ಮಗನ ರೇಪ್ ಬಗ್ಗೆ ಗಾಂಧೀಜಿ ಬರೆದ ಪತ್ರ ಮಾರಾಟಕ್ಕೆ!
ಲಂಡನ್, ಮೇ.14: ಮಹಾತ್ಮ ಗಾಂಧೀಜಿ ಅವರು ತಮ್ಮ ಹಿರಿಯ ಪುತ್ರ ಹರಿಲಾಲ್ ಅತ್ಯಾಚಾರ ಎಸಗಿದ ಬಗ್ಗೆ ಬರೆದಿರುವ ಸರಣಿ ಪತ್ರಗಳನ್ನು ಮುಂದಿನ ವಾರ ಇಂಗ್ಲೆಂಡಿನಲ್ಲಿ ಹರಾಜು ಹಾಕಲಾಗುತ್ತಿದೆ.
ಶ್ರೊಪ್ ಶೈರ್ ಕೌಂಟಿ ಮೂಲದ ಮುಲ್ಲಕ್ ಹರಾಜುಗಾರರು ಮಹಾತ್ಮ ಗಾಂಧೀಜಿ ಬರೆದಿರುವ ಈ ಮೂವರು ಪತ್ರಗಳಿಂದ ಸುಮಾರು 50,000 ರಿಂದ 60,000 ಪೌಂಡ್ ಮೊತ್ತ ನಿರೀಕ್ಷಿಸಿದ್ದಾರೆ. 1935ರ ಜೂನ್ ನಲ್ಲಿ ಗಾಂಧೀಜಿ ಅವರು ಗುಜರಾತಿಯಲ್ಲಿ ಬರೆದಿರುವ ಈ ಪತ್ರಗಳಲ್ಲಿ ಪುತ್ರನ ಸಮಸ್ಯೆ ನನಗೆ ಭಾರತದ ಸ್ವಾತಂತ್ರ್ಯಕ್ಕಿಂತ ದೊಡ್ಡದಾದ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಹೇಳಲಾಗಿದೆ.
ಸಬರಮತಿ ಆಶ್ರಮದಲ್ಲಿ ಅಜ್ಜ ಗಾಂಧೀಜಿ ಜತೆ ಮಾತನಾಡುತ್ತಾ ಮನು ಬಿಚ್ಚಿಟ್ಟ ಸತ್ಯ ವಾಕ್ಯಗಳಿಗೆ ಗಾಂಧೀಜಿ ಅಕ್ಷರ ರೂಪ ನೀಡಿ ತನ್ನ ಪುತ್ರನಿಗೆ ಪ್ರಶ್ನಾರೂಪದಲ್ಲಿ ಬರೆದ ಪತ್ರಗಳು ಜಗತ್ತಿನ ಸಮಸ್ತರ ಮುಂದೆ ಹರಾಜಿಗೆ ಈಗ ಸಿದ್ಧವಾಗಿದೆ. ಮೋಹನ್ ದಾಸ್ ಕರಮಚಂದ್ ಗಾಂಧೀ ಅವರು ಹರಿಲಾಲ್ ಅಲ್ಲದೆ, ಮಣಿಲಾಲ್, ರಾಮದಾಸ್ ಹಾಗೂ ದೇವದಾಸ್ ಎಂಬ ಮಕ್ಕಳನ್ನು ಹೊಂದಿದ್ದರು.
ಹರಿಲಾಲ್ ಗಾಂಧಿ ಅವರು ಇಂಗ್ಲೆಂಡಿಗೆ ತೆರಳಿಗೆ ತನ್ನ ತಂದೆಯಂತೆ ಬಾರಿಸ್ಟರ್ ಆಗುವ ಕನಸು ಹೊತ್ತಿದ್ದರು. ಆದರೆ, ಮಹಾತ್ಮಾ ಗಾಂಧೀಜಿಗೆ ಇದು ಇಷ್ಟವಿರಲಿಲ್ಲ. ಪಾಶ್ಚಿಮಾತ್ಯ ವ್ಯಾಸಂಗ ಪದ್ಧತಿಗೆ ಮಕ್ಕಳು ಮಾರು ಹೋಗುವುದು ಗಾಂಧೀಜಿಗೆ ಬೇಕಿರಲಿಲ್ಲ. ಇದರಿಂದ ಬ್ರಿಟಿಷ್ ರಾಜ್ ವಿರುದ್ಧ ಹೋರಾಟಕ್ಕೆ ಹಿನ್ನಡೆಯಾಗಲಿದೆ ಎಂದು ಅವರು ನಂಬಿದ್ದರು.1911ರ ನಂತರ ಹರಿಲಾಲ್ ಹಾಗೂ ಗಾಂಧೀಜಿ ನಡುವೆ ದೊಡ್ಡ ಬಿರುಕು ಏರ್ಪಟ್ಟಿತ್ತು. ಇದು ಗಾಂಧೀಜಿ ಕೊನೆಗಾಲದ ತನಕ ಮುಂದುವರೆದಿತ್ತು.
ಮತ್ತೊಂದು ಪತ್ರದಲ್ಲಿ ಮಗನ ಬಗ್ಗೆ ಖಾರವಾಗಿ ಬರೆದಿರುವ ಗಾಂಧೀಜಿ, ಆಲ್ಕೋಹಾಲ್ ಸೇವಿಸಿ ಬದುಕುವ ಬದಲು ಸಾಯುವುದೇ ಮೇಲು, ನನಗೆ ಸತ್ಯ ಬೇಕಿದೆ. ನಿನಗೆ ಮದ್ಯಪಾನ ಅಷ್ಟು ಅವಶ್ಯಕತೆ ಇದೆಯೇ? ತಿಳಿಸು ಎಂದು ಕೇಳಿದ್ದಾರೆ. ಈ ಸರಣಿ ಪತ್ರಗಳು ಮೇ.22 ರಂದು ಲಂಡನ್ನಿನಲ್ಲಿ ಹರಾಜಾಗಲಿದೆ.(ಪಿಟಿಐ)