ಏನಿದು ಮಾಲ್ಡೀವ್ಸ್ ರಾಜಕೀಯ ಬಿಕ್ಕಟ್ಟು?ತಿಳಿಯಬೇಕಾದ 10 ಸಂಗತಿ
ಮಾಲೆ, ಫೆಬ್ರವರಿ 09: ಎಲ್ಲೆಲ್ಲೂ ದ್ವೀಪಗಳ ಸಾಲು... ಹಚ್ಚಹಸಿರುಬಣ್ಣದ ಶುದ್ಧ ನೀರು, ಯಾವ ಗಲಾಟೆಯಿಲ್ಲದ ಶಾಂತ ಪರಿಸರ... ಮಾಲ್ಡೀವ್ಸ್ ಎಂಬ ದ್ವೀಪಗಳ ರಾಷ್ಟ್ರ ಪ್ರವಾಸಿಗಳ ಫೆವರೀಟ್ ಲಿಸ್ಟ್ ನ ಮೇಲ್ಪಂಕ್ತಿಯಲ್ಲಿರುವುದಕ್ಕೆ ಕಾರಣ ಇದೇ. ಆದರೆ ಕಳೆದ ಕೆಲವು ದಿನಗಳಿಂದ ಈ ಶಾಂತ ರಾಷ್ಟ್ರದಲ್ಲಿ ಆರಂಭವಾಗಿರುವ ರಾಜಕೀಯ ಬಿಕ್ಕಟ್ಟು, ಈ ದೇಶದ ಆದಾಯದ ಪ್ರಮುಖ ಮೂಲವಾದ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತಪರಿಣಾಮ ಬೀರಿದೆ.
ಯಾವ ಬೆಳೆಯನ್ನು ಬೆಳೆಯುವುದಕ್ಕೂ ಸಾಧ್ಯವಿಲ್ಲದ ಭೌಗೋಳಿಕ ರಚನೆಯಿಂದಾಗಿ ಇಲ್ಲಿ ಅತ್ಯಗತ್ಯ ವಸ್ತುಗಳಿಗೂ ವಿದೇಶಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿದೆ. ಎಲ್ಲವನ್ನೂ ಆಮದು ಮಾಡಿಕೊಳ್ಳಬೇಕಾದ ಸನ್ನಿವೇಶದಲ್ಲಿ ಈ ರಾಜಕೀಯ ಬಿಕ್ಕಟ್ಟಿನಿಂದಾಗಿ ವಿಶ್ವದ ಇತರೆ ರಾಷ್ಟ್ರಗಳ ಕೆಂಗಣ್ಣಿಗೆ ಮಾಲ್ಡೀವ್ಸ್ ಗುರಿಯಾದರೆ ನಷ್ಟವಾಗುವುದು ಈ ಸುಂದರ ರಾಷ್ಟ್ರಕ್ಕೇ!
ಮಾಲ್ಡಿವ್ಸ್ ನಲ್ಲಿ ತುರ್ತುಪರಿಸ್ಥಿತಿ: ಅಧ್ಯಕ್ಷರ ರಾಜೀನಾಮೆಗೆ ಆಗ್ರಹ
ಅಷ್ಟಕ್ಕೂ ಮಾಲ್ಡೀವ್ಸ್ ನಲ್ಲಿ ಇದ್ದಕ್ಕಿದ್ದಂತೇ ಬಿಕ್ಕಟ್ಟು ಉದ್ಭವವಾಗಿದ್ದು ಏಕೆ? ಇದರ ಹಿಂದಿರುವ ಕಾರಣವೇನು? ಮಾಲ್ಡೀವ್ಸ್ ಬಿಕ್ಕಟ್ಟಿನ ಹಿನ್ನೆಲೆಯ ಕುರಿತ ಸವಿವರ ಮಾಹಿತಿ ಇಲ್ಲಿದೆ.
ಬಿಕ್ಕಟ್ಟು ಇದೇ ಮೊದಲಲ್ಲ!
