ಸಾಲು ಸಾಲು ಟ್ವೀಟ್ ಮಾಡಿದ ಮಾತ್ರಕ್ಕೆ ನಿರ್ದೋಷಿಯಾಗುತ್ತಾರೆಯೇ ಮಲ್ಯ?
ಲಂಡನ್, ಜೂನ್ 27: 'ನಾನು ದೇಶ ಭ್ರಷ್ಟನಲ್ಲ. ಸಾಲ ತೀರಿಸಲು ಸಿದ್ಧನಿದ್ದೇನೆ' ಎಂದು 2016 ರಲ್ಲೇ ಮದ್ಯದ ದೊರೆ ವಿಜಯ ಮಲ್ಯ, ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಬಹಿರಂಗಗೊಳಿಸಿದ್ದು ಇದೀಗ ಸಾಕಷ್ಟು ಚರ್ಚೆಯಾಗುತ್ತಿರುವ ವಿಷಯ.
ಆದರೆ ಈ ಕುರಿತು ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸಹ ಅವರು ಆರೋಪಿಸಿದ್ದಾರೆ. ಇತ್ತ ಮಲ್ಯ ಪತ್ರದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದರೆ ಸಾಲು ಸಾಲು ಟ್ವೀಟ್ ಗಳ ಮೂಲಕ ತಾವು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ಮಲ್ಯ ಮುಂದಾಗಿದ್ದಾರೆ.
ಮೋದಿಗೆ ಪತ್ರ ಬರೆದು ನೋವು ತೋಡಿಕೊಂಡ ಮಲ್ಯ
'ನಾನು ನನ್ನ ಸಾಲ ತೀರಿಸಲು 2016 ರಿಂದಲೇ ಪ್ರಯತ್ನಿಸುತ್ತಿದ್ದೇನೆ. ಅಂದಮೇಲೆ ನಾನು ಹೇಗೆ ದೇಶಭ್ರಷ್ಟನಾಗುತ್ತೇನೆ? ಪ್ರಕರಣದ ವಿಚಾರಣೆ ಕರ್ನಾಟಕ ಹೈಕೋರ್ಟಿನಲ್ಲಿ ನಡೆಯುತ್ತಿದೆ. ನಾನು ಎಲ್ಲಾ ಮಾಹಿತಿಗಳನ್ನೂ ಕೋರ್ಟಿನ ಮುಂದೆ ಇಟ್ಟಿದ್ದೇನೆ' ಎಂದು ಮಲ್ಯ ಹೇಳಿದ್ದಾರೆ.
ಆದರೆ ದೇಶದ ವಿವಿಧ ಬ್ಯಾಂಕ್ ಗಳಲ್ಲಿ 9,000 ಕೋಟಿ ರೂ.ಗೂ ಹೆಚ್ಚು ಸಾಲ ಮಾಡಿ, ಗುಟ್ಟಾಗಿ ಪರದೇಶಕ್ಕೆ ಓಡಿಹೋದ ಮಲ್ಯ, ಸಾಲು ಸಾಲು ಟ್ವೀಟ್ ಮಾಡಿದ ಮಾತ್ರಕ್ಕೆ ನಿರ್ದೋಷಿಯಾಗಿ ಬಿಡುತ್ತಾರೆಯೇ?
ಕಿಂಗ್ ಫಿಷರ್ ಉದ್ಯೋಗಿಗಳಿಗೆ ಮದ್ಯದ ದೊರೆ ಮಲ್ಯ 'ಪ್ರೇಮ'ದ ಪತ್ರ!
ಮಲ್ಯ ಮಾಡಿದ ಸಾಲು ಸಾಲು ಟ್ವೀಟ್ ಗಳು ಇಲ್ಲಿವೆ...
|
ನಾನು ದೇಶಭ್ರಷ್ಟನಲ್ಲ!
