ಮಲಾಲಾಗೆ ನೊಬೆಲ್ ಪುರಸ್ಕಾರ ಬಂದಿದ್ದು ಹೇಗೆ?
ಬೆಂಗಳೂರು, ಅ. 10: 'ಏಯ್.. ತಾಲಿಬಾನೀ ನೀನು ನನ್ನನ್ನು ಕೊಲ್ಲುತ್ತೀಯಾ ಎಂದು ನಾನು ಹೆದರಲ್ಲ. ನಿನ್ನ ಕೈಯಲ್ಲಿರುವ ಗನ್ ನನ್ನ ಹತ್ತಿರ ಇದ್ದು ನನ್ನೆದುರು ನೀನು ನಿಂತಿದ್ದರೆ ನಾನು ಮಾತ್ರ ನಿನ್ನ ಕೊಲ್ಲುವುದಿಲ್ಲ'. ಹೀಗೆಂದು ಸಂದರ್ಶನವೊಂದರಲ್ಲಿ ಹೇಳಿದ್ದ ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಮಲಾಲಾಗೆ ಪ್ರತಿಷ್ಠಿತ ನೊಬೆಲ್ ಪುರಸ್ಕಾರ ದೊರೆತಿದೆ.
ಶಾಂತಿ ಸ್ಥಾಪನೆ ಸಂಬಂಧ ನೊಬೆಲ್ ಪಡೆದ ಅತಿ ಕಿರಿಯಳು ಎಂಬ ಹಿರಿಮೆಯನ್ನು ಗಳಿಸಿಕೊಂಡಿದ್ದಾಳೆ. ಉಗ್ರಗಾಮಿಗಳ ವಿರುದ್ಧ ದಿಟ್ಟ ಹೋರಾಟ ತೋರಿದ್ದ ಬಾಲಕಿ ಇದೀಗ ವಿಶ್ವದ ಮನ್ನಣೆಗೆ ಒಳಗಾಗಿದ್ದಾಳೆ.[ನ.10 ಮಲಾಲ ಗೌರವ ದಿನಾಚರಣೆ : ವಿಶ್ವಸಂಸ್ಥೆ]
ಆದರೆ ಮಲಾಲಾ ಹೋರಾಟದ ಹಾದಿ ಮಾತ್ರ ಸರಳವಾಗಿರಲಿಲ್ಲ. ಶಾಲೆಗೆ ತೆರಳಲು ಅಡ್ಡಗಾಲು ಹಾಕಿದ ಉಗ್ರಗಾಮಿಗಳ ವಿರುದ್ಧ ಸೆಟೆದು ನಿಂತ ರೀತಿ, ಗುಂಡಿನ ದಾಳಿಗೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಡಿ ಜೀವ ಮತ್ತು ಜೀವನವನ್ನು ಗೆದ್ದು ಪಾಕಿಸ್ತಾನದಲ್ಲೂ ಶಾಂತಿ ಪ್ರಿಯರಿದ್ದಾರೆ ಎಂದು ಜಗತ್ತಿಗೆ ತೋರಿಸಿದ ಮಲಾಲಾಗೆ ಗೌರವ ದೊರೆತಿದೆ.
ಕರಾಳ ಗುಂಡೇಟು
ಅದು 9 ಅಕ್ಟೋಬರ್ 2012, ಬಾಲಕಿ ಯೂಸುಫ್ ಝಾಯಿ ಎಂದಿನಂತೆ ಶಾಲೆಗೆ ತೆರಳಲು ಸಿದ್ಧಳಾಗಿದ್ದಳು. ಪಾಕಿಸ್ತಾನದ ಸ್ವಾತ್ ಕಣಿವೆಯ ಪುಟ್ಟ ಬಾಲಕಿಯ ಎದುರಿಗೆ ಧುತ್ತೆಂದು ಉಗ್ರಗಾಮಿಯೊಬ್ಬ ಗನ್ ಹಿಡಿದು ನಿಂತಿದ್ದ. 'ನೀನು ಮನೆಗೆ ತೆರಳುತ್ತಿಯೋ? ಇಲ್ಲಾ ಗುಂಡೇಟಿಗೆ ಬಲಿಯಾಗುತ್ತಿಯೋ? ಎಂದು ಬಾಲಕಿಯನ್ನು ಪ್ರಶ್ನಿಸಿದ್ದ. ದಿಟ್ಟ ಯೂಸುಫ್ ಝಾಯಿ ಶಿಕ್ಷಣವೇ ಮುಖ್ಯ ಎಂದಿದ್ದಳು. ಕ್ಷಣಮಾತ್ರದಲ್ಲಿ ಆತನ ರೈಫಲ್ನಿಂದ ಮೂರು ಗುಂಡುಗಳು ಸಿಡಿದಿದ್ದವು. ಗಂಭೀರ ಗಾಯಗೊಂಡಿದ್ದ ಬಾಲಕಿ ಅನೇಕ ದಿನಗಳ ಚಿಕಿತ್ಸೆ ಬಳಿಕ ಸಾವನ್ನು ಗೆದ್ದಿದ್ದಳು.
