'ಕಾಶ್ಮೀರದಲ್ಲಿ ಜಿಹಾದ್ ಗಾಗಿ ಲಾಡೆನ್ ನಿಂದ ಹಣ ಪಡೆದಿದ್ದ ನವಾಜ್ ಷರೀಫ್'
ಕಾಶ್ಮೀರ ಹಾಗೂ ಆಫ್ಘಾನಿಸ್ತಾನದಲ್ಲಿ ಜಿಹಾದ್ ಗಾಗಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅಲ್ ಕೈದಾ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್ ಲಾಡೆನ್ ನಿಂದ ಹಣ ಪಡೆದಿದ್ದಾರೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ಇಮ್ರಾನ್ ಖಾನ್ ಆರೋಪಿಸಿದ್ದಾರೆ
ಇಸ್ಲಾಮಾಬಾದ್, ಮೇ 9: ಕಾಶ್ಮೀರದಲ್ಲಿ ಜೆಹಾದ್ ನಡೆಸಲು ಒಸಾಮ ಬಿನ್ ಲಾಡೆನ್ ನಿಂದ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹಣ ಪಡೆದಿರುವುದಾಗಿ ಆರೋಪಿಸಿರುವ ಇಮ್ರಾನ್ ಖಾನ್ ನೇತೃತ್ವದ ಪಕ್ಷವು ಈ ಬಗ್ಗೆ ಮೊಕದ್ದಮೆ ದಾಖಲಿಸುವುದಾಗಿ ಹೇಳಿದೆ.
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ನವಾಜ್ ಷರೀಫ್ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತೆಹ್ರೀಕ್-ಇ-ಇನ್ಸಾಫ್ ನ ಮುಖ್ಯಸ್ಥ ಇಮ್ರಾನ್ ಖಾನ್ ಅಗ್ರಹಿಸಿದ್ದಾರೆ. ಆ ಪಕ್ಷದ ವಕ್ತಾರ ಫವಾದ್ ಚೌಧರಿ ಸೋಮವಾರ ಮಾತನಾಡಿ, ಪಾಕಿಸ್ತಾನದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲು ವಿದೇಶಿಯೊಬ್ಬರಿಂದ ಹಣ ಪಡೆದಿರುವುದಾಗಿ ನವಾಜ್ ಷರೀಫ್ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡುವುದಾಗಿ ತಿಳಿಸಿದ್ದಾರೆ.[ಸಜ್ಜನ್ ಜಿಂದಾಲ್-ನವಾಜ್ ಷರೀಫ್ ಪಾಕ್ ನಲ್ಲಿ ಭೇಟಿ, ಏನೀ ರಹಸ್ಯ?]
ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಆದರೆ ಕೆಲವು ಸಂದರ್ಶನಗಳು ಹಾಗೂ ಪಾಕಿಸ್ತಾನಿ ತಾಲಿಬಾನಿಗಳಿಂದ ಮೃತಪಟ್ಟು ಐಎಸ್ ಐ ಗೂಢಚಾರ ಖಾಲಿದ್ ಖ್ವಾಜಾನ ಹೆಂಡತಿ ಶಮಾಮಾ ಖಾಲಿದ್ ಬರೆದಿರುವ 'ಖಾಲಿದ್ ಖ್ವಾಜಾ: ಶಹೀದ್-ಇ-ಅಮಾನ್' ಪುಸ್ತಕದ ಅಂಶಗಳ ಬಗ್ಗೆ ಪ್ರಸ್ತಾವಿಸಲಾಗಿದೆ.
ಸಂದರ್ಶನಗಳು ಹಾಗೂ ಪುಸ್ತಕದ ಪ್ರಕಾರ ನವಾಜ್ ಷರೀಫ್ ನೂರೈವತ್ತು ಕೋಟಿ ರುಪಾಯಿಗಳನ್ನು ಅಲ್ ಕೈದಾದ ಆಗಿನ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ನಿಂದ ಪಡೆದು, ಅದನ್ನು ಕಾಶ್ಮೀರ ಹಾಗೂ ಆಫ್ಘಾನಿಸ್ತಾನದಲ್ಲಿ ಜಿಹಾದ್ ಗಾಗಿ ಬಳಸಿರುವುದಾಗಿ ವರದಿಯಾಗಿದೆ.[ಪಾಕ್ ಪ್ರಧಾನಿ ನವಾಜ್ ಷರೀಫ್ ವಿರುದ್ಧ ತನಿಖೆಗೆ ಕೋರ್ಟ್ ಆದೇಶ]
ಈ ಹಣದ ಪೈಕಿ ಇಪ್ಪತ್ತೇಳು ಕೋಟಿ ರುಪಾಯಿಯನ್ನು 1989ರಲ್ಲಿ ಬೆನಜಿರ್ ಭುಟ್ಟೋ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಳಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲಿನ ಗುಪ್ತಚರ ಇಲಾಖೆಯ ಮಾಜಿ ನಿರ್ದೇಶಕ ಆಗಿದ್ದ ಮಸೂದ್ ಷರೀಫ್ ಖಾನ್ ಖಟಕ್ 2013ರಲ್ಲಿ ಸುಪ್ರೀಂ ಕೋರ್ಟ್ ಮುಂದೆ ಹೇಳಿಕೆ ದಾಖಲಿಸಿದ್ದು, 1989ರಲ್ಲಿ ಗುಪ್ತಚರ ಇಲಾಖೆಯ ಹಣ ದುರ್ಬಳಕೆಯಾಗಿದೆ ಎಂದಿದ್ದಾರೆ.
ಈ ಹಿಂದೆ ಹಲವು ಬಾರಿ ಷರೀಫ್ ಅಧಿಕಾರದಲ್ಲಿದ್ದ ಪಕ್ಷಗಳ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಚೌಧರಿ ಆರೋಪಿಸಿದ್ದಾರೆ.