ಏಷ್ಯಾ ಖಂಡದಲ್ಲಿರುವ ಅತ್ಯಂತ ಚಿಕ್ಕ ದೇಶವಾದ ಮಾಲ್ಡೀವ್ಸ್ ನಲ್ಲಿ ಬಿಕ್ಕಟ್ಟು ಆರಂಭವಾಗಿದ್ದು ಇದೇ ಮೊದಲಲ್ಲ. 2013 ರಲ್ಲಿ ಅಧ್ಯಕ್ಷ ಯಾಮೀನ್ ಅಧಿಕಾರ ಸ್ವೀಕರಿಸದ ಲಾಗಾಯ್ತೂ ತಮ್ಮ ವಿರೋಧಿಗಳನ್ನೆಲ್ಲ ಜೈಲಿಗಟ್ಟುತ್ತಲೇ ಬರುತ್ತಿದ್ದಾರೆ. ಆದರೆ 2015 ರಲ್ಲಿ ಮಾಲ್ಡೀವ್ಸ್ ನ ಮಾಜಿ ಅಧ್ಯಕ್ಷ ನಶೀದ್ ಅವರನ್ನು ಜೈಲಿಗಟ್ಟಿದಾಗಿನಿಂದ ಈ ರಾಷ್ಟ್ರದಲ್ಲಿ ಮತ್ತಷ್ಟು ನಲ್ಲಿ ಅಶಾಂತಿ ನೆಲೆಸಿದೆ. ಭಯೋತ್ಪಾದಕ ಚಟುವಟಿಕೆಯ ಆರೋಪದ ಮೇಲೆ ನಶೀದ್ ಅವರೆ 13 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿ, ನಂತರ ಅವರನ್ನು ಚಿಕಿತ್ಸೆಗಾಗಿ ಬ್ರಿಟನ್ ಗೆ ಕಳಿಸಲಾಗಿತ್ತು. ಅಂದಿನಿಂದ ಅವರು ಗಡಿಪಾರಾಗಿರುವಂತೆ ಬೇರೆ ಬೇರೆ ದೇಶದಲ್ಲಿ ನೆಲೆಸುತ್ತಿದ್ದು ಸದ್ಯಕ್ಕೆ ಶ್ರೀಲಂಕಾದಲ್ಲಿ ನೆಲೆಸಿದ್ದಾರೆ.
ಸುಪ್ರೀಂ ಖಡಕ್ ಆದೇಶ
ಇತ್ತೀಚೆಗೆ ಮಾಲ್ಡೀವ್ಸ್ ಸುಪ್ರೀಂ ಕೋರ್ಟ್, ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಮತ್ತು ವಿರೋಧ ಪಕ್ಷದ 12 ನಾಯಕರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿತ್ತು. ಅಷ್ಟೇ ಅಲ್ಲ, ಹಾಲಿ ಅಧ್ಯಕ್ಷ ಯಾಮೀನ್ ಅವರ ವಿರುದ್ಧ ಖಂಡನಾ ನಿರ್ಣಯ ತೆಗೆದುಕೊಳ್ಳುವುದಾಗಿ ಎಚ್ಚರಿಸಿತ್ತು.
ಸುಪ್ರೀಂ ಆದೇಶಕ್ಕೆ ಯಾಮೀನ್ ನಕಾರ
ಸುಪ್ರೀಂ ಕೋರ್ಟಿನ ಆದೇಶವನ್ನು ಧಿಕ್ಕರಿಸಿದ ಯಾಮಿನ್, ತಮ್ಮ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಆಂತರಿಕ ತುರ್ತುಪರಿಸ್ಥಿತಿ ಹೇರಿದರು. 15 ದಿನಗಳ ಕಾಲ ತುರ್ತುಪರಿಸ್ಥಿತಿ ಹೇರಿರುವ ಯಾಮಿನ್ ಕ್ರಮಕ್ಕೆ ಮಾಲ್ಡೀವ್ಸ್ ನಾದ್ಯಂತ ವಿರೋಧ ವ್ಯಕ್ತವಾಗಿತ್ತು. ಸೇನೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಯಾಮೀನ್ ಗೆ ತುರ್ತುಪರಿಸ್ಥಿತಿ ಹೇರುವುದು ಕಷ್ಟವಾಗಲಿಲ್ಲ!
ಭಾರತೀಯರಿಗೆ ಸೂಚನೆ
ಸದ್ಯಕ್ಕೆ ಭಾರತದಿಂದ ಮಾಲ್ಡೀವ್ಸ್ ಗೆ ಪ್ರಯಾಣಿಸಬೇಕಿದ್ದ ಎಲ್ಲಾ ಪ್ರಯಾಣಿಕರಿಗೂ ತಮ್ಮ ಪ್ರಯಾಣವನ್ನು ರದ್ದುಗೊಳಿಸುವಂತೆ ಅಥವಾ ಮುಂದೂಡುವಂತೆ ಸೂಚಿಸಲಾಗಿದೆ. ಪರಿಸ್ಥಿತಿ ತಿಳಿಯಾದ ಮೇಲೆ ಪ್ರಕಟಣೆ ನೀಡುವುದಾಗಿ ಮಾಲ್ಡೀವ್ಸ್ ಸರ್ಕಾರ ಹೇಳಿದೆ. ತುರ್ತು ಅಗತ್ಯವಿರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪ್ರವಾಸಿಗಳ ಭದ್ರತೆಯ ವಿಶ್ವಾಸ
ಮಾಲ್ಡೀವ್ಸ್ ಪ್ರಮುಖ ಪ್ರವಾಸೋದ್ಯಮ ತಾಣವಾಗಿರುವುದರಿಂದ ದೇಶ ವಿದೇಶಗಳಿಂದ ಇಲ್ಲಿಗೆ ಸಾಕಷ್ಟು ಪ್ರವಾಸಿಗರು ದಿನೇ ದಿನೇ ಬರುತ್ತಾರೆ. ಈಗಾಗಲೇ ಮಾಲ್ಡೀವ್ಸ್ ನಲ್ಲಿರುವ ಪ್ರವಾಸಿಗರಿಗೆ ಎಲ್ಲ ರೀತಿಯ ಭದ್ರತೆ ನೀಡುವುದಾಗಿ ಮಾಲ್ಡೀವ್ಸ್ ಸರ್ಕಾರ ಅಭಯ ನೀಡಿದೆ.