ಝಾಯಿ ಮಲಾಲಾ ಆದದ್ದು ಹೇಗೆ?
ಗುಣಮುಖವಾದ ಯೂಸುಫ್ ಝಾಯಿ ಮಲಾಲಾ ಆಗಿ ಬದಲಾದಳು. ಹೆಣ್ಣು ಮಕ್ಕಳ ಶಿಕ್ಷಣದ ಪರವಾಗಿ ಹೋರಾಟಕ್ಕೆ ನಿಂತಳು. ಪ್ರಪಂಚದಾದ್ಯಂತ ಮಲಾಲಾ ಪರವಾಗಿ ಧ್ವನಿ ಕೇಳಿ ಬರತೊಡಗಿತು. ಸ್ವಾತ್ ಕಣಿವೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಿಷೇಧ ಎಂದಿದ್ದ ತಾಲಿಬಾನಿಗಳು ತಾವೇ ಜಾಗ ಖಾಲಿ ಮಾಡಬೇಕಾಯಿತು.
ಬ್ಲಾಗ್ ಮೂಲಕ ಮಹಿಳಾ ಜಾಗೃತಿ
ಮಹಿಳೆಯರ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಬ್ಲಾಗ್ಗಳ ಮೂಲಕ ಮಲಾಲಾ ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತಾಳೆ. ತಾಲಿಬಾನಿಗಳ ತೀವ್ರ ವಿರೋಧದ ನಡುವೆಯೂ ಬ್ಲಾಗ್ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ.
ದಾಳಿಯಾಗಿ ಸರಿಯಾಗಿ ಎರಡು ವರ್ಷ
ಹೌದು.. ಮಲಾಲಾ ಮೇಲೆ ದಾಳಿಯಾಗಿ ಅಕ್ಟೋಬರ್ 9 ಕ್ಕೆ ಎರಡು ವರ್ಷ ಕಳೆಯುತ್ತದೆ. ಆದರೆ ಈ ಎರಡು ವರ್ಷದಲ್ಲಾದ ಬದಲಾವಣೆಗಳಿಗೆ ಲೆಕ್ಕವಿಲ್ಲ. ಮಲಾಲಾ ಇದೀಗ ಅಂತಾರಾಷ್ಟ್ರೀಯ ಮಟ್ಟದ ಹೋರಾಟಗಾರ್ತಿಯಾಗಿ ನಿಂತಿದ್ದಾರೆ. ಇದೇ ವೇಳೆ ಶಾಂತಿ ನೊಬೆಲ್ ಪುರಸ್ಕಾರವೂ ಸಂದಿದೆ.
ಕಳೆದ ಬಾರಿ ಕೈ ತಪ್ಪಿದ್ದ ಪ್ರಶಸ್ತಿ
ಕಳೆದ ವರ್ಷ ಸಹ ನೊಬೆಲ್ಗೆ ಮಲಾಲಾ ಹೆಸರು ನಾಮನಿರ್ದೇಶನಗೊಂಡಿತ್ತು. ಆದರೆ ಕೊನೆ ಹಂತದಲ್ಲಿ ಪ್ರಶಸ್ತಿ ರಾಸಾಯನಿಕ ಅಸ್ತ್ರಗಳನ್ನು ನಿರ್ಮೂಲನ ಮಾಡಬೇಕು ಎಂದು ವಾದಿಸುತ್ತಿದ್ದ ಸಂಘಟನೆಗೆ ದೊರೆತಿತ್ತು. ಮಲಾಲಾಗೆ ಪ್ರಶಸ್ತಿ ದೊರೆಯದಿದ್ದಕ್ಕೆ ತಾಲೀಬಾನಿಗಳು ಸಂಭ್ರಮಾಚರಣೆಯನ್ನು ಮಾಡಿದ್ದು ಅವರ ವಿಕೃತ ಮನಸ್ಸಿಗೆ ಸಾಕ್ಷಿ ಹೇಳಿತ್ತು.