ಪಾಕಿಸ್ತಾನ ಒತ್ತಡದಲ್ಲಿ; ಭಯೋತ್ಪಾದಕ ಹಫೀಜ್ ಸಯೀದ್ ಶೀಘ್ರದಲ್ಲೇ ಬಂಧನ
ಲಾಹೋರ್, ಜುಲೈ 4: ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ ಮುಖ್ಯಸ್ಥ ಮತ್ತು ಇತರ ಹನ್ನೆರಡು ಸಹಚರರನ್ನು 'ಶೀಘ್ರದಲ್ಲೇ' ಬಂಧಿಸಲಾಗುವುದು ಎಂದು ಗುರುವಾರ ಪಾಕಿಸ್ತಾನ ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದನೆಗೆ ಹಣಕಾಸಿನ ನೆರವು ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡ ಒಂದು ದಿನದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.
ಪಾಕಿಸ್ತಾನದ ಪಂಜಾಬ್ ಪೊಲೀಸ್ ನ ಭಯೋತ್ಪಾದನಾ ವಿರೋಧಿ ದಳವು ಬುಧವಾರದಂದು ಹಫೀಜ್ ಸಯೀದ್ ಸೇರಿ ಹದಿಮೂರು ಮಂದಿ ವಿರುದ್ಧ ಇಪ್ಪತ್ಮೂರು ಎಫ್ ಐಆರ್ ದಾಖಲಿಸಿತ್ತು. ಪಂಜಾಬ್ ಪ್ರಾಂತ್ಯದ ವಿವಿಧ ನಗರಗಳಲ್ಲಿ ಭಯೋತ್ಪಾದನೆಗೆ ಹಣಕಾಸಿನ ನೆರವು ಸೇರಿದಂತೆ ವಿವಿಧ ಪ್ರಕರಣ ದಾಖಲಿಸಲಾಯಿತು.
ಹಫೀಜ್ ಸಯೀದ್ ಹಾಗೂ ಸಹಚರರ ಮೇಲೆ ಮುರಕೊಂಡು ಬಿದ್ದ ಪಾಕಿಸ್ತಾನ
ಎಫ್ ಐಆರ್ ನಲ್ಲಿ ಹಫೀಜ್ ಸಯೀದ್ ನ ಹೆಸರಿದ್ದರೂ ಆತನನ್ನು ಈ ತನಕ ಏಕೆ ಬಂಧಿಸಿಲ್ಲ ಎಂಬ ಪ್ರಶ್ನೆಗೆ ಉತ್ತರ ದೊರೆತಿದ್ದು, ಮೊದಲಿಗೆ ಶಂಕಿತರ ವಿರುದ್ಧ ಎಫ್ ಐಆರ್ ದಾಖಲಿಸಿದ್ದೇವೆ. ನಂತರ ಆತನನ್ನು ಬಂಧಿಸಲಾಗುವುದು. ಎಫ್ ಐಆರ್ ನಲ್ಲಿ ಹೆಸರಿಸಲಾಗಿರುವ ಹಫೀಜ್ ಸಯೀದ್ ಮತ್ತಿತರರನ್ನು ಬಂಧಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಫೀಜ್ ಸಯೀದ್ ನ ಮೇಲೆ ಕೈಯಿಡುವ ಮುನ್ನ ಪಾಕಿಸ್ತಾನ ಸರಕಾರದ ಉನ್ನತ ಮಟ್ಟದಿಂದ ಆದೇಶ ಬರಲಿ ಎಂದು ಪೊಲೀಸರು ಕಾಯುತ್ತಿದ್ದಾರೆ. ಏಕೆಂದರೆ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ ಎಟಿಎಫ್)ನ ಮಾತಿನಂತೆ ಪಾಕ್ ಸರಕಾರ ನಡೆದುಕೊಳ್ಳಬೇಕಿದ್ದು, ಈ ವಾರ ಲಾಹೋರ್ ನಾ ಜೌಹಾರ್ ನಲ್ಲಿರುವ ಸಯೀದ್ ನ ಮನೆಯಲ್ಲೇ ಆತನ ಬಂಧನ ಆಗಬಹುದು ಎಂದು ಮೂಲಗಳು ತಿಳಿಸಿವೆ.
ಎಫ್ ಎಟಿಎಫ್ ನಿಂದ ಜೂನ್ ತಿಂಗಳ ಕೊನೆಗೆ ಅಂತಿಮ ಗಡುವು ನೀಡಲಾಗಿತ್ತು. ಅದನ್ನು ಈಗಾಗಲೇ ದಾಟಲಾಗಿದೆ. ಇದೀಗ ಮತ್ತೊಂದು ಗಡುವು ಅಕ್ಟೋಬರ್ ನೀಡಿದ್ದು, ಅಷ್ಟರಲ್ಲಿ ಕೊಟ್ಟ ಮಾತಿನಂತೆ ಉಗ್ರಗಾಮಿಗಳನ್ನು ನಿಗ್ರಹಿಸಲು ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಿ, ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದಾಗಿದೆ.