ಇದಪ್ಪಾ ವರಸೆ! ಭಾರತ-ನೇಪಾಳದ ನಡುವೆ ಚೀನಾಗೇನು ಕೆಲಸ?
ನವದೆಹಲಿ, ಮೇ.22: ಕೊರೊನಾ ವೈರಸ್ ಸೋಂಕು ಜೀವ ಮತ್ತು ಜನಜೀವನಕ್ಕಷ್ಟೇ ಮುಳುವಾಗಿಲ್ಲ. ಜಾಗತಿಕ ಮಟ್ಟದಲ್ಲಿ ರಾಷ್ಟ್ರಗಳ ನಡುವೆ ಕೊವಿಡ್-19 ಕಿಚ್ಚು ಹೊತ್ತಿಸುತ್ತಿದೆ. ಕೊರೊನಾ ವೈರಸ್ ನೆಪದಲ್ಲೇ ಭಾರತದ ವಿರುದ್ಧ ನೆರೆಯ ರಾಷ್ಟ್ರ ನೇಪಾಳ ತಿರುಗಿ ಬಿದ್ದಿದೆ.
Recommended Video
ಲಿಪುಲೇಖ್, ಕಲಪನಿ, ಹಾಗೂ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಂತೆ ನೇಪಾಳ ಬಿಡುಗಡೆ ಮಾಡಿರುವ ಹೊಸ ನಕ್ಷೆಯು ತೀವ್ರ ವಿವಾದ ಸೃಷ್ಟಿಸಿದೆ. ನೇಪಾಳದ ಹೊಸ ನಕ್ಷೆಗೆ ಬೆಂಬಲಿಸುವ ರೀತಿಯಲ್ಲಿ ಬಾಲಿವುಡ್ ನಟಿ ಮನೀಷಾ ಕೊಯಿರಾಲಾ ಟ್ವೀಟ್ ಮಾಡಿದ್ದು, ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಅಯ್ಯೋ, ಇದೇನಾಯ್ತು? ಚೀನಾಗಿಂತ ಭಾರತವೇ ಡೇಂಜರ್ ಎಂದ ನೇಪಾಳ!
ಎರಡು ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧ ವೃದ್ಧಿಗೆ ಸೇತುವೆಯಾಗುವ ಬದಲು ಈ ರೀತಿ ಏಕಪಕ್ಷೀಯ ನಿಲುವು ಪ್ರದರ್ಶಿಸಿದ ಬಾಲಿವುಡ್ ನಟಿ ಮನೀಷಾ ಕೊಯಿರಾಲಾಗೆ ಕ್ರಿಮಿನಲ್ ಲಾಯರ್, ಮಿಜಾರೋ ರಾಜ್ಯದ ಮಾಜಿ ರಾಜ್ಯಪಾಲರು ಹಾಗೂ ಭಾರತದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪತಿಯೂ ಆಗಿರುವ ಸ್ವರಾಜ್ ಕೌಶಾಲ್ ಸರಣಿ ಟ್ವೀಟ್ ಗಳ ಮೂಲಕ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ವಿವಾದ ಸೃಷ್ಟಿಸಿದ್ದೇ ನಟಿ ಮನೀಷಾ ಕೊಯಿರಾಲಾ ನಿಲುವು!
