ಭಾರತಕ್ಕೆ ಉಲ್ಟಾ ಹೊಡೆದ ನೇಪಾಳ; ಹೊಸ ನಕ್ಷೆಯಲ್ಲಿ ಇರುವುದಂಥಾ ಸುಳ್ಳು?
ನವದೆಹಲಿ, ಜೂನ್.14: ಕೊರೊನಾ ವೈರಸ್ ಅಟ್ಟಹಾಸದ ನಡುವೆ ಭಾರತದ ನೆರೆಹೊರೆಯ ರಾಷ್ಟ್ರಗಳು ಅದ್ಯಾಕೋ ತಿರುಗಿ ಬೀಳುವ ಲಕ್ಷಣಗಳು ಎದ್ದು ಕಾಣುತ್ತಿವೆ. ಲಡಾಖ್ ಗಡಿಯಲ್ಲಿ ಚೀನಾ ಕ್ಯಾತೆ ತೆಗೆದರೆ ಪಾಕಿಸ್ತಾನವು ಗಡಿಯಲ್ಲಿ ಕುತಂತ್ರ ಬುದ್ಧಿ ಪ್ರದರ್ಶಿಸುತ್ತಿದೆ. ಇದರ ನಡುವೆ ನೇಪಾಳ ಕೂಡಾ ಭಾರತದ ಗಡಿ ವಿಚಾರದಲ್ಲಿ ಜಗಳಕ್ಕೆ ನಿಲ್ಲುವಂತೆ ಕಾಣುತ್ತಿದೆ.
Recommended Video
ಭಾರತ ಮತ್ತು ನೇಪಾಳ ಗಡಿಯಲ್ಲಿರುವ ಲಿಪುಲೇಖ್, ಕಲಪನಿ, ಹಾಗೂ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಂತೆ ನೇಪಾಳ ಬಿಡುಗಡೆ ಮಾಡಿರುವ ಹೊಸ ನಕ್ಷೆಗೆ ಸಂಸತ್ ನಲ್ಲಿ ಸರ್ವಾನುಮತಗಳಿಂದ ಅನುಮೋದನೆ ಸಿಕ್ಕಿದೆ. ಪರಿಷ್ಕರಿಸದ ನೇಪಾಳದ ಹೊಸ ನಕ್ಷೆಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಭಾರತವು ಖಡಕ್ ಆಗಿ ತಿಳಿಸಿದೆ.
ಇದಪ್ಪಾ ವರಸೆ! ಭಾರತ-ನೇಪಾಳದ ನಡುವೆ ಚೀನಾಗೇನು ಕೆಲಸ?
ಭಾರತದ ಗಡಿಯಲ್ಲಿರುವ ಭೂಪ್ರದೇಶವನ್ನು ಒಳಗೊಂಡಂತೆ ನೇಪಾಳದ ಹೊಸ ನಕ್ಷೆಯನ್ನು ರೂಪಿಸಲಾಗಿದೆ. ನೇಪಾಳ ಜನಪ್ರತಿನಿಧಿಗಳ ಸದನದಲ್ಲಿ ಅನುಮೋದನೆ ಪಡೆದ ಸಾಂವಿಧಾನಿಕ ತಿದ್ದುಪಡಿಯನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಈ ವಿಚಾರದಲ್ಲಿ ಭಾರತದ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಗಡಿ ಪ್ರದೇಶ ಹೆಚ್ಚಿಸಲು ಕೃತಕ ಹಕ್ಕು ಮಂಡನೆ
ಭಾರತ-ನೇಪಾಳ ಗಡಿ ವಿಚಾರದಲ್ಲಿ ಈ ಮೊದಲು ಮಾಡಿಕೊಂಡ ಒಪ್ಪಂದವನ್ನು ಮುರಿಯುವ ಪ್ರಯತ್ನ ನಡೆಸಲಾಗುತ್ತಿದೆ. ಗಡಿ ಪ್ರದೇಶವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕೃತಕವಾಗಿ ಹಕ್ಕು ಮಂಡನೆ ಮಾಡಲಾಗುತ್ತಿದೆ. ನೇಪಾಳದ ಹೊಸ ನಕ್ಷೆಯು ನಿಜವೆಂದು ಸಾಬೀತುಪಡಿಸುವಂತಾ ಯಾವುದೇ ಪುರಾವೆಗಳಿಲ್ಲ. ಇತಿಹಾಸದ ಯಾವ ಮೂಲೆಯಲ್ಲೂ ಈ ಬಗ್ಗೆ ಉಲ್ಲೇಖವಾಗಿಲ್ಲ ಎಂದು ಅನುರಾಗ್ ಶ್ರೀವಾಸ್ತವ್ ಸ್ಪಷ್ಟಪಡಿಸಿದ್ದಾರೆ.