ಮುಖ್ಯನ್ಯಾಯಾಧೀಶರ ಬಂಧನ!
ಸುಪ್ರೀಂ ಕೋರ್ಟ್ ಆದೇಶಕ್ಕೆ ಕೆಂಡಾಮಂಡಲವಾಗಿದ್ದ ಯಾಮೀನ್ ಸೇನೆಯನ್ನು ಕಳಿಸಿ ಸುಪ್ರೀಂ ಕೋರ್ಟ್ ಕಟ್ಟಡಕ್ಕೇ ಮುತ್ತಿಗೆ ಹಾಕಿಸಿದರು. ಮಾತ್ರವಲ್ಲ, ಮುಖ್ಯನ್ಯಾಯಮೂರ್ತಿ ಅಬ್ದುಲ್ಲಾ ಸಯೀದ್ ಮತ್ತು ನ್ಯಾಯಾಧೀಶ ಅಲಿ ಹಮಿದದ್ ಅವರನ್ನು ಬಂಧಿಸಲಾಯ್ತು. ಇದು ವಿಶ್ವದಾದ್ಯಂತ ಸಂಚಲನ ಉಂಟುಮಾಡಿತ್ತು.
ಯಾಮೀನ್ ಸಹೋದರನ ಬಂಧನ
ಮುಖ್ಯನ್ಯಾಯಾಧೀಶರನ್ನು ಬಂಧಿಸುವ ಒಂದು ದಿನ ಮೊದಲು ಯಾಮೀನ್ ಅವರ ಸಹೋದರ ಮಾವ್ಮೂನ್ ಅಬ್ದುಲ್ ಗಯೂಮ್ ರನ್ನೂ ಬಂಧಿಸಲಾಗಿತ್ತು. ಇವರು 30 ವರ್ಷಗಳ ಕಾಲ ಮಾಲ್ಡೀವ್ಸ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಗಯೂಮ್ ಅವರು ಸಹ ವಿರೋಧ ಪಕ್ಷದ ಪರವಾಗಿ ನಿಂತಿದ್ದರಿಂದ ಈ ಬೆಳವಣಿಗೆ ಸಂಭವಿಸಿತ್ತು.
ದೊಡ್ಡಣ್ಣನಿಂದ ನೀತಿ ಪಾಠ!
ಮಾಲ್ಡೀವ್ಸ್ ಬಿಕ್ಕಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸಿದ ದೊಡ್ಡಣ್ಣ ಅಮೆರಿಕದ ರಾಷ್ಟ್ರೀಯ ಭದ್ರತಾ ಸಮಿತಿ, 'ಅಮೆರಿಕ ಎಂದಿಗೂ ಮಾಲ್ಡೀವ್ಸ್ ಜನತೆಯ ಪರವಾಗಿ ನಿಲ್ಲುತ್ತದೆ. ಮಾಲ್ಡೀವ್ಸ್ ಸರ್ಕಾರ ಮತ್ತು ಸೇನೆ ಕಾನೂನಿನ ನಿಯಮಗಳಿಗೆ ಬೆಲೆ ನೀಡಬೇಕು, ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಗೌರವಿಸಬೇಕು. ಜಗತ್ತು ನಿಮ್ಮನ್ನು ಗಮನಿಸುತ್ತಿದೆ' ಎಂದು ಟ್ವೀಟ್ ಮಾಡಿತ್ತು. ಈ ಮೂಲಕ ಪರೋಕ್ಷ ಎಚ್ಚರಿಕೆಯನ್ನೂ ನೀಡಿತ್ತು.
ದ್ವೀಪಗಳ ಸುಂದರ ಸ್ವರ್ಗ
ಸುಮಾರು 1192 ದ್ವೀಪಗಳನ್ನು ಹೊಂದಿರುವ ಮಾಲ್ಡೀವ್ಸ್ ಭೂಲೋಕದ ಸ್ವರ್ಗವೆಂದರೂ ತಪ್ಪಿಲ್ಲ. ಆದರೆ ಕೇವಲ 26 ದ್ವೀಪಗಳಲ್ಲಿ ಮಾತ್ರ ಜನವಸತಿ ಇದೆ. ಇದರ ರಾಜಧಾನಿ ಮಾಲೆ, ರಾಜಕೀಯದ ಕೇಂದ್ರವೂ ಹೌದು. ಕೇವಲ 4 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಪುಟ್ಟ ದೇಶ, ಸ್ವಚ್ಛ ಹಾಗೂ ಸುಂದರ ಬೀಚುಗಳಿಂದಲೇ ಪ್ರಸಿದ್ಧಿ ಪಡೆದಿದೆ.