ಭಾರತ-ನೇಪಾಳ ಗಡಿ ವಿವಾದದ ನಡುವೆಯೂ ನೇಪಾಳ ಸರ್ಕಾರವು ಇತ್ತೀಚಿಗೆ ಬಿಡುಗಡೆ ಮಾಡಿದ ಪರಿಷ್ಕೃತ ಭೂನಕ್ಷೆಗೆ ಬಾಲಿವುಡ್ ನಟಿ ಬೆಂಬಲ ವ್ಯಕ್ತಪಡಿಸಿದ್ದರು. ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಗ್ಯಾವಾಲಿ ಟ್ವೀಟ್ ಗೆ ಮನೀಷಾ ಕೊಯಿರಾಲಾ ಪ್ರತಿಕ್ರಿಯೆ ನೀಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. "ಪುಟ್ಟ ರಾಷ್ಟ್ರವಾಗಿರುವ ನೇಪಾಳದ ಘನತೆಯನ್ನು ಕಾಪಾಡಿದ್ದಕ್ಕಾಗಿ ಧನ್ಯವಾದ. ಮೂರು ರಾಷ್ಟ್ರಗಳು ಪರಸ್ಪರ ಗೌರವ ಮತ್ತು ಶಾಂತಿಯುತವಾಗಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕಿದೆ" ಎಂದು ಬಾಲಿವುಡ್ ನಟಿ ಮನೀಷಾ ಕೊಯಿರಾಲಾ ಟ್ವೀಟ್ ಮಾಡಿದ್ದರು. ನೇಪಾಳ ಮತ್ತು ಭಾರತ ಗಡಿ ವಿವಾದದ ನಡುವೆ ಚೀನಾವನ್ನು ಕರೆತರುವ ಬಗ್ಗೆ ಉಲ್ಲೇಖಿಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ರಾಜಕೀಯ ಹಿನ್ನೆಲೆಯುಳ್ಳ ನೇಪಾಳದ ಮನೀಷಾ ಕೊಯಿರಾಲಾ
ನೇಪಾಳದ ಕಠ್ಮಂಡು ಮೂಲದ ರಾಜಕಾರಣಿ ಪ್ರಕಾಶ್ ಕೊಯಿರಾಲಾ ಪುತ್ರಿಯೇ ಮನೀಷಾ ಕೊಯಿರಾಲಾ. ಬಾಲಿವುಡ್ ನಟಿ ಮನೀಷಾ ಕೊಯಿರಾಲಾ ರಾಜಕೀಯ ಹಿನ್ನೆಲೆ ಹೊಂದಿದ್ದು, ಇವರ ಅಜ್ಜ ಬಿಶ್ವೇಶ್ವರ ಪ್ರಸಾದ್ ಕೊಯಿರಾಲಾ 1959-1960ರ ಅವಧಿಯಲ್ಲಿ ನೇಪಾಳ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಮನೀಷಾ ಕೊಯಿರಾಲಾಗೆ ಸ್ವರಾಜ್ ಕೌಶಾಲ್ ಇತಿಹಾಸದ ಕಥೆ
ನೇಪಾಳವು ಎದುರಿಸಿದ ಸಂದಿಗ್ಘ ಪರಿಸ್ಥಿತಿಯಲ್ಲಿ ಭಾರತ ಮತ್ತು ಭಾರತೀಯರು ನೇಪಾಳದ ಜೊತೆಗಿತ್ತು. ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯ ಅಷ್ಟೊಂದು ಆತ್ಮೀಯವಾಗಿದೆ. ಈ ಹಿಂದೆ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯ ಮತ್ತು ತಾವು ಅವರ ಕುಟುಂಬದ ಜೊತೆಗೆ ಹೊಂದಿರುವ ಸ್ನೇಹ ಸಂಬಂಧವನ್ನು ಸಾಕ್ಷೀಕರಿಸುವಂತಾ ಒಂದೊಂದು ಘಟನೆಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಮನೀಷಾ ಕೊಯಿಲಾರಾರಿಗೆ ಸ್ವರಾಜ್ ಕೌಶಾಲ್ ತಿಳಿ ಹೇಳುವ ಕೆಲಸವನ್ನು ಮಾಡಿದ್ದಾರೆ.
