ನಾನೇ ಕಾನೂನುಬದ್ಧ ಅಫ್ಘಾನ್ ಉಸ್ತುವಾರಿ ಅಧ್ಯಕ್ಷ; ಅಮರುಲ್ಲಾ ಸಲೇಹ್
ಕಾಬೂಲ್, ಆಗಸ್ಟ್ 18: ಕಾಬೂಲ್ ನಗರವನ್ನು ತಾಲಿಬಾನ್ ಉಗ್ರರು ಆಕ್ರಮಿಸಿಕೊಳ್ಳುತ್ತಿದ್ದಂತೆ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ್ದಾರೆ. ಈ ನಡುವೆ "ನಾನು ದೇಶದ ಕಾನೂನುಬದ್ಧ ಉಸ್ತುವಾರಿ ಅಧ್ಯಕ್ಷ" ಎಂದು ಅಫ್ಘಾನ್ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ.
ಮಂಗಳವಾರ ಈ ಕುರಿತು ಟ್ವೀಟ್ ಮಾಡಿರುವ ಉಪಾಧ್ಯಕ್ಷ ಅಮರುಲ್ಲಾ ಸಲೇಹ್, "ಈ ಘೋಷಣೆ ಮಾಡಲು ಅಫ್ಘಾನ್ ಸಂವಿಧಾನ ನನಗೆ ಅಧಿಕಾರ ನೀಡಿದೆ" ಎಂದು ಹೇಳಿಕೊಂಡಿದ್ದಾರೆ.
"ಅಫ್ಘಾನಿಸ್ತಾನದ ಸಂವಿಧಾನದ ಪ್ರಕಾರ, ಅಧ್ಯಕ್ಷನ ಅನುಪಸ್ಥಿತಿ, ಪಲಾಯನ, ರಾಜೀನಾಮೆ ಅಥವಾ ಸಾವಿನ ನಂತರ ಉಪಾಧ್ಯಕ್ಷನೇ ಕಾನೂನುಬದ್ಧವಾಗಿ ಉಸ್ತುವಾರಿ ಅಧ್ಯಕ್ಷನಾಗುತ್ತಾನೆ. ಅದರಂತೆ ನಾನು ಪ್ರಸ್ತುತ ದೇಶದಲ್ಲಿದ್ದೇನೆ. ಹೀಗಾಗಿ ನಾನೇ ಉಸ್ತುವಾರಿ ಅಧ್ಯಕ್ಷ. ಎಲ್ಲಾ ಮುಖಂಡರ ಬೆಂಬಲ ಪಡೆಯಲು ಮುಂದಾಗಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಸರ್ಕಾರ ನಡೆಸುವ ನಿಟ್ಟಿನಲ್ಲಿ ಎಲ್ಲಾ ನಾಯಕರ ಬೆಂಬಲ ಹಾಗೂ ಒಮ್ಮತ ಪಡೆಯಲು ಮುಂದಾಗಿದ್ದೇನೆ ಎಂದಿದ್ದಾರೆ.
ಅಫ್ಘಾನ್ ವಶಪಡಿಸಿಕೊಂಡ ಬಳಿಕ ತಾಲಿಬಾನ್ ಮೊದಲ ಸುದ್ದಿಗೋಷ್ಠಿ
ಕಾಬೂಲ್ ಮೇಲೆ ತಾಲಿಬಾನ್ ಉಗ್ರರು ಆಕ್ರಮಣ ನಡೆಸಿದ ಬಳಿಕ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಹಾಗೂ ಶಾಂತಿ ಮಂಡಳಿ ಮುಖ್ಯಸ್ಥ ಅಬ್ದುಲ್ಲಾ ಸೇರಿದಂತೆ ಅಫ್ಘಾನ್ನ ಹಲವು ನಾಯಕರು ತಾಲಿಬಾನಿಗಳ ಜೊತೆ ಮಾತುಕತೆ ಮುಂದುವರೆಸಿದ್ದಾರೆ.
