ಭಾಯ್ ಭಾಯ್ ಎನ್ನುತ್ತಿದ್ದವರೇ ಭಾರತದ ವಿರುದ್ಧ ಸಿಡಿದಿದ್ದೇಕೆ?
ಕಠ್ಮಂಡು, ನವೆಂಬರ್.18: ಭಾರತಕ್ಕೆ ಭಾಯಿ ಭಾಯಿ ಎನ್ನುತ್ತಿದ್ದ ನೇಪಾಳ ಈಗ ಭಾರತದ ವಿರುದ್ಧವೇ ಕೆರಳಿದೆ. ಭಾರತ ಎಂದರೆ ಎದ್ದುನಿಂತು ಕೈ ಮುಗಿಯುತ್ತಿದ್ದ ಆ ದೇಶದ ಪ್ರಜೆಗಳು ಇದೀಗ ಪ್ರತಿಭಟನೆಗೆ ಇಳಿದು ಬಿಟ್ಟಿದ್ಜಾರೆ.
ಅಚ್ಚರಿ ಅನಿಸಿದರೂ ಇದು ಸತ್ಯ. ನೇಪಾಳದಲ್ಲಿ ಭಾರತದ ವಿರುದ್ಧ ಪ್ರಜೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಜೆಗಳಷ್ಟೇ ಅಲ್ಲದೇ, ನೇಪಾಳ ಪ್ರಧಾನಮಂತ್ರಿ ಕೆ.ಪಿ.ಓಲಿ ಕೂಡಾ ಭಾರತದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದೇ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಭಾರತದ ಹೊಸ ನಕ್ಷೆ.
"ನೇಪಾಳದಿಂದ ನುಸುಳಿ ಬಂದ ಪಾಕ್ ಉಗ್ರರಿಂದ ಆಯೋಧ್ಯೆಗೆ ಅಪಾಯ"
ಕೇಂದ್ರ ಸರ್ಕಾರ ಕಳೆದ ನವೆಂಬರ್.02ರಲ್ಲಿ ಭಾರತದ ಹೊಸ ನಕ್ಷೆಯನ್ನು ರಿಲೀಸ್ ಮಾಡಿದೆ. ಇದರಲ್ಲಿ ನೇಪಾಳಕ್ಕೆ ಸೇರಿದ ಪ್ರದೇಶವನ್ನು ಭಾರತದ ನಕ್ಷೆಯಲ್ಲಿ ಸೇರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ನೇಪಾಳದಲ್ಲಿ ಭಾರತದ ನಡೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ.
ಕಲಪನಿ ಬೇಕೆಂದು ಕೆರಳಿದರಾ ನೇಪಾಳಿಗರು?
ಕಲಪನಿ, ಸದ್ಯ ಭಾರತ ಹಾಗೂ ನೇಪಾಳದ ನಡುವೆ ವಿವಾದಕ್ಕೆ ಕಾರಣವಾಗಿರುವ ಪ್ರದೇಶ. ಭಾರತ-ಟಿಬೆಟ್-ನೇಪಾಳದ ಗಡಿಯಲ್ಲಿರುವ ಈ ಪ್ರದೇಶವು ನೇಪಾಳಕ್ಕೆ ಸೇರಿದ್ದಾಗಿದೆ. ಆದರೆ, ಕೇಂದ್ರ ಸರ್ಕಾರ ಇತ್ತೀಚಿಗೆ ಬಿಡುಗಡೆಗೊಳಿಸಿರುವ ನಕ್ಷೆಯಲ್ಲಿ ನೇಪಾಳಕ್ಕೆ ಸೇರಿದ ಕಲಪನಿ ಪ್ರದೇಶವನ್ನು ಉತ್ತರಾಖಂಡ್ ನ ಪಿಥೋಘರ್ ಜಿಲ್ಲೆಗೆ ಸೇರ್ಪಡೆಗೊಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಭಾರತದ ನಕ್ಷೆ ಕಂಡು ಕೆ.ಪಿ.ಓಲಿ ಗಲಿಬಿಲಿ!
ಭಾರತದ ಹೊಸ ನಕ್ಷೆಯನ್ನು ಕಂಡು ನೇಪಾಳದ ಪ್ರಧಾನಮಂತ್ರಿ ಕೆ.ಪಿ.ಓಲಿ ಗಲಿಬಿಲಿಗೊಂಡಿದ್ದಾರೆ. ಕಲಪನಿಯಲ್ಲಿ ಭಾರತ ನಿಯೋಜಿಸಿರುವ ಸೇನೆಯನ್ನು ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದು ಓಲಿ ಆಗ್ರಹಿಸಿದ್ದಾರೆ. ಅಲ್ಲದೇ ನೇಪಾಳದಲ್ಲಿ ವ್ಯಕ್ತವಾಗಿರುವ ವಿರೋಧಕ್ಕೆ ಪ್ರಧಾನಮಂತ್ರಿ ಸಹಮತ ವ್ಯಕ್ತಪಡಿಸಿದ್ದಾರೆ. ದೇಶದ ಸಾರ್ವಭೌಮತೆ, ಏಕತೆ ವಿಚಾರದಲ್ಲಿ ತಾವು ಸದಾ ಪ್ರಜೆಗಳಿಗೆ ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನವನ್ನು ಚೆಕ್ ಮೇಟ್ ಮಾಡಿದ ವಿದೇಶಾಂಗ ಸಚಿವ ಜೈಶಂಕರ್!
ಭಾರತ-ನೇಪಾಳ ಗಡಿಯಲ್ಲಿ ಬದಲಾವಣೆಯಿಲ್ಲ!
ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ನಕ್ಷೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಸ್ಪಷ್ಟನೆ ನೀಡಿದ್ದರು. ನೆರೆರಾಷ್ಟ್ರದ ಗಡಿ ವಿಚಾರದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುತ್ತಿವೆ. ಆ ಮೂಲಕ ಭಾರತದ ಜೊತೆಗಿನ ನೆರೆರಾಷ್ಟ್ರಗಳ ಮಧ್ಯೆದಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ರವೀಶ್ ಕುಮಾರ್ ದೂರಿದ್ದರು.
ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಇದೆಂಥಾ ಕೆಟ್ಟ ಹಠ?
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಅನ್ನೋ ಹಾಗೆ ಭಾರತದ ವಿಚಾರದಲ್ಲಿ ಪಾಕಿಸ್ತಾನ ಕೇವಲ ತಪ್ಪುಗಳನ್ನು ಹುಡುಕುವ ಕೆಲಸವನ್ನೇ ಮಾಡುತ್ತಿರುತ್ತದೆ. ಸದ್ಯ ಭಾರತದ ಹೊಸ ನಕ್ಷೆ ಕೂಡಾ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ಏಕೆಂದರೆ ಪಾಕಿಸ್ತಾನ್ ಆಕ್ರಮಿತ ಕಾಶ್ಮೀರವನ್ನು ಹೊಸ ನಕ್ಷೆಯಲ್ಲಿ ಭಾರತದ ಗಡಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಇದನ್ನು ಪಾಕ್ ಕೂಡ ವಿರೋಧಿಸುತ್ತಿದೆ.