ಸೇನೆಯ ವಿರುದ್ಧ ಮೊಳಗಿದ ಆಕ್ರೋಶ, ಬೀದಿಗಿಳಿದ ಹೋರಾಟಗಾರರಿಂದ ಹಿಂಸಾಚಾರ
ಮ್ಯಾನ್ಮಾರ್ ಸೇನಾ ದಂಗೆ ವಿರೋಧಿಸಿ ಬೀದಿಗಿಳಿದಿರುವ ಹೋರಾಟಗಾರರು ಇಬ್ಬರ ಹತ್ಯೆಯ ನಂತರ ಭೀಕರ ಪ್ರತಿಭಟನೆಗೆ ಧುಮುಕಿದ್ದಾರೆ. ಮ್ಯಾನ್ಮಾರ್ ಸೇನೆಯ ವಿರುದ್ಧ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಇವರೆಲ್ಲಾ ಕರೆ ನೀಡಿದ್ದು, ನಮಗೆ ನಮ್ಮ ನಾಯಕಿ ಬೇಕು. ಪ್ರಜಾಪ್ರಭುತ್ವದ ಆಡಳಿತ ಬೇಕಿದೆ, ನೀಮ್ಮ ಆಡಳಿತ ನಮಗೆ ಅನಗತ್ಯ ಎಂಬ ಬಿತ್ತಿ ಚಿತ್ರಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ.
ಮ್ಯಾನ್ಮಾರ್ ಪ್ರಧಾನಿ ಆಂಗ್ ಸಾನ್ ಸೂಕಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳನ್ನ ತಕ್ಷಣ ಗೃಹ ಬಂಧನದಿಂದ ಬಿಡುಗಡೆ ಮಾಡಿ, ಇಲ್ಲವೆ ಮತ್ತಷ್ಟು ಉಗ್ರ ಹೋರಾಟ ನೋಡಬೇಕಾದೀತು ಎಂದು ಪ್ರತಿಭಟನಾಕಾರರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಗಲ್ಲಿಗಳಲ್ಲಿ ಮಷಿನ್ ಗನ್, ಟ್ಯಾಂಕರ್: ಮ್ಯಾನ್ಮಾರ್ ಪರಿಸ್ಥಿತಿ ಭಯಾನಕ..!
ಆಕ್ರೋಶದ ಕಿಚ್ಚು ಹಲವು ಪ್ರಾಂತ್ಯಗಳಿಗೆ ಹರಡಿದ್ದು, ಇಂಟರ್ನೆಟ್ ಮತ್ತು ಮೊಬೈಲ್ ನೆಟ್ವರ್ಕ್ ಕೆಲಸ ಮಾಡದಿದ್ದರೂ ಇಷ್ಟೊಂದು ಜನ ಪ್ರತಿಭಟನೆಗೆ ಧುಮುಕುತ್ತಿದ್ದಾರೆ. ಇದನ್ನು ಕಂಡು ಮ್ಯಾನ್ಮಾರ್ ಮಿಲಿಟರಿಯ ಅಧಿಕಾರಿಗಳು ಶಾಕ್ ಆಗಿದ್ದಾರೆ. ಎಷ್ಟೇ ಸರ್ಕಸ್ ಮಾಡಿದರೂ ಪರಿಸ್ಥಿತಿಯ ನಿಯಂತ್ರಣ ಅಸಾಧ್ಯ ಎಂಬಂತಾಗಿದ್ದು, ಮುಂದೆ ಏನು ಮಾಡುವುದು ಎಂಬುದೇ ಮ್ಯಾನ್ಮಾರ್ ಮಿಲಿಟರಿಗೆ ತೋಚದಾಗಿದೆ.
ಮಿಲಿಟರಿ ವಿರುದ್ಧ ಫೇಸ್ಬುಕ್ ರಿವೇಂಜ್..!