ನೇಪಾಳದ ವಿವಾದಿತ ಹೊಸ ನಕ್ಷೆಗೆ ಸರ್ವಾನುಮತದ ಒಪ್ಪಿಗೆ
ನೇಪಾಳ ಸರ್ಕಾರವು ಸಿದ್ಧಪಡಿಸಿದ ವಿವಾದಿತ ಹೊಸ ನಕ್ಷೆಯನ್ನು ಜನಪ್ರತಿನಿಧಿಗಳ ಸದನದಲ್ಲಿ ಮಂಡಿಸಿದಾಗ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. 275 ಸದಸ್ಯಬಲದ ನೇಪಾಳ ಜನಪ್ರತಿನಿಧಿಗಳ ಸದನದಲ್ಲಿ ಒಂದು ತಿದ್ದುಪಡಿಗೆ ಅನುಮೋದನೆ ಸಿಗಬೇಕಾದಲ್ಲಿ ಶೇ.2/3ರಷ್ಟು ಒಪ್ಪಿಗೆ ಸಿಗಬೇಕು. ನೇಪಾಳಿ ಕಾಂಗ್ರೆಸ್, ರಾಷ್ಟ್ರೀಯ ಜನತಾ ಪಕ್ಷ-ನೇಪಾಳ ಮತ್ತು ರಾಷ್ಟ್ರೀಯ ಪ್ರಜಾತಂತ್ರ ಪಕ್ಷಗಳು ಸರ್ವಾನುಮತದಿಂದ ಸಂವಿಧಾನದ ತಿದ್ದುಪಡಿಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿವೆ.
ನೇಪಾಳ ಜನಪ್ರತಿನಿಧಿ ಸದನದಲ್ಲಿ ಮಸೂದೆ ಮಂಡನೆ
ಭಾರತದೊಂದಿಗಿನ ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಹೊಸ ರಾಜಕೀಯ ಪ್ರೇರಿತ ನಕ್ಷೆ ಅನುಮೋದಿಸಲು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪರಿಗಣಿಸುವ ಪ್ರಸ್ತಾಪವನ್ನು ನೇಪಾಳ ಸಂಸತ್ತು ಜೂನ್.09ರಂದು ಸರ್ವಾನುಮತದಿಂದ ಅಂಗೀಕರಿಸಿತು. ಇದೀಗ ತಿದ್ದುಪಡಿ ಮಸೂದೆಯನ್ನು ರಾಷ್ಟ್ರೀಯ ಶಾಸನ ಸಭೆಗೆ ಕಳುಹಿಸಲಾಗಿದೆ. ಅಲ್ಲಿ ಇದೇ ರೀತಿಯ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷವು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮೂರನೇ ಎರಡರಷ್ಟು ಬಹುಮತ ಹೊಂದಿದೆ. ಮಸೂದೆಯ ನಿಬಂಧನೆಗಳ ವಿರುದ್ಧ ಏನಾದರೂ ತಿದ್ದುಪಡಿಗಳನ್ನು ತರಲು ರಾಷ್ಟ್ರೀಯ ಅಸೆಂಬ್ಲಿ ಶಾಸಕರಿಗೆ 72 ಗಂಟೆಗಳ ಕಾಲಾವಕಾಶ ನೀಡಲಾಗಿದೆ.
