ಕೆಟ್ಟ ಮೇಲೆ ಬುದ್ಧಿ ಕಲಿತ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್
ಇಸ್ಲಮಾಬಾದ್, ಜನವರಿ.03: ಮಾಡುವುದು ಅನಾಚಾರ ಮನೆ ಮುಂದೆ ಬೃಂದಾವನ ಅಂತಾರಲ್ವಾ. ನೆರೆ ರಾಷ್ಟ್ರ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ರದ್ದು ಸೇಮ್ ಟು ಸೇಮ್ ಅದೇ ವರಸೆ. ಭಾರತವನ್ನು ಟೀಕಿಸುವ ಭರದಲ್ಲಿ ನೆಟ್ಟಿಗರ ಸಿಟ್ಟು ನೆತ್ತಿಗೇರಿಸಿದ್ದ ಪ್ರಧಾನಿಗೆ ಕೆಟ್ಟ ಮೇಲೆ ಬುದ್ಧಿ ಬಂದಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರುದ್ಧ ಭಾರತದಲ್ಲಿ ನಡೆದ ಉಗ್ರ ಹೋರಾಟವನ್ನು ಪಾಕಿಸ್ತಾನ ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿತ್ತು. ಉರಿಯುವ ಬೆಂಕಿಯಲ್ಲಿ ಮೈ ಕಾಸಿಕೊಳ್ಳಲು ಮುಂದಾದ ಪ್ರಧಾನಿಗೆ ನೆಟ್ಟಿಗರು ಸರಿಯಾಗಿ ನೀರಿಳಿಸಿದ್ದಾರೆ.
ಫೇಕ್ ವಿಡಿಯೋ ಹಾಕಿ ನೆಟ್ಟಿಗರಿಂದ ಉಗಿಸಿಕೊಂಡ ಇಮ್ರಾನ್ ಖಾನ್!
ಕಳೆದ ವರ್ಷ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಿದ್ದರು. ಈ ವಿಡಿಯೋಗಳನ್ನೇ ತಮ್ಮ ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದ ಪ್ರಧಾನಿ ಇಮ್ರಾನ್ ಖಾನ್, ಭಾರತದಲ್ಲೇ ಇಂಥದೊಂದು ಘಟನೆ ನಡೆದಿದೆ ಎಂದು ಬಿಂಬಿಸಿದ್ದರು.
ನೆಟ್ಟಿಗರಿಂದಲೇ ಬಯಲಾಯಿತು ಅಸಲಿ ಸತ್ಯ:
ಪಾಕಿಸ್ತಾನ್ ಪ್ರಧಾನಿಮಂತ್ರಿ ಇಮ್ರಾನ್ ಖಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದ ಪೋಸ್ಟ್ ಒಂದು ವರ್ಷ ಹಿಂದಿನದ್ದು ಎಂದು ನೆಟ್ಟಿಗರು ಸಾಬೀತುಪಡಿಸಿದರು. ಭಾರತದ ವಿರುದ್ಧ ದೂರಿದ ದುಷ್ಟಬುದ್ಧಿಗೆ ಸಾಮಾಜಿಕ ಜಾಲತಾಣಗಳಲ್ಲೇ ನೆಟ್ಟಿಗರು ಛೀಮಾರಿ ಹಾಕಿದರು. ಇದರಿಂದ ಎಚ್ಚೆತ್ತುಕೊಂಡ ಪ್ರಧಾನಿ ಇಮ್ರಾನ್ ಖಾನ್ ಇದೀಗ ತಾವು ಮಾಡಿದ್ದ ಪೋಸ್ಟ್ ನ್ನು ತಮ್ಮ ಖಾತೆಯಿಂದ ತೆಗೆದು ಹಾಕಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿಯಂತಹ ಭಾರತದ ಆಂತರಿಕ ವಿಚಾರದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಬಂದ ಪಾಕಿಸ್ತಾನ ಪ್ರಧಾನಮಂತ್ರಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗ ಅನುಭವಿಸಿದಂತೆ ಆಗಿದೆ.