1942: A Love Story ಸಿನಿಮಾ ಜ್ಞಾಪಿಸಿಕೊಂಡ ಕೌಶಾಲ್
ಮನೀಷಾ ಕೊಯಿಲಾರಾ ನಿನ್ನ ಜೊತೆಗೆ ನಾನು ವಾದ ಮಾಡುತ್ತಿಲ್ಲ, ನೀನು ನನ್ನ ಮಗಳಿದ್ದಂತೆ. ನಾನು ಯಾವಾಗಲೂ ನಿನ್ನನ್ನು ಮಗಳೆಂದೇ ಭಾವಿಸಿದ್ದೇನೆ. ಕಳೆದ 1994ರಲ್ಲಿ ಬಾಲಿವುಡ್ ನಲ್ಲಿ ಸಖತ್ ಸದ್ದು ಮಾಡಿದ 1942: A Love Story ಸಿನಿಮಾದ ಬಗ್ಗೆ ಒಮ್ಮೆ ನೆನಪು ಮಾಡಿಕೊಬೇಕು. ಅಂದು ಸಿನಿಮಾಕ್ಕಾಗಿ ಡಿದ್ದಾರೆ. ವಿಧು ವಿನೋದ್ ಛೋಪ್ರಾ ನಿರ್ದೇಶಿಸಿದ ಸಿನಿಮಾದ ಪ್ರಿಮೀಯರ್ ಗೆ ಆಗಮಿಸುವಂತೆ ಅಂದು ನಮ್ಮನ್ನು ಆಹ್ವಾನಿಸಲಾಗಿತ್ತು. ಸುಷ್ಮಾ ಸ್ವರಾಜ್ ಹಾಗೂ ತಾವು ಸಿನಿಮಾವನ್ನು ನೋಡಿದ್ದೆವು. ಅಂದು ನಮ್ಮ ಪುತ್ರಿ ಬನ್ಸುರಿಯನ್ನು ನೀನು ನಿನ್ನ ತೊಡೆ ಮೇಲೆ ಕುಳ್ಳರಿಸಿಕೊಂಡ ನೆನಪಿದೆ.
ಪ್ರಕಾಶ್ ಕೊಯಿಲಾರಾ ಹಾಗೂ ತಮ್ಮ ಸ್ನೇಹದ ಬಗ್ಗೆ ಉಲ್ಲೇಖ
ಸಿನಿಮಾ ರಂಗ ಪ್ರವೇಶಕ್ಕೂ 27 ವರ್ಷಗಳ ಹಿಂದೆ ದಕ್ಷಿಣ ವಿಭಾಗದ ಸಾಕೇತ್ ನಲ್ಲಿರುವ ಎಪಿಜೆ ಶಾಲೆಯಲ್ಲಿ ನೀವು ವ್ಯಾಸಂಗ ಮಾಡುತ್ತಿದ್ದಿರಿ. ಅಂದಿನಿಂದಲೂ ನಿಮ್ಮ ತಂದೆ ಪ್ರಕಾಶ್ ಕೊಯಿಲಾರಾ ನನ್ನ ಸ್ನೇಹಿತರಾಗಿದ್ದಾರೆ. ನಿಮ್ಮ ತಾಯಿ ಸುಷ್ಮಾ ಕೊಯಿಲಾರಾ ನನ್ನ ತಂಗಿ ಸಮಾನರಾಗಿದ್ದಾರೆ. ನಾವೆಲ್ಲ ಜೊತೆಗಿದ್ದುಕೊಂಡು ಕಷ್ಟದ ಸಂದರ್ಭಗಳನ್ನು ಎದುರಿಸಿದ್ದೇವೆ. ಮನೀಷಾ ಕೊಯಿಲಾರಾ ಕುಟುಂಬದವರ ಶ್ರೀಮಂತ ಸಂಪ್ರದಾಯ ಬಗ್ಗೆಯೂ ಗೊತ್ತು ಹಾಗೂ ಕುಟುಂಬದವರ ಹೋರಾಟದ ಬಗ್ಗೆಯೂ ಗೊತ್ತಿದೆ ಎಂದು ಸ್ವರಾಜ್ ಕೌಶಾಲ್ ಟ್ವೀಟ್ ಮಾಡಿದ್ದಾರೆ.
