ಭಾರತ ಬಾಲಕೋಟ್ ಏರ್ ಸ್ಟ್ರೈಕ್ ನಡೆಸಿದ್ದು ಸತ್ಯ: ಒಪ್ಪಿಕೊಂಡ ಇಮ್ರಾನ್ ಖಾನ್
ಇಸ್ಲಾಮಾಬಾದ್, ಆಗಸ್ಟ್ 15: "ಭಾರತ ಪಾಕಿಸ್ತಾನದ ಬಾಲಕೋಟ್ ನಲ್ಲಿ ಏರ್ ಸ್ಟ್ರೈಕ್ ನಡೆಸಿದ್ದು ಸತ್ಯ" ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ ನಲ್ಲಿ ನಡೆದ ಶಾಸಕಾಂಗ ಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಇಮ್ರಾನ್ ಖಾನ್, "ಭಾರತವು ಫೆಬ್ರವರಿಯಲ್ಲಿ ಬಾಲಕೋಟ್ ನಲ್ಲಿ ನಡೆಸಿದ್ದ ಏರ್ ಸ್ಟ್ರೈಕ್ ಗಿಂತಲೂ ಭಯಾನಕವಾದ ದಾಳಿಯನ್ನು ಪಾಕಿಸ್ತಾನದೊಳಗೆ ನಡೆಸಲು 'ಸಂಚು' ರೂಪಿಸಿದೆ. ಕಾಶ್ಮೀರ ವಿಷಯದಲ್ಲಿ ಉಭಯ ದೇಶಗಳ ನಡುವೆ ಎದ್ದಿರುವ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ" ಎಂದರು.
ಯುದ್ಧಕ್ಕೆ ಸಿದ್ಧ: ಪಾಕ್ ಸ್ವಾತಂತ್ರ್ಯದಿನದಂದು ಭಾರತಕ್ಕೆ ಇಮ್ರಾನ್ ಖಾನ್ ಬೆದರಿಕೆ!
ಕಾಶ್ಮೀರದ ಕುರಿತು ಒಗ್ಗಟ್ಟನ್ನು ವ್ಯಕ್ತಪಡಿಸುವ ಸಲುವಾಗಿಯೇ ಈ ಸಭೆಯನ್ನು ಏರ್ಪಡಿಸಲಾಗಿತ್ತು. "ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಅವರು(ಭಾರತ) ತೆಗೆದುಕೊಂಡ ನಿರ್ಧಾರ ವಿಶ್ವದ ಗಮನಕ್ಕೆ ಬಂದಿದೆ. ಆದ್ದರಿಂದ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಬೇರೊಂದು ದಾಳಿಗೆ ಭಾರತ ಸಿದ್ಧವಾಗಿದೆ" ಎಂದು ಖಾನ್ ಹೇಳಿದರು.
ಪುಲ್ವಾಮಾ ದಾಳಿಯಲ್ಲಿ ಪಾಕ್ ಕೈವಾಡ ಒಪ್ಪಿಕೊಂಡಿದ್ದ ಖಾನ್
ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಭಾರತದ ನಿರ್ಧಾರವನ್ನು ಪಾಕಿಸ್ತಾನದ ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ಮಾತನಾಡುವಾಗ ವಿರೋಧಿಸಿದ್ದ ಇಮ್ರಾನ್ ಖಾನ್, "ಭಾರತದ ಈ ನಡೆಯಿಂದ ಅದು ಮತ್ತೊಂದು ಪುಲ್ವಾಮಾ ದಾಳಿಯನ್ನು ಎದುರಿಸಬೇಕಾಗಬಹುದು" ಎಂಬ ಹೇಳಿಕೆ ನೀಡಿದ್ದರು. ಈ ಮೂಲಕ ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬುದನ್ನು ಅವರೇ ಒಪ್ಪಿಕೊಂಡಿದ್ದರು!
ಸ್ವಾತಂತ್ರ್ಯದಿನದ ಭಾಷಣದಲ್ಲೂ ಕಾಶ್ಮೀರದ ಜಪ!
ಬುಧವಾರ, ಪಾಕ್ ಸ್ವಾತಂತ್ರ್ಯ ದಿನದಂದು ಮಾತನಾಡಿದ್ದ ಇಮ್ರಾನ್ ಖಾನ್, "ಕಾಶ್ಮೀರದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ಪಾಕಿಸ್ತಾನ ಸುಮ್ಮನಿರುವುದಿಲ್ಲ. ಕಾಶ್ಮೀರದಲ್ಲಿ ಶಾಂತಿ ನೆಲೆಸುವುದಕ್ಕೆ ಎಂದಿಗೂ ಸಾಧ್ಯವಿಲ್ಲ. ಈಗ ವಿಧಿಸಿರುವ ನಿಷೇಧಾಜ್ಞೆಯನ್ನು ಒಮ್ಮೆ ಸಡಿಲಿಸಿ ನೋಡಿ. ಜನ ಬೀದಿಗಿಳಿದು ಹೋರಾಡುತ್ತಾರೆ" ಎಂದು ಭಾರತಕ್ಕೆ ಬೆದರಿಕೆ ಒಡ್ಡಿದ್ದವರು. ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದುದ್ದಕ್ಕೂ ಭಾರತ ಮತ್ತು ಕಾಶ್ಮೀರವನ್ನೇ ಜಪಿಸಿದರು ಖಾನ್.
"ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಸಾಬೀತುಪಡಿಸಿದ ಇಮ್ರಾನ್ ಖಾನ್!"
ಯುದ್ಧಕ್ಕೆ ಸಿದ್ಧ
"ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಲು ಭಾರತ ಮುಂದಾಗಿದೆ ಎಂಬ ಸ್ಪಷ್ಟ ಮಾಹಿತಿ ನಮಗೆ ಲಭ್ಯವಿದೆ. ಪಾಕ್ ಸೇನೆ ಈಗಾಗಲೇ ಯುದ್ಧಕ್ಕೆ ಸಿದ್ಧವಾಗಿದೆ. ನಾವು ಭಾರತವನ್ನು ಎದುರಿಸಲು ಸಿದ್ಧರಿದ್ದೇವೆ" ಎಂದು ಖಾನ್ ಹೇಳಿದ್ದಾರೆ.
ಕತ್ತಿಮಸೆಯುತ್ತಿರುವ ಪಾಕಿಸ್ತಾನ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ನರೇಂದ್ರ ಮೋದಿ ನೇತ್ರತ್ವದ ಎನ್ ಡಿಎ ಸರ್ಕಾರ ರದ್ದುಗೊಳಿಸಿತು. ಈ ಬೆಳವಣಿಗೆಯ ನಂತರ ಭಾರತದ ವಿರುದ್ಧ ಕತ್ತಿಮಸೆಯುತ್ತಿರುವ ಪಾಕಿಸ್ತಾನ, 'ಕಾಶ್ಮೀರದ ವಿಷಯದಲ್ಲಿ ಭಾರತ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವಂತಿಲ್ಲ' ಎಂದು ವಿಶ್ವಸಂಸ್ಥೆಯ ಮೊರೆಹೋಗಿದೆ. ಆದರೆ ಚೀನಾವನ್ನು ಹೊರತುಪಡಿಸಿದರೆ ಬೇರೆ ಯಾವ ದೇಶಗಳೂ ಇದುವರೆಗೆ ಪಾಕಿಸ್ತಾನದ ಬೆಂಬಲಕ್ಕೆ ನಿಂತಿಲ್ಲ.