ದಾವೂದ್ ಜತೆ ಕಳಚಿಲ್ಲ ನಂಟು, ಬಾಯ್ಬಿಟ್ಟ ಛೋಟಾ ಶಕೀಲ್
ಇಸ್ಲಮಾಬಾದ್, ಡಿಸೆಂಬರ್ 14: ಭೂಗತ ಪಾತಕಿ ಛೋಟಾ ಶಕೀಲ್ ಬಾಯ್ಬಿಟ್ಟಿದ್ದಾನೆ. ತನ್ನ ಬಾಸ್, ಭೂಗತ ದೊರೆ ದಾವೂದ್ ಇಬ್ರಾಹಿಂ ಜತೆಗಿನ ಸಂಬಂಧ ಮುರಿದಿಲ್ಲ ಎಂಬ ಬಗ್ಗೆ ಆತ ಸ್ಪಷ್ಟನೆ ನೀಡಿದ್ದು 'ನಾನು ಭಾಯ್ ಜತೆಗಿದ್ದೇನೆ' ಎಂದು ಹೇಳಿದ್ದಾನೆ.
ಭೂಗತ ಪಾತಕಿಗಳ ನಡುವೆ ಕಡಿದುಹೋಯಿತೇ ಸಂಬಂಧ?
ಈ ಮೂಲಕ ನಮ್ಮಿಬ್ಬರ ನಡುವೆ ಯಾವುದೇ ಸಂಬಂಧ ಮುರಿದಿಲ್ಲ ಎಂದು ಛೋಟಾ ಶಕೀಲ್ ಸ್ಪಷ್ಟಪಡಿಸಿದ್ದಾನೆ. ಮಾತ್ರವಲ್ಲ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾನೆ.
ದಾವೂದ್ ಇಬ್ರಾಹಿಂ ಜತೆ ಛೋಟಾ ಶಕೀಲ್ ಸಂಬಂಧ ಮುರಿದುಕೊಂಡಿದ್ದಾನೆ ಎಂಬ ಸುದ್ದಿ ಬಂದಿತ್ತು. ಅಷ್ಟೇ ಅಲ್ಲದೆ ಕರಾಚಿಯಲ್ಲಿರುವ ದಾವೂದ್ ಮನೆ ಕ್ಲಿಫ್ಟನ್ ರೆಸಿಡೆನ್ಸ್ ನಿಂದ ಛೋಟಾ ಶಕೀಲ್ ಹೊರ ನಡೆದಿದ್ದಾನೆ ಎಂದೂ ಹೇಳಲಾಗಿತ್ತು. ಈ ಸಂಬಂಧ ಝೀ ಮೀಡಿಯಾಗೆ ಪ್ರತಿಕ್ರಿಯೆ ನೀಡಿರುವ ಛೋಟಾ ನಾನು ಭಾಯ್ ಜತೆಗೇ ಇದ್ದೇನೆ ಎಂದು ಹೇಳಿದ್ದಾನೆ.
ಈ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಗಮನ ಬೇರೆಡೆಗೆ ಸೆಳೆಯಲು ಈ ತಂತ್ರ ಹೂಡಿರಬಹುದೇ ಎಂಬ ವಿಷಯದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಅಧಿಕಾರಿಗಳ ಪ್ರಕಾರ ಡಿ-ಕಂಪನಿಯಲ್ಲಿ ಉತ್ತರಾಧಿಕಾರಿ ಕಲಹ ಹುಟ್ಟಿಕೊಂಡಿದೆ. ದಾವೂದ್ ತಮ್ಮ ಅನೀಸ್ ಜತೆ ಶಕೀಲ್ ಸಂಬಂಧ ಹಳಸಿದೆ. ಈ ಬಗ್ಗೆ ಡಾನ್ ಗೆ ಶಕೀಲ್ ದೂರು ಕೂಡ ನೀಡಿದ್ದಾನೆ ಎನ್ನಲಾಗಿದೆ.