ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಹುದ್ದೆ ತೊರೆಯಲಿದ್ದಾರೆ ಗೀತಾ ಗೋಪಿನಾಥ್
ವಾಷಿಂಗ್ಟನ್, ಅಕ್ಟೋಬರ್ 20; ಮೈಸೂರು ಮೂಲದ ಗೀತಾ ಗೋಪಿನಾಥ್ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಹುದ್ದೆಯನ್ನು ತೊರೆಯಲಿದ್ದಾರೆ. ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಗೀತಾ ಅವರದ್ದಾಗಿದೆ.
ಅಂತರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆ ಹುದ್ದೆಯನ್ನು ಗೀತಾ ಗೋಪಿನಾಥ್ 2022ರ ಜನವರಿಯಲ್ಲಿ ತೊರೆಯಲಿದ್ದಾರೆ. ಅವರು ಹಾರ್ವರ್ಡ್ ವಿಶ್ವವಿದ್ಯಾಲದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹುದ್ದೆಗೆ ಮರಳಲಿದ್ದಾರೆ.
ಕೋವಿಡ್ ಲಸಿಕೆ ಜೊತೆಗೆ ಹಣದುಬ್ಬರದ ಕಡೆಗೂ ಗಮನವಿರಲಿ: ಭಾರತಕ್ಕೆ ಗೀತಾ ಕಿವಿಮಾತು
ಮೈಸೂರಿನಲ್ಲಿ ಜನಿಸಿದ ಗೀತಾ ಗೋಪಿನಾಥ್ 2018ರ ಜನವರಿಯಲ್ಲಿ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಹುದ್ದೆಯನ್ನು ವಹಿಸಿಕೊಂಡಿದ್ದರು. ಅದಕ್ಕೂ ಮೊದಲು ಅವರು ಹಾರ್ವರ್ಡ್ ವಿಶ್ವವಿದ್ಯಾಲದ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.
ಲಸಿಕೆ ನೀತಿ, ಕೋವಿಡ್ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿ: ಗೀತಾ ಗೋಪಿನಾಥ್
"ಅಂತರಾಷ್ಟ್ರೀಯ ಹಣಕಾಸು ನಿಧಿಗೆ ಗೀತಾ ಗೋಪಿನಾಥ್ ಅವರ ಕೊಡುಗೆ ಗಮನಾರ್ಹವಾದದ್ದು" ಎಂದು ಸಂಸ್ಥೆಯ ವ್ಯಸ್ಥಾಪಕ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜೀವಾ ಹೇಳಿದ್ದಾರೆ. ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ ಮೊದಲ ಮಹಿಳೆ ಗೀತಾ ಗೋಪಿನಾಥ್ ಆಗಿದ್ದಾರೆ.
'ಕೌನ್ ಬನೇಗಾ...' ವಿಡಿಯೋ ಹಂಚಿಕೊಂಡು ಖುಷಿಪಟ್ಟ ಗೀತಾ ಗೋಪಿನಾಥ್
ಮೈಸೂರಿಗೆ ಭೇಟಿ ನೀಡಿದ್ದರು; ಮೈಸೂರಿನಲ್ಲಿ ಜನಿಸಿದ ಗೀತಾ ಗೋಪಿನಾಥ್ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆಯಾದ ಬಳಿಕ ಮೈಸೂರಿಗೆ ಭೇಟಿ ಕೊಟ್ಟಿದ್ದರು. ನಗರದ ನಿರ್ಮಲಾ ಕಾನ್ವೆಂಟ್ನಲ್ಲಿ 4 ರಿಂದ 10ನೇ ತರಗತಿ ತನಕ ಅವರು ವ್ಯಾಸಂಗ ಮಾಡಿದ್ದರು. ಬಳಿಕ ಮಹಾಜನ ಪಿಯು ಕಾಲೇಜಿನಲ್ಲಿ ಓದಿದ್ದರು. ನಂತರ ದೆಹಲಿಯ ಲೇಡಿ ಶ್ರೀರಾಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕ್ಕೆ ತೆರಳಿದ್ದರು.
ಹಾರ್ವರ್ಡ್ ವಿಶ್ವವಿದ್ಯಾಲಯ ಗೀತಾ ಗೋಪಿನಾಥ್ ರಜೆಯನ್ನು ಒಂದು ವರ್ಷ ವಿಸ್ತರಿಸಿತ್ತು. ಇದರಿಂದ ಅವರು ಐಎಂಎಫ್ನಲ್ಲಿ ಮೂರು ವರ್ಷ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತ್ತು. ಕೋವಿಡ್ ಸಮಯದಲ್ಲಿ ನಿರ್ಣಾಯಕ ವಿಶ್ಲೇಷಣೆಗಳನ್ನು ಮಾಡಿದ ಗೀತಾ ಗೋಪಿನಾಥ್ ಕಾರ್ಯ ವೈಖರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.