ಫೇಸ್ಬುಕ್ ಮ್ಯಾನ್ಮಾರ್ ಮಿಲಿಟರಿ ವಿರುದ್ಧ ರಿವೇಂಜ್ ತೆಗೆದುಕೊಂಡಿದೆ. ಸೇನೆಯ ಫೇಸ್ಬುಕ್ ಪೇಜ್ನ ಡಿಲೀಟ್ ಮಾಡಿ ಮ್ಯಾನ್ಮಾರ್ ಮಿಲಿಟರಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ಪ್ರತಿಭಟನೆ ನಡೆಸುತ್ತಿದ್ದವರ ಹತ್ಯೆ ಬಳಿಕ ವಿಶ್ವಸಂಸ್ಥೆ ತೀವ್ರ ಖಂಡನೆ ವ್ಯಕ್ತಪಡಿಸಿತ್ತು. ವಿಶ್ವಸಂಸ್ಥೆ ಪ್ರತಿಕ್ರಿಯೆ ಬಳಿಕ ಫೇಸ್ಬುಕ್ ಈ ಕ್ರಮ ಕೈಗೊಂಡಿದೆ. ನಿನ್ನೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಅನಗತ್ಯವಾಗಿ ಕೆಣಕಿ, ಇಬ್ಬರನ್ನು ಕೊಂದು ಹಾಕಿದ್ದರು ಮ್ಯಾನ್ಮಾರ್ನ ಭದ್ರತಾ ಅಧಿಕಾರಿಗಳು. ಅದರಲ್ಲೂ ಓರ್ವ ಮಹಿಳೆ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದ ಗಂಭೀರ ಆರೋಪ ಪ್ರತಿಭಟನೆಯ ದಿಕ್ಕನ್ನೇ ಬದಲಿಸಿಬಿಟ್ಟಿತು. ಜನರು ಇಷ್ಟು ದಿನ ಸುಮ್ಮನಿದ್ದ ಕ್ಷಣ ಬಂದೇ ಬಿಟ್ಟಿತು. ಭದ್ರತಾ ಪಡೆಗಳ ವಿರುದ್ಧ ಕಿಚ್ಚು ಹೊತ್ತಿಸಲು ಈ ಘಟನೆ ಕಾರಣವಾಯಿತು. ನಮ್ಮವರನ್ನು ಕೊಂದಿದ್ದು ಏಕೆ..? ಎಂದು ಜಗಳಕ್ಕೆ ಇಳಿದ ಪ್ರತಿಭಟನಾಕಾರರು, ನೋಡ ನೋಡುತ್ತಿದ್ದಂತೆ ಸೇನೆ ವಿರುದ್ಧ ತಿರುಗಿಬಿದ್ದರು.
ಗಲ್ಲಿ ಗಲ್ಲಿಯಲ್ಲೂ ಮಷಿನ್ ಗನ್..!
ಈ ನಡುವೆ ಸೇನಾ ದಂಗೆ ಪರವಾಗಿ ಹಾಗೂ ವಿರುದ್ಧವಾಗಿ ಹೋರಾಟಗಳು ಭುಗಿಲೆದ್ದಿರುವುದು ಮ್ಯಾನ್ಮಾರ್ನ ತತ್ತರಿಸುವಂತೆ ಮಾಡಿದೆ. ಆದರೆ ಇದನ್ನೆಲ್ಲಾ ನೋಡಿ ತಣ್ಣಗೆ ಕೂರೋದಕ್ಕೆ ಮ್ಯಾನ್ಮಾರ್ ಈಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ. ಮೇಲಾಗಿ ಅಲ್ಲೊಂದು ಸರ್ಕಾರವೇ ಇಲ್ಲ. ಎಲ್ಲವನ್ನೂ ಮಿಲಿಟರಿ ಅಧಿಕಾರಿಗಳು ತಮ್ಮ ಬಿಗಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಹೋರಾಟ ಹತ್ತಿಕ್ಕಲು ಮ್ಯಾನ್ಮಾರ್ ಮಿಲಿಟರಿ ಗಲ್ಲಿ ಗಲ್ಲಿಗಳಲ್ಲೂ ಭಾರಿ ಪ್ರಮಾಣದ ಗನ್ ಹಾಗೂ ಯುದ್ಧ ಟ್ಯಾಂಕರ್ಗಳನ್ನ ನಿಯೋಜನೆ ಮಾಡಿದೆ. ಇದು ಜನರನ್ನು ಹೆದರಿಸಿ, ಸುಮ್ಮನಾಗಿಸುವ ತಂತ್ರ ಎಂದು ಜಾಗತಿಕ ಮಟ್ಟದಲ್ಲಿ ಆಕ್ರೋಶ ಮೊಳಗಿದೆ.
