ಆರಿಲ್ಲ ಇಮ್ರಾನ್ ಖಾನ್ ಹೊಟ್ಟೆಉರಿ! ಕಾಶ್ಮೀರ ಗುರಿಯಾಗಿಸಿ ಮತ್ತೆ ಟ್ವೀಟ್
ಇಸ್ಲಾಮಾಬಾದ್, ಆಗಸ್ಟ್ 22: ಅಂತಾರಾಷ್ಟ್ರೀಯ ಮಟ್ಟದಲ್ಲೂ ಚೀನಾ ಹೊರತುಪಡಿಸಿ ಯಾವ ದೇಶದ ಬೆಂಬಲ ದೊರೆಯದಿದ್ದರೂ ಪಾಕಿಸ್ತಾನ ಕಾಶ್ಮೀರ ವಿಷಯದಲ್ಲಿ ತಲೆಹಾಕುವುದನ್ನು ನಿಲ್ಲಿಸಿಲ್ಲ.
ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನವನ್ನು ಭಾರತ ಹಿಂಪಡೆದ ಲಾಗಾಯ್ತೂ ಬೆಂಕಿ ಉಗುಳುತ್ತಲೇ ಇರುವ ಇಮ್ರಾನ್ ಖಾನ್, ಇದೀಗ ಮತ್ತೆ ಟ್ವೀಟ್ ಗಳ ಮೂಲಕ ಭಾರತದ ನಿರ್ಧಾರದ ಬಗೆಗಿನ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ನಿರ್ಧಾರದಿಂದ ಕಾಶ್ಮೀರಿಗಳು ಸಂಕಟ ಅನುಭವಿಸುತ್ತಿದ್ದಾರೆ ಎಂಬರ್ಥದಲ್ಲಿ ಖಾನ್ ಟ್ವೀಟ್ ಮಾಡಿದ್ದಾರೆ.
ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಬೆದರಿಕೆ ಒಡ್ಡಿದ ಇಮ್ರಾನ್ ಖಾನ್ !
ಇಂದು 'ಧರ್ಮ ಮತ್ತು ನಂಬಿಕೆಯ ಹೆಸರಲ್ಲಿ ನಡೆವ ಹಿಂಸೆಯ ಸಂತ್ರಸ್ತರ ಅಂತಾರಾಷ್ಟ್ರೀಯ ದಿನ'ವಾಗಿದ್ದು, ಇದೇ ಮೊದಲ ಬಾರಿಗೆ ವಿಶ್ವ ಸಂಸ್ಥೆ ಆಗಸ್ಟ್ 22 ನ್ನು ಇಂಥ ಸಂತ್ರಸ್ತರಿಗಾಗಿ ಮೀಸಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ಕಾಶ್ಮೀರಿಗಳ ಮೇಲೆ ಭಾರತ ಹಿಂಸೆ ನಡೆಸುತ್ತಿದೆ ಎಂದು ದೂರಿದ್ದಾರೆ.
