ಬೆಳ್ಳಂಬೆಳಗ್ಗೆ ವರುಣಾರ್ಭಟ: ದಾವಣಗೆರೆಯಲ್ಲಿ ರೈತರ ಪರದಾಟ, ಕಲಬುರಗಿಯಲ್ಲಿ 1 ಸಾವು
ದಾವಣಗೆರೆ, ಜೂನ್ 3: ಬೆಣ್ಣೆನಗರಿ ದಾವಣಗೆರೆಯಲ್ಲಿ ಬೆಳಿಗ್ಗೆ ಒಂದೂವರೆ ಗಂಟೆ ಮಳೆ ಸುರಿಯಿತು. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.
ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಲಾಗಿದ್ದರೂ ಇಂದು ಬೆಳಿಗ್ಗೆ ಆರು ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ, ಮದ್ಯ ಸೇರಿದಂತೆ ಇತರೆ ವಸ್ತುಗಳ ಖರೀದಿಗೆ ಅನುಮತಿ ನೀಡಲಾಗಿತ್ತು. ಆದರೆ, ಆರು ಗಂಟೆಯಿಂದ ಸುರಿಯಲು ಆರಂಭಿಸಿದ ಮಳೆ ಎಂಟು ಗಂಟೆಯವರೆಗೆ ಇತ್ತು. ಇದರಿಂದಾಗಿ ಜನರ ಓಡಾಟ ಕಡಿಮೆ ಆಗಿತ್ತು. ಮಳೆ ಬಂದ ಕಾರಣ ತರಕಾರಿ ವ್ಯಾಪಾರಿಗಳು ಸಂಕಷ್ಟ ಎದುರಿಸಬೇಕಾಯಿತು.
ಇನ್ನು ಅಂಗಡಿಗಳು ತೆರೆದಿದ್ದರೂ ಜನರು ಮನೆಯಿಂದ ಹೊರ ಬರಲಿಲ್ಲ. ಜೋರಾಗಿ ಮಳೆ ಬಂದ ಕಾರಣ ವಾಹನ ಸವಾರರು ಪರದಾಡುವಂತಾಯಿತು. ಮಾರುಕಟ್ಟೆಗೆ ಬೆಳ್ಳಂಬೆಳಿಗ್ಗೆ ಬಂದಿದ್ದ ವರ್ತಕರು, ವ್ಯಾಪಾರಿಗಳು ಹಾಗೂ ರೈತರು ಮಳೆಯಿಂದ ತಪ್ಪಿಸಿಕೊಳ್ಳಲು ಹರಸಾಹಸಪಡಬೇಕಾಯಿತು.
ಕಲಬುರಗಿಯಲ್ಲಿ ಬಾಲಕಿ ಸಾವು
ಕಲಬುರಗಿ ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿ ಮಳೆ ಅಬ್ಬರ ಜೋರಾಗಿದ್ದು, ಭಾರೀ ಮಳೆಗೆ ಮನೆ ಗೋಡೆ ಬಿದ್ದು 7 ವರ್ಷದ ಬಾಲಕಿ ಸಾವನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಳೂಂಡಗಿ ಗ್ರಾಮದಲ್ಲಿ ನಡೆದಿದೆ.
Recommended Video
ಮೃತ ಬಾಲಕಿ ನೀಲಮ್ಮ ತಳವಾರ ಎಂದಿನಂತೆ ಮನೆಯಲ್ಲಿ ತಮ್ಮ ಪೋಷಕರ ಜೊತೆ ಬಾಲಕಿ ಮಲಗಿದ್ದಳು. ಕಳೆದ ರಾತ್ರಿ ಒಂದು ಗಂಟೆ ಸಮಯದಲ್ಲಿ ಭಾರೀ ಮಳೆ ಮತ್ತು ಬಿರುಸಿನ ಗಾಳಿ ಹಿನ್ನೆಲೆ ಮನೆ ಗೋಡೆ ಬಾಲಕಿ ಮೇಲೆ ಕುಸಿದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಅದೃಷ್ಠವಶಾತ್ ಬಾಲಕಿಯ ಪೋಷಕರು ಪಾರಾಗಿದ್ದಾರೆ. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.