ಮೋದಿಗೆ ಹೇಗೆ ಉತ್ತರ ಕೊಡಬೇಕು ನಾನು ತೋರಿಸ್ತೀನಿ: ಇಮ್ರಾನ್ ಖಾನ್
ಲಾಹೋರ್, ಸೆಪ್ಟೆಂಬರ್ 29: ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ದಾಳಿ ನಡೆಸಿ, ಇಬ್ಬರು ಸೈನಿಕರನ್ನು ಕೊಂದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ, ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್, ಭಾರತದ ಪ್ರಧಾನಿ ಮೋದಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ನವಾಜ್ ಷರೀಫ್ ಗೆ ರಾಯ್ ವಿಂಡ್ ಮೆರವಣಿಗೆಯಲ್ಲಿ ತೋರಿಸ್ತೀನಿ ಎಂದಿದ್ದಾರೆ.
ಮೊದಲು ನಾನು ಸಂದೇಶ ಕಳುಹಿಸಬೇಕು ಅಂದುಕೊಂಡಿದ್ದು ನವಾಜ್ ಷರೀಫ್ ಗೆ. ಅದರೆ ನಾಳೆ ಮೋದಿಗೂ ಸಂದೇಶ ಕಳಿಸ್ತೀನಿ ಎಂದಿದ್ದಾರೆ. ನಿಗದಿಯಂತೆ ಸೆ.30ರಂದು ಮೆರವಣಿಗೆ ನಡೆಯುತ್ತದೆ. ಪಾಕಿಸ್ತಾನಿಯರೆಲ್ಲ ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಬೇಕು ಎಂದಿದ್ದಾರೆ.[ಉಗ್ರರ ಮೇಲೆ ದಾಳಿ #Modipunishespak ಟ್ರೆಂಡಿಂಗ್]
ಈ ತಿಂಗಳ ಆರಂಭದಲ್ಲೇ ರಾಯ್ ವಿಂಡ್ ಮೆರವಣಿಗೆ ಸೆ.30ರಂದು ನಡೆಯುತ್ತದೆ ಎಂದು ಇಮ್ರಾನ್ ಘೋಷಿಸಿದ್ದರು. ನವಾಜ್ ಷರೀಫ್ ಗೆ ಆಡಳಿತ ನಡೆಸಲು ಆಗುತ್ತಿಲ್ಲ. ಜನರಲ್ ರಹೀಲ್ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ನಾವು ಯಾವಾಗ ರಸ್ತೆಗೆ ಇಳಿಯಲು ನಿರ್ಧರಿಸುತ್ತೇವೋ ಭಯೋತ್ಪಾದಕರ ದಾಳಿಗಳಾಗಬಹುದು ಅಂತಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.['ಸರ್ಜಿಕಲ್ ಆಪರೇಷನ್' ಅಂದರೆ ಏನು ಗೊತ್ತಾ?]
ಸೆ.30ರಂದು ನಡೆಯುವ ರಾಯ್ ವಿಂಡ್ ಪ್ರತಿಭಟನಾ ಮೆರವಣಿಗೆ ಐತಿಹಾಸಿಕವಾದದ್ದು. ಯಾರಾದರೂ ಅದಕ್ಕೆ ತೊಂದರೆ ಕೊಡುವುದಕ್ಕೆ ಪ್ರಯತ್ನಿಸಿದರೆ ಹಿಂಸಾಚಾರವೇ ಆಗಬಹುದು. ನವಾಜ್ ಷರೀಫ್ ಹಾಗೂ ಶಹಬಾಜ್ ಅದಕ್ಕೆ ಜವಾಬ್ದಾರರಾಗುತ್ತಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.