ರಕ್ತದ ಮಡುವಲ್ಲಿ ಬೆಂದು ಹೋಗುತ್ತಿದೆ 3 ಧರ್ಮಗಳ ‘ಪವಿತ್ರ ಸ್ಥಳ’
ಅದು 3 ಧರ್ಮಗಳ ತವರೂರು, ಜಗತ್ತಿನ ಪ್ರಮುಖ ಧಾರ್ಮಿಕ ಕೇಂದ್ರ. ಆದರೆ ಕಳೆದ ಕೆಲ ದಿನಗಳಿಂದ ಅಲ್ಲಿ ರಕ್ತ ಚೆಲ್ಲಾಡುತ್ತಿದೆ, ಹಿಂಸೆ ಭುಗಿಲೆದ್ದಿದೆ. ನೂರಾರು ಜನರು ಜೀವ ಕಳೆದುಕೊಂಡಿದ್ದಾರೆ. ಹೌದು, ಜೆರುಸಲೇಂನ ಸದ್ಯದ ಭೀಕರ ಪರಿಸ್ಥಿತಿ ಇದು. ಮಧ್ಯ ಪ್ರಾಚ್ಯದಲ್ಲಿ ಹಿಂಸೆ ಹಾಗೂ ಬಡಿದಾಟಗಳು ಮಾಮೂಲು. ಜೆರುಸಲೇಂ ಇಷ್ಟುದಿನ ಒಂದಷ್ಟು ತಣ್ಣಗಿತ್ತು. ಆದರೆ ದಿಢೀರ್ ಭುಗಿಲೆದ್ದ ಹಿಂಸಾಚಾರ, ಪ್ರತಿಭಟನೆ ಜೆರುಸಲೇಂನ ಅಕ್ಷರಶಃ ನರಕ ಮಾಡಿಬಿಟ್ಟಿದೆ.
ಇಲ್ಲಿನ 'ಅಲ್ ಅಖ್ಸಾ' ಮಸೀದಿ ಆವರಣದಲ್ಲಿ ಪ್ಯಾಲೆಸ್ತೇನ್ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಭುಗಿಲೆದ್ದಿತ್ತು. ಹೀಗಾಗಿ ಕಳೆದ 4 ದಿನಗಳಿಂದಲೂ 3 ಧರ್ಮಗಳ 'ಪವಿತ್ರ ಸ್ಥಳ' ಜೆರುಸಲೇಂ ಹೊತ್ತಿ ಉರಿಯುತ್ತಿದೆ. 24 ಜನರು ಮೃತಪಟ್ಟು, 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅತ್ತ ಇಸ್ರೇಲ್ ಪೊಲೀಸರು ಹಾಗೂ ಭದ್ರತಾ ಪಡೆಗಳು ಶಾಂತಿ ಕಾಪಾಡಲು ಪರದಾಡುತ್ತಿದ್ದಾರೆ. ಆದರೂ ಪರಿಸ್ಥಿತಿ ಹಿಡಿತಕ್ಕೆ ಸಿಗುವ ಲಕ್ಷಣವೇ ಕಾಣುತ್ತಿಲ್ಲ. ಹೀಗಾಗಿ ಪವಿತ್ರ ಸ್ಥಳದಲ್ಲೂ ಸೂಚಕದ ಛಾಯೆ ಆವರಿಸಿಬಿಟ್ಟಿದೆ.
ಗಲಾಟೆ ಶುರುವಾಗಿದ್ದು ಹೇಗೆ..?
1967 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಭೂಪ್ರದೇಶವನ್ನು ವಶಪಡಿಸಿಕೊಂಡ ನೆನಪಿಗೆ ಮೆರವಣಿಗೆ ಆಯೋಜಿಸಲಾಗಿತ್ತು. ವಿಜಯದ ದಿನವನ್ನ ನೆನಪಿಸಿಕೊಳ್ಳುವ ಸಲುವಾಗಿ ಯಹೂದಿಗಳು ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದರು. ಆದರೆ ಮೆರವಣಿಗೆ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎನ್ನಲಾಗುತ್ತಿದೆ. ಹೀಗೆ ಹಿಂಸೆ ಭುಗಿಲೇಳುತ್ತಲೇ ಇಸ್ರೇಲಿ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಇಸ್ರೇಲಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದೇ ತಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಘರ್ಷಣೆ ಸಂಭವಿಸಿ ನೂರಾರು ಜನರು ಗಾಯಗೊಂಡಿದ್ದರೆ, 24 ಮಂದಿ ಜೀವ ಕಳೆದುಕೊಂಡಿದ್ದಾರೆ.
ಕಾಯುತ್ತಿದ್ದಾರೆ ಇಸ್ರೇಲ್ ಶತ್ರುಗಳು
ಇಸ್ರೇಲ್ ಪುಟಾಣಿ ದೇಶವಾದರೂ ಅರಬ್ ಒಕ್ಕೂಟದ ಹತ್ತಾರು ದೇಶಗಳನ್ನ ಎದುರು ಹಾಕಿಕೊಂಡಿದೆ. ಅಲ್ಲಿ ತನ್ನ ನೆಲೆ ಖಚಿತ ಪಡಿಸಿಕೊಳ್ಳಲು ಇಸ್ರೇಲ್ಗೆ ಇದು ಅನಿವಾರ್ಯವೂ ಆಗಿದೆ. ಆದರೆ ಇದೀಗ ದೇಶದೊಳಗೆ ಘರ್ಷಣೆ ಆರಂಭವಾಗಿದೆ. ತನ್ನ ವೈರಿ ಪ್ಯಾಲೆಸ್ತೇನ್ ಬಗ್ಗುಬಡಿಯಲು ಇಸ್ರೇಲ್ ಪಡೆಗಳು ಬಲಪ್ರಯೋಗವನ್ನು ಮುಂದುವರಿಸಿದ್ದಾರೆ. ಇದು ಸಹಜವಾಗಿಯೆ ಇಸ್ರೇಲ್ ವಿರೋಧಿ ರಾಷ್ಟ್ರಗಳಿಗೆ ಪ್ರಚೋದನೆ ನೀಡಿದಂತಾಗಿದೆ. ಇಸ್ರೇಲ್ನಲ್ಲಿ ಈಗಾಗಲೇ ಪ್ರಧಾನಿಯ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಈ ನಡುವೆ ಕೋಮು ಗಲಭೆಗಳೂ ಆರಂಭವಾಗಿದ್ದು ದ್ವೇಷ ಭಾವನೆಯನ್ನು ಕೆರಳುವಂತೆ ಮಾಡಿದೆ.
ಶಾಂತಿ ನೆಲೆಸುವುದೇ ಇಲ್ವಾ..?
ಇಸ್ರೇಲ್ ಹಾಗೂ ಗಾಜಾಪಟ್ಟಿ ಕಥೆ ಸಿರಿಯಾಗಿಂತ ಭಯಾನಕವಾಗಿದೆ. ಒಂದುಕಡೆ ಹಮಾಸ್ ಉಗ್ರರು ಅದು ನಮ್ಮ ನೆಲ ಅಂತಾ ಇಸ್ರೇಲ್ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ತಮ್ಮ ದೇಶದ ಭೂಭಾಗ ಉಳಿಸಿಕೊಳ್ಳಲು ಇಸ್ರೇಲ್ ಬಂಡುಕೋರರ ಮೇಲೆ ದಾಳಿ ನಡೆಸುತ್ತಲೇ ಬಂದಿದೆ. ಇವರಿಬ್ಬರ ಕಿತ್ತಾಟದಿಂದ ಸಾಮಾನ್ಯ ಜನರು ಬೀದಿಪಾಲಾಗಿದ್ದಾರೆ.
ಲಕ್ಷಾಂತರ ಮಂದಿ ಮನೆ ಕಳೆದುಕೊಂಡಿದ್ದಾರೆ
ಗಾಜಾಪಟ್ಟಿಯಲ್ಲಿ ಲಕ್ಷಾಂತರ ಮಂದಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹಾಗೇ ಲೆಕ್ಕವಿಲ್ಲದಷ್ಟು ಯುವಕರೂ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ಹೋರಾಡುವಾಗ ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗಿದ್ದಿದೆ. ವಿಶ್ವಸಂಸ್ಥೆ ಕೂಡ ಹಲವು ದಶಕಗಳಿಂದ ಇಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಪಟ್ಟರೂ ವರ್ಕೌಟ್ ಆಗುತ್ತಿಲ್ಲ.