ಮೋದಿ ಸರಕಾರದ ಹಿಡಿತದಲ್ಲಿ ಅಣ್ವಸ್ತ್ರ ಇರುವುದೇ ನಮ್ಮ ಆತಂಕ: ಇಮ್ರಾನ್ ಖಾನ್
Recommended Video
ಇಸ್ಲಾಮಾಬಾದ್, ಆಗಸ್ಟ್ 18: ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರದ ನಿರ್ಧಾರದ ಬಗ್ಗೆ ಜಾಗತಿಕ ಸಮುದಾಯ ಯಾವ ತಕರಾರು ಕೂಡ ಮಾಡದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈಗ ಕೋಮುವಾದದ ದಾಳ ಉರುಳಿಸಿದ್ದಾರೆ. ಭಾನುವಾರದಂದು ಸರಣಿ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ಬಿಜೆಪಿ ಸರಕಾರವನ್ನು 'ಹಿಂದೂಗಳೇ ಶ್ರೇಷ್ಠರು' ಎಂಬ ಭಾವನೆ ಇರುವ ಸರಕಾರ ಎಂದು ಕರೆದಿದ್ದಾರೆ.
ಇನ್ನೂ ಮುಂದುವರಿದು, ನೆಹರೂ ಹಾಗೂ ಗಾಂಧಿಯ ಭಾರತಕ್ಕೆ ಮೋದಿ ಸರಕಾರವು ಆತಂಕಕಾರಿ ಎಂದು ಟೀಕಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಅಂತರರಾಷ್ಟ್ರೀಯ ಸಮುದಾಯದ ಗಮನ ಸೆಳೆಯಲು ಯತ್ನಿಸಿದ್ದು ವಿಫಲವಾಗಿದೆ. ಪಾಕಿಸ್ತಾನದಿಂದ ಭಾರತ ಹೈಕಮಿಷನರ್ ಅನ್ನು ಉಚ್ಚಾಟನೆ ಮಾಡಲಾಗಿದೆ. ಜತೆಗೆ ಭಾರತದ ರಾಜತಾಂತ್ರಿಕ ಸಂಬಂಧವನ್ನು ಪಾಕ್ ಕಡಿತಗೊಳಿಸಿದೆ.
ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಬೆದರಿಕೆ ಒಡ್ಡಿದ ಇಮ್ರಾನ್ ಖಾನ್ !
ಕಾಶ್ಮೀರ ವಿಚಾರದಲ್ಲಿ ಇತರ ದೇಶಗಳಲ್ಲಿ ಬೆಂಬಲ ಪಡೆದು, ಭಾರತದ ಮೇಲೆ ರಾಜತಾಂತ್ರಿಕ ಒತ್ತಡ ಹಾಕಿಸಲು ಯತ್ನಿಸಿತು. ಆದರೆ ಬಹುತೇಕ ದೇಶಗಳು, ಇದು ಭಾರತದ ಆಂತರಿಕ ವಿಚಾರ ಎಂದು ಸುಮ್ಮನಾದವು. ಇದೀಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಕೇಂದ್ರ ಸರಕಾರದ ವಿರುದ್ಧ ಟೀಕೆ ಮುಂದುವರಿಸಿದ್ದಾರೆ.
ಜರ್ಮನಿ ಹೇಗೆ ನಾಜಿಗಳ ಕೈಲಿ ಸಿಲುಕಿಕೊಂಡಿತ್ತೋ ಅದೇ ರೀತಿ ಭಾರತ ಕೂಡ ಫ್ಯಾಸಿಸ್ಟ್, ಹಿಂದೂಗಳೇ ಶ್ರೇಷ್ಠರು ಎಂಬ ಸಿದ್ಧಾಂತವಾದಿ ಹಾಗೂ ನಾಯಕತ್ವದ ಕೈಲಿ ಸಿಲುಕಿಕೊಂಡಿದೆ. ಇದರಿಂದ ತೊಂಬತ್ತು ಲಕ್ಷ ಕಾಶ್ಮೀರಿಗಳಿಗೆ ಆತಂಕ ಎದುರಾಗಿದೆ. ಆ ಆತಂಕ ಪಾಕಿಸ್ತಾನಕ್ಕೂ ವಿಸ್ತರಿಸಿದೆ. ಜತೆಗೆ ಭಾರತದಲ್ಲಿನ ಅಲ್ಪಸಂಖ್ಯಾತರು, ನೆಹರೂ- ಗಾಂಧಿಯ ಭಾರತಕ್ಕೆ ಆತಂಕ ಎದುರಾಗಿದೆ ಎಂದು ಇಮ್ರಾನ್ ಟ್ವೀಟ್ ಮಾಡಿದ್ದಾರೆ.
ಇದೀಗ ಅಣ್ವಸ್ತ್ರ ಕೂಡ ಮೋದಿ ಸರಕಾರದ ಹಿಡಿತದಲ್ಲಿ ಇರುವುದರಿಂದ ಚಿಂತೆಗೆ ಕಾರಣ ಆಗಿದೆ. ಇಡೀ ಜಗತ್ತು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಭಾರತದ ಅಣ್ವಸ್ತ್ರ ಸುರಕ್ಷತೆ ಹಾಗೂ ಭದ್ರತೆಯನ್ನು ಗಂಭೀರವಾಗಿ ಆಲೋಚಿಸಬೇಕು. ಇದು ಈ ಪ್ರಾದೇಶಿಕ ವ್ಯಾಪ್ತಿಯಷ್ಟೇ ಅಲ್ಲ, ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.
ಭಾರತವು ಕಾಶ್ಮೀರದ ವಿಚಾರದಿಂದ ಗಮನ ಬೇರೆಡೆ ಸೆಳೆಯಲು ದಾಳಿ ನಡೆಸಬಹುದು ಎಂದು ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಅಸೀಫ್ ಘಫೂರ್ ಈಚೆಗೆ ಹೇಳಿಕೆ ನೀಡಿದ್ದರು. ಜತೆಗೆ ಇಂಥ ಯಾವ ದುಸ್ಸಾಹಸಕ್ಕೂ ತಕ್ಕ ಉತ್ತರ ನೀಡಲು ಪಾಕಿಸ್ತಾನ ಸೇನೆ ಸಿದ್ಧವಿದೆ ಎಂದು ಕೂಡ ಹೇಳಿದ್ದರು.