ಪ್ರಧಾನಿ, ಸಂಸದರಿಗೆ ಮನೆಯಲ್ಲೇ ಜೈಲು..!
ಈಗಾಗಲೇ ಮ್ಯಾನ್ಮಾರ್ ಪ್ರಧಾನಿ ಆಂಗ್ ಸಾನ್ ಸೂಕಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳನ್ನ ಮನೆ ಒಳಗೆ ಲಾಕ್ ಮಾಡಿದೆ ಮ್ಯಾನ್ಮಾರ್ ಸೇನೆ. ಯಾರೂ ಕೂಡ ಹೊರಗೆ ಬಾರದಂತೆ ಜನಪ್ರತಿನಿಧಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಅವರ ಮನೆಗಳ ಬಳಿ ಭಾರಿ ಪ್ರಮಾಣದ ಸೇನೆ ನಿಯೋಜನೆ ಮಾಡಿರುವುದು ಸೊಲ್ಲೆತ್ತದಂತೆ ಮಾಡಿದೆ. ಇದನ್ನೆಲ್ಲಾ ಕಂಡು ಎಷ್ಟೋ ಜನ ಮನೆಯಿಂದ ಹೊರ ಬರೋದಕ್ಕೂ ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ. ಸ್ವತಃ ಮ್ಯಾನ್ಮಾರ್ ಪ್ರಧಾನಿ ಆಂಗ್ ಸಾನ್ ಸೂಕಿಗೆ ಏನಾಗಿದೆ ಅನ್ನೋದನ್ನೂ ಹೊರ ಜಗತ್ತು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇಂಟರ್ನೆಟ್ ಇಲ್ಲದೆ ಪರದಾಟ..!
ಸೇನಾ ಕ್ರಾಂತಿಯ ವಿರುದ್ಧ ಮ್ಯಾನ್ಮಾರ್ನಲ್ಲಿ ಹೋರಾಟ ತೀವ್ರಗೊಳ್ಳುತ್ತಿದ್ದು, ದೇಶದ ಇತರ ಭಾಗಗಳಿಗೆ ತೀವ್ರ ಸ್ವರೂಪದಲ್ಲಿ ಹರಡುತ್ತಿದೆ. ಆದರೆ ಇದನ್ನು ತಡೆಯಲು ಮ್ಯಾನ್ಮಾರ್ ಮಿಲಿಟರಿ ತನ್ನ ಬಲವನ್ನು ಬಳಸುತ್ತಿದೆ. ಈಗಾಗಲೇ ಮ್ಯಾನ್ಮಾರ್ನಲ್ಲಿ ಇಂಟರ್ನೆಟ್ ಕಡಿತವಾಗಿದ್ದು, ಜನರನ್ನು ಅತ್ತಿಂದ ಇತ್ತ ಕದಡಲು ಬಿಡುತ್ತಿಲ್ಲ. ಈ ನಡುವೆ ಜನ ಬೀದಿಗಿಳಿದು ಮಿಲಿಟರಿ ಆಡಳಿತದ ವಿರುದ್ಧ ಹೋರಾಟ ತೀವ್ರಗೊಳಸಿದ್ದಾರೆ. ಹೀಗೆ ಮ್ಯಾನ್ಮಾರ್ ಬೂದಿ ಮುಚ್ಚಿದ ಕೆಂಡವಾಗಿದ್ದು, ಹಿಂಸಾಚಾರ ಸ್ಫೋಟಗೊಳ್ಳುವ ಆತಂಕವೂ ಎದುರಾಗಿದೆ. ಆದರೆ ಹೊರ ಜಗತ್ತಿಗೆ ಮ್ಯಾನ್ಮಾರ್ನಲ್ಲಿ ಏನಾಗುತ್ತಿದೆ ಎಂಬ ಸತ್ಯ ಸರಿಯಾಗಿ ತಿಳಿಯದಂತೆ ಮಾಡಿದೆ ಅಲ್ಲಿನ ಮಿಲಿಟರಿ.
