ಇಮ್ರಾನ್ ಖಾನ್ ಹತ್ಯೆ ಸಂಚು; ಇಸ್ಲಾಮಾಬಾದ್ನಲ್ಲಿ 144 ಸೆಕ್ಷನ್ ಜಾರಿ
ಇಸ್ಲಾಮಾಬಾದ್, ಜೂನ್ 05; ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಇಸ್ಲಾಮಾಬಾದ್ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಇಸ್ಲಾಮಾಬಾದ್ ಪೊಲೀಸರು ಶನಿವಾರದಿಂದ ನಗರದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಅದರಲ್ಲಿಯೂ ಬನಿ ಗಲಾ ಪ್ರದೇಶದಲ್ಲಿ ಕಟ್ಟೆಚ್ಚರ ಕೈಗೊಳ್ಳಲಾಗಿದೆ. ಸೇನೆಗೆ ಸಹ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Imran Khan : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್: ಕ್ರಿಕೆಟ್, ರಾಜಕೀಯ ಜೀವನದ ಏರಿಳಿತ
ಪೊಲೀಸರು ಶನಿವಾರ ರಾತ್ರಿಯಿಂದಲೇ ಇಸ್ಲಾಮಾಬಾದ್ನಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಜನರು ಗುಂಪು ಸೇರುವುದು ಸೇರಿದಂತೆ ಅನೇಕ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ, ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ರಕ್ತಪಾತ ಆಗುತ್ತೆ ಅಂತ ಸುಮ್ಮನಾದೆ: ಇಮ್ರಾನ್ ಖಾನ್
ಬನಿ ಗಲಾ ಪ್ರದೇಶದಲ್ಲಿ ಇಮ್ರಾನ್ ಖಾನ್ ನಿವಾಸವಿದೆ. ಪಿಟಿಐ ಅಧ್ಯಕ್ಷರ ನಿವಾಸದ ಸುತ್ತಲೂ ಭದ್ರತೆ ಹೆಚ್ಚಿಸಲಾಗಿದೆ. ಈ ಪ್ರದೇಶಕ್ಕೆ ಆಗಮಿಸುವ ಜನರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಪೊಲೀಸರು ಪ್ರದೇಶದಲ್ಲಿ ವಿಶೇಷ ಭದ್ರತಾ ಪಹರೆ ನಿಯೋಜನೆ ಮಾಡಿದ್ದಾರೆ.
ಇಮ್ರಾನ್ ಖಾನ್ಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಪಾಕ್ ಪ್ರಧಾನಿ!
ಭಾನುವಾರ ಆಗಮಿಸುವ ನಿರೀಕ್ಷೆ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸದ್ಯ ದೇಶದಲ್ಲಿ ಇಲ್ಲ. ಭಾನುವಾರ ಅವರ ತಮ್ಮ ಪಕ್ಷದ ನಾಯಕರ ಜೊತೆ ಇಸ್ಲಾಮಾಬಾದ್ಗೆ ಆಗಮಿಸುವ ನಿರೀಕ್ಷೆ ಇದೆ. ಇಮ್ರಾನ್ ಖಾನ್ ಆಗಮನದ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಆದರೆ ಅವರು ಆಗಮಿಸಿದರೆ ಬನಿ ಗಲಾ ಪ್ರದೇಶದಲ್ಲಿ ವಾಸ್ತವ್ಯ ಹೂಡುತ್ತಾರೆ. ಆದ್ದರಿಂದ ಭದ್ರತೆ ಹೆಚ್ಚಿಸಲಾಗಿದೆ ಎಂದು ಇಸ್ಲಾಮಾಬಾದ್ ಪೊಲೀಸರು ಹೇಳಿದ್ದಾರೆ.
ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ
ಇಸ್ಲಾಮಾಬಾದ್ ಪೊಲೀಸರು ಬನಿ ಗಲಾ ಪ್ರದೇಶದ ಭದ್ರತೆಗೆ ವಿಶೇಷ ಪಡೆ ನಿಯೋಜನೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ವಾಸಮಾಡುವ ಜನರ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಗಾಗಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಸಂಬಂಧಿಯಿಂದ ಹೇಳಿಕೆ
ಇಸ್ಲಾಮಾಬಾದ್ ಪೊಲೀಸರು ಕಾನೂನಿನ ಪ್ರಕಾರವೇ ಇಮ್ರಾನ್ ಖಾನ್ಗೆ ಭದ್ರತೆ ನೀಡಲಿದ್ದಾರೆ. ಇಮ್ರಾನ್ ಖಾನ್ಗೆ ಜೀವ ಬೆದರಿಕೆ ಇದೆ ಎಂದು ಅವರ ಸಂಬಂಧಿಯೊಬ್ಬರು ಹೇಳಿದ್ದಾರೆ. ಮಾಜಿ ಪ್ರಧಾನಿಗೆ ಏನು ಬೇಕಾದರೂ ಆಗಬಹುದು ಎಂದು ಅವರು ಹೇಳಿದ್ದು, ಈ ಹೇಳಿಕೆ ಬಳಿಕ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
ಫವಾದ್ ಚೌಧರಿ ಹಿಂದೆಯೂ ಆರೋಪ ಮಾಡಿದ್ದರು
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂಬಂಧಿ ಫವಾದ್ ಚೌಧರಿ ಏಪ್ರಿಲ್ನಲ್ಲಿಯೂ ಇಮ್ರಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪ ಮಾಡಿದ್ದರು. ಈ ಆರೋಪದ ಬಳಿಕ ಪಾಕಿಸ್ತಾನ ಸರ್ಕಾರದ ಸೂಚನೆಯಂತೆ ಇಮ್ರಾನ್ ಖಾನ್ಗೆ ಭದ್ರತೆ ಹೆಚ್ಚಿಸಲಾಗಿದೆ. ಕಳೆದ ವಾರ ಇಸ್ಲಾಮಾಬಾದ್ ಚಲೋ ಎಂಬ ಜಾಥಾ ನಡೆಸಿದಾಗ ಬುಲೆಟ್ ಪ್ರೂಫ್ ಗಾಜು ಇರುವ ವಾಹನ ಬಳಕೆ ಮಾಡುವಂತೆ ಪೊಲೀಸರು ಸಲಹೆ ನೀಡಿದ್ದರು.
ಇಮ್ರಾನ್ ಖಾನ್ ವಿರುದ್ದ ಪ್ರಕರಣಕ್ಕೆ ಚಿಂತನೆ
ದೇಶದ ಮೇಲೆ ದಾಳಿಗೆ ಸಂಚು ರೂಪಿಸಿದ ಆರೋಪದಡಿ ಇಮ್ರಾನ್ ಖಾನ್, ಗಿಲ್ಗಿಟ್-ಬಾಲ್ಟಿಸ್ತಾನ ಹಾಗೂ ಖೈಬರ್ ಪಂಖ್ತುಖ್ವಾ ಪ್ರಾಂತ್ಯಗಳ ಮುಖ್ಯಮಂತ್ರಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಲು ಪಾಕ್ತಿಸ್ತಾನದ ಸರ್ಕಾರ ಚಿಂತನೆ ನಡೆಸಿದೆ. ಮೇ 25ರಂದು ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಗಲಭೆ ನಡೆದಿತ್ತು. ಇದು ಒಕ್ಕೂಟ ವ್ಯವಸ್ಥೆ ವಿರುದ್ಧ ಯೋಜಿಸಲಾದ ದಾಳಿಯಾಗಿತ್ತು ಎಂದು ಸರ್ಕಾರ ಆರೋಪ ಮಾಡಿದೆ.
ಪಾಕಿಸ್ತಾನದಲ್ಲಿ ಚುನಾವಣೆ ನಡೆಸಿ
ಇಮ್ರಾನ್ ಖಾನ್ ಪದಚ್ಯುತಿ ಬಳಿಕ ಪಾಕಿಸ್ತಾನದಲ್ಲಿ ಹೊಸ ಸರ್ಕಾರ ಆಸ್ತಿತ್ವಕ್ಕೆ ಬಂದಿದೆ. ಪಾಕಿಸ್ತಾನದಲ್ಲಿ ಶೀಘ್ರವೇ ಚುನಾವಣೆ ನಡೆಯಬೇಕು ಎಂದು ಇಮ್ರಾನ್ ಖಾನ್ ಆಗ್ರಹಿಸಿದ್ದಾರೆ. ಚುನಾವಣೆ ನಡೆಯದಿದ್ದರೆ ಜನರು ದಂಗೆ ಏಳಲಿದ್ದಾರೆ ಎಂದು ಅವರು ಹೊಸ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದರು. ಈಗ ದೇಶದಲ್ಲಿ ಇರುವುದು ನಿಜವಾದ ಸರ್ಕಾರವಲ್ಲ ಎಂದು ಇಮ್ರಾನ್ ಖಾನ್ ಟೀಕಿಸಿದ್ದರು.