ಸದ್ಯ ಅಜ್ಞಾತ ಸ್ಥಳದಲ್ಲಿರುವ ಸಲೇಹ್, "ಯಾವುದೇ ಸನ್ನಿವೇಶದಲ್ಲಿಯೂ ತಾಲಿಬಾನ್ ಉಗ್ರರ ಮುಂದೆ ತಲೆಬಾಗುವುದಿಲ್ಲ" ಎಂದು ಹೇಳಿದ್ದಾರೆ. 2001ರ ದಾಳಿಯಲ್ಲಿ ಹತ್ಯೆಯಾಗಿದ್ದ ಉತ್ತರ ಒಕ್ಕೂಟದ ಮುಖಂಡ ಅಹಮದ್ ಶಾ ಮಸೂದ್ಗೆ ಎಂದಿಗೂ ದ್ರೋಹ ಬಗೆಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
20 ವರ್ಷಗಳ ನಂತರ ಅಫ್ಘಾನ್ನಿಂದ ಅಮೆರಿಕ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಮಾಡಿ ಅಫ್ಘಾನಿಸ್ತಾನನ್ನು ವಶಪಡಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕಳೆದ ಕೆಲವು ತಿಂಗಳಿಂದ, ಅಂದರೆ ಅಮೆರಿಕ ಮಿಲಿಟರಿ ಹೊರ ಹೋಗಲು ತೀರ್ಮಾನಿಸಿದ ಬಳಿಕ, ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗಿತ್ತು. ತಾಲಿಬಾನ್ನ ಸಶಸ್ತ್ರದಳ ಅನೇಕ ಪ್ರದೇಶಗಳಿಗೆ ನುಗ್ಗಿ ಹಿಂಸೆ ನಡೆಸುತ್ತಿತ್ತು.
ಕಾಬೂಲ್ ನಗರವನ್ನು ತಾಲಿಬಾನ್ ಉಗ್ರರು ಆಕ್ರಮಿಸಿಕೊಳ್ಳುತ್ತಿದ್ದಂತೆ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ್ದಾರೆ.
ಮಹಿಳೆಯರಿಗೂ ಉತ್ತಮ ಸ್ಥಾನಮಾನ..! ಅರೆರೆ.. ಇದು ತಾಲಿಬಾನ್ ವ್ಯಾಖ್ಯಾನ..!
ಮಂಗಳವಾರ, ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ನಂತರ ಮೊದಲ ಬಾರಿಗೆ ಕಾಬೂಲ್ನ ಸರ್ಕಾರಿ ಮಾಧ್ಯಮ ಮತ್ತು ಮಾಹಿತಿ ಕೇಂದ್ರದಲ್ಲಿ ತಾಲಿಬಾನ್ ಸುದ್ದಿಗೋಷ್ಠಿ ನಡೆಸಿದೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್, "ನೆರೆಹೊರೆಯ ರಾಷ್ಟ್ರಗಳ ವಿರುದ್ಧ ದುಷ್ಕೃತ್ಯ ಎಸಗಲು ನಮ್ಮ ನೆಲವನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೆ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದೇವೆ. ಅಂತರರಾಷ್ಟ್ರೀಯ ಸಮುದಾಯವು ನಮ್ಮ ಸರ್ಕಾರವನ್ನು ಗುರುತಿಸಬೇಕು" ಎಂದು ಮುಜಾಹಿದ್ ಹೇಳಿದ್ದಾರೆ.
"ದೇಶದ ಉಳಿದ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ಕಾಬೂಲ್ನಲ್ಲಿ ಅಸ್ತಿತ್ವ ಸ್ಥಾಪಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ದುರದೃಷ್ಟವಶಾತ್, ಈ ಹಿಂದಿನ ಸರ್ಕಾರವು ಅಸಮರ್ಥವಾಗಿತ್ತು. ಅವರಿಗೆ ಭದ್ರತೆ ನೀಡಲು ಸಾಧ್ಯವಾಗಲಿಲ್ಲ. ನಾವು ಈಗ ಎಲ್ಲಾ ವಿದೇಶಿ ಸಂಸ್ಥೆಗಳಿಗೆ ಭದ್ರತೆ ಒದಗಿಸುತ್ತೇವೆ. ನಾವು ಅಫ್ಘಾನಿಸ್ತಾನದ ಒಳಗೆ ಅಥವಾ ಹೊರಗೆ ಯಾವುದೇ ಶತ್ರುಗಳನ್ನು ಹುಡುಕುವುದಿಲ್ಲ," ಎಂದಿದ್ದಾರೆ.
"ನಮ್ಮ ರಾಷ್ಟ್ರವು ಮುಸ್ಲೀಂ ರಾಷ್ಟ್ರವಾಗಿದೆ, ಅದು 20 ವರ್ಷಗಳ ಹಿಂದೆಯೇ ಆಗಿರಬಹುದು ಅಥವಾ ಇಂದೇ ಆಗಿರಬಹುದು. ಆದರೆ 20 ವರ್ಷಗಳ ಹಿಂದಿನ ಪರಿಸ್ಥಿತಿಗೂ ಇಂದಿನ ಸ್ಥಿತಿಗತಿಗೂ ತುಂಬಾ ವ್ಯತ್ಯಾಸವಿದೆ. ಸರ್ಕಾರ ರಚನೆ ಪ್ರಕ್ರಿಯೆ ಮುಗಿದ ನಂತರದಲ್ಲಿ ಕಾನೂನುಗಳ ಬಗ್ಗೆ ಮಾತನಾಡಲಾಗುವುದು," ಎಂದಿದ್ದರು.
Recommended Video