ಕಾಲರಾ ಭೀತಿಯ ಹೈಟಿಯಲ್ಲಿ ಮುಂದೆ ಆಹಾರಕ್ಕೂ ಸಮಸ್ಯೆಯೇ!
ಹೈಟಿ, ಅಕ್ಟೋಬರ್ 7: ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ಹೈಟಿಯಲ್ಲಿರುವುದು ಮಧ್ಯಂತರ ಸರಕಾರ. ಮುಂದಿನ ಭಾನುವಾರ ಚುನಾವಣೆ ನಡೆದು, ಹೊಸ ಸರಕಾರ ರಚನೆಯಾಗಬೇಕಿತ್ತು. ಅದರೆ ಮತದಾನದ ಮುಂದಿನ ದಿನಾಂಕ ಯಾವುದು ಅಂತ ಯಾರೂ ಹೇಳುವ ಸ್ಥಿತಿಯಲ್ಲಿಲ್ಲ.
ಅಂತರರಾಷ್ಟ್ರೀಯ ಸಂಘ-ಸಂಸ್ಥೆಗಳು ಸರಕಾರದೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕು, ಇದೇ ವೇಳೆ ಜನರ ಜೀವ ಉಳಿಸುವುದಕ್ಕೆ ಪ್ರಯತ್ನಿಸಬೇಕು. ಮುಂಬರುವ ದಿನಗಳಲ್ಲಿ ಇದೇ ಬಿಕ್ಕಟ್ಟಿಗೂ ಕಾರಣವಾಗಬಹುದು ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. 2010ರ ಭೂಕಂಪದಿಂದ ಆ ದೇಶ ಸಾಕಷ್ಟು ಪಾಠ ಕಲಿತಿದೆ ಎನ್ನುತ್ತಾರೆ ವಾಷಿಂಗ್ಟನ್ ನಲ್ಲಿರುವ ಸಂಶೋಧಕ ಜೇಕ್ ಜಾನ್ ಸ್ಟನ್.[ನಸೀಬು ಖೋತಾ ಹೈಟಿ ಜನರ ಪಾಲಿಗೆ ಇದೆಲ್ಲಿಯ ಚಂಡಮಾರುತ?]
ಈ ದುರಂತದಿಂದ ಜನರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಎಷ್ಟು ಬೇಗ ನೆರವು ಮಾಡಬಹುದು ಅಷ್ಟು ಶೀಘ್ರವಾಗಿ ಮಾಡಬೇಕು. ದಾನಿಗಳು ಸರಕಾರದ ಮೂಲಕವೇ ನೆರವು ಮಾಡಬೇಕು ಅಂದುಕೊಂಡರೆ ತುಂಬ ತಡವಾಗುತ್ತದೆ ಎನ್ನುತ್ತಾರೆ ಅವರು.
ಈ ಮಧ್ಯೆ ಕಾಲರಾ ಭೀತಿ ಎದುರಾಗಿದೆ. ಈ ಹಿಂದೆ ಭೂಕಂಪವಾದಾಗಲೂ ಹೈಟಿಯಲ್ಲಿ ಇದೇ ರೀತಿ ಸಮಸ್ಯೆ ಎದುರಾಗಿತ್ತು. ಈಗಾಗಲೇ ಮೂರು ಕಾಲರಾ ಪ್ರಕರಣಗಳು ಪತ್ತೆಯಾಗಿವೆ ಎಂದು ಸಂಸ್ಥೆಯೊಂದು ತಿಳಿಸಿದೆ. ಇಲ್ಲಿ ಕೆಲಸ ಮಾಡುತ್ತಿರುವ ಅಂತರರಾಷ್ತ್ರೀಯ ಸಂಸ್ಥೆಯೊಂದರ ಪ್ರಕಾರ ಈ ವರ್ಷ 26 ಸಾವಿರ ಕಾಲರಾ ಪ್ರಕರಣಗಳು ಹೈಟಿಯಲ್ಲಿ ಕಂಡುಬಂದಿವೆ.[ಹರಿಕೇನ್ ಚಂಡಮಾರುತ ಹೊಡೆತಕ್ಕೆ ಹೈಟಿ ದೇಶದಲ್ಲಿ 280 ಸಾವು]
ಇನ್ನು ವಿಶ್ವಸಂಸ್ಥೆ ಪ್ರಕಾರ, 10 ಲಕ್ಷಕ್ಕೂ ಹೆಚ್ಚು ಮಂದಿ ಚಂಡಮಾರುತದಿಂದ ತೊಂದರೆಗೀಡಾಗಿದ್ದಾರೆ. ಅದರಲ್ಲಿ ಮೂರನೇ ಒಂದು ಭಾಗದಷ್ಟು ಜನಕ್ಕೆ ಮನವೀಯ ನೆರವಿನ ಅಗತ್ಯವಿದೆ. ವಿಶ್ವಸಂಸ್ಥೆಯ ಡಿ ಟರಂಟೋ ಹೇಳುವಂತೆ, ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ತುರ್ತು ಆಶ್ರಯ ತಾಣಗಳಲ್ಲಿದ್ದಾರೆ.
ನಾಗರಿಕ ರಕ್ಷಣಾ ಪಡೆಯ ಲೆಕ್ಕಾಚಾರದ ಪ್ರಕಾರ ದೇಶದಾದ್ಯಂತ ಇಪ್ಪತ್ತೇಳು ಸಾವಿರ ಜನರಿಗೆ ತೊಂದರೆಯಾಗಿದೆ. ಆ ಪೈಕಿ ದಕ್ಷಿಣ ಭಾಗದಲ್ಲೇ 20 ಸಾವಿರ ಮನೆಗಳಿಗೆ ಹಾನಿಯಾಗಿದೆ. ನೂರಾರು ಮಂದಿಗೆ ಗಾಯಗಳಾಗಿವೆ. ಇನ್ನು ದೇಶದಲ್ಲೇ ಅತಿ ಹೆಚ್ಚು ಬಾಳೆಹಣ್ಣು ಬೆಳೆಯುವ ಪ್ರದೇಶದಲ್ಲಿ ಶೇ 80ರಷ್ಟು ಬೆಳೆಹಾನಿಯಾಗಿದೆ. ಗಾಳಿ-ಪ್ರವಾಹದಿಂದ ಇಪ್ಪತ್ತು ಸಾವಿರ ಬಾಳೆಹಣ್ಣು ಬೆಳೆಗಾರರ ಕುಟುಂಬ ರಸ್ತೆಗೆ ಬಂದಿದೆ.
ಜೆರೆಮಿ, ಲೆಸ್ ಕೆಯ್ಸೆಯಲ್ಲಿ ಅತಿ ಹೆಚ್ಚಿನ ಹಾನಿಯಾಗಿದೆ. ಜನರು ಮನೆಗಳನ್ನು, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಹೈಟಿ ದೇಶದ ದಕ್ಷಿಣ ಭಾಗದ ಕೃಷಿ ಭೂಮಿಗಳು ಪ್ರವಾಹದಿಂದ ಜಲಾವೃತವಾಗಿವೆ. ಇನ್ನು ಮುಂದೆ ದೇಶದ ಆಹಾರ ಉತ್ಪಾದನೆ ಹೇಗೆ ಎಂಬ ಬಗ್ಗೆ ಆತಂಕವಾಗಿದೆ ಎಂದು ಹರ್ವಿಲ್ ಚೆರುಬಿನ್ ಎಂಬುವರು ಆತಂಕ ವ್ಯಕ್ತಪಡಿಸಿದ್ದಾರೆ. ಬಹತೇಕ ಬೆಳೆಗಳು ಹಾಳಾಗಿವೆ. ಕೃಷಿ ಭೂಮಿಯು ಹೊಂಡಗಳಾಗಿವೆ. ಕಸ, ಸಮುದ್ರದ ನೀರಿನಿಂದ ತುಂಬಿಹೋಗಿದೆ ಎಂದು ಅವರು ಹೇಳುತ್ತಾರೆ.