130 ಕೋಟಿ ಭಾರತೀಯರ ಪ್ರೀತಿಯನ್ನು ನಿಮಗೆ ತಂದಿದ್ದೇನೆ; ಮೋದಿ
ಢಾಕಾ, ಮಾರ್ಚ್ 27: "ಇಲ್ಲಿನ ಒರಕಂಡಿ ದೇಗುಲಕ್ಕೆ ಭೇಟಿ ನೀಡಬೇಕೆಂದು ಬಹುವರ್ಷಗಳಿಂದ ಕಾಯುತ್ತಿದ್ದೆ. ಆ ದಿನ ಕೊನೆಗೂ ಇಂದು ಬಂತು" ಎಂದು ಬಾಂಗ್ಲಾದೇಶದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಬಾಂಗ್ಲಾದೇಶಕ್ಕೆ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಬೆಳಿಗ್ಗೆ ಒರಕಂಡಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭ ಅಲ್ಲಿನ ಮತುವಾ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, "ಬಂಗಾಳದಲ್ಲಿ ಅಸ್ಪೃಶ್ಯರಿಗೆ ಬೆಂಬಲವಾಗಿ ನಿಂತು ಮತುವಾ ಸಮುದಾಯ ನಿರ್ಮಿಸಿದ ಹರಿಚಂದ್ ಠಾಕೂರ್ ಅವರಿಂದ ನಾನು ಈ ಪವಿತ್ರ ಸ್ಥಳದಲ್ಲಿ ತಲೆಬಾಗಿ ನಿಲ್ಲಲು ಸಾಧ್ಯವಾಗಿದೆ" ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ
ಪಶ್ಚಿಮ ಬಂಗಾಳದ ಠಾಕೂರ್ನಗರಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿಕೊಂಡ ಅವರು, "ಮತುವಾದ ಸಹೋದರ, ಸಹೋದರಿಯರು ಅಲ್ಲಿ ನನಗೆ ಕುಟುಂಬ ಸದಸ್ಯ ಎಂಬಂತೆ ಪ್ರೀತಿ ನೀಡಿದರು. ಬಾಂಗ್ಲಾದ ಸುವರ್ಣ ಸ್ವಾತಂತ್ರ್ಯ ದಿನದ ಈ ಸಂಭ್ರಮದಲ್ಲಿ 130 ಕೋಟಿ ಭಾರತೀಯರ ಪರವಾಗಿ ಪ್ರೀತಿ ಹಾಗೂ ಶುಭಾಶಯಗಳನ್ನು ನಾನು ನಿಮಗಾಗಿ ತಂದಿದ್ದೇನೆ" ಎಂದು ಶುಭ ಹಾರೈಸಿದರು.
ಅಭಿವೃದ್ಧಿ ಕಾರ್ಯಗಳಿಂದ ಬಾಂಗ್ಲಾ ಹಾಗೂ ಭಾರತ ಈ ಎರಡೂ ದೇಶಗಳು ವಿಶ್ವದಲ್ಲಿ ಉನ್ನತಿ ಸಾಧಿಸಬೇಕು. ವಿಶ್ವದಲ್ಲಿ ಅಭದ್ರತೆ, ಭಯೋತ್ಪಾದನೆ, ಅಹಿತಕರ ಘಟನೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಎರಡು ದೇಶಗಳಿಗೂ ಪ್ರೀತಿ, ಶಾಂತಿಯ ಅವಶ್ಯಕತೆ ಇದೆ ಎಂದರು. ಈ ಮೌಲ್ಯ, ಶಿಕ್ಷಣವನ್ನು ನಮಗೆ ಹರಿಚಾಂದ್ ಠಾಕೂರ್ ಅವರು ನೀಡಿದ್ದಾರೆ ಎಂದರು.