ಬಿಶ್ವೇಶ್ವರ ಪ್ರಸಾದ್ ಕೊಯಿರಾಲಾ ಜೊತೆಗಿನ ಘಟನೆಯ ನೆನಪು
ನಾನು ನಿಮ್ಮ ಅಜ್ಜ ಬಿಶ್ವೇಶ್ವರ ಪ್ರಸಾದ್ ಕೊಯಿರಾಲಾ ಕ್ಯಾನ್ಸರ್ ಡಯಾಗ್ನಸ್ಟಿಕ್ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ಕ್ಯಾನ್ಸರ್ ಅಂತಿಮ ಹಂತದಲ್ಲಿ ತಾವಿದ್ದು, ಹೆಚ್ಚೆಂದರೆ ಆರು ತಿಂಗಳ ಕಾಲ ಬದುಕಬಹುದು ಎಂದು ಬಿಪಿ ಕೊಯಿಲಾರಾ ಧೈರ್ಯದಿಂದ ಹೇಳಿದ್ದರು. ನನಗೆ ಅಂದು ತುಂಬಾ ನೋವಾಯಿತು. ಆದರೆ ಈ ಮಾತನ್ನು ಹೇಳುವಾಗ ಅವರ ಮುಖದಲ್ಲಿ ಸಾವಿನ ಬಗ್ಗೆ ಯಾವುದೇ ಭಯ ಕಾಣಿಸಲಿಲ್ಲ. ಮೊದಲ ಸಹೋದರನ ಹೆಸರು ಬಿಪಿ ಕೊಯಿಲಾರಾ ಹಾಗೂ ಎರಡನೇ ಸಹೋದರನ ಗಿರಿಜಾ ಪ್ರಸಾದ್ ಕೊಯಿಲಾರಾ ಕೂಡಾ ನೇಪಾಳ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ನಿಮ್ಮ ಚಿಕ್ಕಮ್ಮ ಹಾಗೂ ನನ್ನ ಸ್ನೇಹಿತೆಯಾಗಿದ್ದ ಶೈಲಜಾ ಆಚಾರ್ಯ ನೇಪಾಳದ ಉಪ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಮನೀಷಾ ಕೊಯಿಲಾರಾ ಅಜ್ಜನ ಹೋರಾಟದ ಬಗ್ಗೆ ಟ್ವೀಟ್
ನೇಪಾಳದಲ್ಲಿ ಕೊಯಿಲಾರಾ ಕುಟುಂಬದ ಶ್ರೀಮಂತ ಸಂಪ್ರದಾಯವಷ್ಟೇ ಅಲ್ಲ, ಹೋರಾಟದ ಬಗ್ಗೆಯೂ ತಿಳಿದಿದೆ. ನೇಪಾಳ ಪ್ರಧಾನಮಂತ್ರಿಯಾಗಿದ್ದ ಬಿಶ್ವೇಶ್ವರ ಪ್ರಸಾದ್ ಕೊಯಿರಾಲಾ 18 ವರ್ಷಗಳ ಕಾಲ ದೇಶಕ್ಕಾಗಿ ಜೈಲುವಾಸ ಅನುಭವಿಸಿದ್ದರು. 26ನೇ ವಯಸ್ಸಿನಲ್ಲೇ ನಿಮ್ಮ ಚಿಕ್ಕಮ್ಮ ಶೈಲಜಾ ಕೂಡ 8 ವರ್ಷ ಸೆರೆವಾಸ ಅನುಭವಿಸಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರಕಾಶ್ ಕೊಯಿಲಾರಾ ಕೂಡ ಹೋರಾಟದ ಬದುಕನ್ನು ನೋಡಿದ್ದಾರೆ.
