ಮಾರಕ ಕೊರೊನಾ ವೈರಸ್ಗೆ ಚೀನಾದ ಬಾವಲಿ ಸೂಪ್ ಕಾರಣ?
ಬೀಜಿಂಗ್, ಜನವರಿ 26: ಮಾರಕ ಕೊರೊನಾ ವೈರಸ್ ಚೀನಾದಿಂದ ಇತರೆ ದೇಶಗಳಿಗೂ ಕಾಲಿಡುತ್ತಿದೆ. ಚೀನಾದಲ್ಲಿ ವೈರಸ್ ಸೋಂಕು ತಗುಲಿದವರ ಸಂಖ್ಯೆ 2,000ಕ್ಕೆ ಮುಟ್ಟಿದೆ. ಈ ಮಾರಣಾಂತಿಕ ವೈರಸ್ಗೆ ಬಲಿಯಾದವರ ಸಂಖ್ಯೆ 56ಕ್ಕೆ ಏರಿದೆ.
ಈ ಮಾರಕ ವೈರಸ್ ಹರಡಲು ಕಾರಣವೇನು? ಇದರ ಮೂಲ ಯಾವುದು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಕಳೆದ ವರ್ಷ ಭೀತಿ ಮೂಡಿಸಿದ್ದ ನಿಫಾ ಎಂಬ ಮಾರಕ ವೈರಸ್ ಹರಡಲು ಕಾರಣವಾಗಿದ್ದ ಬಾವಲಿಗಳೇ ಕೊರೊನಾ ವೈರಸ್ ಹರಡಲೂ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ.
ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?
ನಿಫಾ ಮತ್ತು ಸಾರ್ಸ್ ಹರಡಲು ಕಾರಣವಾಗಿದ್ದ ವೈರಸ್ಗಳ ಮೂಲ ಫ್ರೂಟ್ ಬ್ಯಾಟ್ಗಳಾಗಿದ್ದು, ಕೊರೊನಾ ವೈರಸ್ ಹರಡಲೂ ಇದೇ ಬಾವಲಿಗಳು ಕಾರಣ ಇರಬಹುದು ಎಂದು ಚೀನಾದ ವೈದ್ಯಕೀಯ ಹೇಳಿಕೆಯೊಂದರಲ್ಲಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾವಲಿ ಸೂಪ್ನಿಂದ ವೈರಸ್?
ಚೀನಾದಲ್ಲಿ ಬಾವಲಿಗಳ ಸೂಪ್ ಜನಪ್ರಿಯ ಖಾದ್ಯವಾಗಿದ್ದು, ಜನರು ಬಾವಲಿ ಸೂಪ್ ಕುಡಿಯುವ ವಿಡಿಯೋ ಸವಿಯುವ ಮತ್ತು ಮಹಿಳೆಯೊಬ್ಬರು ಬಾವಲಿ ಖಾದ್ಯ ತಿನ್ನುವ ವಿಡಿಯೋಗಳು ವೈರಲ್ ಆಗಿವೆ. ಅದರ ಬೆನ್ನಲ್ಲೇ ಬಾವಲಿಗಳ ಮೇಲೆ ಅನುಮಾನ ವ್ಯಕ್ತಪಡಿಸುವ ವರದಿ ಕೂಡ ಪ್ರಕಟವಾಗಿದೆ. ಚೀನಾದಲ್ಲಿ ಮುಖ್ಯವಾಗಿ ಫ್ರೂಟ್ ಬ್ಯಾಟ್ಗಳ ಖಾದ್ಯ ಹೆಚ್ಚು ಬಳಕೆಯಲ್ಲಿದೆ. ಇದರಿಂದಲೇ ವೈರಸ್ ಹರಡಿರಬಹುದು ಎನ್ನಲಾಗಿದೆ.
