೆ ಸದ್ಯಕ್ಕೆ 18 ಮಂದಿ ಈ ಪ್ರದೇಶದಲ್ಲೇ ಮೃತರಾಗಿರುವ ವರದಿ ಬಂದಿದೆ.
ಕುಮಾಮೊಟೊದ ಕುಮಾ ಗ್ರಾಮ
ಕುಮಾಮೊಟೊದ ಕುಮಾ ಗ್ರಾಮದಲ್ಲಿ 83.5 ಮಿ.ಮೀ/ಗಂಟೆ ಪ್ರಮಾಣದಲ್ಲಿ ಸುರಿದಿದೆ. ಕಗೋಶಿಮಾದ ಕನೊಯಾ ಸಿಟಿಯಲ್ಲಿ 109.5 ಮಿ.ಮೀ/ ಗಂಟೆ ಮಳೆ ಬಿದ್ದಿದೆ. ಕುಮಾಮೊಟೋ ಹಾಗೂ ಕಗೋಶಿಮಾದಲ್ಲಿ ಮತ್ತೆ ಭಾರಿ ಮಳೆ, ಪ್ರವಾಹದ ಭೀತಿ ಮುನ್ಸೂಚನೆ ನೀಡಲಾಗಿದೆ.
ಕುಮಾ ನದಿಯಿಂದ ಫ್ಲಾಶ್ ಫ್ಲಡ್
ಭಾರಿ ಮಳೆಯಿಂದ ಕುಮಾ ನದಿ ತುಂಬಿ ಹರಿಯುತ್ತಿದ್ದು, ಫ್ಲಾಶ್ ಫ್ಲಡ್ ಉಂಟಾಗಿದ್ದರಿಂದ ಅನೇಕ ಆರೈಕೆ ಕೇಂದ್ರಗಳು ಧ್ವಂಸಗೊಂಡಿವೆ. ಆದರೆ, ಗುಡ್ಡಗಾಡು ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಕ್ಕೆ ವಿಘ್ನ ಉಂಟಾಗಿದೆ ಎಂದು ಜಪಾನ್ ಸೆಲ್ಫ್ ಡಿಫೆನ್ಸ್ ಫೋರ್ಸ್ ಹೇಳಿದೆ.
20 ಸಾವಿರ ಅಗ್ನಿಶಾಮಕ ದಳ ಬಳಕೆ
ರಕ್ಷಣಾ ಕಾರ್ಯದಲ್ಲಿ 20 ಸಾವಿರ ಅಗ್ನಿಶಾಮಕ ದಳ, 29 ಹೆಲಿಕಾಪ್ಟರ್, ನಾಲ್ಕು ವಿಮಾನ, ಎರಡು ಸರ್ಚ್ ಹಡಗುಗಳನ್ನು ಬಳಸಲಾಗುತ್ತಿದ್ದು, ನಾಪತ್ತೆಯಾಗಿರುವವರ ಹುಡುಕಾಟಕ್ಕೆ ಬಳಸಲಾಗುತ್ತಿದೆ ಎಂದು ಜಪಾನ್ ಅಗ್ನಿಶಾಮಕ ಹಾಗೂ ನೈಸರ್ಗಿಕ ವಿಪತ್ತು ಮ್ಯಾನೇಜ್ಮೆಂಟ್ ಏಜೆನ್ಸಿ ತಿಳಿಸಿದೆ. ಆದರೆ, ಸಾವು ನೋವಿನ ಪ್ರಮಾಣ ಇನ್ನೂ ಖಚಿತವಾಗಿಲ್ಲ. ನಾಪತ್ತೆಯಾದವರ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಸಿಎನ್ಎನ್ ವರದಿ ಮಾಡಿದೆ.
ಕುಮಮುರಾದಲ್ಲಿ ಪ್ರವಾಹದಿಂದ ನಷ್ಟ
ದಕ್ಷಿಣ ಜಪಾನ್ ನಲ್ಲಿರುವ ಕುಮಮುರಾದಲ್ಲಿ ಭಾರಿ ಮಳೆ, ಪ್ರವಾಹದಿಂದ ರಸ್ತೆ ಧ್ವಂಸವಾಗಿದ್ದು, ವ್ಯಕ್ತಿಯೊಬ್ಬ ರಸ್ತೆ ದಾಟಲು ಯತ್ನಿಸುತ್ತಿದ್ದಾರೆ. ಕ್ಯುಶು ದ್ವೀಪದಲ್ಲಿ ಇನ್ನೂ ಮಳೆ ಸುರಿಯುತ್ತಲೇ ಇದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಚಿತ್ರ ಕೃಪೆ: AP/PTI Photo