ನೇಪಾಳದ ಹೋರಾಟದ ಹಾದಿಯಲ್ಲಿ ಭಾರತ
ನೇಪಾಳಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಪ್ರಕಾಶ್ ಕೊಯಿಲಾರಾ ಕೂಡಾ ಹೋರಾಟದ ಹಾದಿಯಲ್ಲಿ ನಡೆದುಕೊಂಡು ಬಂದಿದ್ದರು. ಜಯಪ್ರಕಾಶ್ ನಾರಾಯಣ್, ರಾಮಮನೋಹರ್ ಲೋಹಿಯಾ, ಜಾರ್ಜ್ ಫರ್ನಾಂಡಿಸ್, ಹಾಗೂ ಭಾರತದ 8ನೇ ಪ್ರಧಾನಮಂತ್ರಿಯಾಗಿದ್ದ ಚಂದ್ರಶೇಖರ್ ಜೀ ಕೂಡಾ ನೇಪಾಳದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಾಥ್ ಕೊಟ್ಟಿದ್ದರು. ಇದರಲ್ಲಿ ಚಂದ್ರಶೇಖರ್ ಜೀ ಅವರ ಪಾತ್ರ ಬಹುಮುಖ್ಯವಾಗಿತ್ತು. 1973ರಲ್ಲಿ ಕೆಲವು ವಾರಗಳ ಕಾಲ ತಾವೂ ಕೂಡಾ ನೇಪಾಳದಲ್ಲಿ ಉಳಿದುಕೊಂಡಿದ್ದು, ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದೆವು. ಅಂದು ಆ ಹೋರಾಟದಿಂದ ಭಾರತ ಮತ್ತು ಭಾರತೀಯರಿಗೆ ಏನೂ ಆಗಬೇಕಿರಲಿಲ್ಲ.
ಭಾರತದ ವಿರುದ್ಧ ಚೀನಾ ಪಿತೂರಿ ಎಲ್ಲರಿಗೂ ತಿಳಿದಿದೆ
ವಿಶ್ವದಲ್ಲಿ ಅತಿದೊಡ್ಡ ಹಿಂದೂರಾಷ್ಟ್ರ ಎನಿಸಿರುವ ಭಾರತದ ವಿರುದ್ಧ ಚೀನಾ ಗಡಿ ವಿವಾದದ ನೆಪದಲ್ಲಿ ಪಿತೂರಿ ನಡೆಸುತ್ತಿರುವುದು ಭಾರತೀಯರಿಗೆ ಗೊತ್ತಿದೆ. ಚೀನಾದವರು ಮಾವೋವಾದಿಗಳ ಜೊತೆಗೆ ಸೇರಿಕೊಂಡಿದ್ದಾರೆ. ಗಡಿಪ್ರದೇಶದಲ್ಲಿ ಪ್ರಚಂದ್ ಮತ್ತು ಬಾಬುರಾಮ್ ಭಟ್ಟಾರಾಯ್ ಎಂಬುವವರು ವಾಸವಿದ್ದು, ಹಿಂದೂಗಳು ಎಂಬ ಮಾತ್ರಕ್ಕೆ ಅಲ್ಲಿದ್ದವರನ್ನು ಓಡಿಸಲಾಯಿತು. ಅಲ್ಲಿಗೆ ಅವರ ಕಾರ್ಯಾಚರಣೆ ಮುಗಿಯಿತು.