ರಾಷ್ಟ್ರಪತಿಗೆ ತಿದ್ದುಪಡಿ ಮಸೂದೆ ರವಾನೆ
ನೇಪಾಳದ ರಾಷ್ಟ್ರೀಯ ಶಾಸನ ಸಭೆಯಲ್ಲಿ ಮಸೂದೆ ಅಂಗೀಕಾರಗೊಂಡ ನಂತರ, ದೃಢೀಕರಿಸಲು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಲಾಗುತ್ತದೆ. ರಾಷ್ಟ್ರಪತಿ ಅಂಕಿತ ಸಿಕ್ಕ ಬಳಿಕವಷ್ಟೇ ತಿದ್ದುಪಡಿ ಮಸೂದೆಯನ್ನು ಸಂವಿಧಾನದಲ್ಲಿ ಸೇರಿಸಲಾಗುವುದು.
ನೇಪಾಳದಲ್ಲಿ ಗಡಿ ಇತಿಹಾಸ ಅಧ್ಯಯನಕ್ಕೆ ಹೊಸ ತಂಡ
ಭಾರತ-ನೇಪಾಳ ನಡುವಿನ ಗಡಿ ಹಂಚಿಕೆಯ ಇತಿಹಾಸ ಹಾಗೂ ಸಾಕ್ಷ್ಯಗಳ ಪತ್ತೆ ಮಾಡುವುದಕ್ಕೆ ನೇಪಾಳ ಸರ್ಕಾರವು ಹೊಸ ತಂಡವನ್ನು ರಚಿಸಿದೆ. ಜೂನ್.10ರ ಬುಧವಾರ 9 ಸದಸ್ಯರುಳ್ಳ ವಿಶೇಷ ತಂಡವೊಂದನ್ನು ರಚನೆ ಮಾಡಲಾಗಿದೆ. ಈ ತಂಡವು ಗಡಿಗೆ ಸಂಬಂಧಿಸಿದಂತೆ ಇತಿಹಾಸದ ಅಧ್ಯಯನ ನಡೆಸಿ ಸಾಕ್ಷ್ಯ್ ಪುರಾವೆಗಳ ಸಂಗ್ರಹಕ್ಕೆ ಮುಂದಾಗಿದೆ. ಆದರೆ ರಾಜತಾಂತ್ರಿಕರು ಮತ್ತು ತಜ್ಞರು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ. ಹೊಸ ನಕ್ಷೆ ಈಗಾಗಲೇ ಬಿಡುಗಡೆಯಾಗಿದ್ದು, ಕ್ಯಾಬಿನೆಟ್ ಅನುಮೋದಿಸಿದಾಗ ಕಾರ್ಯಪಡೆ ರಚಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ವಿವಾದ ಹುಟ್ಟಿಸಿದ್ದೇಕೆ ನೇಪಾಳದ ಹೊಸ ನಕ್ಷೆ?
ಲಿಪುಲೇಖ್, ಕಲಪನಿ, ಹಾಗೂ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಂತೆ ನೇಪಾಳ ಹೊಸ ಭೂನಕ್ಷೆ ಬಿಡುಗಡೆ ಮಾಡಿದೆ. ಇದಕ್ಕೆ ಭಾರತವು ವಿರೋಧ ವ್ಯಕ್ತಪಡಿಸಿತ್ತು. ಗಡಿ ವಿಚಾರವನ್ನು ರಾಜತಾಂತ್ರಿಕ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಕೂಡಾ ಹೇಳಿದ್ದರು. ಇತ್ತೀಚಿಗಷ್ಟೇ ಲಿಪುಲೇಖ್ ಪ್ರದೇಶವನ್ನು ಸಂಪರ್ಕಿಸುವ ಉತ್ತರಾಖಂಡ್ ದಾರ್ಚುಲಾ ಪ್ರದೇಶದಲ್ಲಿನ ರಸ್ತೆ ಕಾಮಗಾರಿ ಬಗ್ಗೆ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಜೊತೆಗೆ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಚರ್ಚಿಸಿದ್ದರು.