ವಿಶ್ವದ ಗಮನ ಸೆಳೆಯಬೇಕಿದೆ
"ಇಂದು ಧರ್ಮ ಮತ್ತು ನಂಬಿಕೆಯ ಹೆಸರಲ್ಲಿ ನಡೆವ ಹಿಂಸೆಯ ಸಂತ್ರಸ್ತರ ಅಂತಾರಾಷ್ಟ್ರೀಯ ದಿನವಾಗಿದ್ದು, ಭಾರತದಿಂದ ಹಿಂಸೆ ಅನುಭವಿಸಿತ್ತಿರುವ ಮಿಲಿಯನ್ ಗಟ್ಟಲೆ ಕಾಶ್ಮೀರಿಯರ ಕುರಿತು ಜಗತ್ತಿನ ಗಮನ ಸೆಳೆಯಲು ಬಯಸುತ್ತೇವೆ. ಭಾರತ ಅವರ ಮಾನವ ಹಕ್ಕುಗಳನ್ನು ಕಸಿಯುತ್ತಿದೆ. ಅವರ ಸ್ವತಂತ್ರವನ್ನು ಕಸಿಯಲಾಗಿದೆ" - ಇಮ್ರಾನ್ ಖಾನ್
ಉದ್ವಿಗ್ನತೆ ಶಮನಗೊಳಿಸಿ: ಮೋದಿ, ಇಮ್ರಾನ್ಗೆ ಟ್ರಂಪ್ ಕರೆ
ಕಾಶ್ಮೀರದಲ್ಲಿ ಹಿಂಸೆ ನಿಲ್ಲಲಿ
"ಕಾಶ್ಮೀರದಲ್ಲಿ ಧಾರ್ಮಿಕ ಆಚರಣೆಗಳಿಗೂ ಕಡಿವಾಣ ಹಾಕಲಾಗಿದೆ. ಈದ್ ಉಲ್ ಆಧಾ ಆಚರಣೆಗೂ ಅನುಮತಿ ನೀಡಲಾಗಿರಲಿಲ್ಲ. ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ನಡೆವ ಹಿಂಸೆಯ ವಿರುದ್ಧ ಇಂದು ಜಗತ್ತು ಒಗ್ಗಟ್ಟಾಗುತ್ತಿರುವ ಸಮಯದಲ್ಲಿ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಮಾರಣಹೋಮದ ಬಗ್ಗೆಯೂ ಗಮನಹರಿಸಬೇಕಿದೆ" - ಇಮ್ರಾನ್ ಖಾನ್
ಆರೆಸ್ಸೆಸ್ ಗೆ ತರಾಟೆ
"ಈಗಾಗಲೇ 4 ಮಿಲಿಯನ್ ಭಾರತೀಯ ಮುಸ್ಲಿಮರು ನಾಗರಿಕತ್ವ ರದ್ದು, ಹಿಂಸೆ ಮುಂತಾದವಿಗಳಿಗೆ ಬಲಿಪಶುವಾಗಿದ್ದಾರೆ. ಈ ಬಗ್ಗೆ ಜಗತ್ತು ಗಮನ ಹರಿಸಬೇಕು. ಇಲ್ಲವೆಂದರೆ ಆರೆಸ್ಸೆಸ್ ಪ್ರಚೋದಿತ ಹಿಂಸೆ, ಹತ್ಯೆ ಗಳು ನಡೆಯುತ್ತಲೇ ಇರುತ್ತವೆ" ಎಂದು ಕೆಲವು ದಿನಗಳ ಹಿಂದೆ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದರು. ಪಾಕ್ ಸಂಸತ್ತಿನಲ್ಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಧ್ವನಿ ಎತ್ತಿದ್ದರು.
ಪಾಕ್ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾದ ಇಮ್ರಾನ್ ಖಾನ್
ಚೀನಾದಿಂದ ಮಾತ್ರವೇ ಬೆಂಬಲ
"ಕಾಶ್ಮೀರ ಭಾರತದ ಆಂತರಿಕ ವಿಷಯವಾಗಿದ್ದು, ನಮ್ಮ ಬೆಂಬಲ ಭಾರತಕ್ಕಿದೆ. ಉಭಯ ದೇಶಗಳೂ ಈ ಉದ್ವಿಗ್ನತೆಯನ್ನು ಶಾಂತಿಯಿಂದ ಬಗೆಹರಿಸಿಕೊಳ್ಳಬೇಕು" ಎಂದು ರಷ್ಯಾ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ಹೇಳಿವೆ. ಇದುವರೆಗೆ ಪಾಕಿಸ್ತಾನದ ಪರ ನಿಂತ ದೇಶವೆಂದರೆ ಚೀನಾ ಮಾತ್ರ. ಇಷ್ಟಾದರೂ ಪಾಕಿಸ್ತಾನ ವಿಶ್ವದ ಗಮನ ಸೆಳೆಯುತ್ತೇವೆ ಎನ್ನುತ್ತಿದ್ದು, ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯುವುದಾಗಿ ಘೋಷಿಸಿದೆ.