ಬಾಂಗ್ಲಾದಲ್ಲಿ ಭಾರಿ ಮಳೆ, ಭೂಕುಸಿತಕ್ಕೆ 57 ಬಲಿ
ಢಾಕಾ, ಜೂನ್ 13: ಬಾಂಗ್ಲಾದೇಶದಲ್ಲಿ ಧಾರಾಕಾರ ಮುಂಗಾರು ಮಳೆ ಸುರಿಯುತ್ತಿದ್ದು ಭೂಕುಸಿತ ಸೇರಿದಂತೆ ಪ್ರಾಕೃತಿಕ ವಿಕೋಪಕ್ಕೆ 57 ಜನ ಸಾವಿಗೀಡಾಗಿದ್ದಾರೆ. ನೂರಾರು ಜನ ಗಾಯಗೊಂಡಿರುವುದೂ ವರದಿಯಾಗಿದೆ.
ಇನ್ನು ಗ್ರಾಮೀಣ ಭಾಗಗಳಿಗೆ ಇನ್ನೂ ರಕ್ಷಣಾ ತಂಡಗಳು ತೆರಳಲು ಸಾಧ್ಯವಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಎಎಫ್'ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಈಗಾಗಲೇ ಮಳೆಯಿಂದ ಭಾದಿತವಾದ ಪ್ರದೇಶಗಳಿಗೆ ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ.
ಆಗ್ನೇಯ ಬಾಂಗ್ಲಾದೇಶ ಭಾಗದಲ್ಲಿ ಹೆಚ್ಚಿನ ಮಳೆ ಸುರಿದಿದ್ದು ಇಲ್ಲಿನ ರಂಗಮತಿ ಜಿಲ್ಲೆಯಲ್ಲಿ ಹೆಚ್ಚಿನ ಸಾವು ನೋವು ನಡೆದಿದ್ದು ವರದಿಯಾಗಿದೆ. ರಂಗಮತಿ ಜಿಲ್ಲೆಯ ಬೆಟ್ಟಗುಡ್ಡ ಪ್ರದೇಶದಲ್ಲಿ ಹೆಚ್ಚಿನ ಬುಡಕಟ್ಟು ಜನಾಂಗಗಳು ವಾಸಿಸುತ್ತವೆ. ಇವೇ ಬುಡಕಟ್ಟು ಜನಾಂಗಗಳು ಮಳೆಯ ಹೊಡೆತಕ್ಕೆ ಗುರಿಯಾಗಿವೆ. ಇಲ್ಲೇ ಗುಡ್ಡ ಕುಸಿದು 35 ಜನ ಸಾವನ್ನಪ್ಪಿದ್ದಾರೆ.
ಇಲ್ಲಿನ ಬುಡಕಟ್ಟ ಜನಾಂಗದ ಮನೆಗಳ ಮೇಲೆ ರಾತ್ರಿ ಹೊತ್ತು ಕುಡ್ಡ ಕುಸಿದು ಬಿದ್ದಿದ್ದು ನಿದ್ರಿಸುತ್ತಿದ್ದವರು ಮಣ್ಣುಪಾಲಾಗಿದ್ದಾರೆ.
ಇನ್ನು ಬಂದಾರ್ಬನ್ ಜಿಲ್ಲೆಯಲ್ಲಿ 6 ಜನ ಸಾವನ್ನಪ್ಪಿದ್ದಾರೆ. ಇನ್ನು ಚಿತ್ತಗಾಂಗ್ ನಲ್ಲಿ 16 ಜನ ಸಾವನ್ನಪ್ಪಿದ್ದಾರೆ. ಇದೇ ಜಿಲ್ಲೆಯಲ್ಲಿ ದಶಕದ ಹಿಂದೆ ಭೂಕುಸಿತ ಸಂಭವಿಸಿ 126 ಜನ ಸಾವಿಗೀಡಾಗಿದ್ದರು.
ಇತ್ತೀಚೆಗೆ ಬಾಂಗ್ಲಾದೇಶಕ್ಕೆ ಸೈಕ್ಲೋನ್ ಮೋರಾ ಅಪ್ಪಳಿಸಿತ್ತು. ಇದರಲ್ಲೇ ಕನಿಷ್ಟ 8 ಜನ ಸಾವಿಗೀಡಾಗಿದ್ದರು. 80ಕ್ಕೂ ಅಧಿಕ ಮನೆಗಳು ಇದರಲ್ಲಿ ಹಾನಿಗೀಡಾಗಿದ್ದವು. ಇದಾದ ಒಂದು ವಾರದ ತರುವಾಯ ಈ ಭಾರೀ ಮಳೆ ಸುರಿದಿದ್ದು ಜೀವ ಹಾನಿ ಆಸ್ತಿ ಹಾನಿಗೆ ಕಾರಣವಾಗಿದೆ. .
ರಾಜಧಾನಿ ಢಾಕಾದಲ್ಲೇ 22 ಸೆಂಟಿ ಮೀಟರ್ ಮಳೆ ಸುರಿದಿದ್ದು ರಸ್ತೆಗಳು ನೀರಿನಿಂದ ಮುಚ್ಚಿ ಹೋಗಿವೆ. ಇದರಿಂದ ಸಾರಿಗೆ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವಾಗಿದೆ.