‘ಕೊರೊನಾ’ ಕೊಂದ ಜರ್ಮನಿಯ ಉಕ್ಕಿನ ಮಹಿಳೆಗೆ ಇದೆಂತಹ ಶಿಕ್ಷೆ?
ಆ ಹೆಸರು ಕೇಳಿದರೆ ಸಾಕು ವೈರಿಗಳ ಎದೆ ನಡುಗುತ್ತೆ. ಆ ಹೆಸರು ಕಿವಿಗೆ ಬಿದ್ದರೆ ಸಾಕು ಕೊರೊನಾ ಕೂಡ ತೆಪ್ಪಗಾಗುತ್ತೆ. ಆದರೆ ಆ ಹೆಸರಿಗೆ ವರುಣ ದೇವ ಮಾತ್ರ ಭಯಪಡಲಿಲ್ಲ. ಮಳೆ ಸೃಷ್ಟಿಸಿದ ಅವಾಂತರಕ್ಕೆ ಆ ಉಕ್ಕಿನ ಮಹಿಳೆ ನೋವಿನಲ್ಲಿ ತಮ್ಮ ಕಡೇ ದಿನಗಳನ್ನ ಕಳೆಯುವಂತಾಗಿದೆ. ಅಂದಹಾಗೆ ಇದು ಜರ್ಮನಿಯ ಪಾಲಿಗೆ ಉಕ್ಕಿನ ಮಹಿಳೆ ಎನಿಸಿಕೊಂಡಿರುವ ಏಂಜೆಲಾ ಮಾರ್ಕೆಲ್ ಅವರ ಪರಿಸ್ಥಿತಿ.
ಹೌದು, ಯುರೋಪ್ ಒಕ್ಕೂಟದ ಒಗ್ಗಟ್ಟು, ಜರ್ಮನಿಯ ಸರ್ವತೋಮುಖ ಬೆಳವಣಿಗೆಗೆ ನಾಂದಿ ಹಾಡಿದ್ದ ಏಂಜೆಲಾ ಮಾರ್ಕೆಲ್ಗೆ ಆಘಾತ ಎದುರಾಗಿದೆ. ಇನ್ನೇನು ಜರ್ಮನಿ ಚಾನ್ಸಲರ್ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭದಲ್ಲಿ ವರುಣ ಇಂತಹ ಆಘಾತ ನೀಡಿದ್ದಾನೆ. ಈಗಾಗಲೇ ಜರ್ಮನಿಯಲ್ಲಿ ಮಳೆ ಅವಾಂತರಕ್ಕೆ ಮೃತಪಟ್ಟವರ ಸಂಖ್ಯೆ 200ರ ಗಡಿ ದಾಟಿದ್ದು, ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ.
ಜರ್ಮನಿಯಲ್ಲಿ ಭಾರೀ ಪ್ರವಾಹ; ಮೂವತ್ತು ಮಂದಿ ಸಾವು
ಕಳೆದ 100 ವರ್ಷಗಳಲ್ಲೇ ಕಾಣದಂತಹ ಈ ಶತಮಾನದ ಮಳೆಗೆ ಭಾಗಶಃ ಜರ್ಮನಿ ಅಕ್ಷರಶಃ ಕೊಚ್ಚಿ ಹೋಗಿದೆ. ಕೊರೊನಾ ಕಂಟದ ವಿರುದ್ಧ ಗೆದ್ದಿದ್ದವರ ಎದುರು ವರುಣ ದೊಡ್ಡ ಸವಾಲು ತಂದಿಟ್ಟಿದ್ದಾನೆ.
ವರುಣ ದೇವನ ಭೀತಿ..!
2 ದಶಕಗಳ ಕಾಲ 'ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಆಫ್ ಜರ್ಮನಿ' ನಾಯಕಿಯಾಗಿದ್ದ ಮಾರ್ಕೆಲ್ ಜಗತ್ತಿನ ಗಮನ ಸೆಳೆದಿದ್ದರು. ಅಲ್ಲದೆ ಜರ್ಮನಿ ಅಭಿವೃದ್ಧಿಯಲ್ಲಿ ಏಂಜೆಲಾ ಮಾರ್ಕೆಲ್ ಪಾಲು ದೊಡ್ಡದಿದೆ. 2000ನೇ ವರ್ಷದಿಂದ ಜರ್ಮನಿಯಲ್ಲಿ ಶುರುವಾದ ಮಾರ್ಕೆಲ್ ಯುಗ ಈಗ ಅಂತ್ಯವಾಗಿದೆ. ಈಗಾಗಲೇ ಮಾರ್ಕೆಲ್ ಘೋಷಿಸಿರುವಂತೆ ಮುಂದಿನ ಜರ್ಮನಿಯ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಭಾಗವಹಿಸುತ್ತಿಲ್ಲ.
