ಶ್ರೀಲಂಕಾ ಬಿಕ್ಕಟ್ಟಿನ ಮಧ್ಯೆ ಮಾಲ್ಡೀವ್ಸ್ನಿಂದ ಸಿಂಗಾಪುರಕ್ಕೆ ಹೊರಟ ಗೋಟಬಯ ರಾಜಪಕ್ಸೆ
ಸಿಂಗಾಪುರ್, ಜುಲೈ 14: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ತಿಕ್ಕಾಟದ ಮಧ್ಯೆ ಮಾಲ್ಡೀವ್ಸ್ಗೆ ಹಾರಿರುವ ಅಧ್ಯಕ್ಷ ಗೋಟಬಯ ರಾಜಪಕ್ಸೆ ಗುರುವಾರ ಅಲ್ಲಿಂದ ಸಿಂಗಾಪುರ್ ಕಡೆಗೆ ಪ್ರಯಾಣ ಬೆಳೆಸುವುದಕ್ಕಾಗಿ ರೆಡಿಯಾಗಿದ್ದಾರೆ ಎಂದು ಗೊತ್ತಾಗಿದೆ.
ದ್ವೀಪ ರಾಷ್ಟ್ರದ ಉಂಟಾದ ದಂಗೆಯ ನಂತರ ಬುಧವಾರ ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದ ಗೋಟಬಯ ರಾಜಪಕ್ಸೆ ಈಗ ಸಿಂಗಾಪುರಕ್ಕೆ ಪ್ರಯಾಣಿಸುವುದಕ್ಕೆ ಖಾಸಗಿ ಜೆಟ್ಗಾಗಿ ಎದುರು ನೋಡುತ್ತಿದ್ದಾರೆ. ಈಗ ಹಂಗಾಮಿ ಅಧ್ಯಕ್ಷರಾಗಿರುವ ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ, ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಪಶ್ಚಿಮ ಪ್ರಾಂತ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಶ್ರೀಲಂಕಾ ಬಿಕ್ಕಟ್ಟು; ಭಾರತದ ಪಾತ್ರವೇನು, ನಮಗೂ ಕಾದಿದೆಯಾ ಗಂಡಾಂತರ?
ರಾಜಪಕ್ಸೆ ಅವರ ಪತ್ನಿ ಐಯೋಮಾ ರಾಜಪಕ್ಸೆ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳು ಇಂದು ರಾತ್ರಿಯೇ ಮಾಲೆಯಿಂದ SQ437 ವಿಮಾನದಲ್ಲಿ ಸಿಂಗಾಪುರಕ್ಕೆ ತೆರಳುವ ನಿರೀಕ್ಷೆಯಿತ್ತು, ಆದರೆ ಭದ್ರತಾ ಸಮಸ್ಯೆಗಳಿಂದಾಗಿ ವಿಮಾನ ಪ್ರಯಾಣವನ್ನು ಮುಂದೂಡಿದ್ದರು ಎಂದು ತಿಳಿದು ಬಂದಿದೆ.
ಮಾಲ್ಡೀವ್ಸ್ಗೆ ಹಾರಿದ್ದ ರಾಜಪಕ್ಸೆ ಕುಟುಂಬ
ಬುಧವಾರ ದೇಶದ ರಕ್ಷಣಾ ಸಚಿವಾಲಯದ ಸಂಪೂರ್ಣ ಅನುಮೋದನೆಯ ನಂತರ, 13 ಜುಲೈ 2022 ರಂದು ಬೆಳಗ್ಗೆ ವಾಯುಪಡೆಯ ವಿಮಾನವನ್ನು ನೀಡಲಾಯಿತು. ಬಳಿಕ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮತ್ತು ಅವರ ಪತ್ನಿ ಇಬ್ಬರು ಅಂಗರಕ್ಷಕರೊಂದಿಗೆ ಕಟುನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾಲ್ಡೀವ್ಸ್ಗೆ ಪ್ರಯಾಣ ಬೆಳೆಸಿದರು.
