ಜಮ್ಮು- ಕಾಶ್ಮೀರ ಬಗ್ಗೆ ಭಾರತ- ಪಾಕ್ ಮಧ್ಯೆ ಮಾಲ್ಡೀವ್ಸ್ ನಲ್ಲೂ ಮಾತಿನ ಚಕಮಕಿ
ಮಾಲ್ಡೀವ್ಸ್, ಸೆಪ್ಟೆಂಬರ್ 1: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನ-ಮಾನ ತೆಗೆಯುವ ಭಾರತದ ನಿರ್ಧಾರದ ಬಗ್ಗೆ ಚರ್ಚೆ ನಡೆಸಲು ಪಾಕಿಸ್ತಾನವು ಮಾಡಿದ ಪ್ರಯತ್ನಕ್ಕೆ ಭಾರತ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ಈ ಘಟನೆ ನಡೆದಿರುವುದು ಮಾಲ್ಡೀವ್ಸ್ ನಲ್ಲಿ ಭಾನುವಾರ ನಡೆದ ದಕ್ಷಿಣ ಏಷ್ಯಾದ ಸ್ಪೀಕರ್ ಗಳ ಸಮಾವೇಶದಲ್ಲಿ. ಈ ವೇಳೆ ಭಾರತ ಹಾಗೂ ಪಾಕಿಸ್ತಾನದ ಪ್ರತಿನಿಧಿಗಳ ಮಧ್ಯೆ ಕಾವೇರಿದ ಚರ್ಚೆ ನಡೆದಿದೆ.
ಪಾಕಿಸ್ತಾನದ ಪ್ರತಿನಿಧಿ ಜಮ್ಮು- ಕಾಶ್ಮೀರದ ವಿಷಯವನ್ನು ತೆಗೆದರು. ಇದಕ್ಕೆ ಭಾರತದ ಪ್ರತಿನಿಧಿ- ರಾಜ್ಯಸಭಾದ ಉಪ ಸಭಾಪತಿ ಹರಿವಂಶ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಬ್ರೆಡ್ ತರಲು ಹೋದ 12 ರ ಹುಡುಗ ಏನಾದ? ಕಾಶ್ಮೀರದ ಕಟುವಾಸ್ತವ!
"ಭಾರತದ ಆಂತರಿಕ ವಿಷಯವನ್ನು ಇಲ್ಲಿ ಚರ್ಚೆ ಮಾಡುವುದಕ್ಕೆ ನಾವು ಪ್ರಬಲವಾಗಿ ಆಕ್ಷೇಪಿಸುತ್ತೇವೆ. ಸಮಾವೇಶದ ಉದ್ದೇಶದ ಹೊರಗೆ ಇರುವ ವಿಷಯವನ್ನು ಎತ್ತುವ ಮೂಲಕ ಈ ವೇದಿಕೆಯಲ್ಲಿ ರಾಜಕೀಯ ತರುವುದನ್ನೂ ನಾವು ವಿರೋಧಿಸುತ್ತೇವೆ" ಎಂದು ಹರಿವಂಶ್ ಹೇಳಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನೇತೃತ್ವದಲ್ಲಿ ಭಾರತೀಯ ನಿಯೋಗವು ಈ ಸಮಾವೇಶಕ್ಕೆ ತೆರಳಿದೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನ-ಮಾನ ರದ್ದು ಮಾಡಿ, ಎರಡು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದ ಭಾರತದ ಕ್ರಮಕ್ಕೆ ಪಾಕಿಸ್ತಾನವು ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಜಾಗತಿಕ ಮಟ್ಟದಲ್ಲಿ ವಿವಿಧ ವೇದಿಕೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಜಮ್ಮು- ಕಾಶ್ಮೀರವು ಆಂತರಿಕ ವಿಚಾರ ಎನ್ನುತ್ತಾ ಬರುತ್ತಿದೆ ಭಾರತ.