ಕಮ್ಯುನಿಷ್ಟ್ ಗಳನ್ನು ಎತ್ತಿಕಟ್ಟುವ ತಂತ್ರ
ಭಾರತದ ವಿರುದ್ಧ ಚೀನಾ ಕಮ್ಯುನಿಷ್ಟ್ ಗಳನ್ನು ಎತ್ತಿಕಟ್ಟುತ್ತಿದೆಯೋ ಅಥವಾ ಕಮ್ಯುನಿಷ್ಟ್ ಗಳೇ ಚೀನಾವನ್ನು ಭಾರತದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೋ ಗೊತ್ತಿಲ್ಲ. ಆದರೆ ಎರಡರ ಫಲಿತಾಂಶವೂ ಒಂದೇ ಆಗಿದೆ. ಈ ಮೊದಲು ಭಾರತದ ಜೊತೆಗಿನ ಚೀನಾ ಗಡಿಯು ಹಿಮಾಲಯವರೆಗಷ್ಟೇ ಇತ್ತು. ಆದರೆ ಇದೀಗ ನೇಪಾಳದ ಗಡಿ ಪ್ರದೇಶ ಬಿರ್ ಗಂಜ್ ವರೆಗೂ ತಲುಪಿರುವ ಸೂಚನೆ ಕಂಡು ಬರುತ್ತಿದೆ.
ಭಾರತ-ನೇಪಾಳದ ನಡುವೆ ಚೀನಾಗೇನು ಕೆಲಸ?
ಭಾರತಕ್ಕೆ ನೇಪಾಳದಿಂದ ಕುಂದುಕೊರತೆಗಳು ಕಾಣಿಸಿರಬಹುದು, ನೇಪಾಳಕ್ಕೆ ಭಾರತದ ಜೊತೆಗೆ ಚರ್ಚಿಸಲು ಗಂಭೀರ ವಿಚಾರಗಳೇ ಇರಬಹುದು. ಅದು ಭಾರತ ಮತ್ತು ನೇಪಾಳಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ. ಇದರ ಮಧ್ಯೆ ಚೀನಾವನ್ನು ಕರೆ ತರುವುದು ಯಾಕೆ, ಈ ಬೆಳವಣಿಗೆ ನಮಗೆ ಉತ್ತಮ ಎನಿಸದು. ನೇಪಾಳದ ಪಾಲಿಗೂ ಇದು ಒಳ್ಳೆಯದಲ್ಲ. ನೀವು ಚೀನಾವನ್ನು ಮಧ್ಯ ತಂದರೆ ಭಾರತ ಮತ್ತು ನೇಪಾಳದ ನಡುವಿನ ಸಾವಿರಾರು ವರ್ಷಗಳ ಹಿಂದಿನ ಇತಿಹಾಸವು ಕಡಿದುಹೋಗುತ್ತದೆ. ಅದಕ್ಕಿಂತ ಹೆಚ್ಚಾಗಿ ಸಾರ್ವಭೌತ ರಾಷ್ಟ್ರ ಎಂಬ ಸ್ಥಾನವನ್ನೇ ನೇಪಾಳ ಕಳೆದುಕೊಂಡಂತೆ ಆಗುತ್ತದೆ.
ನೇಪಾಳದ ವಾದವನ್ನು ನಿರಾಕರಿಸಿದ ಭಾರತ
ಲಿಪುಲೇಖ್, ಕಲಪನಿ, ಹಾಗೂ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಂತೆ ನೇಪಾಳ ಹೊಸ ಭೂನಕ್ಷೆ ಬಿಡುಗಡೆ ಮಾಡಿದೆ. ಇದಕ್ಕೆ ಭಾರತವು ವಿರೋಧ ವ್ಯಕ್ತಪಡಿಸಿತ್ತು. ಗಡಿ ವಿಚಾರವನ್ನು ರಾಜತಾಂತ್ರಿಕ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಕೂಡಾ ಹೇಳಿದ್ದರು. ಕಳೆದ ವಾರವಷ್ಟೇ ಲಿಪುಲೇಖ್ ಪ್ರದೇಶವನ್ನು ಸಂಪರ್ಕಿಸುವ ಉತ್ತರಾಖಂಡ್ ದಾರ್ಚುಲಾ ಪ್ರದೇಶದಲ್ಲಿನ ರಸ್ತೆ ಕಾಮಗಾರಿ ಬಗ್ಗೆ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಜೊತೆಗೆ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಚರ್ಚಿಸಿದ್ದರು.