ಜುಲೈ 19ರವರೆಗೂ ರಾನಿಲ್ ವಿಕ್ರಮಸಿಂಘೆಗೆ ಅಧಿಕಾರ
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಪ್ರತಿಭಟನೆಗಳು ತೀವ್ರಗೊಂಡಿರುವ ಹಿನ್ನೆಲೆ ಅಧ್ಯಕ್ಷ ಗೋಟಬಯ ರಾಜಪಕ್ಸೆ ದೇಶವನ್ನೇ ತೊರೆದು ಹೋಗಿದ್ದು ಆಯಿತು. ಇದರ ಬೆನ್ನಲ್ಲೇ ಜುಲೈ 19ರಂದು ಅಧ್ಯಕ್ಷ ಸ್ಥಾನಕ್ಕೆ ಮುಂದಿನ ನಾಯಕ ಯಾರು ಎಂಬ ಬಗ್ಗೆ ನಾಮನಿರ್ದೇಶನ ಮಾಡಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆ ಜುಲೈ 20ರವರೆಗೂ ತಾತ್ಕಾಲಿಕ ಅವಧಿಯಲ್ಲಿ ದೇಶದ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ದ್ವೀಪರಾಷ್ಟ್ರದ ಸಂಸತ್ತಿನಲ್ಲಿ ಸ್ಪೀಕರ್ ಹೇಳಿದ್ದೇನು?
ಶ್ರೀಲಂಕಾ ಸ್ವಾತಂತ್ರ್ಯದ ನಂತರ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ, ಇದು ಅಧ್ಯಕ್ಷ ಸ್ಥಾನದಿಂದ ರಾಜಪಕ್ಸೆಯನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗಳಿಗೆ ಕಾರಣವಾಗಿದೆ. ಜುಲೈ 20 ರಂದು ಸಂಸತ್ತಿನಲ್ಲಿ ಮತದಾನದ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ರಾಜಕೀಯ ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದು ಶ್ರೀಲಂಕಾದ ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ದನಾ ಹೇಳಿದ್ದಾರೆ.
ದ್ವೀಪ ರಾಷ್ಟ್ರದಲ್ಲಿ ನಡೆಯುತ್ತಿರುವುದಾದರೂ ಏನು?
ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆ ಸರ್ಕಾರದ ವಿರುದ್ಧ ಕೆರಳಿದ ಪ್ರತಿಭಟನಾಕಾರರು ಇತ್ತೀಚಿಗಷ್ಟೇ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿವಾಸಕ್ಕೆ ಮುತ್ತಿಗೆ ಹಾಕಿದರು. ನಾಟಕೀಯ ಬೆಳವಣಿಗೆಗಳ ಮಧ್ಯೆ ರಾಜಪಕ್ಸೆಯ ಅಧಿಕೃತ ನಿವಾಸದಲ್ಲಿ ಪ್ರತಿಭಟನಾಕಾರರು ವರ್ತಿಸಿದ ಪರಿಯು ಸಾರ್ವಜನಿಕವಾಗಿ ಸುದ್ದಿ ಆಯಿತು. ಅಲ್ಲಿ ಜನರು ಕೇರಂ ಬೋರ್ಡ್ ಆಡುತ್ತಿರುವುದು, ಸೋಫಾದಲ್ಲಿ ಮಲಗುವುದು, ಉದ್ಯಾನವನದ ಆವರಣದಲ್ಲಿ ಆನಂದಿಸುವುದು, ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜುವುದು, ರಾತ್ರಿಯ ಊಟಕ್ಕೆ ಆಹಾರವನ್ನು ತಯಾರಿಸುವುದು ಹೀಗೆ ಅವರ ವರ್ತನೆಗಳು ಸಾಕಷ್ಟು ಸುದ್ದಿಯನ್ನು ಮಾಡಿತ್ತು.
ದೇಶದಲ್ಲಿ ಆಹಾರ ಬೆಲೆ ಹಣದುಬ್ಬರ, ಇಂಧನ ವೆಚ್ಚ ಹೆಚ್ಚುತ್ತಿರುವುದು ಮತ್ತು ಸರಕುಗಳ ವ್ಯಾಪಕ ಕೊರತೆಯನ್ನು ಸೃಷ್ಟಿಸಿದೆ. ಈ ಹಿನ್ನೆಲೆ ಶ್ರೀಲಂಕಾದಲ್ಲಿ ಸುಮಾರು 61ರಷ್ಟು ಕುಟುಂಬಗಳು ತಾವು ಸೇವಿಸುವ ಆಹಾರದ ಪ್ರಮಾಣವನ್ನೇ ಕಡಿಮೆ ಮಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಪೌಷ್ಠಿಕಾಂಶವುಳ್ಳ ಆಹಾರದ ಕೊರತೆಯು ಹೆಚ್ಚಾಗಿ ಕಾಡುತ್ತಿದೆ. ಇದರಿಂದ ಕಾದು ಕಾದು ಈಗ ಕೆರಳಿದ ಪ್ರತಿಭಟನಾಕಾರರು ಸರ್ಕಾರದ ಬದಲಾವಣೆಗಾಗಿ ರಸ್ತೆಗೆ ಇಳಿದಿದ್ದಾರೆ.