"ಅಂತರಾಷ್ಟ್ರೀಯ ಹಣಕಾಸು ನಿಧಿಗೆ ಗೀತಾ ಕೊಡುಗೆ ಅಪಾರ ಮತ್ತು ಗಮನಾರ್ಹವಾಗಿದೆ. ಕೋವಿಡ್ ಸಂದರ್ಭದ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಅವರ ಅರ್ಥಶಾಸ್ತ್ರದ ಆಳವಾದ ಜ್ಞಾನದಿಂದ ನಾವು ಅಪಾರ ಲಾಭ ಪಡೆದಿದ್ದೇವೆ" ಎಂದು ಕ್ರಿಸ್ಟಲೀನಾ ಜಾರ್ಜೀವಾ ಶ್ಲಾಘಿಸಿದ್ದಾರೆ.
ಗೀತಾ ಗೋಪಿನಾಥ್ 2022ರ ಜನವರಿ ತನಕ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಕೆಲಸ ಮಾಡಲಿದ್ದಾರೆ. ಬಳಿಕ ಹೊಸಬರಿಗಾಗಿ ಹುಡುಕಾಟ ನಡೆಸಲಾಗುತ್ತದೆ ಎಂದು ಕ್ರಿಸ್ಟಲೀನಾ ಜಾರ್ಜೀವಾ ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಗೀತಾ ಗೋಪಿನಾಥ್ ಕೋವಿಡ್ ಪರಿಸ್ಥಿತಿ ಕೊನೆಗೊಳಿಸುವ ಕುರಿತು ಒಂದು ಪ್ರಬಂಧವನ್ನು ಬರೆದಿದ್ದರು. ಐಎಂಎಫ್ನ ಹಲವಾರು ಕ್ರಮಗಳ ಭಾಗವಾಗಿ ಸಹ ಕಾರ್ಯ ನಿರ್ವಹಣೆ ಮಾಡಿದ್ದರು.
ಕ್ರಿಸ್ಟಲೀನಾ ಜಾರ್ಜೀವಾ ರಾಷ್ಟ್ರೀಯ ಬ್ಯಾಂಕುಗಳ ಪರವಾಗಿದ್ದಾರೆ ಎಂಬುದು ಸೇರಿದಂತೆ ಹಲವಾರು ಆರೋಪಗಳು ಕೇಳಿಬಂದಿದ್ದವು. ಗೀತಾ ಗೋಪಿನಾಥ್ ಕೆಲಸಕ್ಕೆ ರಾಜೀನಾಮೆ ನೀಡುವುದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಐಎಂಎಫ್ ಸ್ಪಷ್ಟಪಡಿಸಿದೆ.
ಗೀತಾ ಗೋಪಿನಾಥ್ ದೆಹಲಿ ಸ್ಕೂಲ್ ಆಫ್ ಎಕಾನಾಮಿಕ್ಸ್ ಹಾಗೂ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2001ರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಹಾರ್ವರ್ಡ್ಗೆ ಸೇರುವ ಮೊದಲು ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಪಕರಾಗಿದ್ದರು.
ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡುವ 3ನೇ ಮಹಿಳಾ ಪ್ರಾಧ್ಯಾಪಕಿ ಮತ್ತು ಅರ್ಮರ್ತ್ಯ ಸೇನ್ ಬಳಿಕ ಆ ಸ್ಥಾನದಲ್ಲಿ ಕೆಲಸ ಮಾಡುವ ಮೊದಲ ಭಾರತೀಯರು ಎಂಬ ಖ್ಯಾತಿ ಪಡೆದಿದ್ದಾರೆ.
ಕೃಷಿ ಮಾಡುತ್ತಿದ್ದಾರೆ; ಗೀತಾ ತಂದೆ ಗೋಪಿನಾಥ್ ಮೈಸೂರು ನಗರದ ಹೊರವಲಯದಲ್ಲಿ ತೋಟದ ಮನೆ ಹೊಂದಿದ್ದಾರೆ. ಇಂದಿಗೂ ಅಲ್ಲಿ ಕೃಷಿ ಮಾಡುತ್ತಿದ್ದಾರೆ.