2021ರ ಅಂತ್ಯದಲ್ಲಿ ಜರ್ಮನಿ ಸಂಸತ್ಗೆ ಚುನಾವಣೆ
ಇದೇ ಕಾರಣಕ್ಕೆ ಹೊಸ ನಾಯಕನ ಆಯ್ಕೆ ಅನಿವಾರ್ಯವಾಗಿತ್ತು. ಹೀಗಾಗಿ ಮಾರ್ಕೆಲ್ ಅವರ ಪಕ್ಷ 'ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಆಫ್ ಜರ್ಮನಿ' ಹೊಸ ನಾಯಕನನ್ನು ಕೂಡ ಆಯ್ಕೆ ಮಾಡಿದೆ. 59 ವರ್ಷದ ಅರ್ಮಿನ್ ಲಾಸ್ಚೆಟ್ ಹೊಸ ನಾಯಕನಾಗಿ ಆಯ್ಕೆಯಾಗಿದ್ದಾರೆ. 2021ರ ಅಂತ್ಯದಲ್ಲಿ ಜರ್ಮನಿ ಸಂಸತ್ಗೆ ಚುನಾವಣೆ ನಡೆಯಲಿದೆ. ಇಷ್ಟೆಲ್ಲದರ ನಡುವೆ ಮಳೆ ಮಾರ್ಕೆಲ್ ಅವರ ಆಡಳಿತಕ್ಕೆ ಕಪ್ಪುಚುಕ್ಕೆ ತಂದಿಟ್ಟಿದೆ.
ಯುರೋಪ್ ಅಭಿವೃದ್ಧಿ ಅಡಿಪಾಯ
ಏಂಜೆಲಾ ಮಾರ್ಕೆಲ್ ದುಡಿದಿದ್ದು ಕೇವಲ ಜರ್ಮನಿ ಅಭಿವೃದ್ಧಿಗೆ ಮಾತ್ರವಲ್ಲ, ಯುರೋಪ್ ಒಗ್ಗಟ್ಟಿಗೂ ಅವರು ಹಾಕಿಕೊಟ್ಟ ಅಡಿಪಾಯ ದೊಡ್ಡದಿದೆ. ಆಧುನಿಕ ಜಗತ್ತಿನಲ್ಲಿ ಯುರೋಪ್ ಹೇಗೆ ಜಾಗತಿಕವಾಗಿ ಬೆಳೆಯಬೇಕು ಎಂಬುದನ್ನ ಮುಂದೆ ನಿಂತು ತೋರಿಸಿಕೊಟ್ಟವರು ಮಾರ್ಕೆಲ್. ಅಲ್ಲದೆ ಕೊರೊನಾ ಸ್ಥಿತಿ ಕೈಮೀರಿ ಹೋದಾಗ ಜರ್ಮನಿ ಯುರೋಪ್ನ ಇತರ ರಾಷ್ಟ್ರಗಳಿಗೂ ಮಾದರಿ ಆಗಿತ್ತು. ಅದಕ್ಕೆಲ್ಲಾ ಕಾರಣ ಇದೇ ಮಾರ್ಕೆಲ್ ನಾಯಕತ್ವ. ಆದರೆ ಅವರೇ ಈಗ ಅಧಿಕಾರ ತೊರೆಯುತ್ತಿರುವುದು ಸಹಜವಾಗಿ ಜರ್ಮನಿ ಜನರಿಗೆ ನೋವುಂಟು ಮಾಡಿದೆ. ಅದರ ನಡುವೆ ಭಾರಿ ಮಳೆ ಬೀಳುತ್ತಿದ್ದು, ಮಾರ್ಕೆಲ್ ಕಂಬನಿಯ ವಿದಾಯ ಹೇಳುವ ಪರಿಸ್ಥಿತಿ ಎದುರಾಗಿದೆ.
ಆರ್ಥಿಕ ಸಂಕಷ್ಟದಲ್ಲಿ ಜರ್ಮನಿ
ಹತ್ತಾರು ದೇಶಗಳು ಒಗ್ಗೂಡಿ ಕಟ್ಟಿರುವ ಗೂಡು ಯುರೋಪ್ ಒಕ್ಕೂಟ. ಅಂದಹಾಗೆ ಈ ಒಕ್ಕೂಟದ ಪ್ರಬಲ ದೇಶ ಜರ್ಮನಿ. ಯುರೋಪ್ ಲೆಕ್ಕದಲ್ಲಿ ಜಿಡಿಪಿ ವಿಚಾರದಲ್ಲಿ ಈಗಲೂ ಜರ್ಮನಿ ನಂಬರ್-1. ಅಷ್ಟೊಂದು ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಜರ್ಮನಿ. ಅದರಲ್ಲೂ ಮಾರ್ಕೆಲ್ ನಾಯಕತ್ವ ಜರ್ಮನಿಯನ್ನ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಸಿದೆ. ಆದರೆ ಕೊರೊನಾ ಎದುರಾದ ಬಳಿಕ ಜರ್ಮನಿ ಆರ್ಥಿಕವಾಗಿ ಸೋತುಬಿಟ್ಟಿದೆ. ಇನ್ನೇನು ಸುಧಾರಿಸಿಕೊಳ್ಳಬೇಕು ಅನ್ನುವಷ್ಟರದಲ್ಲಿ ಮಳೆ ಅವಾಂತರ ಸೃಷ್ಟಿಸಿ, ಗಾಯದ ಮೇಲೆ ಬರೆ ಎಳೆದಿದೆ. ಭೀಕರ ಮಳೆ ಬಳಿಕ ಜರ್ಮನಿಯಲ್ಲಿ ಎಲ್ಲಿ ನೋಡಿದರೂ ಉರುಳಿಬಿದ್ದ ಮರಗಳು, ಮನೆಗಳೇ ಕಾಣುತ್ತಿವೆ.