ಕಾಶ್ಮೀರ ನಿರ್ಧಾರದ ಬೆನ್ನಲ್ಲೇ ಅಣ್ವಸ್ತ್ರ ನೆನಪಿಸಿದ ಇಮ್ರಾನ್ ಖಾನ್
Recommended Video
ಇಸ್ಲಾಮಾಬಾದ್, ಆಗಸ್ಟ್ 6: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಹಿಂಪಡೆದಿರುವ ಭಾರತ ಸರ್ಕಾರದ ಕ್ರಮಕ್ಕೆ ಪಾಕಿಸ್ತಾನದ ಆಕ್ರೋಶ ಮುಂದುವರೆದಿದೆ.
ವಿದೇಶಾಂಗ ಇಲಾಖೆ ವಕ್ತಾರರ ಹೇಳಿಕೆ ಬೆನ್ನಲ್ಲೇ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿದ್ದು,ಭಾರತದ ನಿರ್ಧಾರವು ಅಣ್ವಸ್ತ್ರ ಹೊಂದಿರುವ ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಇನ್ನಷ್ಟು ಹಾಳುಮಾಡಲಿದೆ. ಈ ನಿರ್ಧಾರ ವಿಶ್ವಸಂಸ್ಥೆಯ ನಿರ್ಣಯಕ್ಕೆ ವಿರುದ್ಧ ಹಾಗೂ ಕಾನೂನು ಬಾಹಿರ ಎಂದು ಹೇಳಿದ್ದಾರೆ.
ಈಗಾಗಲೇ ಪಾಕಿಸ್ತಾನ ಸರ್ಕಾರವು ಈ ವಿಚಾರಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ ಮೊರೆ ಹೋಗಲು ನಿರ್ಧರಿಸಿದೆ. ಹಾಗೆಯೇ ಸೇನಾ ಮುಖ್ಯಸ್ಥರು ತುರ್ತು ಭದ್ರತಾ ಸಭೆಯನ್ನು ನಡೆಸಿದ್ದಾರೆ.
ಸಂವಿಧಾನ ವಿಧಿ 370 ಹಾಗೂ 35 ಎ ರದ್ದುಪಡಿಸುತ್ತಿದ್ದಂತೆ, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾಗಿದೆ. ಈ ನೆಲೆಯು ಪಾಕಿಸ್ತಾನದ ಆಕ್ರೋಶಕ್ಕೆ ಕಾರಣವಾಗಿದೆ.
ವಿಶೇಷ ಸ್ಥಾನಮಾನ ಹಿಂಪಡೆಯುವ ಮೂಲಕ ಭಾರತವು ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ ಪಾಕಿಸ್ತಾನಕ್ಕೆ ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.
ಸೋಮವಾರ ಹೇಳಿಕೆ ಬಿಡುಗಡೆ ಮಾಡಿದ್ದ ಪಾಕಿಸ್ತಾನ ಭಾರತದ ನಡೆ ಕಾನೂನು ಬಾಹಿರ, ಅಂತಾರಾಷ್ಟ್ರೀಯ ಎಲ್ಲಾ ವೇದಿಕೆಗಳಲ್ಲಿ ಇದನ್ನು ಪ್ರಶ್ನಿಸಲಾಗುತ್ತದೆ ಎಂದಿತ್ತು.