ಗಲ್ವಾನ್ ಕಣಿವೆ ಸಂಘರ್ಷ: ತನ್ನ ಸೈನಿಕರ ಸಾವನ್ನು ಕೊನೆಗೂ ಒಪ್ಪಿಕೊಂಡ ಚೀನಾ
ಬೀಜಿಂಗ್, ಫೆಬ್ರವರಿ 19: ಕಳೆದ ವರ್ಷದ ಜೂನ್ ತಿಂಗಳಲ್ಲಿ ಪೂರ್ವ ಲಡಾಖ್ ಗಡಿಯಲ್ಲಿನ ಗಲ್ವಾನ್ ಕಣಿವೆಯಲ್ಲಿ ನಡೆದ ಮಾರಾಮಾರಿಯಲ್ಲಿ ತನ್ನ ಕಡೆಯ ಸೈನಿಕರು ಮೃತಪಟ್ಟಿರುವುದನ್ನು ಚೀನಾ ಕೊನೆಗೂ ಅಧಿಕೃತವಾಗಿ ಒಪ್ಪಿಕೊಂಡಿದೆ. ಭಾರತದ ಸೈನಿಕರು ಹಾಗೂ ಪಿಎಲ್ಎ ಸೈನಿಕರ ಮಧ್ಯೆ ನಡೆದ ಬಡಿದಾಟದಲ್ಲಿ ಮೃತಪಟ್ಟ ತನ್ನ ನಾಲ್ವರು ಸೈನಿಕರ ವಿವರಗಳನ್ನು ಅದು ಬಹಿರಂಗಪಡಿಸಿದೆ.
ಘಟನೆ ನಡೆದು ಸುಮಾರು ಎಂಟು ತಿಂಗಳವರೆಗೂ ಗಲ್ವಾನ್ ಕಣಿವೆ ಹಿಂಸಾಚಾರದಲ್ಲಿ ಸತ್ತ ತನ್ನ ಸೈನಿಕರ ಬಗ್ಗೆ ವಿವರ ನೀಡಲು ಚೀನಾ ನಿರಾಕರಿಸಿತ್ತು.
ಗಲ್ವಾನ್ ಗುದ್ದಾಟ: ಭಾರತ ಕೊಟ್ಟ ಪೆಟ್ಟಿನಿಂದ 45 ಸೈನಿಕರನ್ನು ಕಳೆದುಕೊಂಡ ಚೀನಾ?
ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಪತ್ರಿಕೆಯ ವರದಿಯು, ಭಾರತದೊಂದಿಗಿನ ಗಡಿ ಸಂಘರ್ಷದಲ್ಲಿ ಮಾಡಿದ ತ್ಯಾಗಕ್ಕಾಗಿ ಐವರು ಚೀನೀ ಮುಂಚೂಣಿ ಅಧಿಕಾರಿಗಳು ಹಾಗೂ ಸೈನಿಕರನ್ನು ಸೆಂಟ್ರಲ್ ಮಿಲಿಟರಿ ಕಮಿಷನ್ 'ಗುರುತಿಸಿದೆ' ಎಂದು ಹೇಳಿದೆ.
'2020ರ ಗಲ್ವಾನ್ ಕಣಿವೆಯಲ್ಲಿ ಭಾರತದೊಂದಿಗೆ ಸಂಭವಿಸಿದ ಗಡಿ ಮುಖಾಮುಖಿಯಲ್ಲಿ ನೀಡಿದ ಕೊಡುಗೆಗಾಗಿ ಕರಕೋರಮ್ ಮೌಂಟೇನ್ಸ್ನಲ್ಲಿ ನಿಯೋಜಿತರಾಗಿದ್ದ ಐವರು ಚೀನೀ ಮುಂಚೂಣಿ ಅಧಿಕಾರಿಗಳು ಮತ್ತು ಸೈನಿಕರನ್ನು ಸೆಂಟ್ರಲ್ ಮಿಲಿಟರಿ ಕಮಿಷನ್ ಗುರುತಿಸಿದೆ' ಎಂದು ಅದು ತಿಳಿಸಿದೆ.
ಚೆನ್ ಹಾಂಗ್ಜುನ್, ಚೆನ್ ಕ್ಸಿಯಾಂಗ್ರಾಂಗ್, ಕ್ಸಿಯಾವೊ ಸಿಯುಯಾನ್ ಮತ್ತು ವಾಂಗ್ ಝೌರಾನ್ ಅವರು 'ವಿದೇಶಿ ಪಡೆಗಳ' ವಿರುದ್ಧದ ಕೆಚ್ಚೆದೆದೆಯ ಹೋರಾಟದಲ್ಲಿ ಮೃತಪಟ್ಟಿದ್ದಾರೆ. ಚೆನ್ ಹಾಂಗ್ಜುನ್ರನ್ನು 'ಗಡಿಯನ್ನು ರಕ್ಷಿಸಿದ ನಾಯಕ' ಎಂದು ಗೌರವಿಸಿದ್ದರೆ, ಉಳಿದ ಮೂವರಿಗೆ ಮೊದಲ ದರ್ಜೆಯ ಅರ್ಹತಾ ಗೌರವ ನೀಡಲಾಗಿದೆ ಎಂದು ಹೇಳಿದೆ.
ಪ್ಯಾಂಗಾಂಗ್ ತ್ಸೊದಿಂದ ಭಾರತ-ಚೀನಾ ಸೇನಾ ವಾಪಸ್: ಒಪ್ಪಂದದ 5 ಪ್ರಮುಖ ಅಂಶಗಳು
ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರು ಬಡಿಗೆ, ರಾಡ್ ಮುಂತಾದವುಗಳಿಂದ ಹೊಡೆದಾಡಿಕೊಂಡಿದ್ದರು. ಘಟನೆಯಲ್ಲಿ ಭಾರತದ 20 ಸೈನಿಕರು ಮೃತಪಟ್ಟಿದ್ದರು. ಆದರೆ ಚೀನಾ ಇದುವರೆಗೂ ತನ್ನ ಕಡೆಯಲ್ಲಿ ಉಂಟಾದ ಸಾವು ನೋವಿನ ಮಾಹಿತಿ ನೀಡಿರಲಿಲ್ಲ. ತನ್ನ ಸೈನಿಕರು ಸತ್ತಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದು ಹೇಳಿತ್ತು.
ಎರಡು ವಾರಗಳಲ್ಲಿ ಪ್ಯಾಂಗಾಂಗ್ ಸರೋವರದಿಂದ ಸೇನೆ ನಿಷ್ಕ್ರಿಯ ನಿರೀಕ್ಷೆ
ಈ ಸಂಘರ್ಷದಲ್ಲಿ ಚೀನಾದ 45 ಸೈನಿಕರು ಮೃತಪಟ್ಟಿದ್ದಾರೆ ಎಂದು ರಷ್ಯಾದ ಸುದ್ದಿಸಂಸ್ಥೆ ಇತ್ತೀಚೆಗೆ ವರದಿ ಮಾಡಿತ್ತು.