ರಕ್ತದ ಕೋಡಿ ಹರಿಸಿದ್ದರು..!
ಅದು 2016ರ ಅಂತ್ಯಕಾಲ. ಜಗತ್ತು ಮ್ಯಾನ್ಮಾರ್ ಕಡೆಗೆ ದಿಟ್ಟಿಸಿ ನೋಡಿತ್ತು. ರೊಹಿಂಗ್ಯಾ ಮುಸ್ಲೀಮರ ಮೇಲೆ ದಿಢೀರ್ ದಾಳಿ ನಡೆದು ನೋಡ ನೋಡುತ್ತಿದ್ದಂತೆ ಸಾವಿರಾರು ರೊಹಿಂಗ್ಯಾಗಳು ಜೀವ ಕಳೆದುಕೊಂಡರು. ಈ ಹೊತ್ತಲ್ಲೇ ಅಮಾನುಷ ಘಟನೆಗಳು ನಡೆದವು. ರೊಹಿಂಗ್ಯಾ ಮುಸ್ಲೀಮರ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆದಿತ್ತು. ಹಲವು ಮಹಿಳೆಯರನ್ನ ರೇಪ್ & ಮರ್ಡರ್ ಮಾಡಿದ್ದರು ಎಂಬ ಆಘಾತಕಾರಿ ವಿಚಾರ ಜಗತ್ತನ್ನು ತಲ್ಲಣಗೊಳಿಸಿತ್ತು. 24 ಸಾವಿರ ರೊಹಿಂಗ್ಯಾಗಳು ಗಲಭೆಯಲ್ಲಿ ಹತ್ಯೆಯಾದರೆ, 1 ಮಿಲಿಯನ್ ರೊಹಿಂಗ್ಯಾಗಳು ಮ್ಯಾನ್ಮಾರ್ ಬಿಟ್ಟು ಓಡಿ ಹೋದರು. ಇನ್ನು ನಾಪತ್ತೆಯಾದವರ ಬಗ್ಗೆ ಈಗಲೂ ಸರಿಯಾದ ಲೆಕ್ಕ ಸಿಗುತ್ತಿಲ್ಲ. ಇದನ್ನೆಲ್ಲಾ ಖದ್ದು ಮ್ಯಾನ್ಮಾರ್ ಸೇನೆ ನಡೆಸಿತ್ತು, ಆದರೆ ಆಗ ಅಧಿಕಾರದಲ್ಲಿದ್ದ ಆಂಗ್ ಸಾನ್ ಸೂಕಿ ಸರ್ಕಾರ ಕೈಕಟ್ಟಿ ಕುಳಿತಿತ್ತು ಎಂಬ ಆರೋಪ ಇದೆ.
ಮಿಲಿಟರಿ ಆಡಳಿತ ಶುರು..!
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್ಗೆ ತೆಗೆದುಕೊಂಡಿದೆ ಸೇನೆ. ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ.
ಚುನಾವಣೆಯಲ್ಲಿ ಅಕ್ರಮ ನಡೆದಿತ್ತಾ..?
ಮ್ಯಾನ್ಮಾರ್ನಲ್ಲಿ 2020ರ ನವೆಂಬರ್ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.