'ನನಗೆ ದೇಶಭ್ರಷ್ಟ ಎಂದು ಹಣೆಪಟ್ಟಿ ಕಟ್ಟುವ ಕುರಿತು ನನ್ನ ಪ್ರತಿಕ್ರಿಯೆಯನ್ನು ಕೇಳಲಾಗುತ್ತದೆ. ಆದರೆ ನಾನು ಬ್ಯಾಂಕಿನ ಸಾಲ ತೀರಿಸಲು ಸಿದ್ಧನಿರುವಾಗ, ಈ ಕುರಿತ ಎಲ್ಲಾ ಮಾಹಿತಿಯನ್ನು ಕರ್ನಾಟಕ ಹೈಕೋರ್ಟ್ ಮುಂದೆ ಇಟ್ಟಿರುವಾಗ ದೇಶಭ್ರಷ್ಟನಾಗಲು ಹೇಗೆ ಸಾಧ್ಯ?' ಎಂದು ಮಲ್ಯ ಪ್ರಶ್ನಿಸಿದ್ದಾರೆ.
|
ನನ್ನದು ಪ್ರಾಮಾಣಿಕ ಪ್ರಯತ್ನ
ಕೆಲವರು ನನ್ನ ಪ್ರಾಮಾಣಿಕ ಉದ್ದೇಶವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸಾಲ ಮರುಪಾವತಿಗೆ ವಿಳಂಬ ಅಥವಾ ಮರುಪಾವತಿ ಮಾಡದೆ ಇರುವ ಯಾವ ಇಚ್ಛೆಯೂ ನನಗಿಲ್ಲ. ಈಗಾಗಲೇ ಹೈಕೋರ್ಟ್ ಮುಂದೆ ಎಲ್ಲಾ ಮಾಹಿತಿಯೂ ಇದೆ. ನ್ಯಾಯಾಂಗವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದಿದ್ದಾರೆ ಮಲ್ಯ!
|
ಇದು ನಾಟಕವಲ್ಲ
ನನ್ನನ್ನು ದೇಶಭ್ರಷ್ಟ ಎಂದು ಗುರುತಿಸಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ಬಂದ ವರದಿಯ ಆಧಾರದ ಮೇಲೆ ನಾನು ಈ ನಿರ್ಧಾರಕ್ಕೆ ಬಂದಿಲ್ಲ. ಹಾಗೆಂದುಕೊಂಡರೆ ಅದು ತಪ್ಪು. ನಾನು ಯಾವಾಗಲೂ ಸಾಲ ಮರುಪಾವತಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಅದಕ್ಕೆ ಸಾಕಷ್ಟು ಸಾಕ್ಷಿಗಳೂ ಇವೆ ಎಂದು ಸಹ ಅವರು ಟ್ವೀಟ್ ಮಾಡಿದ್ದಾರೆ.
|
ಸಿಬಿಐ ಮತ್ತು EDಗಳೇ ಅಡ್ಡಿಯಾಗಿವೆ!
ವಿವಿಧ ಬ್ಯಾಂಕುಗಳಲ್ಲಿರುವ ಸಾಲಗಳನ್ನು ಮರುಪಾವತಿ ಮಾಡಿಸಿಕೊಳ್ಳಲು ಸರ್ಕಾರ ಸಿಬಿಐ ಮತ್ತು ED ಗಳನ್ನು ಬಳಸಿಕೊಳ್ಳುತ್ತಿದೆ. ಆದರೆ ನಾನು ಕರ್ನಾಟಕ ಹೈಕೋರ್ಟ್ ಮುಂದೆ ನನ್ನೆಲ್ಲ ಆಸ್ತಿಯ ವಿವರ ನೀಡಿ, ಅದನ್ನು ಮಾರುವಂತೆ ಹೇಳಿದ್ದೇನೆ. ಇದರಿಂದ ಬ್ಯಾಂಕುಗಳು ಸಾಲ ಮರುಪಾವತಿ ಮಾಡಿಕೊಳ್ಳಬಹುದು. ಆದರೆ ಸಿಬಿಐ ಮತ್ತು ED ಗಳೇ ಇದಕ್ಕೆ ಅಡ್ಡಿ ಮಾಡುತ್ತಿವೆಯಲ್ಲ, ಏನು ಮಾಡುವುದು? ಎಂದು ಅವರು ಪ್ರಶ್ನಿಸಿದ್ದಾರೆ.