ಹಾವುಗಳಿಂದಲೂ ವೈರಸ್ ಹರಡುವ ಸಾಧ್ಯತೆ
ಹಾಗೆಯೇ ಹಾವುಗಳಿಂದ ಕೂಡ ಈ ವೈರಸ್ ಹರಡುತ್ತಿರಬಹುದು ಎಂಬ ಶಂಕೆ ಇದೆ. ಕೊರೊನಾ ವೈರಸ್ ಹಾವುಗಳಿಂದ ಹರಡುವ ಸಾಧ್ಯತೆಯನ್ನೂ ತಜ್ಞರು ಪರಿಗಣಿಸಿದ್ದಾರೆ. ಈ ಹಾವುಗಳು ಅರಣ್ಯದಲ್ಲಿ ಬಾವಲಿಗಳನ್ನು ಹೆಚ್ಚಾಗಿ ತಿನ್ನುತ್ತವೆ. ಹಾವುಗಳು ಕೂಡ ಚೀನಾದಲ್ಲಿ ಪ್ರಮುಖ ಆಹಾರ ಪದಾರ್ಥ. ಇದರ ಖಾದ್ಯ ಕೂಡ ಅಲ್ಲಿ ಜನಪ್ರಿಯ. ವುಹಾನ್ ಫಿಶ್ ಮಾರುಕಟ್ಟೆಯಲ್ಲಿ ಹಾವುಗಳ ಮಾರಾಟ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ವುಹಾನ್ ಪ್ರಾಂತ್ಯದಲ್ಲಿಯೇ ಕೊರೊನಾ ವೈರಸ್ ತೀವ್ರವಾಗಿ ಕಾಣಿಸಿಕೊಂಡಿರುವುದು.
ಕೊರೊನಾ ಸೋಂಕು:20 ಸಾವಿರ ಭಾರತೀಯರ ತಪಾಸಣೆ, 80 ಮಂದಿ ಮೇಲೆ ನಿಗಾ
ನೂರಕ್ಕೂ ಹೆಚ್ಚು ಮಂದಿ ತಪಾಸಣೆ
ಕೊರೊನಾ ವೈರಸ್ ತಗುಲಿರುವ ಶಂಕೆ ಇರುವ ಕೇರಳ ಮತ್ತು ಮಹಾರಾಷ್ಟ್ರದ ನೂರಕ್ಕೂ ಹೆಚ್ಚು ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಚೀನಾದಿಂದ ಬಂದ ಅನೇಕ ಪ್ರಯಾಣಿಕರ ಆರೋಗ್ಯ ತಪಾಸಣೆಯ ವರದಿಯನ್ನು ಪುಣೆಯಲ್ಲಿರುವ ಐಸಿಎಂಆರ್-ಎನ್ಐವಿ ಲ್ಯಾಬ್ಗೆ ಕಳುಹಿಸಲಾಗಿದೆ. ನಾಲ್ವರಲ್ಲಿ ವೈರಸ್ ಕಂಡುಬಂದಿಲ್ಲ. ಉಳಿದವರ ಮಾದರಿ ಪರೀಕ್ಷೆ ಮುಂದುವರಿದಿದ್ದು, ಯಾರಲ್ಲಿಯೂ ಪಾಸಿಟಿವ್ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಕೇರಳದಲ್ಲಿ 179 ಮಂದಿ ಮೇಲೆ ನಿಗಾ
ಕೇರಳದಲ್ಲಿ 172 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಏಳು ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ಇರಿಸಲಾಗಿದೆ. ರಾಜ್ಯಕ್ಕೆ 99 ಹೊಸ ಪ್ರಯಾಣಿಕರು ಬಂದಿದ್ದಾರೆ. ಇದರಿಂದ ಒಟ್ಟು 179 ಮಂದಿಯನ್ನು ವೀಕ್ಷಣೆಯಲ್ಲಿ ಇರಿಸಲಾಗಿದೆ. ಏಳು ಮಂದಿಯಲ್ಲಿ ಮಾತ್ರ ಕೆಲವು ಲಕ್ಷಣಗಳು ಕಾಣಿಸಿವೆ. ಅವು ಗಂಭೀರವಾಗಿಲ್ಲ. ಅವರ ರಕ್ತ ಮತ್ತು ಉಸಿರಾಟ ವ್ಯವಸ್ಥೆಯ ಮಾದರಿಗಳನ್ನು ಪುಣೆಯಲ್ಲಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಕೇರಳದ ಹಿರಿಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.