ಏರ್ ಇಂಡಿಯಾದಿಂದ ಕೊಲಂಬೋ ಹಾಗೂ ವಾರಣಾಸಿ ಮಧ್ಯೆ ವಿಮಾನ: ಪ್ರಧಾನಿ ಮೋದಿ
ವಾರಣಾಸಿ-ಕೊಲಂಬೋ ಮಧ್ಯೆ ಏರ್ ಇಂಡಿಯಾದಿಂದ ಈ ವರ್ಷದ ಆಗಸ್ಟ್ ನಲ್ಲಿ ವಿಮಾನ ಯಾನ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೊಲಂಬೋದಲ್ಲಿ ಹೇಳಿದರು
ಕೊಲಂಬೋ, ಮೇ 12: ಜಗತ್ತಿನಾದ್ಯಂತ ಹಬ್ಬುತ್ತಿರುವ ಹಿಂಸೆಗೆ ಬೌದ್ಧ ಧರ್ಮದ ಶಾಂತಿ ಸಂದೇಶವೇ ಉತ್ತರ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು. ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಅವರು ಮಾತನಾಡಿ, ತಮ್ಮ ದ್ವೇಷದ ಸಿದ್ಧಾಂತದ ಮೂಲಕ ನಮ್ಮ ಭಾಗದಲ್ಲಿ ಸಾವಿಗೆ, ವಿಧ್ವಂಸಕ ಕೃತ್ಯಕ್ಕೆ ಕಾರಣರಾಗಿರುವವರು ಬಹಿರಂಗ ಮಾತುಕತೆಗೆ ಸಿದ್ಧರಲ್ಲ. ಇದು ದುರದೃಷ್ಟ ಎಂದು ಹೇಳಿದರು.
ಇಂದು ಜಗತ್ತಿನ ಶಾಂತಿಪಾಲನೆಗೆ ಸವಾಲಾಗಿರುವುದು ಕೇವಲ ಎರಡು ರಾಷ್ಟ್ರಗಳ ಮಧ್ಯದ ಸಂಘರ್ಷವಲ್ಲ. ಮನಸ್ಥಿತಿಯಿಂದ, ಆಲೋಚನೆಯಿಂದ ಒಟ್ಟಾರೆ ಚಿಂತನೆಯ ಬೇರಿನಿಂದಲೇ ದ್ವೇಷ ಹಾಗೂ ಹಿಂಸೆಯನ್ನು ತುಂಬಿಕೊಂಡಿರುವ ಭಯೋತ್ಪಾದಕರ ಉದ್ದೇಶ ಬಹಳ ಸ್ಪಷ್ಟವಿದೆ. ವಿಧ್ವಂಸಕ ಕೃತ್ಯವೇ ಅಂತಹವರ ಗುರಿಯಾಗಿದೆ ಎಂದರು.[44 ದೇಶ ಸುತ್ತಿ ಬಂದಿರುವ ಪ್ರಧಾನಿ ಮೋದಿ, ಟ್ರಾವೆಲ್ ಚಾರ್ಟ್!]
ಶ್ರೀಲಂಕಾದ ತಮಿಳು ಸೋದರ-ಸೋದರಿಯರು ಕಾಶೀ ವಿಶ್ವನಾಥ ಇರುವ ವಾರಣಾಸಿಗೆ ಭೇಟಿ ನೀಡಬಹುದು. ಈ ವರ್ಷ ಆಗಸ್ಟ್ ನಿಂದ ಏರ್ ಇಂಡಿಯಾದಿಂದ ಕೊಲಂಬೋ ಹಾಗೂ ವಾರಣಾಸಿ ಮಧ್ಯೆ ವಿಮಾನ ಹಾರಾಟ ಆರಂಭವಾಗುತ್ತದೆ ಎಂದ ನರೇಂದ್ರ ಮೋದಿ, ಅಂತರರಾಷ್ಟ್ರೀಯ ವೆಸಕ್ ದಿನಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ಶ್ರೀಲಂಕಾದ ಪ್ರಧಾನಿ, ರಾಷ್ಟ್ರಾಧ್ಯಕ್ಷರಿಗೆ ಅಭಿನಂದನೆ ಎಂದು ಹೇಳಿದರು.